Freedom of Expression: ಸತ್ಯ ಹೇಳಿದರೆ ಉಗ್ರ ಪಟ್ಟ: ಸಿದ್ದರಾಮಯ್ಯ

By Kannadaprabha NewsFirst Published Dec 27, 2021, 5:03 AM IST
Highlights

*   ಸತ್ಯ ಹೇಳಿದ್ದಕ್ಕೆ ಕಲಬುರ್ಗಿ ಹತ್ಯೆ, ಹಂಸಲೇಖ ವಿರುದ್ಧ ಕೇಸ್‌
*  ಸ್ವಇಚ್ಛೆಯ ಮತಾಂತರ ತಡೆ ಯತ್ನ ಒಪ್ಪಲ್ಲ
*  ಬಸವಣ್ಣ ವೈದಿಕ ಧರ್ಮವನ್ನು ಒಪ್ಪಿಕೊಂಡಿದ್ದರಾ?,ನಮ್ಮ ಗೊಡ್ಡು ಸಂಪ್ರದಾಯಗಳನ್ನು ಒಪ್ಪಿಕೊಂಡಿದ್ದರಾ?

ಬೆಂಗಳೂರು(ಡಿ.27):  ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ(Freedom of Expression) ಬಹಳ ಸಂಕಷ್ಟದಲ್ಲಿದೆ. ನೇರ, ನಿಷ್ಠುರ ಹಾಗೂ ಉಗ್ರವಾಗಿ ಸತ್ಯ ಹೇಳಲಾಗದ ಪರಿಸ್ಥಿತಿಗೆ ಬಂದು ನಿಂತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ವಿಷಾದಿಸಿದ್ದಾರೆ.

ಬಹುರೂಪಿ ಪ್ರಕಾಶನ ಹಾಗೂ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನ ಲಂಡನ್‌ ವತಿಯಿಂದ ಭಾನುವಾರ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಸಾಹಿತಿ ಡಾ.ಎಸ್‌.ಜಿ.ಸಿದ್ದರಾಮಯ್ಯ(Dr SG Siddaramaiah) ಅವರ ಆತ್ಮಕಥನ ‘ಯರೆಬೇವು’ ಪುಸ್ತಕ ಲೋಕಾರ್ಪಣೆ ಮತ್ತು ‘ಡಾ.ಎಂ.ಎಂ.ಕಲಬುರ್ಗಿ(Dr MM Kalaburgi) ಪ್ರಗತಿ ಪರ ಚಿಂತಕ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರು ಸತ್ಯ ಹೇಳಲು ಪ್ರಯತ್ನಿಸಿದ್ದಕ್ಕೆ ಕೋಮುವಾದಿಗಳು ಅವರನ್ನು ಕೊಂದೇ ಬಿಟ್ಟರು. ಇತ್ತೀಚೆಗೆ ವಾಸ್ತವಾಂಶ ಹೇಳಿದ ಸಂಗೀತ ನಿರ್ದೇಶಕ ಹಂಸಲೇಖ(Hamsalekha) ಅವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಕೋಮುವಾದಿ(Communalist) ಮನೋಭಾವದಿಂದ ನರಳುತ್ತಿರುವ ಜನ ಆ ಸತ್ಯ ಒಪ್ಪಿಕೊಳ್ಳದೆ ಕಲಬುರ್ಗಿ, ಗೌರಿ ಲಂಕೇಶ್‌(Gauri Lankesh) ಅವರನ್ನು ಕೊಂದು ಹಾಕಿದರು ಎಂದು ಕಿಡಿಕಾರಿದರು.

Udipi Krishna Mutt: ಕೃಷ್ಣಮಠ ಸರ್ಕಾರೀಕರಣಕ್ಕೆ ಸಿದ್ದರಾಮಯ್ಯ ಸರ್ಕಾರ ಸಿದ್ಧವಾಗಿತ್ತು

ಸತ್ಯ ಹೇಳಿದರೆ ದೇಶದ್ರೋಹಿಗಳು, ಉಗ್ರವಾದಿಗಳ ಪಟ್ಟ ಕಟ್ಟಲಾಗುತ್ತಿದೆ. ಸತ್ಯ ಕೆಲವರಿಗೆ ಕಹಿಯಾಗುತ್ತದೆ. ಸತ್ಯ ಹೇಳಿದವರ ವಿರುದ್ಧ ವಕ್ರದೃಷ್ಟಿಬೀರುತ್ತಾರೆ. ಮಹಾತ್ಮಾ ಗಾಂಧೀಜಿ ಅವರನ್ನು ಕೊಂದ ವ್ಯಕ್ತಿಗಳಿಗೆ ದೇವಸ್ಥಾನ ಕಟ್ಟಿಪೂಜಿಸುವ ಪರಿಪಾಠ ಇವತ್ತು ಬೆಳೆದಿದೆ. ಸಮಾಜಮುಖಿಯಾಗಿ ಚಿಂತಿಸುವವರು, ವಿಚಾರವಂತರು ಇದನ್ನೆಲ್ಲಾ ಖಂಡಿಸಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಪ್ರತಿಪಾದಿಸಿದರು.
ಸಂಗೀತ ನಿರ್ದೇಶಕ ಹಂಸಲೇಖ ಅವರು ಇತ್ತೀಚೆಗೆ ವಾಸ್ತವಾಂಶ ತೆರೆದಿಡುವ ಪ್ರಯತ್ನ ಮಾಡಿದರು.ಅವರ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದಾರೆ. ಹಂಸಲೇಖ ಅವರು ನೀಡಿದ ಹೇಳಿಕೆಗೂ ಅವರ ಮೇಲೆ ಹಾಕಲಾಗಿರುವ ಐಪಿಸಿ ಸೆಕ್ಷನ್‌ 295ಕ್ಕೂ ಸಂಬಂಧವೇ ಇಲ್ಲ ಎಂದರು.

ಕೃತಿಕಾರ ಎಸ್‌.ಜಿ.ಸಿದ್ದರಾಮಯ್ಯ, ಸಂಗೀತ ನಿರ್ದೇಶಕ ಹಂಸಲೇಖ, ಲಂಡನ್‌ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಮಹಾದೇವಯ್ಯ, ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ, ವಿಮರ್ಶಕಿ ಡಾ.ಎಂ.ಎಸ್‌.ಆಶಾದೇವಿ, ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ, ಬಹುರೂಪಿ ಪ್ರಕಾಶನದ ಮುಖ್ಯಸ್ಥ ಜಿ.ಎನ್‌.ಮೋಹನ್‌ ಮತ್ತಿತರರು ಉಪಸ್ಥಿತರಿದ್ದರು.

ಸ್ವಇಚ್ಛೆಯ ಮತಾಂತರ ತಡೆ ಯತ್ನ ಒಪ್ಪಲ್ಲ: ಮಾಜಿ ಸಿಎಂ

ಬೆಂಗಳೂರು: ಸರ್ಕಾರ ಸ್ವ ಇಚ್ಛೆಯಿಂದ ಮತಾಂತರ(Conversion) ಆಗುವುದನ್ನೂ ಇದೀಗ ಕಾನೂನಿನಡಿ ಹಿಡಿದಿಡುವ ಪ್ರಯತ್ನ ನಡೆಸುತ್ತಿರುವುದನ್ನು ಒಪ್ಪಲಾಗುವುದಿಲ್ಲ ಎಂದು ಇದೇ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಜೈನ(Jain), ಲಿಂಗಾಯಿತ(Lingayat), ಸಿಖ್‌(Sikh) ಧರ್ಮಗಳನ್ನು ‘ಹಿಂದೂ(Hinduism) ಧರ್ಮದ ಭಾಗ’ ಎನ್ನುವ ರೀತಿಯಲ್ಲಿ ಪ್ರತಿಪಾದನೆ ಮಾಡಲು ಶುರು ಮಾಡುತ್ತಿರುವುದು ಕೆಟ್ಟ ಬೆಳವಣಿಗೆ. ಬಸವಣ್ಣ ವೈದಿಕ ಧರ್ಮವನ್ನು ಒಪ್ಪಿಕೊಂಡಿದ್ದರಾ, ನಮ್ಮ ಗೊಡ್ಡು ಸಂಪ್ರದಾಯಗಳನ್ನು ಒಪ್ಪಿಕೊಂಡಿದ್ದರಾ ಎಂದು ಪ್ರಶ್ನಿಸಿದ ಅವರು ಕೆಲವರು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮತಾಂತರಕ್ಕೆ ನಮ್ಮ ಸಂವಿಧಾನದಲ್ಲೇ ಅವಕಾಶವಿರುವಾಗ ಇದನ್ನೂ ದುರುದ್ದೇಶದಿಂದ ಕಾನೂನಿನಡಿ ಹಿಡಿದಿಡುವ ಪ್ರಯತ್ನದ ವಿರುದ್ಧ ಮಾತನಾಡದೇ ಹೋದರೆ ಅಂಬೇಡ್ಕರ್‌ ನೀಡಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಸಾಧ್ಯವಿಲ್ಲ ಎಂದರು.

Karnataka Politics : ಸಚಿವಗೆ ಸಿದ್ದರಾಮಯ್ಯ ನೇರ ಆಹ್ವಾನ

ಸರ್ಕಾರದ ನಿರ್ಧಾರಕ್ಕೆ ಸಿದ್ಧರಾಮಯ್ಯ ಬೆಂಬಲ

ಒಮಿಕ್ರೋನ್ ಭೀತಿ (Omicron Variant) ಹಿನ್ನಲೆಯಲ್ಲಿ, ಹೊಸವರ್ಷಾಚರಣೆಗೆ (New Year 2022) ಹೊಸ ಗೈಡ್‌ಲೈನ್ಸ್ ಜಾರಿ ಮಾಡಲಾಗಿದೆ. ಡಿ. 28 ರಿಂದ ಜನವರಿ 6 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ (Night Curfew) ವಿಧಿಸಲಾಗಿದೆ. ಸಾರ್ವಜನಿಕ ಸೆಲಬ್ರೇಶನ್‌ಗೆ ಬ್ರೇಕ್ ಹಾಕಲಾಗಿದೆ. 

ಸರ್ಕಾರದ ನೈಟ್ ಕರ್ಫ್ಯೂ ನಿರ್ಧಾರಕ್ಕೆ ಸಿದ್ದರಾಮಯ್ಯ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೊಸ ವರ್ಷದ ಸಂಭ್ರಮದ ವೇಳೆ ಕೊರೊನಾ ಹರಡಬಹುದು. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಿ. ನಮ್ಮದೇನೂ ತಕರಾರಿಲ್ಲ. ಒಮಿಕ್ರೋನ್ ವೈರಸ್ ಹೆಚ್ಚಾಗುತ್ತಿದೆ. ಫೆಬ್ರವರಿಯಲ್ಲಿ ಇನ್ನಷ್ಟು ಹೆಚ್ಚಾಗುವುದು ಎಂದು ತಜ್ಞರು ಹೇಳಿರುವುದರಿಂದ ಇನ್ನಷ್ಟು ಕ್ರಮ ತೆಗೆದುಕೊಳ್ಳಲಿ. ಕಾನೂನು ಸುವ್ಯವಸ್ಥೆ ಕಾಪಾಡಲು ವ್ಯವಸ್ಥೆ ಮಾಡಲಿ. ನಮ್ಮ ಬೆಂಬಲವಿದೆ' ಎಂದಿದ್ದಾರೆ. 
 

click me!