* ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ತಿರ್ಮಾನ
* ಸಚಿವ ಗೋವಿಂದ ಕಾರಜೋಳ ಅಧ್ಯಕ್ಷೆತೆಯ ಸಂಪುಟ ಉಪಸಮಿತಿಯ ಸಭೆಯಲ್ಲಿ ತೀರ್ಮಾನ
* ಭರ್ತಿ ಮಾಡಲು ಮುಂದಿನ ಒಂದು ವಾರದಲ್ಲಿ ಅಧಿಸೂಚನೆ ನಿರ್ದೇಶನ
ಬೆಂಗಳೂರು, (ಜ.29): ಸರ್ಕಾರ ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು (Backlog Posts) ಭರ್ತಿ ಮಾಡಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ.
ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govind Karjol) ಅಧ್ಯಕ್ಷತೆಯಲ್ಲಿ ಇಂದು(ಶನಿವಾರ) ನಡೆದ ಸಂಪುಟ ಉಪಸಮಿತಿಯ ಸಭೆಯಲ್ಲಿ ಬ್ಯಾಕ್ ಲ್ಯಾಗ್ ಹುದ್ದೆ ಭರ್ತಿಗೆ ತಿರ್ಮಾನಿಸಲಾಗಿದೆ.
KAS Recruitment: 2011ರ ಕೆಎಎಸ್ ನೇಮಕಾತಿ ರಕ್ಷಣೆಗೆ ಸಂಪುಟ ನಿರ್ಧಾರ: ಮಾಧುಸ್ವಾಮಿ
ಸರ್ಕಾರಿ ಕಾಲೇಜುಗಳಲ್ಲಿ, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ವರ್ಗಕ್ಕೆ (SC) ಸೇರಿದ 446 ಹುದ್ದೆ, ಪರಿಶಿಷ್ಟ ಪಂಗಡಕ್ಕೆ(ST) ಸೇರಿದ 436 ಹುದ್ದೆಗಳು ಸೇರಿದಂತೆ ಒಟ್ಟು 882 ಹುದ್ದೆಗಳ ಭರ್ತಿ ಮಾಡುವುದು ಬಾಕಿ ಇದೆ. ಈ ಎಲ್ಲಾ ಹುದ್ದೆಗಳನ್ನ ನೇಮಕಾತಿಗೆ ಸಂಬಂಧಿಸಿದಂತೆ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಬೇಕೆಂದು ಸೂಚಿಸಲಾಗಿದೆ.
ಮುಂದಿನ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಲು ಸೂಚಿಸಲಾಗಿದ್ದು, ಮೂರು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಂಪುಟ ಉಪಸಮಿತಿ ನಿರ್ದೇಶನ ನೀಡಿದೆ.
ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಪ್ರಧಾನ ಕಾರ್ಯದರ್ಶಿಗಳಿಗೆ ಸಂಪುಟ ಉಪಸಮಿತಿ ಸೂಚನೆ ನೀಡಿದ್ದು, ಕೆಪಿಎಸ್ ಸಿ ಮೂಲಕ ಆಗಬೇಕಿರುವ ನೇಮಕಾತಿಗಳು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲದೇ ಆಯ್ಕೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಲೋಕಸೇವಾ ಆಯೋಗಕ್ಕೆ ಕೋರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ರಾಜ್ಯ ಸಚಿವ ಸಂಪುಟದ ಆರು ಸದಸ್ಯರಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್, ಮೀನುಗಾರಿಕೆ ಸಚಿವ ಎಸ್.ಅಂಗಾರ, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಬಿ.ಶ್ರೀರಾಮುಲು ಸಭೆಯಲ್ಲಿ ಹಾಜರಿದ್ದರು.
ಕೆಎಎಸ್ ನೇಮಕಾತಿ ರಕ್ಷಣೆಗೆ ಸಂಪುಟ ನಿರ್ಧಾರ
ಕರ್ನಾಟಕ ಲೋಕಸೇವಾ ಆಯೋಗದ (KPSC) 2011ರ ಬ್ಯಾಚ್ನ ಗೆಜೆಟೆಡ್ ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿಯನ್ನು ರಕ್ಷಣೆ ಮಾಡುವ ತೀರ್ಮಾನವನ್ನು ಸಚಿವ ಸಂಪುಟ ಸಭೆಯು ಕೈಗೊಂಡಿದೆ. ಮುಂದಿನ ಅಧಿವೇಶನದಲ್ಲಿ ಯಾವ ಸ್ವರೂಪದಲ್ಲಿ ಪ್ರಸ್ತಾಪಿಸಬೇಕು ಎಂಬುದರ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯ(Cabinet Meeting) ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ(JC Madhuswamy), 2011ರ ಬ್ಯಾಚ್ನ 362 ಗೆಜೆಟೆಡ್ ಪ್ರೊಬೆಷನರಿ ಅಧಿಕಾರಿಗಳ(Gazetted Probationary Officers) ರಕ್ಷಣೆಗೆ ಈ ಹಿಂದೆ ಸರ್ಕಾರ ಮಾತು ನೀಡಿತ್ತು. ಅದನ್ನು ಯಾವ ರೂಪದಲ್ಲಿ ವಿಧಾನಸಭೆಗೆ ತರಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.
ಕೆಪಿಎಸ್ಸಿ ಪಟ್ಟಿಯನ್ನು ಅಸಿಂಧುಗೊಳಿಸುವ ಮುನ್ನ ವಿಧಾನಸಭೆ ಮುಂದೆ ತಂದು ಅಭಿಪ್ರಾಯ ಪಡೆಯಬೇಕು ಎಂಬ ನಿಯಮ ಇದೆ. ಆದರೆ, ಆ ರೀತಿಯ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಮುಂದಿನ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.