ವಿಂಡೀಸ್ ಪ್ರವಾಸ ಮಿಸ್ ಮಾಡಿಕೊಂಡ 3 ಪ್ರತಿಭಾನ್ವಿತ ಕ್ರಿಕೆಟಿಗರಿವರು..!

By Web DeskFirst Published Jul 22, 2019, 3:57 PM IST
Highlights

ವೆಸ್ಟ್ ಇಂಡೀಸ್ ಪ್ರವಾಸಕ್ಕೆ MSK ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಟೀಂ ಇಂಡಿಯಾವನ್ನು ಆಯ್ಕೆ ಮಾಡಿದೆ. ಇದರಲ್ಲಿ ಮೂವರು ಪ್ರತಿಭಾನ್ವಿತ ಕ್ರಿಕೆಟಿಗರು ವಿಂಡೀಸ್ ಪ್ರವಾಸಕ್ಕೆ ಟಿಕೆಟ್ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗರು ನೀವೇ ನೋಡಿ...

ಬೆಂಗಳೂರು[ಜು.22]: ವೆಸ್ಟ್ ಇಂಡೀಸ್ ಪ್ರವಾಸಕ್ಕೆ MSK ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಗೆ ತಂಡವನ್ನು ಪ್ರಕಟಿಸಿದೆ. ಕೆಲ ಆಟಗಾರರಿಗೆ ವಿಶ್ರಾಂತಿ ನೀಡಿದರೆ, ಮತ್ತೆ ಕೆಲವರಿಗೆ ಕೊಕ್ ನೀಡಲಾಗಿದೆ.

ವಿಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಮೂರು ಕನ್ನಡಿಗರಿಗೆ ಸ್ಥಾನ

ಆಗಸ್ಟ್ 03ರಿಂದ ಆರಂಭವಾಗಲಿರುವ ಟಿ20 ಸರಣಿಗೆ ಅನುಭವಿ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್ ತಂಡ ಕೂಡಿಕೊಂಡರೆ, ಧೋನಿ, ಬುಮ್ರಾ, ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಇವರ ಬದಲಿಗೆ ಆಯ್ಕೆ ಸಮಿತಿ ಯುವ ಕ್ರಿಕೆಟಿಗರಿಗೆ ಮಣೆ ಹಾಕಲಾಗಿದೆ. ಹೀಗಾಗಿ ನವದೀಪ್ ಶೈನಿ, ರಿಷಭ್ ಪಂತ್, ರಾಹುಲ್ ಚಹರ್, ದೀಪಕ್ ಚಹರ್ ಹಾಗೂ ಖಲೀಲ್ ಅಹಮ್ಮದ್ ಅವಂತಹ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. 

ಇದೆಲ್ಲವುದರ ಜತೆಗೆ ಆಯ್ಕೆ ಸಮಿತಿ ಈ ಮೂವರು ಪ್ರತಿಭಾನ್ವಿತರಿಗೆ ವಿಂಡೀಸ್ ಟೂರ್’ಗೆ ಟಿಕೆಟ್ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ. ಇದರೊಂದಿಗೆ ಈ ಮೂವರ ಪೈಕಿ ಒಬ್ಬರ ಕ್ರಿಕೆಟ್ ವೃತ್ತಿ ಜೀವನ ಕೊನೆಯಾಯ್ತಾ ಎನ್ನುವ ಮಾತುಗಳು ದಟ್ಟವಾಗತೊಡಗಿವೆ. ಅಷ್ಟಕ್ಕೂ ಆ ನತದೃಷ್ಟ ಆಟಗಾರರು ಯಾರು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ...

1. ದಿನೇಶ್ ಕಾರ್ತಿಕ್: 
ಟೀಂ ಇಂಡಿಯಾ ಅನುಭವಿ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್ ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದರು. ವಿಶ್ವಕಪ್ ಟೂರ್ನಿಯಲ್ಲಿ ಮೀಸಲು ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದಿದ್ದ ಕಾರ್ತಿಕ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾಗಿದ್ದರು. ಅದರಲ್ಲೂ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೇವಲ 6 ರನ್ ಬಾರಿಸಿ ವಿಕೆಟ್ ಒಪ್ಪಿಸುವುದರ ಮೂಲಕ ಮತ್ತೊಮ್ಮೆ ಫೇಲ್ ಆಗಿದ್ದರು. ಇದರೊಂದಿಗೆ ವಿಶ್ವಕಪ್ ಜತೆ ಜತೆಗೆ ಕಾರ್ತಿಕ್ ವೃತ್ತಿ ಬದುಕು ಕೂಡಾ ಬಹುತೇಕ ಭಗ್ನವಾದಂತಾಗಿದೆ.

2. KS ಭರತ್: 
ಆಯ್ಕೆ ಸಮಿತಿ ಮುಖ್ಯಸ್ಥ MSK ಪ್ರಸಾದ್ ಅವರೇ ಹೇಳಿದಂತೆ ಭರತ್ ಟೆಸ್ಟ್ ತಂಡ ಕೂಡಿಕೊಳ್ಳುವ ಸಮೀಪ ಬಂದಿದ್ದರು, ಆದರೆ ವೃದ್ದಿಮಾನ್ ಸಾಹಗೆ ಅವಕಾಶ ನೀಡಲಾಯಿತು ಎಂದಿದ್ದರು. ಯಾಕೆಂದರೆ, ಭರತ್ ಕಳೆದ 11 ಭಾರತ ’ಎ’ ಪಂದ್ಯಗಳಲ್ಲಿ 3 ಶತಕ ಹಾಗೂ 2 ಅರ್ಧಶತಕ ಸಹಿತ 686 ರನ್ ಬಾರಿಸಿದ್ದಾರೆ. ಇದರ ಜತೆಗೆ ಆಂಧ್ರ ಕ್ರಿಕೆಟಿಗ 41 ಕ್ಯಾಚ್ ಹಾಗೂ 6 ಸ್ಟಂಪಿಗ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಆದರೆ ಭರತ್ ಅವರನ್ನು ಕಡೆಗಣಿಸಿ ಅನುಭವಿ ವಿಕೆಟ್’ಕೀಪರ್ ವೃದ್ದಿಮಾನ್ ಸಾಹ, ರಿಷಭ್ ಪಂತ್’ಗೆ ಅವಕಾಶ ಕಲ್ಪಿಸಲಾಗಿದೆ.

3. ಶುಭಮನ್ ಗಿಲ್:
ಶುಭ್’ಮನ್ ಗಿಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡದಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಈಗಾಗಲೇ ಆಕ್ರೋಶ ಹೊರಹಾಕಿದ್ದಾರೆ. ಭಾರತ ’ಎ’ ಪರ 38 ಪಂದ್ಯಗಳಲ್ಲಿ 45.44ರ ಸರಾಸರಿಯಲ್ಲಿ 1545 ರನ್ ಬಾರಿಸಿದ್ದಾರೆ. ಅಲ್ಲದೇ 2019ರ ಐಪಿಎಲ್ ಟೂರ್ನಿಯಲ್ಲಿ ಉದಯೋನ್ಮುಖ ಆಟಗಾರರಾಗಿ ಹೊರಹೊಮ್ಮಿದ್ದರು. ಇದರ ಹೊರತಾಗಿಯೂ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. 
 

click me!