ನರಗುಂದದಲ್ಲಿ Pro Kabaddi ನೆನಪಿಸಿದ ಪಂದ್ಯಾವಳಿ..!

By Kannadaprabha NewsFirst Published Oct 14, 2022, 11:12 AM IST
Highlights

ನರಗುಂದ ಕಬಡ್ಡಿ ವೈಭವ ಹೆಸರಿನಲ್ಲಿ ಕಳೆಗಟ್ಟಿದ ದೇಶಿ ಟೂರ್ನಿ
ಕಬಡ್ಡಿ ಅಭಿಮಾನಿಗಳು ತುದಿಗಾಲ ಮೇಲೆ ನಿಂತು ವೀಕ್ಷಿಸುವಂತೆ ಮಾಡಿದ ಕಬಡ್ಡಿ ಪಂದ್ಯ
ಪಂದ್ಯಾವಳಿಯಲ್ಲಿ 37 ಪುರುಷರು ಹಾಗೂ 33 ಮಹಿಳಾ ತಂಡಗಳು ಭಾಗಿ

ಶಿವಕುಮಾರ ಕುಷ್ಟಗಿ, ಕನ್ನಡಪ್ರಭ

ನರಗುಂದ ಕಬಡ್ಡಿ ವೈಭವ ಹೆಸರಿನಲ್ಲಿ ಆರಂಭವಾಗಿರುವ ರಾಷ್ಟ್ರೀಯ ಎ ಗ್ರೇಡ್‌ ಕಬಡ್ಡಿ ಪಂದ್ಯಾವಳಿ ಗುರುವಾರ ಅತ್ಯಂತ ರೋಚಕತೆಯಿಂದ ಕೂಡಿತ್ತು. ಪ್ರತಿಯೊಂದು ಪಂದ್ಯಗಳನ್ನು ಕಬಡ್ಡಿ ಅಭಿಮಾನಿಗಳು ತುದಿಗಾಲ ಮೇಲೆ ನಿಂತು ವೀಕ್ಷಿಸುವಂತಾಯಿತು. ಅದರಲ್ಲೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಹರಿಯಾಣ ಹಾಗೂ ಭಾರತೀಯ ನೆವಿ ತಂಡಗಳ ಪ್ರದರ್ಶನ ಹೆಚ್ಚಿನ ಗಮನ ಸೆಳೆಯಿತು.

Latest Videos

ಮಹಿಳಾ ವಿಭಾಗದಲ್ಲಿನ ಪ್ರತಿ ಪಂದ್ಯಗಳು ಅತ್ಯಂತ ಕುತೂಹಲವನ್ನು ಕೆರಳಿಸಿದ್ದು ಸಾಯಿ ಸೋನೆಪತ್‌ ಹಾಗೂ ಧಾರವಾಡ ತಂಡಗಳ ಮಧ್ಯೆ ನಡೆದ ಪಂದ್ಯಗಳು ನರೆದಿದ್ದ 10 ಸಾವಿರಕ್ಕೂ ಹೆಚ್ಚಿನ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿತು. ಪ್ರತಿಯೊಂದು ಪಾಯಿಂಟ್‌ಗಳನ್ನು ಪಡೆಯಲು ಎರಡೂ ತಂಡಗಳು ಸೆಣೆಸುತ್ತಿದ್ದ ರೀತಿ ವಿಶೇಷವಾಗಿತ್ತು.

ಮೊದಲ ದಿನ 5 ಪಂದ್ಯ:

ಪಂದ್ಯಾವಳಿ ಪ್ರಾರಂಭದ ದಿನವಾದ ಬುಧವಾರ ಒಟ್ಟು 5 ಪಂದ್ಯಗಳು ಜರುಗಿದ್ದು, 3 ಪುರುಷರು ಹಾಗೂ 2 ಮಹಿಳಾ ಪಂದ್ಯಗಳು ನಡೆದಿವೆ. ಮೊದಲ ಬಾರಿಗೆ ಉತ್ತರ ಕರ್ನಾಟಕದ ಇತಿಹಾಸದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಎ ಗ್ರೇಡ್‌ ಪಂದ್ಯಗಳನ್ನು ನರಗುಂದ ಪಟ್ಟಣದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಕ್ರೀಡಾಪ್ರೇಮಿಗಳಿಗೆ ಸಿಕ್ಕಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಬಡ್ಡಿ ಪ್ರೇಮಿಗಳನ್ನು ಪಂದ್ಯದ ರೋಚಕ ಕ್ಷಣಗಳನ್ನು ಸಂಭ್ರಮಿಸಿದರು.

ಎರಡನೇ ದಿನ 30 ಪಂದ್ಯ:

ಪಂದ್ಯಾವಳಿಯ 2ನೇ ದಿನವಾದ ಗುರುವಾರ ಒಟ್ಟು 30 ಪಂದ್ಯಗಳು ನಡೆದಿದ್ದು, ಅದರಲ್ಲಿ 20 ಪುರುಷರ ಹಾಗೂ 10 ಮಹಿಳಾ ಪಂದ್ಯಗಳಿದ್ದವು. ಒಟ್ಟು 8 ಗ್ರೂಪ್‌ಗಳಾಗಿ ವಿಂಗಡಿಸಿ ಆಯೋಜಿಸಲಾಗಿದ್ದ ಪಂದ್ಯಗಳಲ್ಲಿ ಪುರುಷರ ವಿಭಾಗದಲ್ಲಿ ಎ ದಿಂದ ಎಚ್‌ ವರೆಗೆ ಪ್ರತಿ ಗ್ರೂಪ್‌ಗಳಲ್ಲಿ 4ರಿಂದ 5 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಬುಧವಾರ ಮತ್ತು ಗುರುವಾರ ಸೇರಿ ಒಟ್ಟು ಎರಡು ದಿನಗಳಲ್ಲಿ 35 ಪಂದ್ಯಗಳಿಗೆ ನರಗುಂದ ಕ್ರೀಡಾಂಗಣ ಸಾಕ್ಷಿಯಾಯಿತು.

70 ತಂಡಗಳು ಭಾಗಿ:

ಪಂದ್ಯಾವಳಿಯಲ್ಲಿ 37 ಪುರುಷರು ಹಾಗೂ 33 ಮಹಿಳಾ ತಂಡಗಳು ಭಾಗವಹಿಸಿದ್ದು, ಪುರುಷರ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಮೈದಾನದಲ್ಲಿ 4 ಅಂಕಣಗಳಲ್ಲಿ 3 ಅಂಕಣಗಳನ್ನು ಪುರುಷರ ಪಂದ್ಯಗಳಿಗಾಗಿಯೇ ಮೀಸಲಿಡಲಾಯಿತು. ಒಂದೇ ಅಂಕಣದಲ್ಲಿ ಎಲ್ಲ ಮಹಿಳಾ ಪಂದ್ಯಗಳನ್ನು ನಡೆಸುತ್ತಿದ್ದು ಪಂದ್ಯಾವಳಿಯ ಅಚ್ಚುಕಟ್ಟು ವ್ಯವಸ್ಥೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಸೇರಿದಂತೆ ಕೋಚ್‌ ಹಾಗೂ ಕ್ರೀಡಾಪ್ರೇಮಿಗಳಲ್ಲಿ ಸಂತಸಕ್ಕೆ ಕಾರಣವಾಯಿತು.

PKL: ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಮುಗ್ಗರಿಸಿದ ಬೆಂಗಳೂರು ಬುಲ್ಸ್‌!

ಇಲ್ಲಿ ನಡೆಯುತ್ತಿರುವ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜಸ್ಥಾನ- ತಮಿಳನಾಡಿನ ಮಧ್ಯೆ ನಡೆದ ಲೀಗ್‌ ರೌಂಡ್‌ ಪಂದ್ಯಾವಳಿ ಅತ್ಯಂತ ರೋಚಕತೆ ಪಡೆಯಿತು. ಕೊನೆಗೆ 44- 40 ರಿಂದ ರಾಜಸ್ಥಾನ ತಂಡವು ತಮಿಳನಾಡು ತಂಡವನ್ನು ಸೋಲಿಸಿತು. ಆದರೆ, ಪಂದ್ಯಾವಳಿ ಆರಂಭದಿಂದಲೂ ಮುಗಿಯುವ ವರೆಗೂ ಎರಡು ತಂಡಗಳು ಅತ್ಯಂತ ಪೈಪೋಟಿ ನೀಡಿದವು.

ಕ್ಷಣ ಕ್ಷಣಕ್ಕೂ ರೋಚಕತೆ ಸೃಷ್ಟಿಸಿದ ಕಬಡ್ಡಿ ಪಂದ್ಯ

ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಬಡ್ಡಿ ಪಂದ್ಯಾವಳಿಯಲ್ಲಿ ಗುರುವಾರ ಲೀಗ್‌ ಪಂದ್ಯಗಳು ನಡೆದವು. ಇದರಲ್ಲಿ ಕ್ಷಣಕ್ಷಣಕ್ಕೂ ರೋಚಕತೆ, ರೋಮಾಂತನಗೊಳಿಸಿದ ಪಂದ್ಯ ಇದು. ಪ್ರತಿ ಕ್ಷಣವೂ ಸ್ಕೋರ್‌ ಬದಲಿಸಲು ಎರಡು ತಂಡಗಳು ಪೈಪೋಟಿ ನೀಡುತ್ತಿದ್ದವು. ತಮಿಳುನಾಡು ತಂಡ ಒಂದು ಅಂಕ ಪಡೆದು ಹೋದರೆ, ಮರುಕ್ಷಣವೇ ರಾಜಸ್ಥಾನ ತಂಡ ಅದನ್ನು ಹಿಂದಿಕ್ಕುತ್ತಿತ್ತು. ಹೀಗೆ ಪ್ರಾರಂಭದಿಂದಲೇ ಎರಡು ತಂಡಗಳು ಪರಸ್ಪರ ತೀವ್ರ ಪೈಪೋಟಿ ನೀಡಿದವು. ಈ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದವು.

ಕೊನೆಗೆ 33 ಅಂಕದವರೆಗೂ ಎರಡೂ ತಂಡಗಳು ಸಮಬಲ ಹೊಂದಿದ್ದವು. ಈ ಹಂತದಲ್ಲಿ ನಡೆದ ಆಟದಲ್ಲಿ ರಾಜಸ್ಥಾನ ತಂಡವೂ ಏಕಕಾಲಕ್ಕೆ 5 ಅಂಕಗಳನ್ನು ಪಡೆದು ಮುನ್ನಡೆಯಿತು. ಈ ಅಂತರವನ್ನು ಕೊನೆವರೆಗೂ ಕಾಯ್ದುಕೊಂಡಿತು. ಕೊನೆಗೆ 44 ಅಂಕ ಪಡೆದ ರಾಜಸ್ಥಾನ ಗೆಲುವಿನ ನಗೆ ಬೀರಿದರೆ, ತಮಿಳನಾಡು ತಂಡ 4 ಅಂಕಗಳಿಂದ ಸೋಲು ಅನುಭವಿಸಿತು.

click me!