
ಫುಜು(ನ.14): ನೂತನ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್'ಗಳಾದ ಸೈನಾ ನೆಹ್ವಾಲ್ ಮತ್ತು ಎಚ್.ಎಸ್. ಪ್ರಣಯ್, ಇಂದಿನಿಂದ ನಡೆಯಲಿರುವ ಚೀನಾ ಓಪನ್ ಸೂಪರ್ ಸೀರೀಸ್'ನಲ್ಲಿ ಉತ್ತಮ ಪ್ರದರ್ಶನ ನೀಡಿ, ದುಬೈನಲ್ಲಿ ನಡೆಯಲಿರುವ ಋತು ಅಂತ್ಯದ ಸೂಪರ್ ಸೀರೀಸ್ ಫೈನಲ್ಸ್'ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದಾರೆ.
ಸೈನಾ ಹಾಗೂ ಪ್ರಣಯ್ ಇಬ್ಬರೂ ವಿಶ್ವ ಶ್ರೇಯಾಂಕದಲ್ಲಿ 11ನೇ ಸ್ಥಾನದಲ್ಲಿದ್ದು, ಅಗ್ರ 8 ಆಟಗಾರರಿಗೆ ಮಾತ್ರ ಸೂಪರ್ ಸೀರೀಸ್ ಫೈನಲ್ಸ್'ಗೆ ಅರ್ಹತೆ ಸಿಗಲಿದೆ. ಮುಂದಿನ ತಿಂಗಳು ನಡೆಯಲಿರುವ ಫೈನಲ್ಸ್ ಪಂದ್ಯಾವಳಿಗೂ ಮುನ್ನ ಚೀನಾ ಹಾಗೂ ಹಾಂಕಾಂಗ್ ಸೂಪರ್ ಸೀರೀಸ್ ನಡೆಯಲಿದ್ದು, ಇಲ್ಲಿ ಉತ್ತಮ ಪ್ರದರ್ಶನ ನೀಡಿ ಹೆಚ್ಚು ಅಂಕ ಕಲೆಹಾಕಿದರೆ, ಶ್ರೇಯಾಂಕದಲ್ಲಿ ಪಟ್ಟಿಯಲ್ಲಿ ಮೇಲೇರುವ ಸಾಧ್ಯತೆ ಇದೆ.
ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆಯ ಪ್ರತಿ ಸದಸ್ಯ ರಾಷ್ಟ್ರಗಳಿಂದ ಪ್ರತಿ ವಿಭಾಗದಲ್ಲಿ ಇಬ್ಬರು ಆಟಗಾರರು ಮಾತ್ರ ಸ್ಪರ್ಧಿಸಬಹುದಾಗಿದೆ.
ವಿಶ್ವ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿರುವ ಕಿದಾಂಬಿ ಶ್ರೀಕಾಂತ್ ಹಾಗೂ ಪಿ.ವಿ.ಸಿಂಧು ಈಗಾಗಲೇ ದುಬೈ ಫೈನಲ್ಸ್'ಗೆ ಕ್ರಮವಾಗಿ ಪುರುಷರ ಸಿಂಗಲ್ಸ್ ಹಾಗೂ ಮಹಿಳಾ ಸಿಂಗಲ್ಸ್'ನಲ್ಲಿ ಅರ್ಹತೆ ಪಡೆದಿದ್ದಾರೆ. ಇನ್ನುಳಿದ ಒಂದು ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಸೈನಾ ಹಾಗೂ ಪ್ರಣಯ್'ಗೆ ಅವಕಾಶವಿದೆ.
ಸಿಂಧುಗೆ ವರ್ಷದ 3ನೇ ಪ್ರಶಸ್ತಿ ಗುರಿ:
ಪಿ.ವಿ.ಸಿಂಧು, ಚೀನಾ ಓಪನ್ನ'ಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಈ ವರ್ಷ 3ನೇ ಪ್ರಶಸ್ತಿ ಎತ್ತಿಹಿಡಿಯುವ ಗುರಿ ಹೊಂದಿದ್ದಾರೆ. ಸಿಂಧು ಈ ವರ್ಷ ವಿಶ್ವ ಚಾಂಪಿಯನ್'ಶಿಪ್ ಬೆಳ್ಳಿ ಜತೆಗೆ ಇಂಡಿಯಾ ಓಪನ್ ಹಾಗೂ ಕೊರಿಯಾ ಓಪನ್'ನಲ್ಲಿ ಚಾಂಪಿಯನ್ ಆಗಿದ್ದರು. ಇನ್ನು ಗಾಯದ ಕಾರಣ, ವಿಶ್ವ ನಂ.2 ಶ್ರೀಕಾಂತ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.