ಅಥ್ಲೀಟ್‌ಗಳ ಕ್ಷೇಮಾಭಿವೃದ್ಧಿಗೆ ಅಭಿನವ್‌ ಬಿಂದ್ರಾ ಪಂಚ ಸೂತ್ರ

By Kannadaprabha NewsFirst Published Sep 28, 2022, 10:24 AM IST
Highlights

ಕ್ರೀಡಾಪಟುಗಳ ಕ್ಷೇಮಾಭಿವೃದ್ಧಿಗಾಗಿ ಪಂಚ ಸೂತ್ರ ಪ್ರಸ್ತಾಪಿಸಿದ ಅಭಿನವ್ ಬಿಂದ್ರಾ
ಐಒಸಿ ಜೊತೆ ಸಭೆಯಲ್ಲಿ ಪಾಲ್ಗೊಂಡ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ಬಿಂದ್ರಾ
ಭಾರತೀಯ ಕ್ರೀಡಾಪಟುಗಳು ಇನ್ನಷ್ಟು ಏಳಿಗೆ ಕಾಣಬೇಕಿದ್ದರೆ ತರಬೇಕಾದ ಸುಧಾರಣೆಗಳನ್ನು ವಿವರಿಸಿದ ಬಿಂದ್ರಾ

ಲುಸಾನ್‌(ಸೆ.28): ಒಲಿಂಪಿಕ್ಸ್‌ ಚಿನ್ನ ವಿಜೇತ ಶೂಟರ್‌ ಭಾರತದ ಅಭಿನವ್‌ ಬಿಂದ್ರಾ ಕ್ರೀಡಾಪಟುಗಳ ಕ್ಷೇಮಾಭಿವೃದ್ಧಿಗಾಗಿ ಮಂಗಳವಾರ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ(ಐಒಸಿ)ಯ ಸಭೆಯಲ್ಲಿ ಪಂಚ ಸೂತ್ರಗಳನ್ನು ಪ್ರಸ್ತಾಪಿಸಿದ್ದಾರೆ. ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಹಾಗೂ ಕೇಂದ್ರ ಕ್ರೀಡಾ ಸಚಿವಾಲಯದ ಪ್ರತಿನಿಧಿಯಾಗಿ ಬಿಂದ್ರಾ ಐಒಸಿ ಜೊತೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಭಾರತೀಯ ಕ್ರೀಡಾಪಟುಗಳು ಇನ್ನಷ್ಟುಏಳಿಗೆ ಕಾಣಬೇಕಿದ್ದರೆ, ಕ್ರೀಡಾಡಳಿತದಲ್ಲಿ ಏನೆಲ್ಲಾ ಬದಲಾವಣೆಗಳು ಆಗಬೇಕು ಎನ್ನುವ ಬಗ್ಗೆ ವಿವರಿಸಿದರು. ಬಿಂದ್ರಾ ಪ್ರಸ್ತಾಪಿಸಿದ 5 ಅಂಶಗಳ ವಿವರ ಇಲ್ಲಿದೆ.

1. ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಾಗ ಕ್ರೀಡಾಪಟುಗಳ ಅಭಿಪ್ರಾಯವನ್ನು ಕೇಳಬೇಕು. ಆಡಳಿತದಲ್ಲಿ ಕ್ರೀಡಾಪಟುಗಳಿಗೆ ಪ್ರಾತಿನಿಧ್ಯ ನೀಡಬೇಕು. ಕ್ರೀಡಾ ಸಮಿತಿಗಳಲ್ಲಿ ಪುರುಷ ಹಾಗೂ ಮಹಿಳಾ ಅಥ್ಲೀಟ್‌ಗಳಿಗೆ ಸಮನಾದ ಅವಕಾಶ ಕಲ್ಪಿಸಬೇಕು.

2. ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಲ್ಲಿ ಕ್ರೀಡಾ ನೀತಿಗಳನ್ನು ಅನುಷ್ಠಾನಗೊಳಿಸಬೇಕು. ಐಒಎ ಸದಸ್ಯತ್ವವನ್ನು ಅಗ್ರ ಅಥ್ಲೀಟ್‌ಗಳಿಗೆ ನೀಡಬೇಕು. ಇದರಿಂದ ನಿವೃತ್ತಿ ಬಳಿಕ ಆ ಅಥ್ಲೀಟ್‌ಗಳು ಕ್ರೀಡಾಡಳಿತಗಳಲ್ಲಿ ಕಾರ‍್ಯನಿರ್ವಹಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ.

3. ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳು ಲಭ್ಯವಿರುವಂತೆ ಆಡಳಿತಾಧಿಕಾರಿಗಳು ನೋಡಿಕೊಳ್ಳಬೇಕು. ಇದರ ಜೊತೆಗೆ ಮಹತ್ವದ ನಿರ್ಧಾರಗಳು, ಆಡಳಿತದಲ್ಲಿ ಬದಲಾವಣೆ ಮಾಡುವ ಸಂದರ್ಭದಲ್ಲಿ ಕ್ರೀಡಾಪಟುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

4. ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಇರಬೇಕು. ಯಾವುದೇ ಸಂದರ್ಭದಲ್ಲಿಯೂ ಕ್ರೀಡಾಪಟುವಿಗೆ ಆರ್ಥಿಕ ಹೊರೆ ಆಗದಂತೆ ನೋಡಿಕೊಳ್ಳಬೇಕು. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಲಿದ್ದು, ಕ್ರೀಡೆ ಕಡೆಗಷ್ಟೇ ಗಮನ ಹರಿಸಲು ಅನುಕೂಲವಾಗಲಿದೆ.

5. ಕ್ರೀಡಾಪಟುಗಳ ಕುಂದುಕೊರತೆಗಳನ್ನು ಆಲಿಸಲು, ಅದಕ್ಕೆ ಪರಿಹಾರ ಕಲ್ಪಿಸಲು ಎಲ್ಲಾ ಫೆಡರೇಷನ್‌ಗಳಲ್ಲೂ ಸಾರ್ವಜನಿಕ ತನಿಖಾಧಿಕಾರಿ ಇರಬೇಕು. ನೈತಿಕ ಅಧಿಕಾರಿ, ಭದ್ರತಾ ಅಧಿಕಾರಿಗಳ ಇರುವಿಕೆಯೂ ಬಹಳ ಮುಖ್ಯ. ಅಥ್ಲೀಟ್‌ಗಳ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಸಿಗಬೇಕು.

ಹಾಕಿ ವಿಶ್ವಕಪ್‌: ಭಾರತಕ್ಕೆ ಸ್ಪೇನ್ ಮೊದಲ ಎದುರಾಳಿ

ನವದೆಹಲಿ: 2023ರ ಪುರುಷರ ಹಾಕಿ ವಿಶ್ವಕಪ್‌ ವೇಳಾಪಟ್ಟಿಪ್ರಕಟಗೊಂಡಿದ್ದು ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಜ.13ರಂದು ತನ್ನ ಮೊದಲ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ ಸೆಣಸಲಿದೆ. ಜ.15ರಂದು ಇಂಗ್ಲೆಂಡ್‌ ವಿರುದ್ಧ ಆಡಲಿದೆ. ಈ ಎರಡೂ ಪಂದ್ಯಗಳು ರೂರ್ಕೆಲಾದಲ್ಲಿ ನಡೆಯಲಿವೆ. ಗುಂಪು ಹಂತದ 3ನೇ ಹಾಗೂ ಅಂತಿಮ ಪಂದ್ಯವನ್ನು ಜ.19ರಂದು ವೇಲ್ಸ್‌ ವಿರುದ್ಧ ಭುವನೇಶ್ವರದಲ್ಲಿ ಆಡಲಿದೆ. ಜ.13ರಿಂದ ಜ.29ರ ವರೆಗೂ ಪಂದ್ಯಾವಳಿ ನಡೆಯಲಿದೆ.

ರೋಚಕ ಕಾಳಗಕ್ಕೆ ಸಾಕ್ಷಿಯಾದ ದಸರಾ ನಾಡಕುಸ್ತಿ ಪಂದ್ಯಾವಳಿ

ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ನಡೆದ ನಾಡಕುಸ್ತಿಯ ರೋಚಕ ಪಂದ್ಯದಲ್ಲಿ ಹಂಪಾಪುರದ ನಾಗೇಶ್‌ ಮತ್ತು ಧಾರವಾಡದ ಜಮಖಂಡಿಯ ಗಜಾನನ ಸಮಬಲ ಸಾಧಿಸಿದರು. ಸುಮಾರು 15 ನಿಮಿಷಗಳ ಹೋರಾಟದಲ್ಲಿ ಯಾರೊಬ್ಬರು ಸೋಲದ ಹಿನ್ನೆಲೆಯಲ್ಲಿ ಇಬ್ಬರು ಸಮಬಲ ಸಾಧಿಸಿರುವುದಾಗಿ ತೀರ್ಪುಗಾರರು ಪ್ರಕಟಿಸಿದರು.

ಅಕ್ಟೋಬರ್ 15ರಿಂದ ಬೆಂಗಳೂರಲ್ಲಿ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಟೂರ್ನಿ

ಮತ್ತೊಂದು ಪಂದ್ಯದಲ್ಲಿ ಗಂಜಾಂನ ತೇಜಸ್‌ ಅವರು ಅಶೋಕಪುರಂನ ರವಿ ಅವರನ್ನು ಮಣಿಸಿದರು. ಕಡಕೊಳದ ಅರುಣ್‌ ಅವರು ಕಾಮನಕೆರೆಹುಂಡಿಯ ರಾಜೇಂದ್ರಕುಮಾರ್‌ ಅವರನ್ನು ಸೋಲಿಸಿದರೆ, ಗೋಳೂರಿನ ಮಹೇಶ್‌ ಧೂಮ್‌ ಅವರು ಕನಕಪುರದ ನಾಗ ಅವರನ್ನು ಸೋಲಿಸಿದರು. ಹುಲ್ಲಹಳ್ಳಿಯ ಸತೀಶ್‌, ಮೆಲ್ಲಹಳ್ಳಿಯ ಪ್ರಮೋದ್‌ ಅವರ ಎದುರು ಸೋಲೊಪ್ಪಿಕೊಂಡರು.

click me!