ಮುಂಬೈ ಇಂಡಿಯನ್ಸ್’ನಿಂದ ಸಚಿನ್‌ಗಿಲ್ಲ ಸಂಭಾವನೆ!

By Web DeskFirst Published Apr 29, 2019, 2:26 PM IST
Highlights

ಮಧ್ಯ ಪ್ರದೇಶ ಕ್ರಿಕೆಟ್‌ ಸಂಸ್ಥೆ ಸದಸ್ಯ ಸಂಜೀವ್‌ ಗುಪ್ತಾ, ಸಚಿನ್‌ ಹಾಗೂ ವಿವಿಎಸ್‌ ಲಕ್ಷ್ಮಣ್‌ ವಿರುದ್ಧ ಹಿತಾಸಕ್ತಿ ಆರೋಪ ಸಲ್ಲಿಸಿದ್ದರು. ಈ ಕುರಿತಂತೆ ಇದೇ ಮೊದಲ ಬಾರಿಗೆ ಸಚಿನ್ ತೆಂಡುಲ್ಕರ್ ತುಟಿ ಬಿಚ್ಚಿದ್ದಾರೆ. ಅಷ್ಟಕ್ಕೂ ಮಾಸ್ಟರ್ ಬ್ಲಾಸ್ಟರ್ ಏನಂದ್ರು ಅನ್ನೋದನ್ನು ನೀವೇ ನೋಡಿ...

ನವದೆಹಲಿ: ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ತಮ್ಮ ವಿರುದ್ಧ ಕೇಳಿ ಬಂದಿರುವ ಸ್ವಹಿತಾಸಕ್ತಿ ಆರೋಪಕ್ಕೆ ಉತ್ತರಿಸಿದ್ದಾರೆ. ಮುಂಬೈ ಇಂಡಿಯನ್ಸ್‌ ತಂಡದ ‘ಐಕಾನ್‌’ ಆಗಿರುವ ಸಚಿನ್‌, ‘ತಂಡದಿಂದ ಯಾವುದೇ ಸಂಭಾವನೆ ಪಡೆಯುವುದಿಲ್ಲ. ಇದೊಂದು ಗೌರವಾನ್ವಿತ ಹುದ್ದೆಯಷ್ಟೆ. ತಂಡದ ಆಯ್ಕೆಯಲ್ಲೂ ನನ್ನ ಪಾತ್ರವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ವಿನೋದ್ ಕಾಂಬ್ಳಿ ಟ್ರೋಲ್ ಮಾಡಿದ ಸಚಿನ್ ತೆಂಡುಲ್ಕರ್!

ಬಿಸಿಸಿಐ ಸಾರ್ವಜನಿಕ ತನಿಖಾಧಿಕಾರಿಯಾಗಿರುವ ನಿವೃತ್ತ ನ್ಯಾಯಮೂರ್ತಿ ಡಿ.ಕೆ.ಜೈನ್‌ ಕಳುಹಿಸಿದ್ದ ನೋಟಿಸ್‌ಗೆ ಸಚಿನ್‌ ಭಾನುವಾರ ಉತ್ತರಿಸಿದರು. ಅವರ ಬರೆದ ಪತ್ರ 14 ಅಂಶಗಳನ್ನು ಒಳಗೊಂಡಿದ್ದು, ತಾವೇಕೆ ಹಿತಾಸಕ್ತಿ ಸಂಘರ್ಷಕ್ಕೆ ಒಳಗಾಗುವುದಿಲ್ಲ ಎಂದು ವಿವರಿಸಿದ್ದಾರೆ. ಮಧ್ಯ ಪ್ರದೇಶ ಕ್ರಿಕೆಟ್‌ ಸಂಸ್ಥೆ ಸದಸ್ಯ ಸಂಜೀವ್‌ ಗುಪ್ತಾ, ಸಚಿನ್‌ ಹಾಗೂ ವಿವಿಎಸ್‌ ಲಕ್ಷ್ಮಣ್‌ ವಿರುದ್ಧ ಹಿತಾಸಕ್ತಿ ಆರೋಪ ಸಲ್ಲಿಸಿದ್ದರು. ಈ ಇಬ್ಬರು ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ)ಯ ಸದಸ್ಯರಾಗಿದ್ದುಕೊಂಡು ಐಪಿಎಲ್‌ನಲ್ಲೂ ತೊಡಗಿಸಿಕೊಂಡಿದ್ದಾರೆ. ಬಿಸಿಸಿಐನಲ್ಲಿ ಜವಾಬ್ದಾರಿ ಹೊಂದಿರುವ ವ್ಯಕ್ತಿ ಐಪಿಎಲ್‌ನಲ್ಲಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ ಎಂದು ಸಂಜೀವ್‌ ಪ್ರಶ್ನಿಸಿದ್ದರು. 

ಈ ಸಂಬಂಧ ನ್ಯಾ.ಡಿ.ಕೆ.ಜೈನ್‌ ಇಬ್ಬರು ಮಾಜಿ ಕ್ರಿಕೆಟಿಗರಿಗೆ ನೋಟಿಸ್‌ ಜಾರಿ ಮಾಡಿದ್ದರು. ಮುಂಬೈ ತಂಡದ ‘ಐಕಾನ್‌’ ಆಗಿ ತಮ್ಮ ಕೆಲಸವೇನು ಎನ್ನುವುದನ್ನು ವಿವರಿಸಿರುವ ಸಚಿನ್‌, ‘ತಂಡಕ್ಕೆ ಸ್ಫೂರ್ತಿ ತುಂಬುವುದು, ಯುವ ಆಟಗಾರರಿಗೆ ಸರಿಯಾದ ದಾರಿ ತೋರಿಸುವುದು ಹಾಗೂ ಸಲಹೆಗಳನ್ನು ನೀಡುವುದಷ್ಟೇ ನನ್ನ ಜವಾಬ್ದಾರಿ. ತಂಡದಲ್ಲಿ ನಾನು ಯಾರಿಗೂ ಉತ್ತರಿಸಬೇಕಾದ ಅಗತ್ಯವಿಲ್ಲ. ಏಕೆಂದರೆ ಯಾವುದೇ ನಿರ್ಧಾರಗಳಲ್ಲಿ ನನ್ನ ಪಾತ್ರ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ವಿವಿಎಸ್‌ ಲಕ್ಷ್ಮಣ್‌ಗೂ ನೋಟಿಸ್‌ ಕಳುಹಿಸಲಾಗಿದ್ದು, ಅವರಿನ್ನೂ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಉತ್ತರಿಸಿಲ್ಲ.
 

click me!