
ಜಕಾರ್ತ(ಜೂನ್ 18): ಭಾರತದ ಕಿಡಾಂಬಿ ಶ್ರೀಕಾಂತ್ ಅವರು ಇಂಡೋನೇಷ್ಯಾ ಓಪನ್ ಸೂಪರ್'ಸೀರೀಸ್ ಬ್ಯಾಂಡ್ಮಿಂಟನ್ ಟೂರ್ನಿ ಜಯಿಸಿದ್ದಾರೆ. ಭಾನುವಾರ ನಡೆದ ಫೈನಲ್'ನಲ್ಲಿ ಜಪಾನ್'ನ ಕಜುಮಾಸಾ ಸಕಾಯ್ ವಿರುದ್ಧ 21-11, 21-19 ನೇರ ಗೇಮ್'ಗಳಿಂದ ಕಿಡಾಂಬಿ ಗೆಲುವು ಸಾಧಿಸಿದ್ದಾರೆ. ಸೆಮಿಫೈನಲ್'ನಲ್ಲಿ ದಕ್ಷಿಣ ಕೊರಿಯಾದ ವಿಶ್ವ ನಂಬರ್ ಒನ್ ಸೋನ್ ವ್ಯಾನ್ ಹೋ ಅವರನ್ನ ಸೋಲಿಸಿದ್ದ ಶ್ರೀಕಾಂತ್ ಅದೇ ಆತ್ಮವಿಶ್ವಾಸದಲ್ಲಿ ಜಪಾನ್ ಸ್ಪರ್ಧಾಳು ವಿರುದ್ಧ ಅಮೋಘ ಪ್ರದರ್ಶನ ನೀಡಿದರು. ವಿಶ್ವದ ನಂ.22ನೇ ಶ್ರೇಯಾಂಕದ ಕಿಡಾಂಬಿ ಶ್ರೀಕಾಂತ್ ಜಪಾನ್'ನ 47ನೇ ನಂಬರ್'ನ ಆಟಗಾರನ ವಿರುದ್ಧ ಪಂದ್ಯಾದ್ಯಂತ ಮೇಲುಗೈ ಸಾಧಿಸಿದರು. ಎರಡನೇ ಗೇಮ್'ನಲ್ಲಿ ಜಪಾನ್ ಆಟಗಾರ ತೀವ್ರ ಪ್ರತಿರೋಧ ಒಡ್ಡಿದರಾದರೂ ಶ್ರೀಕಾಂತ್ ಸಂದರ್ಭಕ್ಕೆ ತಕ್ಕಂತೆ ತಮ್ಮ ಆಟದ ಮಟ್ಟವನ್ನು ಏರಿಸಿ ಎದುರಾಳಿಯನ್ನು ಕಂಗೆಡಿಸಿದರು.
ಮಾಜಿ ವಿಶ್ವ ನಂಬರ್ 3ನೇ ಆಟಗಾರನಾಗಿರುವ 24 ವರ್ಷದ ಆಂಧ್ರಪ್ರದೇಶದ ಕಿಡಾಂಬಿ ಶ್ರೀಕಾಂತ್'ಗೆ ಇದು 8ನೇ ಪ್ರಮುಖ ಅಂತಾರಾಷ್ಟ್ರೀಯ ಪ್ರಶಸ್ತಿಯಾಗಿದೆ. 3 ಸೂಪರ್'ಸೀರೀಸ್ ಪ್ರಶಸ್ತಿಯಾಗಿದೆ. ಜೊತೆಗೆ 2 ಗ್ರ್ಯಾನ್'ಪ್ರೀ ಪ್ರಶಸ್ತಿಗಳನ್ನೂ ಜಯಿಸಿದ್ದಾರೆ.
ಜಪಾನ್'ನ ಆಟಗಾರ ಕಜುಮಸಾ ಸಕಾಯ್ ಸೆಮಿಫೈನಲ್'ನಲ್ಲಿ ವಿಶ್ವ ನಂಬರ್ 25 ಎಚ್.ಎಸ್.ಪ್ರಣೋಯ್ ಅವರನ್ನು 17-21, 28-26, 21-18ರಿಂದ ರೋಚಕವಾಗಿ ಸೋಲಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.