
ನವದೆಹಲಿ: ಆತ ಕೋಟಿಗಳಿಗೆ ಒಡೆಯ, ದೇಶದ ಖ್ಯಾತ ಉದ್ಯಮಿ ಕುಮಾರ ಮಂಗಲಂ ಅವರ ಪುತ್ರ ಆರ್ಯಮನ್ ವಿಕ್ರಮ್ ಬಿರ್ಲಾ ಕೇವಲ 30 ಲಕ್ಷಕ್ಕೆ ರಾಜಸ್ಥಾನ ರಾಯಲ್ಸ್ಗೆ ಸೇರ್ಪಡೆಗೊಂಡಿದ್ದಾರೆ. ಆರ್ಯಮನ್ ಮಧ್ಯಪ್ರದೇಶ ತಂಡದ ಪರ ದೇಸಿ ಕ್ರಿಕೆಟ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.
ಮಿಲಿಯನ್ ಡಾಲರ್ ಬೇಬಿ ಎಂದೇ ಕರೆಸಿಕೊಳ್ಳುವ ಇಂಡಿಯನ್ ಪ್ರಿಮೀಯರ್ ಲೀಗ್ ಸಾಕಷ್ಟು ಯುವ ಆಟಗಾರರಿಗೆ ಉಜ್ವಲ ಭವಿಷ್ಯ ಕಲ್ಪಿಸಿದೆ. ಇದಕ್ಕೂ ಮುನ್ನ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಯುವ ಆಟಗಾರರ ಭವಿಷ್ಯದ ಬಾಗಿಲು ತೆರೆದುಕೊಳ್ಳಲಿದೆ. ಅಂದ ಹಾಗೆ ಈ ಬಾರಿಯ ಹರಾಜಿನಲ್ಲೂ ಕೆಲ ಸ್ವಾರಸ್ಯಕರ ಘಟನೆಗಳು ನಡೆದಿದ್ದು, ಅದರ ಕೆಲ ತುಣುಕುಗಳು ಇಲ್ಲಿವೆ.
ಸೆಕ್ಯುರಿಟಿ ಗಾರ್ಡ್, ಐಪಿಎಲ್ ಆಟಗಾರ: ಜಮ್ಮು-ಕಾಶ್ಮೀರದ ಮಂಜೂರ್ ಅಹ್ಮದ್ ದಾರ್, ಶ್ರೀನಗರದ ಆಟೋ ಮೊಬೈಲ್ ಶೋ ರೂಮ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ಕಾಶ್ಮೀರ ತಂಡದಲ್ಲಿ ಖಾಯಂ ಆಟಗಾರನಾಗಿದ್ದ ಮಂಜೂರ್ ದಾರ್, ವಿಜಯ್ ಹಜಾರೆ ಪಂದ್ಯಾವಳಿ ವೇಳೆ ಎಲ್ಲರ ಗಮನ ಸೆಳೆದಿದ್ದರು. ಇದೀಗ ಪಂಜಾಬ್ 20 ಲಕ್ಷಕ್ಕೆ ಅವರನ್ನು ಖರೀದಿಸಿದೆ.
ಭಜ್ಜಿ ಉಳಿಸಿಕೊಳ್ಳದೇ ಇರುವುದು ಬೇಸರ: ಕಳೆದ 10 ವರ್ಷಗಳಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಈ ಬಾರಿ ಹರಾಜಿನಲ್ಲಿ ಸಿಎಸ್ಕೆ ಪಾಲಾಗಿದ್ದು, ಇದು ಸ್ವತಃ ತಂಡದ ಮಾಲಕಿ ನೀತಾ ಅಂಬಾನಿ ಅವರಿಗೆ ನಿರಾಸೆ ತಂದಿದೆಯಂತೆ. ಈ ಕುರಿತು ಪ್ರತಿಕ್ರಿಯಿಸಿರುವ ನೀತಾ, ‘ತಂಡ ದಿಂದ ಇತರೆ ಆಟಗಾರರು ಹೊರ ಹೋಗಿ ರಬಹುದು. ಆದರೆ, ಭಜ್ಜಿ ಇಲ್ಲ ದಿರುವುದು ಬೇಸರ ತರಿಸಿದೆ’ ಎಂದಿದ್ದಾರೆ.
ಹೆದರಿ ಬಾತ್ರೂಮ್ನಲ್ಲಿ ಅಡಗಿದ್ದೆ: ಯುವ ವೇಗಿ ಕಮ್ಲೇಶ್ ನಾಗರಕೋಟಿ, 11ನೇ ಆವೃತ್ತಿಯ ಐಪಿಎಲ್ ಹರಾಜು ನಡೆಯುವ ವೇಳೆ ಹೆದರಿ ಬಾತ್ರೂಮ್ ನಲ್ಲಿ ಅಡಗಿ ಕುಳಿತಿದ್ದಾಗಿ ಹೇಳಿದ್ದಾರೆ. ‘ಹರಾಜಿನಲ್ಲಿ ನನ್ನ ಹೆಸರು ಬರುತ್ತಿದ್ದಂತೆ ನನ್ನಲ್ಲಿದ್ದ ಧೈರ್ಯ ಉಡುಗಿ ಹೋಯಿತು’ ಎಂದಿದ್ದಾರೆ. ಕಮ್ಲೇಶ್ ಅವರನ್ನು 3.2 ಕೋಟಿಗೆ ಕೆಕೆಆರ್ ತಂಡ ಖರೀದಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.