ಫೋಟೋ ಕ್ಲಿಕ್ಕಿಸಿದ ಪಿ.ಟಿ.ಉಷಾ ವಿರುದ್ಧ ವಿನೇಶ್​ ಫೋಗಟ್​ ಗರಂ! ರಾಜಕೀಯದ ಬಗ್ಗೆ ಹೇಳಿದ್ದೇನು?

By Suchethana DFirst Published Sep 11, 2024, 4:23 PM IST
Highlights

ಪ್ಯಾರೀಸ್​ ಒಲಿಂಪಿಕ್ಸ್​ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಕುಸ್ತಿಪಟು ವಿನೇಶ್​ ಫೋಗಟ್​ ಅವರನ್ನು ಭೇಟಿಯಾಗಿದ್ದ  ಪಿ.ಟಿ.ಉಷಾ ಫೋಟೋ ಕ್ಲಿಕ್ಕಿಸಿದ್ದಕ್ಕೆ ಗರಂ ಆಗಿರೋ ವಿನೇಶ್​ ಹೇಳಿದ್ದೇನು?  
 

100 ಗ್ರಾಂ ತೂಕದಿಂದಾಗಿ ಒಲಿಂಪಿಕ್ಸ್‌ನ ಅಂತಿಮ ಸ್ಪರ್ಧೆಗೆ ಹೋಗಲು ವಿಫಲರಾದ ಓಲಿಂಪಿಯನ್ ಕುಸ್ತಿಪಟು ವಿನೇಶ್‌ ಫೋಗಟ್‌ ಅವರು ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದಾರೆ. ಹರಿಯಾಣದಿಂದ ಇವರು ಸ್ಪರ್ಧಿಸುತ್ತಿದ್ದಾರೆ.   ಚಿನ್ನದತ್ತ ದಾಪುಗಾಲು ಇಟ್ಟಿದ್ದ   ವಿನೇಶ್​ ಫೋಗಟ್​ ಕೊನೆ ಕ್ಷಣದಲ್ಲಿ ಅನರ್ಹರಾಗಿ ಭಾರತೀಯರಿಗೆ ಶಾಕ್​ ಕೊಟ್ಟುಬಿಟ್ಟರು. 2016ರಲ್ಲಿಯೂ ಇದೇ ರೀತಿ ತೂಕದ ವಿಷಯದಲ್ಲಿ ಅವಕಾಶ ಕಳೆದುಕೊಂಡಿದ್ದ ವಿನೇಶ್​ ಅವರು ಕೇವಲ 100 ಗ್ರಾಂನಿಂದಾಗಿ ಅವಕಾಶ ಕಳೆದುಕೊಂಡುಬಿಟ್ಟರು. ಈ ನೋವಿನಲ್ಲಿಯೇ ನಿವೃತ್ತಿಯನ್ನೂ ಘೋಷಿಸುವ ಮೂಲಕ ಇನ್ನೊಂದು ಶಾಕ್​  ಕೊಟ್ಟರು. ಅಂತಿಮ ಸ್ಪರ್ಧೆಯಲ್ಲಿ ಆಡಲು ತೂಕ ಕಳೆದುಕೊಳ್ಳುವ ಅವಶ್ಯಕತೆ ಇದ್ದಾಗ ಕೂದಲು, ಉಗುರು ಕಟ್​ ಮಾಡಿದ್ದಾಯಿತು, ರಕ್ತವನ್ನೂ ತೆಗೆಯಲಾಗಿತ್ತು. ಇಷ್ಟು ಕಷ್ಟಪಟ್ಟರೂ ತೂಕ ಅವರ ಪಾಲಿಗೆ ಮಾತ್ರವಲ್ಲದೇ ಇಡೀ ದೇಶದ ಪಾಲಿಗೆ ನೋವಿನ ವಿಷಯವಾಗಿಯೇ ಹೋಯ್ತು. 

ಬೇರೆಲ್ಲಾ ಓಲಂಪಿಕ್ಸ್​ ಆಟಗಾರರಿಗಿಂತಲೂ ವಿನೇಶ್​ ಹೆಸರು ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಕಾರಣವೂ ಇದೆ. ಕಳೆದ ವರ್ಷ ಭಾರತೀಯ ಕುಸ್ತಿ ಫೆಡರೇಷನ್‌ನಲ್ಲಿ ಮಹಿಳಾ ಆಥ್ಲೀಟ್‌ಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ  ನಡೆದ ಭಾರಿ ಪ್ರತಿಭಟನೆಯಲ್ಲಿ ವಿನೇಶ್​ ನೇತೃತ್ವ ವಹಿಸಿದ್ದರು. ಕುಸ್ತಿ ಫೆಡರೇಷನ್ ಅಧ್ಯಕ್ಷ, ಆಗಿನ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಸಿದ್ದ ಹೋರಾಟ ಭಾರಿ ಕೋಲಾಹಲ ಸೃಷ್ಟಿಸಿತ್ತು. ಆದರೆ ಇದು ದುಡ್ಡು ಕೊಟ್ಟು ಮಾಡಿಸಿದ್ದ ಪ್ರತಿಭಟನೆ ಎಂಬೆಲ್ಲಾ ಆರೋಪಗಳು ಕೇಳಿ ಬಂದು ಹೋರಾಟ ತಾರಕಕ್ಕೆ ಏರಿತ್ತು. ಆ ಸಂದರ್ಭದಲ್ಲಿ  ವಿನೇಶ್ ಅವರು ‘ ನಾನು ನನ್ನ ಮುಂದಿನ ಪೀಳಿಗೆಯ ಕುಸ್ತಿಪಟುಗಳಿಗಾಗಿ ಹೋರಾಡುತ್ತಿದ್ದೇನೆ, ನನಗಾಗಿ ಅಲ್ಲ’ ಎಂದು ಹೇಳಿದ್ದರು. ಜೊತೆಗೆ ಪ್ರಧಾನಿ ವಿರುದ್ಧವೂ ಹೇಳಿಕೆ ಕೊಟ್ಟಿದ್ದ ಅವರು, ‘ಮೋದಿ ನಿಮ್ಮ ಸಮಾಧಿಯನ್ನು ಅಗೆಯುತ್ತಾರೆ’ ಎಂದಿದ್ದರು. ಇದೇ ಕಾಣಕ್ಕೆ ವಿನೇಶ್​ ಸದ್ಯ ಸುದ್ದಿಯಲ್ಲಿದ್ದಾರೆ. ಇದರ ಹೊರತಾಗಿಯೂ ಕೇಂದ್ರ ಸರ್ಕಾರದಿಂದ ವಿನೇಶ್​ ಅವರನ್ನು ಓಲಿಂಪಿಕ್ಸ್​ಗೆ ಕಳುಹಿಸಲಾಗಿತ್ತು. ಓಲಿಂಪಿಕ್ಸ್ ಆಟಗಾರರಿಗೆ ನೀಡುವಂತೆ ಸಕಲ ತರಬೇತಿಗಳನ್ನೂ ವಿನೇಶ್​ ಅವರಿಗೂ ಕೊಡಿಸಲಾಗಿತ್ತು. ಆದರೆ ಅದೃಷ್ಟ ಕೈಹಿಡಿದರೂ, ಕೊನೆಯ ಕ್ಷಣದಲ್ಲಿ ಇಂಥದ್ದೊಂದು ತಿರುವು ಪಡೆದುಕೊಂಡುಬಿಟ್ಟಿತು.

Latest Videos

ವಿನೇಶ್​ ಫೋಗಟ್​ ವಿಷ್ಯದಲ್ಲಿ ಈ ಅಪಹಾಸ್ಯ ಪ್ರಕಾಶ್​ ರಾಜ್​ಗೆ ಬೇಕಿತ್ತಾ? ಕೋಲು ಕೊಟ್ಟು ಬಾರಿಸಿಕೊಂಡ ನಟ!

ಕುಸ್ತಿಯಿಂದ ನಿವೃತ್ತಿ ಘೋಷಿಸಿದ ಬಳಿಕ ತುಂಬಾ ಬಳಲಿದ್ದ ನಿವೇಶ್​ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿರುವುದು ಗೊತ್ತಿರುವ ವಿಷಯವೇ. ಆ ಸಂದರ್ಭದಲ್ಲಿ ಓಟದ ರಾಣಿ  ಪಿ.ಟಿ ಉಷಾ ಅವರು ವಿನೇಶ್​ ಅವರನ್ನು  ಆಸ್ಪತ್ರೆಗೆ ಭೇಟಿ ಮಾಡಲು ಹೋಗಿದ್ದರು. ಆ ಸಮಯದಲ್ಲಿ ಅವರು ವಿನೇಶ್​ ಅವರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದರ ವಿರುದ್ಧ ವಿನೇಶ್​ ಈಗ ಗರಂ ಆಗಿದ್ದಾರೆ. ಕಾಂಗ್ರೆಸ್​ ಸೇರಿದ ಮೇಲೆ ಸಹಜವಾಗಿ ಬಿಜೆಪಿ ವಿರುದ್ಧ ಗುಡುಗುವುದು ಸಾಮಾನ್ಯ. ಅದೇ ರೀತಿ ಉಷಾ ಅವರು ಸದ್ಯ ರಾಜ್ಯಸಭೆಯ ಸದಸ್ಯೆ ಆಗಿರುವ ಕಾರಣ, ತಮ್ಮ ಅನುಮತಿ ಇಲ್ಲದೇ ಫೋಟೋ ಕ್ಲಿಕ್ಕಿಸಿಕೊಂಡಿರುವ ಹಿಂದೆಯೂ ರಾಜಕೀಯ ಅಡಗಿದೆ ಎನ್ನುವುದು ಅವರ ಮಾತು. ಇದೇ ಕಾರಣಕ್ಕೆ ಉಷಾ ವಿರುದ್ಧ  ವಾಗ್ದಾಳಿ ನಡೆಸಿದ್ದಾರೆ.

ಸ್ಥಳೀಯ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿನೇಶ್, "ನಾನು ಆಸ್ಪತ್ರೆಯಲ್ಲಿದ್ದಾಗ ಪಿ.ಟಿ ಉಷಾ ಮೇಡಂ  ಭೇಟಿ ಮಾಡಿದರು. ಒಂದು ಫೋಟೋ ಕ್ಲಿಕ್ಕಿಸಿದರು. ನನ್ನ ಅನುಮತಿ ಪಡೆದಿರಲಿಲ್ಲ' ಎಂದ ವಿನೇಶ್​ ಅವರು,  ರಾಜಕೀಯದಲ್ಲಿ ಬಹಳಷ್ಟು ನಡೆಯುತ್ತದೆ.  ಪ್ಯಾರಿಸ್‌ನಲ್ಲಿಯೂ ರಾಜಕೀಯ ನಡೆದಿದೆ. ಕ್ರೀಡೆಯನ್ನು ಬಿಡಬೇಡ ಎಂದು ತುಂಬಾ ಮಂದಿ ಹೇಳಿದರು. ಆದರೆ ಎಲ್ಲಾ ಕಡೆ ರಾಜಕೀಯ ಇರುವಾಗ ಅದರಲ್ಲಿ ನಾನು ಮುಂದುವರೆಯುವುದು ಸರಿಯಲ್ಲ ಎನ್ನಿಸಿತು ಎಂದು ಈಗ ರಾಜಕೀಯ ಪ್ರವೇಶಿಸಿರುವ ವಿನೇಶ್​ ಫೋಗಟ್​ ಹೇಳಿದ್ದಾರೆ. ಉಷಾ ಅವರು ನನಗೆ ಸಪೋರ್ಟ್​ ಮಾಡುವುದಾಗಿ ಹೇಳಿದರು. ಆದರೆ ಎಲ್ಲಿಯೂ ನನಗೆ ಸಪೋರ್ಟ್​ ಸಿಗಲಿಲ್ಲ. ಎಲ್ಲವೂ ರಾಜಕೀಯ ಎಂದು ವಾಗ್ದಾಳಿ ನಡೆಸಿದ್ದಾರೆ. 

ಕುಸ್ತಿಪಟು ವಿನೇಶ್‌ ಫೋಗಟ್‌ ಜೊತೆ ನಟ ಆಮೀರ್‌ ಖಾನ್‌ ಚರ್ಚೆ- ಶೀಘ್ರದಲ್ಲಿ ದಂಗಲ್‌ 2?

click me!