
ಶಿವಮೊಗ್ಗ (ಜು.10): ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮನೆ-ಮನೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದ ಬಿ.ಎಲ್.ಓ (BLO) ಲಕ್ಷ್ಮಿ ಸಿಂಗ್ ಅವರು ಶ್ವಾನ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಪ್ರಸ್ತುತ ರಾಜ್ಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಲಕ್ಷ್ಮಿ ಸಿಂಗ್ ಅವರು ಆನಂದಪುರ ಭಾಗದಲ್ಲಿ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ನಿಗದಿಪಡಿಸಿದ ಮನೆಯೊಂದರ ಬಳಿ ತೆರಳಿದಾಗ, ಆ ಮನೆಯಲ್ಲಿ ಸಾಕಿದ್ದ ನಾಯಿಯೊಂದು ದಿಢೀರನೆ ಅವರ ಮೇಲೆ ಮುಗಿಬಿದ್ದಿದೆ. ನಾಯಿಯ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಅಧಿಕಾರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸಾಕು ನಾಯಿಯು ಲಕ್ಷ್ಮಿ ಸಿಂಗ್ ಅವರ ಕಾಲಿಗೆ ಬಲವಾಗಿ ಕಚ್ಚಿದ್ದು, ದಾಳಿಯ ತೀವ್ರತೆಗೆ ಅವರ ಕಾಲಿನ ಭಾಗದಲ್ಲಿ ಆಳವಾದ ಗಾಯಗಳಾಗಿವೆ. ಇದರಿಂದಾಗಿ ಸ್ಥಳದಲ್ಲೇ ತೀವ್ರ ರಕ್ತಸ್ರಾವ ಉಂಟಾಗಿದ್ದು, ಅಧಿಕಾರಿ ನೋವಿನಿಂದ ಕಿರುಚಾಡಿದ್ದಾರೆ. ಕೂಡಲೇ ಸ್ಥಳೀಯ ನಿವಾಸಿಗಳು ಹಾಗೂ ಅವರ ಜೊತೆಯಲ್ಲಿದ್ದ ಸಹೋದ್ಯೋಗಿಗಳು ಕಾರ್ಯಪ್ರವೃತ್ತರಾಗಿ ನಾಯಿಯನ್ನು ಓಡಿಸಿ, ಲಕ್ಷ್ಮಿ ಸಿಂಗ್ ಅವರನ್ನು ರಕ್ಷಿಸಿದ್ದಾರೆ. ಗಾಯಗೊಂಡ ಲಕ್ಷ್ಮಿ ಸಿಂಗ್ ಅವರನ್ನು ತಕ್ಷಣವೇ ಆನಂದಪುರದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಮೀಕ್ಷೆ ಅಥವಾ ಸರ್ಕಾರಿ ಕೆಲಸದ ನಿಮಿತ್ತ ಮನೆ-ಮನೆಗೆ ತೆರಳುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಇಂತಹ ಘಟನೆಗಳು ಆತಂಕ ತಂದೊಡ್ಡಿವೆ. ಮನೆಯ ಮಾಲೀಕರು ತಮ್ಮ ಸಾಕು ನಾಯಿಗಳನ್ನು ಸರಿಯಾಗಿ ನಿಯಂತ್ರಿಸದ ಕಾರಣ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಕಾರ್ಯದಂತಹ ಮಹತ್ವದ ಜವಾಬ್ದಾರಿ ನಿರ್ವಹಿಸುವ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ಮತ್ತು ಮಾಲೀಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.