ಜಗನ್ನಾಥ ದಾಸರು ಸಿನಿಮಾದ ಹಾಡು ಬಿಡುಗಡೆ ಮಾಡಿದ ಪೇಜಾವರ ಮಠಾಧೀಶರು!

By Kannadaprabha NewsFirst Published Aug 6, 2021, 11:30 AM IST
Highlights

ಜಗನ್ನಾಥ ದಾಸರ ಜೀವನ ಚರಿತ್ರೆ ಆಧರಿಸಿದ ‘ಜಗನ್ನಾಥ ದಾಸರು’ ಚಿತ್ರದ ಹಾಡುಗಳನ್ನು ಬೆಂಗಳೂರಿನಲ್ಲಿ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಬಿಡುಗಡೆ ಮಾಡಿದರು.

ಹಾಡು ಬಿಡುಗಡೆ ಸಂದರ್ಭ ಮಾತನಾಡಿದ ಅವರು, ‘ದಾಸರು ಭಕ್ತಿಯ ದಾರಿ ತೋರಿಸಿ ಭಗವಂತನನ್ನು ಒಲಿಸಿಕೊಳ್ಳುವ ಪರಿಯನ್ನು ತಿಳಿಸಿದ್ದಾರೆ. ಜಗನ್ನಾಥ ದಾಸರದು ಮೇರು ವ್ಯಕ್ತಿತ್ವ. ಈ ಚಿತ್ರದ ಮೂಲಕ ಅವರ ಮಾರ್ಗದರ್ಶನ ಎಲ್ಲರಿಗೂ ಸಿಗುವಂತಾಗಲಿ’ ಎಂದು ಹಾರೈಸಿದರು.

ನಿರ್ದೇಶಕ ಮಧುಸೂದನ್‌ ಹವಾಲ್ದಾರ್‌, ‘ಇದು ನನ್ನ ಮೂರು ವರ್ಷದ ಕನಸು. ಆಧುನಿಕತೆಯ ನೆರಳೂ ಸೋಕದಂತೆ, ಜಗನ್ನಾಥ ದಾಸರ ಕಾಲಕ್ಕೇ ಕರೆದೊಯ್ಯುವಂತೆ ಸಿನಿಮಾ ಚಿತ್ರೀಕರಿಸಲಾಗಿದೆ’ ಎಂದರು. ನಿರ್ಮಾಪಕ ಹಾಗೂ ನಟ ತ್ರಿವಿಕ್ರಮ ಜೋಷಿ, ‘ಈ ಸಿನಿಮಾದ ಮೂಲಕ ಜಗನ್ನಾಥ ದಾಸರ ಮಹಾತ್ಮೆ ಎಲ್ಲೆಡೆ ಹರಡಲಿ. ಸೆಪ್ಟೆಂಬರ್‌ನಲ್ಲಿ ಜಗನ್ನಾಥ ದಾಸರ ಆರಾಧನೆ ವೇಳೆಗೆ ಚಿತ್ರ ಬಿಡುಗಡೆ ಮಾಡುವ ಸಿದ್ಧತೆ ನಡೆಯುತ್ತಿದೆ’ ಎಂದರು.

ಹಿರಿಯ ನಿರ್ದೇಶಕ ಭಗವಾನ್‌, ನಟರಾದ ಶರತ್‌ ಜೋಷಿ, ಪ್ರಭಂಜನ ದೇಶಪಾಂಡೆ, ಸಂಗೀತ ನಿರ್ದೇಶಕ ವಿಜಯ ಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

ಕಸ್ತೂರಿ ನಿವಾಸ, ಮಂತ್ರಾಲಯ ಮಹಾತ್ಮೆ ಕಲರ್‌ನಲ್ಲಿ

ಡಾ. ರಾಜ್‌ಕುಮಾರ್‌ ನಟಿಸಿರುವ ‘ಕಸ್ತೂರಿ ನಿವಾಸ’ ಹಾಗೂ ‘ಮಂತ್ರಾಲಯ ಮಹಾತ್ಮೆ’ ಚಿತ್ರಗಳನ್ನು ಕಲರ್‌ನಲ್ಲಿ, ಪರಿಷ್ಕೃತಗೊಳಿಸಿ ಬಿಡುಗಡೆಗೊಳಿಸಲಾಗುವುದು ಎಂದು ನಿರ್ದೇಶಕ ಎಸ್‌ ಕೆ ಭಗವಾನ್‌ ಈ ಸಂದರ್ಭ ತಿಳಿಸಿದರು. ಆಧುನಿಕ ತಂತ್ರಜ್ಞಾನ ಬಳಸಿ ಈ ಮಾರ್ಪಾಡು ಮಾಡಲಾಗಿದ್ದು, ಅಂದಿನ ಚಿತ್ರಗಳನ್ನು ಇಂದಿನ ತಲೆಮಾರಿಗೆ ತಲುಪಿಸುವುದು ಇದರ ಹಿಂದಿನ ಉದ್ದೇಶ ಎಂದವರು ಹೇಳಿದರು.

click me!