ಸೂಪರ್ ಹಿಟ್ 'ಜನುಮದ ಜೋಡಿ' ಸಿನಿಮಾದಲ್ಲಿ ಶಿಲ್ಪಾ ಬದಲು ಸೌಂದರ್ಯ ನಟಿಸಬೇಕಿತ್ತು.. ಆದರೆ, ಅದಕ್ಕೆ ಅಡ್ಡಗಾಲಾಗಿದ್ದು ಏನು?

Published : Mar 04, 2026, 07:29 PM IST
Shivarajkumar Shilpa Soundarya

ಸಾರಾಂಶ

ಮುಂದಾಗಿದ್ದು ಈಗ ಇತಿಹಾಸ. ಮೊದಲ ಚಿತ್ರದಲ್ಲೇ ಶಿಲ್ಪಾ ಕನ್ನಡಿಗರ ಹೃದಯ ಗೆದ್ದರು. ಆದರೆ ಒಂದು ವೇಳೆ ಅಂದು ಸೌಂದರ್ಯ ಅವರು ಆ ಪಾತ್ರ ಮಾಡಿದ್ದರೆ, ಜನುಮದ ಜೋಡಿ ಚಿತ್ರದ ಆ ಕ್ಲೈಮ್ಯಾಕ್ಸ್ ಇನ್ನೆಷ್ಟು ಅದ್ಭುತವಾಗಿರುತ್ತಿತ್ತು ಎಂದು ಊಹಿಸಿಕೊಂಡರೆ ಮೈ ಜುಮ್ ಎನ್ನುತ್ತದೆ ಅಲ್ವಾ?

ಜನುಮದ ಜೋಡಿ ಸಿನಿಮಾದ ಸೀಕ್ರೆಟ್

1996ರಲ್ಲಿ ಬಿಡುಗಡೆಯಾದ ಸೆಂಚುರಿ ಸ್ಟಾರ್ ಶಿವರಾಜಕುಮಾರ್ (Shivarajkumar) ಅಭಿನಯದ 'ಜನುಮದ ಜೋಡಿ' ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದು ಮೈಲಿಗಲ್ಲು. ಟಿ.ಎಸ್. ನಾಗಾಭರಣ ಅವರ ಅದ್ಭುತ ನಿರ್ದೇಶನ, ಪಾರ್ವತಮ್ಮ ರಾಜ್‌ಕುಮಾರ್ ಅವರ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರ ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿತ್ತು. ಕೃಷ್ಣ ಮತ್ತು ಕನಕನ ಅಮರ ಪ್ರೇಮಕಥೆ ಕನ್ನಡಿಗರ ಕಣ್ಣಂಚಲ್ಲಿ ಇಂದಿಗೂ ನೀರು ತರಿಸುತ್ತದೆ. ಆದರೆ, ಈ ಚಿತ್ರದ ಆ ಮುಗ್ಧ ಹಳ್ಳಿ ಹುಡುಗಿ 'ಕನಕ'ನ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ನಟಿ ಶಿಲ್ಪಾ ಅಲ್ಲ, ಬದಲಾಗಿ ಅಂದಿನ ಟಾಪ್ ನಾಯಕಿ ಸೌಂದರ್ಯ! ಹೌದು, ಇದು ಅಕ್ಷರಶಃ ಸತ್ಯ.

ಕಥೆ ಸಿದ್ಧವಾದಾಗ ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ಕಣ್ಣ ಮುಂದೆ ಬಂದ ಮೊದಲ ಮುಖವೇ ಸೌಂದರ್ಯ (Soundarya) ಅವರದ್ದು. ಆ ಹಳ್ಳಿಯ ಮುಗ್ಧತೆ, ಪಂಜರದ ಗಿಳಿಯಂತಹ ಆ ಪಾತ್ರದ ತೀವ್ರತೆ, ಮತ್ತು ಕ್ಲೈಮ್ಯಾಕ್ಸ್‌ನ ಆ ಭಾವುಕ ಸನ್ನಿವೇಶಗಳಿಗೆ ಜೀವ ತುಂಬಲು ಸೌಂದರ್ಯ ಅವರಿಂದ ಮಾತ್ರ ಸಾಧ್ಯ ಎಂದು ನಾಗಾಭರಣ ಅವರು ಬಲವಾಗಿ ನಂಬಿದ್ದರು. ಇದೇ ಕಾರಣಕ್ಕೆ ಅವರು ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಬಳಿ ಹೋಗಿ, ಈ ಕಥೆಗೆ ಸೌಂದರ್ಯ ಅವರನ್ನೇ ನಾಯಕಿಯಾಗಿ ಕರೆತರಬೇಕು ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದರು.

ಆದರೆ, ಪಾರ್ವತಮ್ಮ ರಾಜ್‌ಕುಮಾರ್ ಅವರು ಮೊದಲಿನಿಂದಲೂ ಒಂದು ರೂಢಿಯನ್ನು ಅಭ್ಯಾಸ ಮಾಡಿಕೊಂಡಿದ್ದರು. ತಮ್ಮ 'ವಜ್ರೇಶ್ವರಿ ಕಂಬೈನ್ಸ್' ಬ್ಯಾನರ್ ಶುರು ಮಾಡಿದಾಗಿನಿಂದಲೂ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹೊಸ ಮುಖಗಳನ್ನು ಪರಿಚಯಿಸುವ ಸಂಪ್ರದಾಯವನ್ನು ಅವರು ಪಾಲಿಸಿಕೊಂಡು ಬಂದಿದ್ದರು. ಆ ಪ್ರಯತ್ನದಲ್ಲಿ ಈಗಾಗಲೇ ಅನೇಕ ನಾಯಕಿಯರಿಗೆ ಬದುಕು ಕೊಟ್ಟಿದ್ದೇ ಈ ಬ್ಯಾನರ್. ಆದರೂ, ಕಥೆಯ ಬೇಡಿಕೆ ಮತ್ತು ನಾಗಾಭರಣ ಅವರ ಮಾತಿಗೆ ಮನ್ನಣೆ ನೀಡಿ, ತಮ್ಮ ಸಂಪ್ರದಾಯವನ್ನು ಬದಿಗಿಟ್ಟು ಸೌಂದರ್ಯ ಅವರನ್ನು ಕರೆತರುವ ಬಗ್ಗೆ ಪಾರ್ವತಮ್ಮನವರು ಯೋಚನೆ ಮಾಡಿದರು.

ಆದರೆ, ಆ ಅದ್ಭುತ ಕಾಂಬಿನೇಷನ್ ನೆರವೇರಲೇ ಇಲ್ಲ!

ಕಾರಣ, ಆ ಹೊತ್ತಿಗೆ ಸೌಂದರ್ಯ ಅವರಿಗಿದ್ದ ಬೃಹತ್ ಜನಪ್ರಿಯತೆ ಮತ್ತು ಡೇಟ್ಸ್ (ದಿನಾಂಕಗಳ) ಸಮಸ್ಯೆ. 1996ರ ಆ ಸಮಯಕ್ಕೆ ಸೌಂದರ್ಯ ಅವರು ದಕ್ಷಿಣ ಭಾರತದ ಅತಿ ದೊಡ್ಡ ಸೂಪರ್‌ಸ್ಟಾರ್ ನಾಯಕಿಯಾಗಿ ಬೆಳೆದು ನಿಂತಿದ್ದರು. 1995ರಲ್ಲಿ ಬಂದ ಭಕ್ತಿಪ್ರಧಾನ 'ಅಮ್ಮೋರು' ಚಿತ್ರದ ಬ್ಲಾಕ್ ಬಸ್ಟರ್ ಯಶಸ್ಸು ಅವರನ್ನು ಉತ್ತುಂಗಕ್ಕೇರಿಸಿತ್ತು. ಕನ್ನಡದಲ್ಲಿ ರವಿಚಂದ್ರನ್ ಅವರ 'ಸಿಪಾಯಿ' ಚಿತ್ರದಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದರು. ಇದರ ಜೊತೆಗೆ ತೆಲುಗಿನಲ್ಲಿ ಸಾಲು ಸಾಲು ಬೃಹತ್ ಬಜೆಟ್ ಸಿನಿಮಾಗಳು ಅವರ ಕೈಯಲ್ಲಿದ್ದವು.

ವಿಕ್ಟರಿ ವೆಂಕಟೇಶ್ ಜೊತೆ 'ಪವಿತ್ರ ಬಂಧಂ', 'ಇಂಟ್ಲೋ ಇಲ್ಲಾಲು ವಂಟಿಂಟ್ಲೋ ಪ್ರಿಯುರಾಲು', ನಾಗಾರ್ಜುನ ಜೊತೆ 'ರಾಮುಡೊಚ್ಚಾಡು' ಸೇರಿದಂತೆ ಅನೇಕ ಸೂಪರ್ ಹಿಟ್ ಪ್ರಾಜೆಕ್ಟ್‌ಗಳಲ್ಲಿ ಅವರು ಹಗಲಿರುಳು ಕೆಲಸ ಮಾಡುತ್ತಿದ್ದರು. ಎಷ್ಟರಮಟ್ಟಿಗೆ ಎಂದರೆ, ಅವರ ಕಾಲ್‌ಶೀಟ್ ಪಡೆಯುವುದು ಆ ಸಮಯದಲ್ಲಿ ಅಸಾಧ್ಯದ ಮಾತಾಗಿತ್ತು. ಈ ಡೇಟ್ಸ್ ಸಮಸ್ಯೆಯಿಂದಾಗಿ 'ಜನುಮದ ಜೋಡಿ'ಯಲ್ಲಿ ಸೌಂದರ್ಯ ನಟಿಸಲು ಸಾಧ್ಯವಾಗಲಿಲ್ಲ.

ವಿಧಿ ಲಿಖಿತ ಬೇರೆಯಾಗಿತ್ತು!

ಬೇರೆ ವಿಧಿ ಇಲ್ಲದೆ ಸೌಂದರ್ಯ ಅವರ ಆಯ್ಕೆಯನ್ನು ಕೈಬಿಟ್ಟಾಗ, ಪಾರ್ವತಮ್ಮನವರು ತಮ್ಮ ಹಳೆಯ 'ಹೊಸ ಮುಖಗಳ ಶೋಧ'ದ ಸೂತ್ರವನ್ನೇ ಮತ್ತೆ ಕೈಗೆತ್ತಿಕೊಂಡರು. ಹೊಸ ಮುಖದ ಹುಡುಕಾಟದಲ್ಲಿದ್ದಾಗ ಅವರ ಕಣ್ಣಿಗೆ ಬಿದ್ದದ್ದು ಕೇರಳ ಮೂಲದ ನಟಿ 'ಚಿಪ್ಪಿ'. ಅಪ್ಪಟ ಹಳ್ಳಿ ಹುಡುಗಿಯ ಮುಗ್ಧತೆ ಹೊಂದಿದ್ದ ಆಕೆಗೆ ತಕ್ಷಣವೇ 'ಶಿಲ್ಪಾ' ಎಂದು ನಾಮಕರಣ ಮಾಡಿ, 'ಕನಕ'ನ ಪಾತ್ರಕ್ಕೆ ಅಂತಿಮಗೊಳಿಸಿದರು.

ಮುಂದಾಗಿದ್ದು ಈಗ ಇತಿಹಾಸ. ಮೊದಲ ಚಿತ್ರದಲ್ಲೇ ಶಿಲ್ಪಾ ಕನ್ನಡಿಗರ ಹೃದಯ ಗೆದ್ದರು. ಆದರೆ ಒಂದು ವೇಳೆ ಅಂದು ಸೌಂದರ್ಯ ಅವರು ಆ ಪಾತ್ರ ಮಾಡಿದ್ದರೆ, ಜನುಮದ ಜೋಡಿ ಚಿತ್ರದ ಆ ಕ್ಲೈಮ್ಯಾಕ್ಸ್ ಇನ್ನೆಷ್ಟು ಅದ್ಭುತವಾಗಿರುತ್ತಿತ್ತು ಎಂದು ಊಹಿಸಿಕೊಂಡರೆ ಮೈ ಜುಮ್ ಎನ್ನುತ್ತದೆ ಅಲ್ವಾ?

ಕೃಪೆ: ಸೋಷಿಯಲ್ ಮೀಡಿಯಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಒಂದು ಮದುವೆ ಮುರಿದುಬಿದ್ದರೂ ಮತ್ತೊಂದು ಕೈಹಿಡಿದಿದ್ದು ಹೇಗೆ? ಇದು ಯಾರಿಗೂ ಗೊತ್ತಿಲ್ಲದ ರಶ್ಮಿಕಾ ಮಂದಣ್ಣ ಗುಟ್ಟು..!
Rishab Shetty: ಕಾಂತಾರದಿಂದ ಜೈ ಹನುಮಾನ್‌ವರೆಗೆ, ದೈವ-ದೇವರ ಕಥೆ ಹೇಳಿದ ಶೆಟ್ರು!