ರವಿಚಂದ್ರನ್‌ ಪುತ್ರ ಮನುರಂಜನ್ ಸ್ಯಾಂಡಲ್‌ವುಡ್‌ ಎಂಟ್ರಿಗೆ 5 ವರ್ಷ!

By Kannadaprabha NewsFirst Published Jan 11, 2021, 9:15 AM IST
Highlights

ಸೋಲಿನಿಂದ ನನಗೆ ನೋವಾಗಿರುವುದು ನಿಜ. ಆದರೆ, ಸೋಲಿನಿಂದ ಎದ್ದು ಬರುತ್ತೇನೆ. 2021ರಲ್ಲಿ ನನ್ನಲ್ಲಿ ಹೊಸತನ ನೋಡುತ್ತೀರಿ.

- ಹೀಗೆ ಹೇಳಿದ್ದು ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ನಟ ಮನುರಂಜನ್‌. ಚಿತ್ರರಂಗಕ್ಕೆ ಬಂದು 5 ವರ್ಷಗಳಾದ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳು ಇಲ್ಲಿವೆ.

1. ನಾನು ಮಾಡಿದ ‘ಬೃಹಸ್ಪತಿ’ ಸಿನಿಮಾ ಸೋಲು ಕಂಡಿತು. ಆ ಚಿತ್ರದ ನೋಡಿ ನನಗೆ ನಟನೆ ಬರಲ್ಲ, ದಪ್ಪ ಇದ್ದೇನೆ ಎಂದರು. ನನ್ನ ಜತೆ ಇದ್ದವರಿಗೇ ಆ ಸಿನಿಮಾ ಬಿಡುಗಡೆ ಆಗಿದ್ದು ಗೊತ್ತಿಲ್ಲ. ಸಿನಿಮಾ ನೋಡದೆ ಮಾತನಾಡಿದರು. ಆ ಚಿತ್ರದ ಸೋಲು ನನಗೆ ನೋವುಂಟು ಮಾಡಿದ್ದು ನಿಜ.

ದರ್ಶನ್‌ಗೆ ಧ್ವನಿ ನೀಡಿರುವ 'ಪ್ರಾರಂಭ' ಟ್ರೈಲರ್ ವೈರಲ್! 

2. ನಮ್ಮ ತಂದೆ ನಿರ್ದೇಶನದ ‘ರಣಧೀರ’ ಚಿತ್ರದ ಮೂಲಕ ಹೀರೋ ಆಗಿ ಲಾಂಚ್‌ ಆಗಿದ್ದರೆ ನಾನೂ ಇಷ್ಟೊತ್ತಿಗೆ ಸ್ಟಾರ್‌ ಆಗುತ್ತಿದ್ದೆ. ಆದರೆ, ಅಪ್ಪನ ಹೆಸರಿಗಿಂತ ಪ್ರತಿಭೆ, ಸ್ವಂತ ಶ್ರಮದೊಂದಿಗೆ ಬರಬೇಕು ಎಂದುಕೊಂಡಿದ್ದಕ್ಕೆ ಸೋಲು ಕಷ್ಟಗಳನ್ನು ಎದುರಿಸಬೇಕಾಯಿತು. ಇದರಿಂದ ನನಗೆ ಬೇಸರ ಇಲ್ಲ. ಒಳ್ಳೆಯ ಅನುಭವ ಸಿಕ್ಕಿದೆ.

3. ಮನೆಯಲ್ಲೇ ನಾನು ಸ್ಟಾರ್‌ ಇಮೇಜ್‌ ನೋಡಿದವನು. ‘ಏಕಾಂಗಿ’ ಆಗಿದ್ದ ಅಪ್ಪ ‘ಮಲ್ಲ’ ಆಗಿದ್ದನ್ನೂ ನೋಡಿದ್ದೇನೆ. ಹೀಗಾಗಿ ಸೋಲಿಗೆ ಹೆದರಲ್ಲ. ಗೆದ್ದರೆ ಬೀಗಲ್ಲ.

4. ಇಲ್ಲಿವರೆಗೂ ಯಾರಿಗೂ ಹೇಳಿಕೊಳ್ಳದೆ ವಿಚಾರ ನಿಮ್ಮ ಜತೆ ಹೇಳುತ್ತಿರುವೆ. ನನಗೆ ಆರೋಗ್ಯ ಸಮಸ್ಯೆ ಇದೆ. ಅದು ನರಗಳ ಸಮಸ್ಯೆ ಇದೆ. 3 ವರ್ಷಗಳ ಕಾಲ ಚಿಕಿತ್ಸೆ ಇರುತ್ತದೆ. 6 ತಿಂಗಳಿಗೊಮ್ಮೆ ಚೆಕಪ್‌ ಮಾಡಿಸಿಕೊಳ್ಳಬೇಕು. ಆದರೂ ನಾನು ಸಿನಿಮಾಗಳನ್ನು ಮಾಡುತ್ತಿದ್ದೇನೆ. ಇದು ಗೊತ್ತಿಲ್ಲದೆ ನನ್ನ ದೇಹದ ಬಗ್ಗೆ ಕೆಟ್ಟದಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.

1 ಮಿಲಿಯನ್ ವೀಕ್ಷಣೆ ಪಡೆದ 'ತ್ರಿ ವಿಕ್ರಮ್' ಹಾಡು! 

5. ಎಲ್ಲದಕ್ಕೂ ಉತ್ತರ ಸಿಗಲಿದೆ. ಆಸ್ಪತ್ರೆಯಿಂದ ಆಚೆ ಬಂದು ಒಪ್ಪಿಕೊಂಡ ಸಿನಿಮಾ ‘ಪ್ರಾರಂಭ’. ಬಿಡುಗಡೆಗೆ ರೆಡಿ ಇದೆ. ‘ಮುಗಿಲ್‌ ಪೇಟೆ’ ಚಿತ್ರೀಕರಣದಲ್ಲಿದೆ. ಕತೆಯಲ್ಲಿ ಸಾಕಷ್ಟುಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ.

6. ನಿರ್ದೇಶಕ ದುನಿಯಾ ಸೂರಿ ಜತೆ ಈ ವರ್ಷ ಒಂದು ಸಿನಿಮಾ ಮಾಡಲಿದ್ದೇನೆ. ನನ್ನ ಸ್ನೇಹಿತ ಈ ಚಿತ್ರದ ನಿರ್ಮಾಪಕ. ಆತ ಸೂರಿ ನಿರ್ದೇಶನ ಮಾಡುವುದಾದರೆ ಸಿನಿಮಾ ಮಾಡುತ್ತೇನೆ ಎಂದಿದ್ದಾನೆ. ಹೀಗಾಗಿ ನಾನೇ ಸೂರಿ ಅವರೊಂದಿಗೆ ಮಾತನಾಡಿದ್ದೇನೆ. ‘ಮುಗಿಲ್‌ ಪೇಟೆ’, ‘ಚೀಲಂ’ ಚಿತ್ರಗಳ ನಂತರ ಸೂರಿ ಅವರ ಜತೆಗಿನ ಸಿನಿಮಾ ಸೆಟ್ಟೇರಲಿದೆ.

7. ಈ ವರ್ಷವೇ ಮದುವೆ ಆಗಲಿದ್ದೇವೆ. ಮನೆಯಲ್ಲಿ ಈಗಾಗಲೇ ಹುಡುಗಿಯನ್ನು ಹುಡುಕುತ್ತಿದ್ದಾರೆ. ಅಪ್ಪ-ಅಮ್ಮ ನೋಡಿದ ಹುಡುಗಿಯನ್ನು ಮದುವೆ ಆಗುತ್ತೇನೆ. ನನಗೂ 33 ವರ್ಷ ಆಯಿತು.

click me!