
‘ದೂರದರ್ಶನ’ ಎಂಬ ಮಧುರ ಸಿನಿಮಾ ನಿರ್ದೇಶಿಸಿದ್ದ ಸುಕೇಶ್ ಶೆಟ್ಟಿ ಇದೀಗ ತಮ್ಮ ಹೊಸ ಚಿತ್ರ ‘ಪೀಟರ್’ ಮೂಲಕ ಎದುರಾಗುತ್ತಿದ್ದಾರೆ. ರಾಜೇಶ್ ಧ್ರುವ ನಾಯಕನಾಗಿ ನಟಿಸಿರುವ ಈ ಸಿನಿಮಾ ಏ.10ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ, ‘ಸಿನಿಮಾದ ಪ್ರತೀ ಅಂಶದಲ್ಲೂ ಹೊಸತನ ನೀಡಲು ಯತ್ನಿಸಿದ್ದೇವೆ.
ಪ್ರೇಕ್ಷಕರು ಚಿತ್ರಮಂದಿರಲ್ಲಿ ಕುಳಿತು ಮಡಿಕೇರಿಯ ಭಾಗಮಂಡಲದಲ್ಲಿ ನಡೆಯೋ ರೋಚಕ ಕಥೆಯನ್ನು ನೋಡಿ ತಲ್ಲೀನರಾಗಬೇಕು. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಹೈದ್ರಾಬಾದ್ನಲ್ಲಿಯೂ ಚಿತ್ರದ ಪ್ರಚಾರ ಕೆಲಸ ನಡೆಯುತ್ತಿದೆ. ಏ.10ಕ್ಕೆ ರಾಜ್ಯದಲ್ಲಿ ಬಿಡುಗಡೆಯಾದರೆ ಎರಡು ವಾರದ ಬಳಿಕ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲಿದ್ದೇವೆ’ ಎಂದರು.
ನಾಯಕ ರಾಜೇಶ್ ಧ್ರುವ, ‘ಸುಕೇಶ್ ಶೆಟ್ಟಿ ಅವರು ಮುಂದೆ ಕನ್ನಡ ಚಿತ್ರರಂಗದ ಮೋಸ್ಟ್ ವಾಂಟೆಡ್ ಡೈರೆಕ್ಟರ್ ಆಗುತ್ತಾರೆ’ ಎಂದರು. ನಾಯಕಿಯಾಗಿ ಜಾನ್ವಿ ನಟಿಸಿದ್ದಾರೆ. ರವೀಕ್ಷಾ ಶೆಟ್ಟಿ , ರಘು ಪಾಂಡೇಶ್ವರ್, ಪ್ರತಿಮಾ ನಾಯಕ್, ರಾಮನಾಡಗೌಡ, ವರುಣ್ ಪಟೇಲ್, ಭರತ್, ದೀನಾ, ರಾಧಾಕೃಷ್ಣ ಕುಂಬ್ಳೆ, ರಕ್ಷಿತ್ ದೊಡ್ಡೇರಾ ತಾರಾಗಣದಲ್ಲಿದ್ದಾರೆ. ರವಿ ಹೀರೇಮಠ್ ಮತ್ತು ರಾಕೇಶ್ ಹೆಗ್ಗಡೆ ಈ ಚಿತ್ರದ ನಿರ್ಮಾಪಕರು.
ರವಿ ಶ್ರೀವತ್ಸ ನಿರ್ದೇಶನದ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರ ಏ.10ಕ್ಕೆ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೇಲರ್ ಬಿಡುಗಡೆ ಆಗಿದೆ. ಚಿತ್ರದ ಚಿತ್ರಕತೆ- ಸಂಭಾಷಣಾಕಾರ ಎಂ.ಎಸ್. ರಮೇಶ್ ಈ ಸಿನಿಮಾ ಕುರಿತು, ‘ಬಹಳಷ್ಟು ಜನ ಚಿತ್ರದ ಟ್ರೇಲರ್ ನೋಡಿ, ಬಹಳ ಕ್ರೌರ್ಯವಿದೆ ಎಂದಿದ್ದಾರೆ. ಜನ ಪ್ರತಿಕ್ರಿಯಿಸಲಿ ಎಂದೇ ನಾವು ಆ ಟ್ರೇಲರ್ ಬಿಟ್ಟಿದ್ದು. ಶಾಂತಿ ಬೇಕು ಎಂದರೆ ಕ್ರಾಂತಿ ಆಗಲೇಬೇಕು ಎನ್ನುವ ಮಾತಿದೆ. ಆ ತಿರುಳು ಈ ಕಥೆಯಲ್ಲಿದೆ. ಎಲ್ಲರೂ ಶಾಂತರಾಗಿರುತ್ತೀವಿ. ಒಂದು ಕ್ಷಣದ ಕೋಪ ಒಂದು ಘಟನೆಗೆ ಕಾರಣವಾದರೆ, ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದು ಚಿತ್ರದ ಕತೆ’ ಎಂದರು.
ರವಿ ಶ್ರೀವತ್ಸ, ‘ಇದು ತಾಯಿಯ ಕಣ್ಣೀರಿನ ಕತೆ. ಸಣ್ಣ ಗಲಾಟೆಯಿಂದ ಶುರುವಾಗಿ, ಜನ ಹೇಗೆ ಹೋರಾಡುತ್ತಾರೆ ಮತ್ತು ರಕ್ತ ಹೇಗೆ ನಿರಂತರವಾಗಿ ಹರಿಯುತ್ತಾ ಹೋಗುತ್ತದೆ ಎನ್ನುವುದು ಚಿತ್ರದಲ್ಲಿ ನೋಡಬಹುದು’ ಎಂದರು. ಒರಟ ಪ್ರಶಾಂತ್, ಮುನಿ, ಪದ್ಮಾವಾಸಂತಿ, ಸೋನು ಉಪಾಧ್ಯ, ಪ್ರವೀಣ್, ಉಗ್ರಂ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್, ಅಮೋಘ್ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.