ನಿಖಿಲ್ - ರೇವತಿ ಮದುವೆಯ ನಕಲಿ ಆಮಂತ್ರಣ ಪತ್ರಿಕೆ ವೈರಲ್| ಸರಳವಾಗಿರುವ ಆಮಂತ್ರಣ ಪತ್ರಿಕೆ| ಆಹ್ವಾನ ಪತ್ರಿಕೆಯೊಂದಿಗೆ ಒಂದು ಪುಟದ ಭಿನ್ನಹ
ರಾಮನಗರ[ಫೆ.25]: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಮತ್ತು ರೇವತಿ ಮದುವೆ ಆಮಂತ್ರಣ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
4 ಪುಟಗಳಿರುವ ಆಮಂತ್ರಣ ಪತ್ರಿಕೆಯಲ್ಲಿ ಕುಮಾರಸ್ವಾಮಿ ಅವರ ಕೈಬರಹದ ಮಾದರಿ ಪತ್ರವೊಂದು ಗಮನ ಸೆಳೆದಿದೆ. ಆದರೆ, ಈ ಆಹ್ವಾನ ಪತ್ರಿಕೆ ಮತ್ತು ಕೈ ಬರಹ ನಕಲಿಯಾಗಿದ್ದು, ಕುಮಾರಸ್ವಾಮಿ ಅವರ ಸಹಿಯೂ ಫೋರ್ಜರಿ ಆಗಿದೆ. ಆಮಂತ್ರಣ ಪತ್ರಿಕೆ ಸಿದ್ದತೆಯಲ್ಲಿದೆ ಎಂದು ಕುಮಾರಸ್ವಾಮಿರವರ ಕುಟುಂಬದ ಮೂಲಗಳು ಕನ್ನಡಪ್ರಭಕ್ಕೆ ಸ್ಪಷ್ಟಪಡಿಸಿದೆ.
ಭಾವಿ ಪತ್ನಿಯ ಕೈಬರಹ ಶೇರ್, ನಿಖಿಲ್ರಿಂದ ಮತ್ತೊಂದು ವಿಷಯ ಕ್ಲಿಯರ್!
ಆಮಂತ್ರಣ ಪತ್ರಿಕೆಯಲ್ಲಿ ಏನಿದೆ ?
ಶ್ರೀಮತಿ ಚನ್ನಮ್ಮ ಮತ್ತು ಶ್ರೀ ಎಚ್ .ಡಿ.ದೇವೇಗೌಡರ ಹೆಸರಿನ ಮೂಲಕವೇ ಪ್ರಾರಂಭಗೊಂಡಿರುವ ಆಹ್ವಾನ ಪತ್ರಿಕೆಯಲ್ಲಿ ಏಪ್ರಿಲ್ 17ರ ಶುಕ್ರವಾರ ಬೆಳಗ್ಗೆ 9.15ರಿಂದ 9.40ಯೊಳಗೆ ಧಾರಮೂಹೂರ್ತ ರಾಮನಗರದ ಜಾನಪದ ಲೋಕ ಸಮೀಪದ ಸಪ್ತಪದಿ ಮಂಟಪದಲ್ಲಿ ನಡೆಯಲಿದೆ ಎಂದು ವಿವರಿಸಲಾಗಿದೆ.
ಆದರೆ, ವಧು ಎಂ.ರೇವತಿ ತಂದೆ ಎನ್ .ಮಂಜುನಾಥ್ ಹೆಸರಿನ ಮುಂದೆ ಶ್ರೀ ಬದಲಾಗಿ ಶ್ರೀಮತಿ ಎಂದು ನಮೂದಾಗಿದೆ. ಅತೀ ಸರಳವಾಗಿರುವ ಆಮಂತ್ರಣ ಪತ್ರಿಕೆಯಲ್ಲಿಯು ಒಂದು ವಿಶೇಷ ಇದೆ.
ಒಂದು ಪುಟದ ಪೂರ್ತಿ ಕುಮಾರಸ್ವಾಮಿ ಅವರು ಆಮಂತ್ರಣದ ನೆಪದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹಾಸನದಿಂದ ಹಿಡಿದು ತಮ್ಮ ಇಡೀ ರಾಜಕೀಯ ಜೀವನವನ್ನು ಇಲ್ಲಿ ವಿವರಿಸಿದ್ದಾರೆ. ಕಡೆಯ ನಾಲ್ಕು ಸಾಲುಗಳಲ್ಲಿ ಮತದಾರರನ್ನು ಮದುವೆಗೆ ಆಹ್ವಾನಿಸಿದ್ದು, ಜತೆಯಲ್ಲಿ ಕುಳಿತು ಊಟ ಮಾಡುವ ಮನವಿ ಮಾಡಿಕೊಂಡಿರುವುದು ವಿಶೇಷ. ತಮ್ಮ ಕೈಬರಹದ ಮಾದರಿಯಲ್ಲಿಯೇ ಪತ್ರ ಮುದ್ರಣಗೊಂಡಿರುವುದು ಮಾತ್ರವಲ್ಲ, ಪ್ರತಿ ಕಾರ್ಡ್ನ ಪತ್ರದ ಕೊನೆಯಲ್ಲಿ ಸಹಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ...!
ನನ್ನ ಪ್ರೀತಿಯ ಎಲ್ಲರಿಗೂ ಸಪ್ರೇಮ ನಮಸ್ತೆ ,
ನಿಮ್ಮಗೊಂದು ಪ್ರೀತಿಯ ಕರೆಯೋಲೆ
ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ರಾಜಕೀಯವಾಗಿ ಆಶೀರ್ವÜದಿಸಿ, ಪುನರ್ ಜನ್ಮ ನೀಡಿದ್ದು ನಾಡಿನ ಜನತೆ. ವಿಶೇಷವಾಗಿ ರಾಮನಗರ ಜಿಲ್ಲೆಯ ತಂದೆ-ತಾಯಂದಿರು. ಅಣ್ಣ -ತಮ್ಮಂದಿರು, ಅಕ್ಕ-ತಂಗಿಯರು. ನಿಮ್ಮಗೆಲ್ಲ ನಾನು ಮತ್ತು ನಮ್ಮ ಕುಟುಂಬ ಸದಾ ಋುಣಿ. ರಾಜಕೀಯ ನನಗೊಂದು ಆಕಸ್ಮಿಕವಾಗಿ ಸಿಕ್ಕ ಬದುಕು.ಅದನ್ನು ನೀವು ಸದಾ ಸಲಹುತ್ತಾ ಬಂದಿರುವ ನಿಮ್ಮಗಳ ಪ್ರೀತಿ ಸದಾ ಕೃತಜ್ಞತೆಯಿಂದ ಸ್ಮರಿಸುವಂತದ್ದು. ಈ ನಾಡಿನ ಜನರಿಂದ ಪಡೆದ, ರಾಜಕೀಯ ಅಧಿಕಾರ ಗೌರವಗಳನ್ನು ನಿಮಗಾಗಿಯೇ, ಸಮರ್ಪಿಸುತ್ತಾ ಬಂದಿದ್ದೇನೆ. ಅದರ ಹಕ್ಕುದಾರರು ನೀವೇ ಆಗಿರುತ್ತೀರ.
ರಾಜಕೀಯ ಬದುಕಿನ ಸ್ಥಿತ್ಯಂತರದಲ್ಲಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಸೌಭಾಗ್ಯ ನಾಡಿನ ಜನತೆಯ ಮನೋಭಿಲಾಷೆಯಂತೆ ನನಗೆ ಧಕ್ಕಿದ್ದು, ನಿಮ್ಮ ಆಶೀರ್ವಾದದ ಫಲ. ಮುಖ್ಯಮಂತ್ರಿಯಾಗಿದ್ದುಕೊಂಡು, ಸಾಮಾನ್ಯನಂತೆ ಬದುಕುವುದನ್ನು ಮರೆಯಲಿಲ್ಲ. ಅಸಹಾಯಕರು ಮತ್ತು ಬಡವರ ಬದುಕಿನ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆತ್ಮ ಸಾಕ್ಷಿಯಂತೆ ನಡೆದುಕೊಂಡಿದ್ದೇನೆ. ಇದು ನನ್ನ ಆತ್ಮಬಲವೊ, ದೌರ್ಬಲ್ಯವೊ ಎಂದು ಭಾವಿಸುವಲ್ಲಿ ಹಿಂಜರಿಕೆ ಇಲ್ಲ. ತನ್ನಂತೆಯೇ ಇರುವ ಮನುಷ್ಯರು ಕಷ್ಟಕೋಟಲೆಗಳಿಂದ ಕೊರಗುವುದನ್ನು ಕಂಡಾಗ ನನ್ನ ಕರಳು, ಮಿಸು ಕಾಡುತ್ತದೆ. ಹೀಗಾಗಿಯೇ ನನ್ನ ಪದವಿ ಸ್ಥಾನಮಾನ, ಸಂದರ್ಭಗಳ ಲೆಕ್ಕಿಸದೇ ಮತ್ತೆ ಮತ್ತೆ ಕಣ್ಣುಗಳು ನೀರಾಗಿ ಬಿಡುತ್ತದೆ. ಜನರಿಗಾಗಿ ಮಿಡಿದ ನನ್ನ, ಪಾಲಿನ ಕರ್ತವ್ಯದಲ್ಲಿ ಎಷ್ಟುಸಫಲ, ಎಷ್ಟುವಿಫಲ ಎಂಬುದು ನಿಮ ವಿವೇಚನೆಗೆ ಬಿಟ್ಟದ್ದು.
ಎರಡು ಸಲವು ಮೈತ್ರಿ ಸರ್ಕಾರದಲ್ಲಿಯೇ ಮುಖ್ಯಮಂತ್ರಿಯಾಗಿದ್ದರಿಂದ ನನ್ನ ಹೆಬ್ಬಯಕೆಯಂತೆ ಜನ ಸಾಮಾನ್ಯರ ದುಃಖ ದುಮ್ಮಾನಗಳಿಗೆ ಗರಿಷ್ಟಮಟ್ಟದಲ್ಲಿ ಸ್ಪಂದಿಸಲು ಆಗಲಿಲ್ಲ ಎಂಬ ನೋವು. ಎರಡು ಬಾರಿ ಹೃದಯ ಚಿಕಿತ್ಸೆಗೆ ಒಳಗಾದ ನನ್ನನ್ನು ಈಗಲೂ ಕಾಡುತ್ತಿದೆ. ನೀವು ತೋರಿದ ಪ್ರೀತಿ-ಹರಸಿದ ರೀತಿ ನನ್ನ ಬದುಕಿನ ಪಥವನ್ನು ಬದಲಿಸಿದ್ದು ದಿಟ. ನನ್ನನ್ನು ಕಂಡರೇ ಅದ್ಯಾಕೊ ಪಕ್ಷತೀತವಾಗಿ ಜನ ಸಾಮಾನ್ಯರು ಬಲು ಇಷ್ಟಪಡುತ್ತಾರೆ. ಪ್ರೀತಿ ಎಂಬುದನ್ನು ರಕ್ಷಿಸಿಕೊಳ್ಳಲು ಪ್ರೀತಿಯನ್ನಷ್ಟೇ ಬೆರೆಸಿದಾಗ ಸಾಧ್ಯ. ಕರುಣೆ ಸ್ನೇಹದ ಮನೋಗತವೇ ನಾನು. ನಾನು ಸಾಮಾನ್ಯನೊಳಗೆ ಸಾಮಾನ್ಯನಂತೆ ಎಲ್ಲರೊಳಗೊಂಡು ಬದುಕಲು ಸಾಧ್ಯವಾಯಿತೇನೊ ಎಂಬ ತೃಪ್ತಿ ಇದೆ. ಈ ಬದುಕೇ ನನ್ನಗಿಷ್ಟ.
ನನ್ನ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ನಾಯಕರು ಅವರಿಗೆ ನನ್ನಿಂದ ವ್ಯಕ್ತಿಗತವಾಗಿ ನೆರವು ಸಿಗದಿದ್ದಾಗ ಸ್ಥಾನಮಾನ ಧಕ್ಕದಿದ್ದರೂ, ಅವರ ಮನೆಯ ಕುಟುಂಬ ಸದಸ್ಯ ಎಂಬಂತೆ ಅಭಿಮಾನದ ಪ್ರೀತಿಯ ಹೊಳೆ ಹರಿಸುತ್ತಾರೆ. ಇದೊಂದು ಸುಕೃತ ಫಲವೇ ಸರಿ. ಈ ನಾಡಿನ ನಿಮ್ಮೆಲ್ಲರ ಪ್ರೀತಿಯನ್ನು ಕಣ್ತುಂಬಿಸಿಕೊಳ್ಳಲು, ಅದರೊಳಗೆ ಮಿಂದು ಮಗುವಾಗಲು ಅಪೂರ್ವವಾದ ಸಂದರ್ಭವೊಂದು ಕೂಡಿಬಂದಿದೆ.
ಏ.17ರಂದು ನನ್ನ ಮಗನ ವಿವಾಹ ರಾಮನಗರದಲ್ಲಿ ನಡೆಯಲಿದೆ. ಇದು ನಿಮ್ಮ ಕುಮಾರಣ್ಣನ ಮನೆಯ ಸಂಭ್ರಮ. ಈ ಸಮಾರಂಭದಲ್ಲಿ ನೀವಿದ್ದು, ನನ್ನ ಮಗ -ಸೊಸೆಯನ್ನು ಹರಸಿದರೆ ನಿಮ್ಮ ಆ ಪ್ರೀತಿ ನನ್ನ ಹೃದಯವನ್ನು ಇನ್ನಷ್ಟುಚೈತನ್ಯ ಪೂರ್ಣಗೊಳಿಸಲಿದೆ. ಇದನ್ನು ವೈಯಕ್ತಿಕ ಆಮಂತ್ರಣ ಎಂದು ಪರಿಭಾವಿಸಿ, ನೀವು ಮತ್ತು ಕುಟುಂಬದವರು ಬರಲೇಬೇಕು. ಜತೆಯಲ್ಲೇ ಕುಳಿತು ಊಟ ಮಾಡೋಣ. ಇದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೇನಿಲ್ಲ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ ನಿಮಗಾಗಿಯೇ ಕಾಯಿತ್ತಿರುತ್ತೇನೆ.
ಇಂತಿ ನಿಮ್ಮ ಮನೆ ಮಗ, ಎಚ್.ಡಿ. ಕುಮಾರಸ್ವಾಮಿ