ಕೆಂಜ ಚೇತನ್‌ ದಾರಿಯಲ್ಲಿ ದೇವರ ಹುಡುಕಾಟ ನಡೆಯುತ್ತಿದೆ!

By Web DeskFirst Published Oct 11, 2019, 9:36 AM IST
Highlights

ಚಂದನವನದಲ್ಲೀ ಇತ್ತೀಚೆಗೆ ವಿಭಿನ್ನ ಟೈಟಲ್‌ ಜತೆಗೆ ಒಂದು ಕುತೂಹಲಕಾರಿ ಟ್ರೇಲರ್‌ ಮೂಲಕ ಪ್ರೇಕ್ಷಕರ ಗಮನ ಸೆಳೆದ ಚಿತ್ರ ‘ದೇವರು ಬೇಕಾಗಿದ್ದಾರೆ’. ಇವತ್ತೇ ಈ ಚಿತ್ರ ತೆರೆಗೆ ಬರುತ್ತಿದೆ. ಇದರ ಮೊದಲ ಪೋಸ್ಟರ್‌ ಜತೆಗೆ ಆನಂತರ ಬಂದ ಟ್ರೇಲರ್‌ ಕೂಡ ಕುತೂಹಲಕಾರಿ ಆಗಿತ್ತು.

‘ಎಲ್ಲರಿಗೂ ದೇವರ ಮನೆ ಗೊತ್ತು, ಆದರೆ ದೇವರು ಎಲ್ಲಿದ್ದಾನೆ ಎನ್ನುವುದೇ ಗೊತ್ತಿಲ್ಲ.. ಮನುಷ್ಯ ಒಂದು ಆ್ಯಂಗಲ…ನಲ್ಲಿ ಕಾಡುಪ್ರಾಣಿ. ಕಾಡಿನಿಂದ ಬುದ್ಧಿ ಬೆಳೆಸಿಕೊಂಡು ನಗರಕ್ಕೆ ಬಂದ ನಾಗರಿಕ. ಆದ್ರೆ ಅಲ್ಲಿಂದ ಬರುವಾಗ ಮನುಷ್ಯತ್ವ ಬಿಟ್ಟು ದೇಹ ಹೊತ್ತು ಬಂದ ಎನ್ನುವುದು ಸೇರಿದಂತೆ ಹಲವು ಪಂಚಿಂಗ್‌ ಡೈಲಾಗ್‌ಗಳ ಮೂಲಕ ಟ್ರೇಲರ್‌ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಟ್ರೇಲರ್‌ ನೋಡಿ ಖುಷಿ ಪಟ್ಟ ಪ್ರೇಕ್ಷಕರಿಗೆ ಈಗ ಸಿನಿಮಾ ನೋಡುವ ಸೌಭಾಗ್ಯ.

ವಿಭಿನ್ನ ಪ್ರಯೋಗದಲ್ಲಿ ಕ್ರೌಡ್‌ ಫಂಡಿಂಗ್‌ ಮೂಲಕ ನಿರ್ಮಾಣವಾದ ಈ ಚಿತ್ರಕ್ಕೆ ಕೆಂಜ ಚೇತನ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಹಿಂದೆ ಇವರು ‘ಪ್ರೇಮ ಗೀಮಾ ಜಾನೇ ದೋ’ ಚಿತ್ರ ನಿರ್ದೇಶಿಸಿ ತೆರೆಗೆ ತಂದಿದ್ದರು.

ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ 'ದೇವರು ಬೇಕಾಗಿದ್ದಾರೆ' !

ಇದು ಮುಗ್ಧ ಮಗುವೊಂದು ದೇವರನ್ನು ಹುಡುಕಿ ಹೊರಡುವ ಕತೆ. ನಿರ್ದೇಶಕರ ಪ್ರಕಾರ ಅದಕ್ಕೆ ಕಾರಣವೂ ಇದೆ. ಅದರ ಜತೆಗೆ ಆ ಮಗು ದೇವರು ಹುಡುಕಿ ಹೊರಡುವ ದಾರಿಯಲ್ಲಿ ವಿಚಾರಗಳು ಏನು ಎನ್ನುವುದು ಚಿತ್ರ ಒನ್‌ಲೈನ್‌ ಸ್ಟೋರಿ. ಎಂಟು ವರ್ಷದ ಬಾಲಕ ಅನೂಪ್‌ ಚಿತ್ರದ ಪ್ರಮುಖ ಪಾತ್ರಧಾರಿ. ಅವರೊಂದಿಗೆ ಹಿರಿಯ ನಟ ಶಿವರಾಮ್‌ ಕೂಡ ಇದ್ದಾರೆ. ಪ್ರಸಾದ್‌ ವಸಿಷ್ಠ, ಸತ್ಯನಾಥ್‌, ಶಾರದ ಹಾಗೂ ಮತ್ತಿತರರು ಚಿತ್ರದಲ್ಲಿದ್ದಾರೆ.

‘ನಂಗೇನು ದೇವರು ಬೇಕಾಗಿಲ್ಲ’ ಎನ್ನುತ್ತಲೇ ಚಿತ್ರದ ಕುರಿತು ಮಾತಿಗಳಿಯುವ ಶಿವರಾಂ, ಯಾರಿಗೆ ದೇವರು ಬೇಕೋ ಅವರೊಟ್ಟಿಗೆ ನಾನು ಸೇರಿಕೊಂಡಿದ್ದೇನೆ. ಸೃಜಶೀಲತೆಗೆ ಅರ್ಥ ಬರುವಂತೆ ನಡೆದುಕೊಳ್ಳುವವರ ಜತೆಗೆ ಸಿನಿಮಾ ಮಾಡಿದ್ದೇನೆ. ಸೃಜನಶೀಲ ನಿರ್ದೇಶಕರಿಂದ ಸಿನಿಮಾ ರಂಗ ಮುನ್ನಡೆಯಬೇಕು. ಬಾಲ ನಟ ಅನೂಪ್‌ ಜತೆಗೆ ಅಭಿನಯಿಸಿದ್ದು ತುಂಬಾ ಹೆಮ್ಮೆಯಿದೆ. ಆ ಬಾಲಕನಿಂದಲೂ ಸಾಕಷ್ಟುಕಲಿತಿದ್ದೇನೆ’ ಎಂದರು.

ಮರಳಿ ಬಂದರು 6-2=5 ಖ್ಯಾತಿಯ ಅಶೋಕ್‌!

ಕೆಂಜ ಚೇತನ್‌ ಕುಮಾರ್‌ ಜತೆಗೆ 15 ಮಂದಿ ಸ್ನೇಹಿತರು ಚಿತ್ರಕ್ಕೆ ಹಣ ಹೂಡಿದ್ದಾರೆ. ಪ್ರಸಾದ್‌ ವಸಿಷ್ಠ ಹಾಗೂ ದಿಲೀಪ್‌ ರಾಣಾ ಸಹ ನಿರ್ಮಾಪಕರಾಗಿ ಸಾಥ್‌ ನೀಡಿದ್ದಾರೆ. ಜುಯೆನ್‌ ಸಂಗೀತ ನೀಡಿದ್ದಾರೆ. ರುದ್ರಮುನಿ ಛಾಯಾಗ್ರಹಣವಿದ್ದು, ಕೈವಾರ, ಗುಡಿಬಂಡೆ, ಕೋಲಾರ, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆದಿದೆ. ವಿಜಯ್‌ ವಿಶ್ವಮಣಿ ಹಾಗೂ ಮಾರ್ಟಿನ್‌ ಗೀತ ರಚನೆ ಮಾಡಿದ್ದಾರೆ.

click me!