ಸಾಹಸ ಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಕಟ್ಟಾಅಭಿಮಾನಿಯೊಬ್ಬ ಸಾಲದ ಬಾಧೆಯಿಂದಾಗಿ ತನ್ನ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
ಕನ್ನಡಪ್ರಭವಾರ್ತೆ, ದಾವಣಗೆರೆ: ಕೆಟಿಜೆ ನಗರ ನಿವಾಸಿ ಲೋಕೇಶ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ಮೇಯರ್, ಹೊಟೆಲ್ ಉದ್ಯಮಿ ಬಿ.ಜಿ. ಅಜಯಕುಮಾರ ಒಡೆತನದ ಭರತ್ ಡಾಬಾ ಮುಂದೆ ಸಣ್ಣದಾಗಿ ಬೀಡಾ ಅಂಗಡಿ ನಡೆಸುತ್ತಿದ್ದ ದೈತ್ಯದೇಹಿ ಲೋಕೇಶ್ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ.
ಆತನೊಬ್ಬ ಹುಡುಗಿಯರ ಹುಚ್ಚ, ಐದು ವರ್ಷದ ಪ್ರೀತಿ, ಫೇಸ್ ಬುಕ್ ಪೋಸ್ಟ್!
ಬೀಡಾ ಅಂಗಡಿ ನಡೆಸುತ್ತಿದ್ದ ಲೋಕೇಶ ಬಾಲ್ಯದಿಂದಲೂ ಸಾಹಸ ಸಿಂಹ ವಿಷ್ಣುವರ್ಧನ್ರ ಕಟ್ಟಾಅಭಿಮಾನಿಯಾಗಿದ್ದ. ಡಾ.ವಿಷ್ಣು ಜನ್ಮ ದಿನಕ್ಕೆ ಪ್ರತಿ ವರ್ಷವೂ ಹೋಗುತ್ತಿದ್ದ ದಾವಣಗೆರೆಯ ಅಭಿಮಾನಿ ಲೋಕೇಶ್ಗೆ ಸ್ವತಃ ವಿಷ್ಣುವರ್ಧನ್ ಅಕ್ಕರೆಯಿಂದ ಕರೆದು, ಕೇಕ್ ತಿನ್ನಿಸಿ, ಫೋಟೋ ತೆಗೆಸಿಕೊಳ್ಳುತ್ತಿದ್ದುದನ್ನು ಲೋಕೇಶ ಸದಾ ಸ್ಮರಿಸುತ್ತಿದ್ದ.
ಆಪ್ತ ಮಿತ್ರ ಸೇರಿದಂತೆ ಡಾ.ವಿಷ್ಣುವರ್ಧನ್ ಸಿನಿಮಾಗಳಲ್ಲಿ ಧರಿಸುತ್ತಿದ್ದಂತಹ ವಸ್ತ್ರ, ಕೂಲಿಂಗ್ ಗ್ಲಾಸ್ಗಳನ್ನೇ ತನ್ನ ಬೀಡಾ ಅಂಗಡಿಯಲ್ಲಿ ಕೆಲಸ ಮಾಡುವಾಗ ಲೋಕೇಶ ಧರಸುತ್ತಾ, ಅದೇ ರೀತಿಯ ಹುರಿ ಮೀಸೆಯನ್ನು ಬಿಟ್ಟುಕೊಂಡು ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಿದ್ದ ವ್ಯಕ್ತಿ. ಸದಾ ಹಸನ್ಮುಖಿಯಾಗಿರುತ್ತಿದ್ದ ಲೋಕೇಶ ತನ್ನ ಮನೆಯಲ್ಲೇ ಸೀರೆಯಿಂದ ನೇಣಿಗೆ ಶರಣಾಗಿದ್ದು ಮಾತ್ರ ದುರಂತ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶುಕ್ರವಾರ ಮೃತ ಲೋಕೇಶ ಅಂತ್ಯಕ್ರಿಯೆ ನಡೆಯಿತು.