ಚೆಕ್ ಬೌನ್ಸ್ ಪ್ರಕರಣ; 'ಮಠ' ನಿರ್ದೇಶಕ ಗುರು ಪ್ರಸಾದ್ ಬಂಧನ

By Shruthi KrishnaFirst Published Jan 13, 2023, 2:32 PM IST
Highlights

ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಿರ್ದೇಶಕ ಗುರು ಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಿರ್ದೇಶಕ ಗುರು ಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗಿರಿನಗರ ಪೊಲೀಸರು ಗುರು ಪ್ರಸಾದ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಗುರು ಪ್ರಸಾದ್ ಅವರನ್ನು ಬಂಧಿಸಿದ್ದು ಪೊಲೀಸರು ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ. ಶ್ರೀನಿವಾಸ್ ಹೆಸರಿನ ವ್ಯಕ್ತಿಗೆ ಹಣ ಕೊಡುವ ವಿಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು ಗುರು ಪ್ರಸಾದ್ ವಿರುದ್ಧ NBW ಜಾರಿಯಾಗಿತ್ತು. ಸದ್ಯ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. 

ಗುರು ಪ್ರಸಾದ್ ತನ್ನ ಬಳಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಗೌಡ ಎನ್ನುವ ಯುವಕನಿಗೆ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದರು. ಶ್ರೀನಿವಾಸ್ ಅವರನ್ನು ನಿರ್ಮಾಪಕನಾಗಿ ಮಾಡುವ ಆಸೆ ತೋರಿಸಿ ಗುರುಪ್ರಸಾದ್ ಹಣ ಕಿತ್ತುಕೊಂಡಿದ್ದರು. ಆದರೆ ಹಣ ಕೇಳಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ ಗುರು ಪ್ರಸಾದ್ ಬೆದರಿಕೆ ಹಾಕಿದ್ದರು ಎಂದು ಶ್ರೀನಿವಾಸ್ ಆರೋಪ ಮಾಡಿದ್ದಾರೆ. ಬಳಿಕ ಶ್ರೀನಿವಾಸ್ ಕೋರ್ಟ್ ಮೆಟ್ಟಿಲೇರಿದ್ದರು.  ಕೋರ್ಟ್ NBW ಜಾರಿ ಮಾಡಿದ ಹಿನ್ನಲೆ‌ ಗುರು ಪ್ರಸಾದ್ ಅವರನ್ನು ಪೊಲೀಸರು  ವಶಕ್ಕೆ ಪಡೆದು ಕೋರ್ಟ್ ಗೆ ಹಾಜರು ಪಡಿಸಲಾಗುತ್ತಿದೆ. 

ಶ್ರೀನಿವಾಸ್ ಗೌಡ ಪ್ರತಿಕ್ರಿಯೆ

ಈ ಬಗ್ಗೆ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ. 2016 ರಲ್ಲಿ 30 ಲಕ್ಷ  ಕೊಟ್ಟಿದ್ದೆ. ಸಾಲ ಅಂತ ಕೊಡಿಸಿದ್ದು ಮನೆ ಹಾರಾಜ್ ಆಗ್ತಿತ್ತು ಆಗ ಅವ್ರಿಗೆ ದುಡ್ಡು ಕೊಟ್ಟೆ. ದುಡ್ಡು ಕೇಳಿದಾಗ ಕೆಟ್ಟ ರೀತಿಯಲ್ಲಿ ವರ್ತಿಸಿದ್ರು. 2015 ರಲ್ಲಿ ನಾನು ಅಭಿಮಾನಿ ಆಗಿ ಪರಿಚಯ ಆಗಿದ್ದು. ಲಾಸ್ಟ್ ಆಗಸ್ಟ್ ನಲ್ಲಿ ಕೇಸ್ ಹಾಕಿದೆ ಇವತ್ತು ವಶಕ್ಕೆ ಪಡೆದಿದ್ದಾರೆ. ಕೋರ್ಟ್ ಮೂಲಕ ನ್ಯಾಯ ಕೇಳ್ತಿದ್ದೀನಿ. ಈಗಲೂ ದುಡ್ಡು ಕೊಟ್ರೆ ಅವ್ರ ಕಾಲಿಗೆ ಬಿದ್ದು ಕೇಸ್ ವಾಪಸ್ ತಗೋತಿನಿ. ಚೆಕ್ ಬೌನ್ಸ್ ಕೇಸ್ ಹಾಕಿದ್ಮೆಲೆ ನನ್ನ ಮೇಲೆ ಎರಡನೇ  ಹೆಂಡತಿ ಜೊತೆ ನಾನು ಅನುಚಿತವಾಗಿ ವರ್ತಿಸಿದ್ದೀನಿ ಅಂತ ದುರು ದಾಖಲು ಮಾಡಿದ್ರು' ಎಂದು ಹೇಳಿದ್ದಾರೆ. 

ಗುರು ಪ್ರಸಾದ್ ಹೇಳಿದ್ದೇನು?

ಗುರು ಪ್ರಸಾದ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 'ಮೆಡಿಕಲ್ ಚೆಕಪ್‌ಗೆ ಗುರು ಪ್ರಸಾದ್ ಅವರನ್ನು ಕರೆದುಕೊಂಡು ಹೋದಾಗ ಮಾತನಾಡಿದ್ದಾರೆ. 'ನಾನು ಏನು ತಪ್ಪು ಮಾಡಿಲ್ಲ. ಚೆಕ್ ಬೌನ್ಸ್ ಅಷ್ಟೇ. ಸದ್ಯದಲ್ಲೇ ಪ್ರೆಸ್ ಮೀಟ್ ಕರೀತಿನಿ' ಎಂದು ಗುರು ಪ್ರಸಾದ್ ಹೇಳಿದ್ದಾರೆ. 

'ಮಠ' ಸಿನಿಮಾ ಮೂಲಕ ಗುರು ಪ್ರಸಾದ್ ನಿರ್ದೇಶಕರಾಗಿ ಗುರುತಿಸಿಕೊಂಡರು. ಮಠ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟ ಸಿನಿಮಾವಾಗಿದೆ. ಬಳಿಕ ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್ ಸೇರಿದಂತೆ ಇನ್ನು ಕೆಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಜಗ್ಗೇಶ್ ಜೊತೆ ರಂಗನಾಯಕ ಸಿನಿಮಾ ಮಾಡುತ್ತಿದ್ದಾರೆ. ಕೊನೆಯದಾಗಿ ಗುರುಪ್ರಸಾದ್ ಎರಡನೇ ಸಲ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 

click me!