
ಕನ್ನಡ ಚಿತ್ರರಂಗದ ಸದ್ಯದ ಹಾಟ್ ಟಾಪಿಕ್ ಏನೆಂದರೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ರಮ್ಯಾ ತಡೆ ತಂದಿದ್ದು ಯಾಕೆ ಎಂಬುದು. ಈ ಕೋರ್ಟು ತಡೆ ಅರ್ಜಿಯನ್ನು ವಜಾಗೊಳಿಸಿದ ಬಳಿಕ ರಮ್ಯಾ ನಡೆಯ ಮೇಲೆ ಸಂದೇಹ ಹುಟ್ಟಿದೆ. ಅವರನ್ನು ದಾರಿ ತಪ್ಪಿಸಿದ್ದು ಯಾರು ಎಂಬ ಪ್ರಶ್ನೆ ಎದ್ದಿದೆ. ಗಾಂಧಿನಗರದ ಗಲ್ಲಿಗಳು ಒಂದು ಹೆಸರನ್ನು ಕಿವಿಯಲ್ಲೇ ಹೇಳುತ್ತಿದೆ. ಆ ಹೆಸರನ್ನು ಮುಂದೆ ನೋಡೋಣ.
ರಮ್ಯಾ ಅವರು ತನಗೆ ತೊಂದರೆ ಕೊಟ್ಟವರಿಗೆ ಸುಮ್ಮನೆ ಬಿಡುವವರಲ್ಲ. ಆದರೆ ನಿಜವಾದ ಸಿನಿಮಾ ಪ್ಯಾಷನ್ ಇರುವವರಿಗೆ ಅವರು ಸಪೋರ್ಟ್ ಮಾಡುತ್ತಾರೆ. ಚಿತ್ರರಂಗದ ಹೊಸ ನಾಯಕ ನಟಿಯರಿಗೆ ಬೆನ್ನಿಗೆ ನಿಲ್ಲುತ್ತಾರೆ. ಅಲ್ಲದೇ ತಮ್ಮ ನಿರ್ಮಾಣದ ಹೊಸ ಸಿನಿಮಾದಲ್ಲಿ ಹೊಸ ನಟಿ ಸಿರಿ ರವಿಕುಮಾರ್ ಅವರಿಗೆ ಅವಕಾಶ ಕೊಟ್ಟು ದೊಡ್ಡತನ ಮೆರೆದಿದ್ದರು. ಇತ್ತೀಚೆಗಂತೂ ಎಲ್ಲಾ ಹೊಸ ಸಿನಿಮಾ ತಂಡಗಳ ಜೊತೆಗೂ ನಿಲ್ಲುತ್ತಿದ್ದರು. ಅದೇ ರೀತ ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೂ ಬಲ ನೀಡಿದ್ದರು. ಬೆಂಬಲವಾಗಿದ್ದರು. ಅದಕ್ಕಾಗಿ ಇಡೀ ತಂಡ ಅವರಿಗೆ ಆಭಾರಿಯಾಗಿತ್ತು.
ಹಾಸ್ಟೆಲ್ ಹುಡುಗರಿಗೆ ಜಯ; ರಮ್ಯಾ ಹಾಕಿದ್ದ ಕೇಸ್ ತೆರವುಗೊಳಿಸಿದ ಕೋರ್ಟ್, ನಾಳೆ ರಿಲೀಸ್!
ವಿಶೇಷ ಎಂದರೆ ಈ ಹೊಸ ಹುಡುಗರ ಚಿತ್ರಕ್ಕೆ ಬೆಂಬಲವಾಗಿ ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಎಲ್ಲರೂ ನಿಂತಿದ್ದರು. ರಮ್ಯಾ ಕೂಡ ಅವರ ಪರವಾಗಿಯೇ ನಿಂತಿದ್ದರು. ಆದರೆ ಸಿನಿಮಾ ರಿಲೀಸ್ಗೆ ಎರಡು ದಿನ ಮೊದಲು ಏನಾಯಿತೋ ಏನೋ, ರಮ್ಯಾ ಚಿತ್ರಕ್ಕೆ ತಡೆ ತಂದು ಬಿಟ್ಟರು. ತನ್ನ ದೃಶ್ಯ ಬಳಸಬಾರದು ಎಂದರು. ಇಲ್ಲದಿದ್ದರೆ ಕೋಟಿ ದುಡ್ಡು ಕೊಡಬೇಕು ಎಂದರು. ಸಣ್ಣ ಹುಡುಗರ ತಂಡ ಬೆಚ್ಚಿಬಿದ್ದಿತು. ಆದರೆ ಅವರ ಜೊತೆ ಇಡೀ ಚಿತ್ರರಂಗ ಇತ್ತು. ಸಿನಿಮಾ ವ್ಯಾಮೋಹಿಗಳಿದ್ದರು. ಅವರೆಲ್ಲರೂ ರಮ್ಯಾ ಅವರ ಈ ನಡೆಯನ್ನು ನೋಡಿ ಶಾಕ್ಗೆ ಒಳಗಾಗಿದ್ದು ಸುಳ್ಳಲ್ಲ.
ರಮ್ಯಾ ಹೀಗೆ ಮಾಡುವವರಲ್ಲವಲ್ಲ. ರಮ್ಯಾ ಯಾಕೆ ಹೀಗೆ ಮಾಡಿದರು? ರಮ್ಯಾ ಅವರಿಗೆ ಕುಮ್ಮಕ್ಕು ಕೊಟ್ಟವರು ಯಾರು? ಈ ಎಲ್ಲಾ ಪ್ರಶ್ನೆಗಳು ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಓಡಾಡತೊಡಗಿತು. ಅದಕ್ಕೆ ಉತ್ತರವಾಗಿ ಈಗ ಒಂದು ಸ್ಟುಡಿಯೋಸ್ ಹೆಸರು ಕೇಳಿಬರುತ್ತಿದೆ. ಈ ಚಿತ್ರಕ್ಕೆ ತೊಡಕು ಮಾಡಬೇಕು ಎಂಬ ಕಾರಣಕ್ಕಾಗಿಯೇ ರಮ್ಯಾ ಅವರಿಗೆ ಕುಮ್ಮಕ್ಕು ಕೊಟ್ಟು ತಡೆ ಹಾಕಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಅದು ನಿಜವೋ ಸುಳ್ಳೋ ಎಂಬುದನ್ನು ರಮ್ಯಾ ಅವರೇ ಹೇಳಬೇಕು? ಒಟ್ಟಿನಲ್ಲಿ ಸದ್ಯಕ್ಕೆ ಇದೊಂದು ಗಾಸಿಪ್ ಥರ ಕೇಳಿಸುತ್ತದೆ. ಅದನ್ನೇ ಯೋಚನೆ ಮಾಡುತ್ತಾ ಹೋದರೆ ಹೆಸರು ಹೊಳೆದರೂ ಹೊಳೆದೀತು.
ಹಾಸ್ಟೆಲ್ ಹುಡುಗರಿಗೆ ರಮ್ಯಾ ನೋಟಿಸ್ ಭಾಗ್ಯ: ಈ ಸಿನಿಮಾ ಮೇಲೆ ಯಾಕೆ ಅನೇಕರಿಗೆ ಕಣ್ಣು?
ಈ ಚಿತ್ರರಂಗದ ಅತಿರಥ ಮಹಾರಥರು ಹಾಸ್ಟೆಲ್ ಹುಡುಗರಿಗೆ ಬೆಂಬಲ ಸೂಚಿಸಿದ್ದಾರೆ. ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಎಲ್ಲಿ ಬೆಂಕಿ ಬೀಳತ್ತೋ ನೋಡೋಣ ಎಂದು ಸೂಚ್ಯವಾಗಿ ಬರೆದು ಕೊಂಡಿದ್ದಾರೆ. ಅವರ ಈ ಮಾತಿನಲ್ಲಿ ಯಾರನ್ನೋ ಗುರಿ ಮಾಡಿದಂತಿದೆ. ಗುರಿ ಮಾಡಿದ್ದು ಯಾರನ್ನು? ಯೋಚಿಸಿದರೆ ಹಲವು ಉತ್ತರಗಳು ಸಿಗಬಹುದು. ರಿಷಬ್ ಶೆಟ್ಟಿ ನ್ಯಾಯಕ್ಕೆ ನ್ಯಾಯ ಜೈ ಆಂಜನೇಯ ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಚಿತ್ರತಂಡ ಮಾತ್ರ ರಮ್ಯಾ ಅವರೂ ನಮ್ಮ ತಂಡದ ಭಾಗವೇ. ಅದಕ್ಕಿಂತ ಹೆಚ್ಚು ಬೇರೇನೂ ಹೇಳುವುದಿಲ್ಲ ಎಂದಿದ್ದಾರೆ. ಅಗ್ರಿಮೆಂಟ್ ಕಾಪಿಯನ್ನು ಕೋರ್ಟು ಮುಂದೆ ಹಾಜರುಪಡಿಸಿದ್ದೇವೆ ಎಂದಿದ್ದಾರೆ. ಒಟ್ಟಾರೆ ಸಿನಿಮಾ ಜು.21ರಂದು ಬಿಡುಗಡೆಯಾಗುತ್ತಿದೆ. ಜನರು ನೋಡಿ ಚಿತ್ರಕ್ಕೆ ಸಲ್ಲಬೇಕಾದ ಮರ್ಯಾದೆ ಸಲ್ಲಿಸುತ್ತಾರೆ.
ಅಂದಹಾಗೆ ಈ ಚಿತ್ರವನ್ನು ಜೀ ಸ್ಟುಡಿಯೋಸ್ ವಿತರಣೆ ಮಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.