'ಕರ್ಣಾಟ ಬಲಂ ಅಜೇಯಂ' ಚಿತ್ರಕ್ಕಾಗಿ ಬಾದಾಮಿಯಲ್ಲಿ ಸಹಸ್ರಾರು ಕಲಾವಿದರೊಂದಿಗೆ ಹೆಜ್ಜೆ ಹಾಕಿದ ಧ್ಯಾನ್ ಯೋಗೇಶ್ವರ್

Published : Aug 03, 2026, 09:37 PM IST
Karnata Balam Ajeyam

ಸಾರಾಂಶ

ಶಾಸಕ, ನಟ, ನಿರ್ಮಾಪಕ ಸಿಪಿ ಯೋಗೇಶ್ವರ್ ಅವರ ಮಗ ಧ್ಯಾನ್ ಯೋಗೇಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ 'ಕರ್ಣಾಟ ಬಲಂ ಅಜೇಯಂ' ಚಿತ್ರಕ್ಕೆ ಬಾದಾಮಿಯಲ್ಲಿ ಅದ್ದೂರಿಯಾಗಿ ಹಾಡಿನ ಚಿತ್ರೀಕರಣ ನಡೆದಿದೆ. ಧ್ಯಾನ್ ಸಹಸ್ರಾರು ಕಲಾವಿರೊಂದಿಗೆ 'ಬಾದಾಮಿ ಸೀಮೆಯಿದು ಎಂತ ಸೊಬಗು ..' ಎಂಬ ಗೀತೆಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು.

ಶಾಸಕ, ನಟ, ನಿರ್ಮಾಪಕ ಸಿಪಿ ಯೋಗೇಶ್ವರ್ ಅವರ ಮಗ ಧ್ಯಾನ್ ಯೋಗೇಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ 'ಕರ್ಣಾಟ ಬಲಂ ಅಜೇಯಂ' (Karnata Balam Ajeyam) ಚಿತ್ರಕ್ಕೆ ಬಾದಾಮಿಯಲ್ಲಿ ಅದ್ದೂರಿಯಾಗಿ ಹಾಡಿನ ಚಿತ್ರೀಕರಣ ನಡೆದಿದೆ. ಇದೇ ಕಾರಣಕ್ಕೆ ಈ ಚಿತ್ರತಂಡ ಚಿತ್ರೀಕರಣ ವೀಕ್ಷಣೆಗೆ ಮಾಧ್ಯಮದವರನ್ನು ಬಾದಾಮಿಗೆ ಆಹ್ವಾನಿಸಿತ್ತು. ಬಾದಾಮಿಯ ಕೋಟೆಯಲ್ಲಿ ಚಿತ್ರದ ಶೀರ್ಷಿಕೆ ಗೀತೆಯ ಚಿತ್ರೀಕರಣ ಭರದಿಂದ ಸಾಗಿತ್ತು. ಚಿತ್ರದ ನಾಯಕ ಧ್ಯಾನ್ ಸಹಸ್ರಾರು ಕಲಾವಿದರು ಹಾಗೂ ಸಹ ಕಲಾವಿದರೊಂದಿಗೆ 'ಬಾದಾಮಿ ಸೀಮೆಯಿದು ಎಂತ ಸೊಬಗು...' ಎಂಬ ಗೀತೆಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು.

ಈ ಹಾಡಿನಲ್ಲಿ ಜನಪದ ಕಲೆಗಳಾದ ಯಕ್ಷಗಾನ, ನಂದಿ ಕೋಲು ಕುಣಿತ ಸೇರಿದಂತೆ ಹಲವು ನೃತ್ಯತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ತ್ರಿಲೋಕ್ ತ್ರಿವಿಕ್ರಮ್ ಅವರ ಸಾಹಿತ್ಯದ ಈ ಗೀತೆಗೆ ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡುತ್ತಿದ್ದರು. ಈ‌ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಿದೆ. ವಿರಾಮದ ವೇಳೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿ ಯೋಗೇಶ್ವರ್, ‘ನಮ್ಮ, ’ಕರ್ಣಾಟ ಬಲಂ ಅಜೇಯಂ' ಸಿನಿಮಾ ಚಿತ್ರೀಕರಣ ಪ್ರಾರಂಭಿಸಿ ತಿಂಗಳಾಗುತ್ತಾ ಬಂದಿದೆ. ನರಗುಂದ, ಬಾದಾಮಿಯ ಸುತ್ತಮುತ್ತ ನಿರಂತರ ಚಿತ್ರೀಕರಣ ಮಾಡುತ್ತಿದ್ದೇವೆ. ಇನ್ನೆರಡು ದಿನ ಚಿತ್ರೀಕರಣ ಮಾಡಿದರೆ ಬಾದಾಮಿ ಭಾಗದ ಚಿತ್ರೀಕರಣ ಮುಗಿಯುತ್ತದೆ. ಆನಂತರ ಹೊಸಪೇಟೆ, ಬೆಂಗಳೂರಿನಲ್ಲಿ ಒಂದೆರಡು ದಿನ ಚಿತ್ರೀಕರಣ ಮಾಡಿದರೆ ಮೊದಲ ಹಂತದ ಚಿತ್ರೀಕರಣ ಮುಗಿಯುತ್ತದೆ. ನಂತರ ಎರಡನೇ ಹಂತದಲ್ಲಿ ಹಳೆ ಮೈಸೂರು ಭಾಗದಲ್ಲಿ ಚಿತ್ರೀಕರಣ ಮಾಡಲಿದ್ದೇವೆ.

ಬಾದಾಮಿಯಿಂದ ಶುರುವಾಗುವ ಕಥೆ ಇಡೀ ಕರ್ನಾಟಕಕ್ಕೆ ಸಾಗುತ್ತದೆ. ಇದೊಂದು ಅಪ್ಪಟ ಕನ್ನಡತನದ, ನಮ್ಮ ಮಣ್ಣಿನ ಸಿನಿಮಾ.‌ ಈ ಮೂಲಕ ಇಂದಿನ ಯುವಕರಿಗೆ ಇತಿಹಾಸ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂದಿನ ರೈತರ ಸಮಸ್ಯೆಗಳ ಜೊತೆಗೆ ಚಾಲುಕ್ಯರ ಕಾಲದ ಕಥೆಯನ್ನು ಇದರಲ್ಲಿ ಹೇಳಲಿದ್ದೇವೆ. ನಾಗಣ್ಣ ಅವರ ನಿರ್ದೇಶನ, ಚಂದ್ರು ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಹಿರಿಯರ ತಂಡ ಇದರಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಪುತ್ರ ಧ್ಯಾನ್ ಸಂಪೂರ್ಣ ತಯಾರಿ ಮಾಡಿಕೊಂಡು ಅಭಿನಯಕ್ಕಿಳಿದಿದ್ದಾನೆ. ನಾವು ಈ ಚಿತ್ರವನ್ನು ಕನ್ನಡ ಭಾಷೆಯಲ್ಲಿ ಮಾತ್ರ ಮಾಡುತ್ತಿದ್ದೇವೆ. ಮಹಾದಾಯಿ ಹೊರಾಟದ ಕಥೆ ಕೂಡ ಇದರಲ್ಲಿದ್ದು, ಇಡೀ ಕರ್ನಾಟಕದ ರೈತರ ಸಮಸ್ಯೆ ಇಟ್ಟುಕೊಂಡು ಈ ಕಥೆ ಮಾಡಿದ್ದೇನೆ.

ಪುಲಕೇಶಿಯ ನಾಡಿನ ಜನ ಇಂದು ಏಕೆ ಗುಳೆ ಹೋಗುತ್ತಿದ್ದಾರೆ ಎಂಬ ಅಂಶದ ಮೇಲೆ ಕಥೆ ಸಾಗಲಿದ್ದು, ಸಂಪೂರ್ಣ ಕರ್ನಾಟಕ ನೀರಾವರಿ ಆಗಬೇಕು ಎಂಬುದು ನಮ್ಮ ಆಶಯ. ‘ಕರ್ಣಾಟ ಬಲಂ’ ಚಾಲುಕ್ಯರ ಪುಲಕೇಶಿ ಸೈನ್ಯದ ಹೆಸರು. ಅದನ್ನೇ ನಾವು ಚಿತ್ರದ ಶೀರ್ಷಿಕೆಯಾಗಿ ಇಟ್ಟುಕೊಂಡಿದ್ದೇವೆ. ಬೇರೆ ಭಾಷೆಗಳಲ್ಲಿ ಬರುತ್ತಿರುವ ಐತಿಹಾಸಿಕ ಸಿನಿಮಾಗಳು ಕಾಲ್ಪನಿಕ ಕಥೆಯನ್ನು ಒಳಗೊಂಡಿರುತ್ತವೆ. ನಮ್ಮದು ನೈಜ ಘಟನೆ ಹಾಗೂ ಇಂದಿನ ಸಮಸ್ಯೆಯ ಬಗ್ಗೆ ಇರುವ ಕಥೆ. ನಾನು 25 ವರ್ಷದ ನಂತರ ಅಭಿನಯ ಮಾಡುತ್ತಿದ್ದು, ರೈತ ಹೋರಾಟಗಾರನ ಪಾತ್ರ ನಿರ್ವಹಿಸಿದ್ದೇನೆ. ಮಗನ ಅಭಿನಯದ ಬಗ್ಗೆ ಮೆಚ್ಚುಗೆ ಆಗುತ್ತಿದೆ. ಈಗ ಚಿತ್ರೀಕರಣ ಮಾಡುತ್ತಿರುವ ಒಂದು ಗೀತೆಯನ್ನು ಆರು ದಿನ ಚಿತ್ರೀಕರಣ ಮಾಡುತ್ತಿದ್ದೇವೆ.

ಈ ಹಾಡಿಗಾಗಿ ಬಾದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದ ಕಡೆ ಚಿತ್ರೀಕರಣ ಮಾಡಿದ್ದು, ಇದು ಕನ್ನಡಕ್ಕೆ ಒಂದು ಹೆಮ್ಮೆಯ ಗೀತೆಯಾಗಲಿದೆ ಎಂಬ ವಿಶ್ವಾಸವಿದೆ. ಬಾದಾಮಿ ಮತ್ತು ಚಾಲುಕ್ಯ ಸಾಮ್ರಾಜ್ಯದ ಹಿರಿಮೆ ಎತ್ತಿ ಹಿಡಿಯುವ ಹಾಡು ಇದು. ಈಗಾಗಲೇ ನಮ್ಮ ಚಿತ್ರದ ಶೇಕಡಾ 35% ಭಾಗದ ಚಿತ್ರೀಕರಣ ಮುಗಿದಿದೆ'. ಮುಂಬರುವ ಸಂಕ್ರಾಂತಿ ವೇಳೆಗೆ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರ ಹಾಗೂ ಚಿತ್ರೀಕರಣದ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ನಾಗಣ್ಣ ಮಾತನಾಡಿ, 'ಈ ಗೀತೆಯನ್ನು ಮೋಹನ್ ಮಾಸ್ಟರ್ ಅದ್ಭುತವಾಗಿ ನೃತ್ಯ ಸಂಯೋಜನೆ ಮಾಡುತ್ಯಿದ್ದಾರೆ. ಧ್ಯಾನ್ ಕೂಡ ತುಂಬಾ ಶ್ರಮದಿಂದ ಅಭಿನಯ ಮಾಡುತ್ತಿದ್ದಾರೆ. ಈ ಹಾಡನ್ನು ತ್ರಿಲೋಕ್ ತ್ರಿವಿಕ್ರಮ್ ಬರೆದಿದ್ದಾರೆ. ನಮ್ಮದು ಅನುಭವಿಗಳಿರುವ ತಂಡ. ಇನ್ನೆರಡು ದಿನ ಇಲ್ಲಿದ್ದು ನಂತರ ಚನ್ನಪಟ್ಟಣ, ಬಾಗಲಕೋಟ, ಬೆಳಗಾವಿ, ಹುಬ್ಬಳ್ಳಿ ಮುಂತಾದ ಕಡೆ ಚಿತ್ರೀಕರಣ ಮಾಡಲಿದ್ದೇವೆ.

ಚಿತ್ರದಲ್ಲಿ ನಾಯಕನ ಹೆಸರು ವಾತಾಪಿ. ಇಂದಿನ ಈ ಹಾಡಿನ ಚಿತ್ರೀಕರಣದಲ್ಲಿ ಸುಮಾರು 1000ಕ್ಕೂ ಹೆಚ್ಚು ಜನ ತಂತ್ರಜ್ಞರು, ಕಲಾವಿದರು ಕೆಲಸ ಮಾಡತಾ ಇದ್ದಾರೆ. ನಮ್ಮ ಸೊಗಡಿನ ಕಥೆ ಹೇಳುವ ಪ್ರಯತ್ನ ಮಾಡ್ತಾ ಇದ್ದೇವೆ. ಕಥೆ ಇಂದಿನ ಯುವಪೀಳಿಗೆ ಮತ್ತು ಆರನೇ ಶತಮಾನದ ಕಾಲಘಟ್ಟದಲ್ಲಿ ಸಾಗುತ್ತದೆ. ಐತಿಹಾಸಿಕ ಹಾಗೂ ಸಾಮಾಜಿಕ ಕಥೆ ಒಳಗೊಂಡ ಸಿನಿಮಾ ಇದಾಗಿದೆ' ಎಂದು ಹೇಳಿದರು.

ನಾಯಕ ಧ್ಯಾನ್ ಯೋಗೀಶ್ವರ್ ಮಾತನಾಡಿ, 'ಕಳೆದ 20 ದಿನಗಳಿಂದ ಬಾದಾಮಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿನ ಜನ ನೀಡುತ್ತಿರುವ ಪ್ರೀತಿಗೆ ತುಂಬಾ ಖುಷಿ ಆಗಿದೆ. ಚಿಕ್ಕ ವಯಸ್ಸಿನಿಂದ ನನಗೆ ನಟ ಆಗುವ ಆಸೆ. ಆದರೆ ತಂದೆಗೆ ಇಷ್ಟ ಇರಲಿಲ್ಲ. ನಾನು ಯಾವಾಗ ಎತ್ತರವಾಗಿ ಬೆಳೆದೆನೋ ಆಗ ತಂದೆಗೆ ನನ್ನ ಮೇಲೆ ಭರವಸೆ ಬಂತು. ಒಬ್ಬ ನಟನಾಗಿ ನಿಲ್ಲಬೇಕು ಎಂಬ ಆಸೆ ಇದೆ‌. ಕರ್ಣಾಟಬಲಂ ಚಿತ್ರ ಜನವರಿ 15 ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಲಿದೆ' ಎಂದರು.

ವೇದಿಕೆಯಲ್ಲಿ ಚಿತ್ರದ ನಾಯಕಿ ಮಣಿಕಾ ವಿಶ್ವಕರ್ಮ, ನಾಯಕನ ತಾಯಿ ಪಾತ್ರ ಮಾಡುತ್ತಿರುವ ಲಯ, ಛಾಯಾಗ್ರಾಹಕ ಚಂದ್ರು, ನೃತ್ಯ ನಿರ್ದೇಶಕ ಮೋಹನ್ ಮಾಸ್ಟರ್, ಸಂಭಾಷಣೆ ಬರೆದಿರುವ ಎಂ.ಎಸ್. ರಮೇಶ್, ಕಲಾವಿದರಾದ ಸಂಪತ್, ಮಾನಸಿ ಸುಧೀರ್, ಬಲ ರಾಜ್‌ವಾಡಿ, ಕಾರ್ಯಕಾರಿ ನಿರ್ಮಾಪಕ ಕೆ. ಪಿ. ಶ್ರೀಕಾಂತ್ ಮುಂತಾದವರು ಸಿನಿಮಾ ಬಗ್ಗೆ ಮಾತನಾಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

50ನೇ ಸಿನಿಮಾ 'ಡಿಟೆಕ್ಟಿವ್ ತೀಕ್ಷ್ಣ' ಕುರಿತು ಪ್ರಿಯಾಂಕಾ ಉಪೇಂದ್ರ ಮನದಾಳದ ಮಾತು: ನಿರ್ದೇಶನದ ಕನಸು ಬಿಚ್ಚಿಟ್ಟ ನಟಿ
ಬಾಸ್ ಸಿನಿಮಾ ಬಿಡುಗಡಗೆ ಒಪ್ಪಿಗೆ, ಮೂವಿ ರಿಲೀಸ್ ನಿರಾಕರಿಸಿ ಕೋರ್ಟ್ ಮೆಟ್ಟಿಲೇರಿದ್ದ ದರ್ಶನ್ ಪತ್ನಿ