
ಬಂಗಾರಪೇಟೆ (ನ.10): ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯರಗೋಳ್ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದರು, ಈಗ ಅವರೇ ಡ್ಯಾಂ ಅನ್ನು ಲೋಕಾರ್ಪಣೆ ಮಾಡುತ್ತಿದ್ದಾರೆಯೇ ವಿನಃ ಇದರಲ್ಲಿ ಇತರೇ ಪಕ್ಷಗಳ ನಾಯಕರ ಪಾತ್ರ ಏನೂ ಇಲ್ಲ. ಇದು ಕಾಂಗ್ರೆಸ್ ಸರ್ಕಾರದ ಕೂಸು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸಮರ್ಥಿಸಿಕೊಂಡರು. ಪಟ್ಟಣದ ಎಸ್.ಎನ್.ರೆಸಾರ್ಟ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯರಗೋಳ್ ಡ್ಯಾಂನಿಂದ ಮೂರು ತಾಲೂಕಿನ ಜನರಿಗೆ ಶುದ್ಧವಾದ ಕುಡಿಯುವ ನೀರು ಸರಬರಾಜು ಮಾಡಲು ಸಿದ್ಧವಾಗಿರುವಾಗ ಬಿಜೆಪಿ, ಜೆಡಿಎಸ್ ನಾಯಕರು ಯರಗೋಳ್ ಡ್ಯಾಂ ನಮ್ಮ ಕಾಲದಲ್ಲಿ ನಿರ್ಮಾಣವಾದ ಯೋಜನೆ ಅದರ ಫಲ ನಮಗೆ ಸೇರಬೇಕಾಗಿದೆ ಎಂದು ಪ್ರಚಾರದಲ್ಲಿ ತೊಡಗಿದ್ದಾರೆಂದು ಖಂಡಿಸಿದರು.
2013ರಲ್ಲಿ ಅಧಿಕಕೃತ ಚಾಲನೆ: ೨೦೦೭ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯೋಜನೆಗೆ ಹಸಿರು ನಿಶಾನೆ ನೀಡಿದರು. ನಂತರ ಬಂದ ಸರ್ಕಾರಗಳು ಯೋಜನೆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಹಾಗೂ ಅನುದಾನವನ್ನೂ ಬಿಡಗಡೆ ಮಾಡದ ಕಾರಣ ಯೋಜನೆ ಸ್ಥಗಿತವಾಗಿತ್ತು, ೨೦೧೩ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಡ್ಯಾಂ ನಿರ್ಮಾಣಕ್ಕೆ ಬೇಕಾಗಿದ್ದ ಜಾಗವನ್ನು ರೈತರಿಂದ ಹಾಗೂ ಅರಣ್ಯ ಇಲಾಖೆಯಿಂದ ವಶಕ್ಕೆ ಪಡೆದು ಡ್ಯಾಂ ನಿರ್ಮಾಣಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು ಎಂದರು.
ಸಿಎಂ, ಸಚಿವರ್ಯಾರೆಂದು ಹೈಕಮಾಂಡ್ ನಿರ್ಧರಿಸುತ್ತದೆ: ಸಚಿವ ಮಧು ಬಂಗಾರಪ್ಪ
ಡ್ಯಾಂಗಾಗಿ ಹೋರಾಡಿದ ಫಲ: ಈಗ ಮತ್ತೆ ಸಿದ್ದರಾಮಯ್ಯ ಅವಧಿಯಲ್ಲಿ ಡ್ಯಾಂ ಲೋಕಾರ್ಪಣೆಯಾಗುತ್ತಿದೆ. ಈ ಹಿಂದೆ ನಗರಾಭಿವೃದ್ದಿ ಸಚಿವರಾಗಿದ್ದ ವಿನಯ್ ಕುಲಕರ್ಣಿ ಯೋಜನೆ ವ್ಯರ್ಥ ಇಲ್ಲಿಗೆ ನೀರಿನ ಮೂಲಗಳೇ ಇಲ್ಲವೆಂದು ವರದಿ ನೀಡಿದ್ದರು. ಆದರೆ ನಾನು ಪಟ್ಟು ಬಿಡದೆ ಸರ್ಕಾರದಲ್ಲಿ ಹೋರಾಡಿ ಮತ್ತೆ ಜೀವ ಕೊಡಿಸಿದೆ. ಅದರ ಫಲವೇ ಇಂದು ಯರಗೋಳ್ ಡ್ಯಾಂ ಉದ್ಘಾಟನೆಯಾಗುತ್ತಿದೆ. ಅಂದ ಮೇಲೆ ಇದು ಕಾಂಗ್ರೆಸ್ ಸರ್ಕಾರದ ಕನಸಿನ ಕೂಸಲ್ಲವೆ ಎಂದು ವಿಪಕ್ಷಗಳ ನಾಯಕರನ್ನು ಪ್ರಶ್ನಿಸಿದರು. ಸುದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ಗೋವಿಂದರಾಜು, ಮುಖಂಡರಾದ ಶಂಷುದ್ದಿನ್ ಬಾಬು, ಚಂದು, ನಂಜಪ್ಪ, ಎಸ್.ಎ.ಪಾರ್ಥಸಾರಥಿ, ಸುಹೇಲ್, ಎಚ್.ಕೆ. ನಾರಾಯಣಸ್ವಾಮಿ, ಗೋಪಾಲರೆಡ್ಡಿ, ಅ.ನಾ. ಹರೀಶ್ ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.