
ಮೈಸೂರು (ಫೆ.24): ಈ ಬಾರಿಯ ಚುನಾವಣೆಯಲ್ಲಿ ನಮ್ಮ ಶಾಸಕರು ಗೆದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎನ್ನುವಂತೆ ಕೆಲಸ ಮಾಡಬೇಕು. ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ರಚನೆಗೆ ಜಿಲ್ಲೆಯ ಕೊಡುಗೆ ಹೆಚ್ಚಿರಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು. ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಗುರುವಾರ ನಗರ ಮತ್ತು ಗ್ರಾಮಾಂತರ ಬಿಜೆಪಿ ಆಯೋಜಿಸಿದ್ದ ಮಹಾಶಕ್ತಿ ಕೇಂದ್ರದ ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಎದುರು ಪಕ್ಷದವರು, ಬಂಧುಗಳು ಸ್ಪರ್ಧಿಸುತ್ತಿದ್ದಾರೆ ಎಂದು ಸ್ಯಾಂಪಲ್ಗೆ ಒಂದೆರಡು ಸ್ಥಾನ ಗೆಲ್ಲಿಸದೆ ಯುದ್ಧದಂತೆ ಎಲ್ಲಾ ಕ್ಷೇತ್ರವನ್ನು ಗೆಲ್ಲಬೇಕು. ಪ್ರತಿಬಾರಿ ನಿಮ್ಮ ಆಶೀರ್ವಾದ ಇರುತ್ತದೆ. ಆದರೆ, ಈ ಬಾರಿ ನಿಮ್ಮ ಆಶೀರ್ವಾದ ಇರುತ್ತದೋ, ಇಲ್ಲವೋ ಗೊತ್ತಿಲ್ಲ ಎನ್ನುವುದಕ್ಕಿಂತ ನಮ್ಮ ಪಕ್ಷದ ಶಾಸಕ ಇರಬೇಕು. ಎದುರುಗಡೆ ಇರುವವರು ನಮ್ಮ ಪಾಲುದಾರರು, ನೆಂಟರು ಅಂದುಕೊಂಡಿರದೆ ಕೆಲಸ ಮಾಡಬೇಕು. ನಮ್ಮ ಪಾಲುದಾರ, ಬಂಧು ಎನ್ನುವವರು ರಾಮಮಂದಿರ ಕಟ್ಟಲು, ಪಿಎಫ್ಐ ಬ್ಯಾನ್ ಮಾಡಬೇಕು ಎಂದಾಗ ಬರುವುದಿಲ್ಲ. ಆದ್ದರಿಂದ ಪರಿಚಯಸ್ಥರು ಎಂಬುದನ್ನು ಬದಿಗೊತ್ತಿ ಸೈದ್ಧಾಂತಿಕ ಹೋರಾಟಕ್ಕೆ ಸಜ್ಜಾಗಬೇಕು ಎಂದು ಹೇಳಿದರು.
ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಈ ಬಾರಿ ಕಮಲ ಅರಳಿಸಬೇಕು: ಬಿ.ಎಲ್.ಸಂತೋಷ್
ಪಕ್ಷದ ಹಣೆ ಬರಹ ನಿರ್ಧರಿಸುವವರು ಬಾಲಂಗೋಚಿಗಳೇ ಹೊರತು, ಚೇಲಾಗಳಲ್ಲ. ಪ್ರಧಾನಿ ನರೇಂದ್ರಮೋದಿ ಅವರು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರಿಂದ ಹಿಂದಕ್ಕೆ ತಿರುಗಿ ನೋಡದೆ ಹೇಳಿದನ್ನು ಮಾಡಿ ತೋರಿಸುತ್ತಿದ್ದಾರೆ. ಅದೇ ರೀತಿ ನಮ್ಮಲ್ಲಿ 113ರ ಬದಲಿಗೆ 110ಸ್ಥಾನ ಗೆಲ್ಲಿಸಿದ್ದರಿಂದ ನಾವು ಹಿಂದಗಡೆ ನೋಡುವಂತಾಯಿತು. ಅದಕ್ಕಾಗಿ 110ಕ್ಕೆ ತಂದು ನಿಲ್ಲಿಸುವ ಕೆಲಸ ಮಾಡದೆ ಸರ್ಕಾರ ಬರಲು ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಮೈಸೂರು ಜಿಲ್ಲೆಯಿಂದ ಹೆಚ್ಚಿನ ಸ್ಥಾನ ಸಿಗದೆ ಮಂತ್ರಿ ಸ್ಥಾನವು ಸಿಗದೆ ಹೋಯಿತು. ಶಾಸಕ ಎಸ್.ಎ. ರಾಮದಾಸ್ಗೆ ಸಚಿವ ಸ್ಥಾನ ಸಿಗಲಿಲ್ಲ. ಈ ಬಗ್ಗೆ ರಾಮದಾಸ್ಗೆ ಎಲ್ಲರಗಿಂತ ನನ್ನ ಮೇಲೆ ಹೆಚ್ಚಿನ ಸಿಟ್ಟು ಇದೆ. ಆದ್ದರಿಂದ ಪ್ರಧಾನ ಅಪರಾಧಿಗಳಾಗದೆ ಪರಿಶ್ರಮದ ಕಾಣಿಕೆ ನೀಡಿ. ಇದನ್ನು ಅರ್ಥ ಮಾಡಿಕೊಳ್ಳುವವರು ಮಾಡಿಕೊಳ್ಳುತ್ತಾರೆ. ಮಾಡಿಕೊಳ್ಳದಿದ್ದಲ್ಲಿ ಹಾಳಾಗುತ್ತಾರೆ ಎಂದು ಅವರು ಸೂಚ್ಯವಾಗಿ ನುಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ ನೋಡಿರುವ ಜನರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾಯುತ್ತಿದ್ದಾರೆ. ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಆಧಾರ ರಹಿತವಾಗಿ ಲೋಕಾಯುಕ್ತಕ್ಕೆ ದೂರು ನೀಡಿದೆ. ಇದರಿಂದ ಕಾಂಗ್ರೆಸ್ ನಾಯಕರ ಬಗ್ಗೆ ಜನರಿಗೂ ಅರ್ಥವಾಗಿದೆ ಎಂದರು. ಮೋದಿ ಕರ್ನಾಟಕಕ್ಕೆ ಹೆಚ್ಚಾಗಿ ಬರುವುದನ್ನೇ ಕಾಂಗ್ರೆಸ್ನವರು ಪ್ರಶ್ನಿಸುತ್ತಿದ್ದಾರೆ. ಮೋದಿ ಈ ದೇಶದ ಪ್ರಧಾನಿ. ಮೇಲಾಗಿ ನಮ್ಮ ನಾಯಕರು. ಅಭಿವೃದ್ಧಿಗಾಗಿ ದೇಶ, ವಿದೇಶಕ್ಕೆ ತೆರಳುತ್ತಾರೆ. ಆದರೆ ನಿಮ್ಮ ನಾಯಕರು ಇಟಲಿ, ರೋಮ್ಗೆ ತೆರಳುತ್ತಿದ್ದಾರೆ ಅಷ್ಟೆಎಂದು ಟೀಕಿಸಿದರು.
ನಮ್ಮ ಸರ್ಕಾರವು ಕೃಷ್ಣ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿದೆ. ತುಮಕೂರು- ದಾವಣಗೆರೆ ರೈಲ್ವೆ ಯೋಜನೆ ಸೇರಿ ಹಲವು ಯೋಜನೆಗೆ ಅನುದಾನ ನೀಡಿದೆ. ಆದರೆ ಕಾಂಗ್ರೆಸ್ ಕಾಲದಲ್ಲಿ ಕೇವಲ ಕಲ್ಲು ನಡೆಲಾಯಿತಷ್ಟೆ. ಇದನ್ನು ಪೂರ್ಣಗೊಳಿಸಲು ಬಿಜೆಪಿ ಸರ್ಕಾರ ಬರಬೇಕಾಯಿತು. ಹಗಲು-ರಾತ್ರಿ ಟಿಪ್ಪುಸುಲ್ತಾನ್ ಭಜನೆ ಮಾಡಿದರೆ ಹೊರತು ನಾಲ್ವಡಿ ಕೃಷ್ಣರಾಜ ಒಡೆಯರ್ ಜಪ ಮಾಡಲಿಲ್ಲ. ಮದಕರಿನಾಯಕ, ಒನಕೆ ಒಬವ್ವ ಹೆಸರನ್ನು ಹೇಳಲಿಲ್ಲ. ನಾಡಪ್ರಭು ಕೆಂಪೇಗೌಡರಿಗೆ ಗೌರವ ಕೊಡಲಿಕ್ಕೆ ಲಿಂಗಾಯತರ ಪಾರ್ಟಿನೇ ಬರಬೇಕಾಯಿತು ಎಂದು ಸಂತೋಷ್ ಮೊದಲಿಸಿದರು.
ಸಭೆಯಲ್ಲಿ ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಮೇಯರ್ ಶಿವಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸದಸ್ಯ ತೋಂಟದಾರ್ಯ, ಉಪ ಮೇಯರ್ ಡಾ.ಜಿ. ರೂಪಾ, ಮೈಸೂರು ವಿಭಾಗೀಯ ಪ್ರಭಾರಿ ಮೈ.ವಿ. ರವಿಶಂಕರ್, ಪ್ರಭಾರಿಗಳಾದ ಅಶ್ವಥ್ ನಾರಾಯಣ, ಹೀರೇಂದ್ರ ಶಾ, ಮೈಸೂರು ಉಸ್ತುವಾರಿ ತುಳಸಿ ಮುನಿರಾಜುಗೌಡ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವನೂರು ಪ್ರತಾಪ್, ಎಚ್.ಜಿ. ಗಿರಿಧರ್, ವಾಣೀಶ್ ಕುಮಾರ್, ವಿ. ಸೋಮಸುಂದರ್, ಬಿ.ಎಸ್. ಯೋಗಾನಂದಕುಮಾರ್ ಮೊದಲಾದವರು ಇದ್ದರು.
ರಾಜ್ಯದಲ್ಲಿಯೇ ಬಬಲೇಶ್ವರ ಮತಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವೆ: ಎಂ.ಬಿ.ಪಾಟೀಲ
ಜೆಡಿಎಸ್ ಕುಟುಂಬಕ್ಕೆ ಸೀಮಿತ: ಜೆಡಿಎಸ್ ಯಾವುದೇ ಚುನಾವಣಾ ಸಮಿತಿ ಇಲ್ಲದೆ ಟಿಕೆಟ್ಗೆ ಒಬ್ಬರೇ ಸಹಿ ಹಾಕುತ್ತಾರೆ. ಯಾವಾಗ ಬೇಕಾದರೂ ಅಭ್ಯರ್ಥಿ ಘೋಷಿಸುತ್ತಾರೆ. ಒಂದು ಕುಟುಂಬಕ್ಕೆ ಸೀಮಿತವಾದ ಪಕ್ಷದಲ್ಲಿ ಯಾರಾದರೂ, ಯಾರಿಗಾದರೂ ಟಿಕೆಟ್ ಕೊಡಬಹುದು. ಇಡೀ ರಾಜ್ಯವನ್ನು ಕುಟುಂಬಕ್ಕೆ ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ಅವರು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.