
ಶಿವಮೊಗ್ಗ (ನ.29): ರಾಜ್ಯದ ಜನ ವಿಜಯೇಂದ್ರನಲ್ಲಿ ಯಡಿಯೂರಪ್ಪ ಅವರನ್ನು ನೋಡುತ್ತಿದ್ದಾರೆ. ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ. ಹಿರಿಯರು ನನಗೆ ಬಹುದೊಡ್ಡ ಜವಾಬ್ದಾರಿ ನೀಡಿದ್ದಾರೆ. ಮುಂದೆ ರಾಜ್ಯದ ಯಾವೊಬ್ಬ ಕಾರ್ಯಕರ್ತ ತಲೆತಗ್ಗಿಸದ ರೀತಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತೇನೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದ ಪ್ರೇರಣಾ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ರಾಜ್ಯದ ಎಲ್ಲ ಹಿರಿಯ ಮಾರ್ಗದರ್ಶನದಲ್ಲಿ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತಗೆದುಕೊಂಡು ಮುಂದೆ ಬರುವ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೇಪ್ ಆಗಿ ಲ್ಯಾಂಡ್ ಮಾಡುವ ಜವಾಬ್ದಾರಿ ನನ್ನ ಮೇಲೆ ಇದೆ. ಅದನ್ನು ಜವಾಬ್ದಾರಿಯುತವಾಗಿ ನಾನು ಮಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರವನ್ನು ಗೆಲ್ಲುವ ಮೂಲಕ ಮೋದಿ ಅವರ ಕೈ ಬಲಪಡಿಸುತ್ತೇನೆ ಎಂದು ಭರವಸೆ ನೀಡಿದರು.
ವಿಜಯೆಂದ್ರ ದೇಶದ ಹಿಂದೂ ನಾಯಕ ಆಗ್ತಾರೆ: ಈಶ್ವರಪ್ಪ ಭವಿಷ್ಯ
ಕಾಂಗ್ರೆಸ್ ಸರ್ಕಾರ 80 ಪರ್ಸೆಂಟ್ ಸರ್ಕಾರ: ರಾಜ್ಯದ ಜನರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದಾರೆ. ಆದರೆ, ಕೇವಲ ಆರು ತಿಂಗಳಲ್ಲಿ ಜನಬೆಂಬಲ ಕಳೆದುಕೊಂಡ ಸರ್ಕಾರ ಈ ದೇಶದಲ್ಲಿ ಮತ್ತೊಂದಿಲ್ಲ. ಇಂತಹ ದರಿದ್ರ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಕ್ಕೆ ಜನರು ಶಾಪ ಹಾಕುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ 40 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡುತ್ತಿದ್ದವರೇ ಈಗ ಅಧಿಕಾರದಲ್ಲಿದ್ದಾರೆ. ಅವರದು 80 ಪರ್ಸೆಂಟ್ ಸರ್ಕಾರವಾಗಿದೆ. ಇದಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡಲು ತೀರ್ಮಾನಿಸಿದ್ದಾರೆ ಎಂದು ಹರಿಹಾಯ್ದರು.
ಕಾಂತರಾಜ್ ವರದಿ ಸ್ವೀಕಾರ ಮಾಡಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಡಿಸಿಎಂ ಶಿವಕುಮಾರ್ ನೇತೃತ್ವದಲ್ಲಿ ಈ ವರದಿ ಸ್ವೀಕಾರ ಮಾಡಬಾರದೆಂದು ಸಹಿ ಸಂಗ್ರಹ ಮಾಡುತ್ತಿದೆ. ಕಾಂತರಾಜ್ ವರದಿ ಎಸಿ ರೂಂನಲ್ಲಿ ಕೂತು ಸಿದ್ಧಪಡಿಸಿಲ್ಲ. ಬದಲಾಗಿ ಮನೆ, ಮನೆಗೆ ತೆರಳಿ ವರದಿ ಸಿದ್ಧಪಡಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಆಗಿ ಯಡಿಯೂರಪ್ಪ ಅವರು ಎಲ್ಲ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದಾರೆ. ಅಭಿವೃದ್ಧಿಯಲ್ಲಿ ಸಂಸದ ರಾಘವೇಂದ್ರ ಯಡಿಯೂರಪ್ಪ ಅವರಿಗಿಂತಲೂ ಹತ್ತು ಹೆಜ್ಜೆ ಮುಂದೆ ಹೋಗಿದ್ದಾರೆ ಎಂದರು.
ನಿರ್ವಾತ ವಾತಾವರಣ ಅನುಭವಿಸಿದೆವು: ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ವಿರೋಧ ಪಕ್ಷ ನಾಯಕ ಇಲ್ಲದೇ ನಾವು 6 ತಿಂಗಳು ನಿರ್ವಾತ ವಾತಾವರಣವನ್ನು ಅನುಭವಿಸಿದೆವು. ವಿರೋಧ ಪಕ್ಷಗಳು ನಮ್ಮ ಮುಖದ ಮೇಲೆ ತಿವಿಯುತ್ತಿದ್ದರು. ನಿಮಗೆ ರಾಜ್ಯಾಧ್ಯಕ್ಷರಿಲ್ಲ, ವಿರೋಧ ಪಕ್ಷದ ನಾಯಕ ಇಲ್ಲ. ನಿವೇನೂ ಹೋರಾಟ ಮಾಡುತ್ತೀರಿ ಎಂದು ಜನ ಪ್ರಶ್ನೆ ಮಾಡುವಂತಾಗಿದ್ದು. ಆದರೂ ನಾವು 65 ಶಾಸಕರು ಸದನದಲ್ಲಿ ವಿರೋಧ ಪಕ್ಷದ ನಾಯಕರಂತೆ ಹೋರಾಟ ಮಾಡಿದ್ದೇವೆ ಎಂದರು.
100 ಪಸೆಂಟಿನ ಕಾಂಗ್ರೆಸ್ ಸರ್ಕಾರ: ಇವತ್ತು ರಾಜ್ಯದಲ್ಲಿ ಕೆಟ್ಟ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದು ಹುಚ್ಚು ಕುದುರೆಯಂತೆ ಓಡಾಡುತ್ತಿದೆ. ಆಡಳಿತ ಪಕ್ಷದ ಶಾಸಕರೇ ಅವರ ಸರ್ಕಾರದ ದೌರ್ಬಲ್ಯವನ್ನು ಹೇಳುತ್ತಿದ್ದಾರೆ. ಅಧಿಕಾರಕ್ಕೆ ಬರಲ್ಲ ಎಂದುಕೊಂಡು ಗ್ಯಾರಂಟಿ ಘೋಷಣೆ ಮಾಡಿದರು. ಆದರೆ, ಈಗ ಗ್ಯಾರಂಟಿಗೆ ಕೊಡಲು ಅವರ ಬಳಿ ಹಣ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಚತೆ ಕೆಲಸ ಮಾಡುವವರಿಗೂ ಕೊಡಲು ಸರ್ಕಾರದ ಬಳಿ ಹಣ ಇಲ್ಲ. ಸರ್ಕಾರ ಬಂದು 6 ತಿಂಗಳಾದರೂ 6 ಪೈಸೆ ಅಭಿವೃದ್ಧಿ ಹಣ ಬಂದಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸ್ನವರು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆರೋಪಿಸಿದರು.
ಪ್ರತಾಪ ಸಿಂಹ ಅವರೇ ಕೇಂದ್ರದ ಯೋಜನೆಗಳ ಪಟ್ಟಿಯನ್ನಾದರೂ ಬಿಡುಗಡೆಗೊಳಿಸಿ: ಎಂ.ಲಕ್ಷ್ಮಣ್
ಈಗ ಅವರದು 100 ಪರ್ಸೆಂಟ್ ಸರ್ಕಾರವಾಗಿದೆ. ಹಣ ಕೊಡದೇ ಇದ್ದರೆ ವರ್ಗಾವಣೆ ಆಗುವುದಿಲ್ಲ. ಇಂಥ ಸ್ಥಿತಿಗೆ ಕಾಂಗ್ರೆಸ್ ಬಂದು ನಿಂತಿದೆ ಎಂದು ಗಂಭೀರ ಆರೋಪ ಮಾಡಿದರು. ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಪಸ್ಪ, ವಿಧಾನ ಪರಿಷತ್ತು ಸದಸ್ಯರಾದ ಎಸ್.ರುದ್ರೇಗೌಡ, ಡಿಎಎಸ್ ಅರುಣ್, ಭಾರತಿ ಶೆಟ್ಟಿ, ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಬಿ.ಸ್ವಾಮಿರಾವ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಂ.ಬಿ. ಭಾನುಪ್ರಕಾಶ್, ಆರ್.ಕೆ. ಸಿದ್ರಾಮಣ್ಣ ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.