
ಮೈಸೂರು (ನ.29): ಸಂಸದ ಪ್ರತಾಪ ಸಿಂಹ ಅವರು ಕೇಂದ್ರ ಸರ್ಕಾರದಿಂದ ತಾವು ಜಾರಿಗೆ ತಂದ ಯೋಜನೆಗಳ ಪಟ್ಟಿಯನ್ನಾದರೂ ಬಿಡುಗಡೆಗೊಳಿಸಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿಗೆ ಕೇಂದ್ರ ಸರ್ಕಾರ ನೀಡಿದ ಕೊಡುಗೆ ಮತ್ತು ನೀಡಿದ ಯೋಜನೆ ಕುರಿತು ಚರ್ಚಿಸಲು ಅನೇಕ ಬಾರಿ ಆಹ್ವಾನ ನೀಡಿದರೂ ಅವಕಾಶ ಮಾಡಿಕೊಡಲಿಲ್ಲ. ಕನಿಷ್ಠ ಪಕ್ಷ ತಂದ ಯೋಜನೆಗಳ ಪಟ್ಟಿಯನ್ನಾದರೂ ಬಿಡುಗಡೆಗೊಳಿಸಿ ಎಂದು ಒತ್ತಾಯಿಸಿದರು. ಅಭಿವೃದ್ಧಿ ಕಾಮಗಾರಿ ಕುರಿತು ಚರ್ಚಿಸಲು ಮುಕ್ತ ಚರ್ಚೆಗೆ ಬರುವಂತೆ ಆಗ್ರಹಿಸಿದರೂ ಅವಕಾಶವನ್ನೇ ನೀಡಲಿಲ್ಲ.
ರಾಜ್ಯ ಸರ್ಕಾರದ ಯೋಜನೆ ಕುರಿತು ಸಂಸದರು ಸಭೆ ನಡೆಸುವುದು ಹೇಗೆ? ಉಂಡುವಾಡಿ ಕುಡಿಯುವ ನೀರು ಯೋಜನೆ ಕಾಂಗ್ರೆಸ್ ಸರ್ಕಾರದ್ದು. ಹೊರ ವರ್ತುಲ ರಸ್ತೆ ರಾಜ್ಯ ಸರ್ಕಾರದ್ದು. ಆದರೂ ಸಂಸದರು ಸಭೆ ನಡೆಸುತ್ತಾರೆ ಎಂದು ಕಿಡಿಕಾರಿದರು. ಒಂಬತ್ತುವರೆ ವರ್ಷದಿಂದ ಸಂಸದರಾಗಿ ಕೆಲಸ ಮಾಡಿದ್ದರೂ ಏರ್ಪೋರ್ಟ್ ನ ರನ್ ವೇ ವಿಸ್ತರಣೆ ಏಕೆ ಆಗಲಿಲ್ಲ? ವಿಮಾನಗಳ ಹಾರಾಟ ಸಂಖ್ಯೆ ಯಾಕೇ ಇಳಿಯಿತು? ಮೈಸೂರು- ಕುಶಾಲನಗರ ಹೆದ್ದಾರಿ ಭೂ ಸ್ವಾಧೀನ ಯಾಕೇ ಮಾಡಲಿಲ್ಲ? ರೈಲ್ವೆ ಟರ್ಮಿನಲ್, ಸೆಮಿ ಕಂಟಕ್ಟರ್ ಯಾಕೇ ಗುಜರಾತಿಗೆ ಹೋಯಿತು ಎಂದು ಅವರು ಪ್ರಶ್ನಿಸಿದರು.
ಎಚ್.ಡಿ.ಕುಮಾರಸ್ವಾಮಿಗೆ ಅಮಿತ್ ಶಾ ಸುಪಾರಿ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ
ಸಂಸದ ಪ್ರತಾಪ ಸಿಂಹ ಅವರನ್ನು ಬಿಜೆಪಿಯವರೇ ಸೋಲಿಸುತ್ತಾರೆ. ಅವರಿಗೆ ಸೋಲಿನ ಭೀತಿ ಶುರುವಾಗಿದೆ. 2 ಲಕ್ಷ ಮತದಿಂದ ಗೆಲುವು ಸಾಧಿಸುವುದಿಲ್ಲ. ಬದಲಿಗೆ ಸೋಲುವುದು ನಿಶ್ಚಿತ. ಆದ್ದರಿಂದ ಸಂಖ್ಯಾಶಾಸ್ತ್ರಜ್ಞರ ಸಲಹೆಯಂತೆ ಹೆಸರು ಬದಲಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. 2018- 2023ರವರೆಗಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ಅವಧಿಯಲ್ಲಿನ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಅಶೋಕ್ ಅವರು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡುವ ಮುನ್ನ ತಮ ತಜ್ಞರೊಂದಿಗೆ ಐದಾರು ಬಾರಿಯಾದರೂ ಚರ್ಚೆ ಮಾಡುವುದು ಒಳ್ಳೇಯದು. ಸ್ವತಂತ್ರ ಬಂದ ಬಳಿಕ ಅತಿ ಹೆಚ್ಚು ಸಾಲ ಮಾಡಿರುವುದು ಬಿಜೆಪಿ ಸರ್ಕಾರ ಎಂದು ಅವರು ವಿವರಿಸಿದರು.
ಲೋಕೋಪಯೋಗಿ ಇಲಾಖೆಗೆ ಮೀಸಲಿಟ್ಟ ಹಣ 32 ಸಾವಿರ ಕೋಟಿ ರೂ. 95 ಸಾವಿರ ಕೋಟಿಗೆ ಟೆಂಟರ್ ಕರೆದರು. ಜಲಸಂಪನೂಲ ಇಲಾಖೆಯಲ್ಲಿ ಲಕ್ಷ ಕೋಟಿಗೆ ಟೆಂಡರ್ ಮಾರಿಕೊಂಡರು. ಚುನಾವಣೆ ವೇಳೆ ಕರ್ನಾಟಕಕ್ಕೆ ಬಂದ ಮೋದಿ ಅವರಿಗೆ 46 ಕೋಟಿ ರೂ.ಗಳ ಜನರ ತೆರಿಗೆ ಹಣವನ್ನು ಖರ್ಚು ಮಾಡಲಾಗಿದೆ. ಇದಕ್ಕೆ ಅಶೋಕ್ ಉತ್ತರ ನೀಡಬೇಕು ಅವರು ಆಗ್ರಹಿಸಿದರು. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬರ ಪ್ರವಾಸ ಮಾಡಿ 20 ದಿನಗಳಾದರೂ ವರದಿ ಯಾರಿಗೆ ಸಲ್ಲಿಸಿದರು? 25 ಸಂಸದರಿಗೆ ಪರಿಹಾರ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲು ಧೈರ್ಯ ಇಲ್ಲ ಎಂದು ಅವರು ಟೀಕಿಸಿದರು.
ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಜಂಟಿ ಹೋರಾಟ: ಎಚ್.ಡಿ.ಕುಮಾರಸ್ವಾಮಿ
ಡಿಕೆಶಿ ಪ್ರಕರಣ ಹಿಂಪಡೆದಿರುವುದರಲ್ಲಿ ತಪ್ಪೇನಿದೆ? ಡಿ.ಕೆ. ಶಿವಕುಮಾರ್ ವಿರುದ್ಧ ದ್ವೇಷದಿಂದ ಸಿಬಿಐಗೆ ಪ್ರಕರಣ ದಾಖಲಿಸಲಾಗಿತ್ತು. ಕಾನೂನು ಬದ್ಧವಾಗಿಲ್ಲದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಪಸ್ ಪಡೆದಿದ್ದಾರೆ. ಈ ವಿಚಾರವಾಗಿ ವಿನಾಕಾರಣ ವಿರೋಧ ಮಾಡುತ್ತಿದ್ದಾರೆ. ಆದರೆ, ಜನರು ಗ್ಯಾರಂಟಿ ಯೋಜನೆಯಿಂದ ಸಂತೃಪ್ತಿ ಇದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಬಸವಣ್ಣ, ಕೆ. ಮಹೇಶ್, ನಾಗೇಶ್ ಮುಂತಾದವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.