
ಕೆರೂರ (ಏ.08): ಬೀಳಗಿ ಮತಕ್ಷೇತ್ರವನ್ನು ದೇಶದಲ್ಲಿಯೇ ಮಾದರಿ ಮಾಡಬೇಕೆಂಬ ನನ್ನ ಕನಸು, ನನ್ನನ್ನು ಮುಖ್ಯಮಂತ್ರಿ ಮಾಡಬೇಕೆಂಬ ನಿಮ್ಮ ಕನಸು ಸಾಕಾರಗೊಳ್ಳಲು ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದ ಗೆಲವು ನನ್ನದಾಗಬೇಕೆಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು. ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕಿನ ನರೇನೂರ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ಉಚಿತ ಶಿಕ್ಷಣ, ನೀರಾವರಿಯಿಂದ ಹಿಡಿದು ವಿಮಾನ ನಿಲ್ದಾಣ ಮಾಡುವವರೆಗಿನ ಎಲ್ಲ ಕಾಮಗಾರಿಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಸಕ್ಕರೆ ಫ್ಯಾಕ್ಟರಿ ಮೂಲಕ 75 ಸಾವಿರ ಜನರಿಗೆ ಉದ್ಯೋಗ ಒದಗಿಸಿದ್ದೇನೆ.
ಮಹಿಳೆಯರ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದಿದ್ದೇನೆ. ಕ್ಷೇತ್ರದಲ್ಲಿ ಶಾಸಕನಾಗಿ 15 ವರ್ಷ ಆಡಳಿತ ನಡೆಸಿದ್ದೇನೆ. ನನ್ನ ಪ್ರತಿಸ್ಪರ್ಧಿ ಮಾಜಿ ಶಾಸಕರು 15 ವರ್ಷ ಆಡಳಿತ ನಡೆಸಿದ್ದು, ಮತದಾರರಾದ ತಾವು ನಮ್ಮಿಬ್ಬರ ಕಾರ್ಯವೈಖರಿಯನ್ನು ಪರಿಶೀಲಿಸಿದಾಗ ತಿಳಿಯುತ್ತದೆ. ನಾನು ಮಾಡಿದ ಬಹುಪಾಲು ಅಭಿವೃದ್ಧಿ ಕಾರ್ಯ ತೂಗಿ ನೋಡಿ ಮತ ಹಾಕಬೇಕೆಂದು ಮನವಿ ಮಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಹೂವಪ್ಪ ರಾಠೋಡ ಮಾತನಾಡಿ, ನಮ್ಮ ರೈತರು ಸ್ವಾಭಿಮಾನದಿಂದ ಬದುಕಬೇಕೆಂದು 1.25 ಲಕ್ಷ ಎಕರೆ ಜಮೀನಿಗೆ ನೀರಾವರಿ ಒದಗಿಸಿ, ಮನೆ ಮನೆಗೆ ಕುಡಿಯುವ ನೀರು ಎಸ್ಸಿ,ಎಸ್ಟಿ ಜನಾಂಗಕ್ಕೆ 1 ಸಾವಿರ ಕೊಳವೆಬಾವಿ ನಿರ್ಮಿಸಿದ ಆಧುನಿಕ ಭಗೀರಥ ಮುರುಗೇಶಣ್ಣ ಎಂದರೆ ತಪ್ಪಾಗಲಿಕ್ಕಿಲ್ಲ.
ಗೆಲ್ಲುವ ಮಾನದಂಡ ಆಧರಿಸಿ ಅಭ್ಯರ್ಥಿಗಳ ಆಯ್ಕೆ: ಬಿ.ಎಸ್.ಯಡಿಯೂರಪ್ಪ
ಅಷ್ಟೇ ಅಲ್ಲ ಕ್ಷೇತ್ರದ 400 ಗುಡಿಗಳ ಅಭಿವೃದ್ಧಿಗೆ ಅನುದಾನ ಒದಗಿಸಿದ್ದು ಮುಂದಿನ ದಿನಗಳಲ್ಲಿ 500 ಗುಡಿಗಳ ನಿರ್ಮಾಣದ ಕನಸು ಹೊಂದಿದ ಧೀಮಂತ ನಾಯಕ ಮುರುಗೇಶ ನಿರಾಣಿ. ನೀವು ಒಂದು ತಿಂಗಳು ದುಡಿದರೆ ನಾವು 5 ವರ್ಷ ನಿಮ್ಮ ಸೇವೆ ಮಾಡುತ್ತೇವೆಂದರು. ವೇದಿಕೆಯಲ್ಲಿ ಹನಮಂತಗೌಡ ಪಾಟೀಲ(ಹೊಸಕೋಟಿ)ಮಲ್ಲಿಕಾರ್ಜುನ ಅಂಗಡಿ, ಸಂಗಮೇಶ ನಿರಾಣಿ, ದುಶಂಗಪ್ಪ ಮುರನಾಳ, ನಂದುಲಾಲ ರಾಠೋಡ, ಲಕ್ಷ್ಮಣ ನಿರಾಣಿ ಸೇರಿದಂತೆ ಹಲವಾರು ಗಣ್ಯರಿದ್ದರು. ರಾಮಚಂದ್ರ ಮೈಲಾರ ಸ್ವಾಗತಿಸಿದರು. ನಿಂಗಪ್ಪ ಬೆಳಗಂಟಿ ನಿರೂಪಿಸಿದರು.
ಅತಂತ್ರ ವಿಧಾನಸಭೆ ಸೃಷ್ಟಿಯಾಗಲ್ಲ: ಕಳೆದ 20 ವರ್ಷಗಳಿಂದ ನನ್ನನ್ನು ಎತ್ತರದ ಸ್ಥಾನಕ್ಕೆ ಏರಿಸಿದ ಬೀಳಗಿ ಜನತೆಯ ಭಾವನೆಗಳಿಗೆ ಸ್ಪಂದಿಸಿ ಜನಪರ ಕೆಲಸ ಮಾಡಿದ ಸಂತೃಪ್ತಿ ನನ್ನಲ್ಲಿದೆ. ನನ್ನ ಎಲ್ಲ ಕನಸುಗಳು ಸಾಕಾರವಾಗಿ ಬೀಳಗಿ ಕ್ಷೇತ್ರ ರಾಜ್ಯದಲ್ಲಿಯೇ ಅಭಿವೃದ್ಧಿಯಲ್ಲಿ ನಂ.1 ಸ್ಥಾನಕ್ಕೇರುವ ಕಾಲ ಸನ್ನಿಹಿತವಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು. ಹನುಮ ಜಯಂತಿಯ ನಿಮಿತ್ತ ತುಳಸಿಗೇರಿ ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದ ನಂತರ ಅಗಸನಕೊಪ್ಪ ಗ್ರಾಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ರೈತರಿಗೆ ನೀರು, ವಿದ್ಯುತ್ ಹಾಗೂ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಆದ್ಯತೆಯ ಮೇರೆಗೆ ನೀಡಿದ್ದೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ನಿಷ್ಪಕ್ಷಪಾತವಾಗಿ ದೊರೆಯುವಂತೆ ನೋಡಿಕೊಂಡಿದ್ದೇನೆ. ಜಾತಿ, ಮತಗಳ ಬೇಧ ಮರೆತು ಎಲ್ಲ ಸಮಾಜದವರು ನನ್ನನ್ನು ಪ್ರೀತಿಸುವ ನಿಮ್ಮ ಅಭಿಮಾನಕ್ಕೆ ನಾನು ಚಿರಋುಣಿ. ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ತಾವೆಲ್ಲ ಆಶೀರ್ವದಿಸುವ ಮೂಲಕ ಇನ್ನಷ್ಟು ಜನಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಕಳೆದ 75 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರದಿಂದ ವಂಚಿತವಾದ ಅಭಿವೃದ್ಧಿ ಡಬಲ್ ಎಂಜಿನ್ ಸರ್ಕಾರದಿಂದ ಆಗಿದೆ.
ಮೌಲ್ಯಾಧಾರಿತ ಶಿಕ್ಷಣವನ್ನು ತಂತ್ರಜ್ಞಾನದಿಂದ ಬೋಧಿಸಲು ಆಗದು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಬಲಿಷ್ಠವಾಗುತ್ತಿದೆ. ಜನತೆ ಬಿಜೆಪಿ ಜೊತೆಗಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದೆ. ಅತಂತ್ರ ವಿಧಾನಸಭೆ ಸೃಷ್ಟಿಯಾಗಲ್ಲ. ಪೂರ್ಣಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಜನಸೇವೆ ಮಾಡುತ್ತೇವೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.