
ಕೊಟ್ಟೂರು (ಏ.18): ಕ್ಷೇತ್ರದೆಲ್ಲೆಡೆ ಮೋದಿ, ಬಿಜೆಪಿ ಪರ ವ್ಯಾಪಕ ಅಲೆ ಇದೆ ಎಂದು ಲೋಕಸಭೆ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹೇಳಿದರು. ರಾತ್ರಿ ಪಟ್ಟಣದಲ್ಲಿನ ಜೆಡಿಎಸ್ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಮಾತನಾಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರಲ್ಲದೆ, ಈ ಸಲದ ಚುನಾವಣೆಯಲ್ಲಿ ಜಿಲ್ಲೆಯಿಂದ ಹೊಡೆದೋಡಿಸುವಂತೆ ಜನತೆಗೆ ಕರೆ ನೀಡಿರುವುದು ಅವರಲ್ಲಿ ಕಂಡುಬಂದಿರುವ ಹತಾಶ ಭಾವನೆಗೆ ಸ್ಪಷ್ಟ ಕಾರಣ. ಚುನಾವಣಾ ಫಲಿತಾಂಶ ಯಾರ ಪರ ಇದೆ ಎಂದು ನಂತರ ಗೊತ್ತಾಗಲಿದೆ. ಆಗ ಯಾರು ಯಾರನ್ನು ಜಿಲ್ಲೆಯಿಂದ ಓಡಿಸುತ್ತಾರೆ ಎಂಬುದು ಸ್ಪಷ್ಟವಾಗುತ್ತೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಬ್ರೇನ್ ಡೆಡ್ ಪಾರ್ಟಿ: ಕಾಂಗ್ರೆಸ್ ಈಗಾಗಲೇ ದೇಶದಾದ್ಯಂತ ಬ್ರೇನ್ ಡೆಡ್ ಆದ ಪಾರ್ಟಿ. ಅದನ್ನು ಎಷ್ಟೇ ಮೇಲೆತ್ತಲು ಪ್ರಯತ್ನಪಟ್ಟರೂ ಆಗುವುದಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕಾ ಗಾಂಧಿ, ಸೋನಿಯಾಗಾಂಧಿ ಸೇರಿದಂತೆ ಪ್ರಮುಖ ನಾಯಕರೇ ಸ್ಪರ್ಧೆ ಮಾಡುತ್ತಿಲ್ಲ. ಅವರಿಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎನ್ನುವಂತೆ ಆಗಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವೇ ಸ್ವಚ್ಛವಾಗುತ್ತಿದ್ದು, ಬಿಜೆಪಿಯನ್ನೇನು ಸ್ವಚ್ಛ ಮಾಡುತ್ತಾರೆ ಎಂದು ಕಿಡಿಕಾರಿದರು.
ಗಾಲಿ ಜನಾರ್ದನರೆಡ್ಡಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಪಕ್ಷ ನಮ್ಮಂತವರನ್ನು ಕಳೆದುಕೊಳ್ಳಬಾರದು ಎಂದೇ ಪಕ್ಷ ನಮಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿದೆ. ಅವರು ಜೊತೆಯಲ್ಲಿ ಇರುವುದು ನಮಗೆ ಹೆಚ್ಚಿನ ಬಲಬಂದಿದೆ ಎಂದರು. ಸಂಸದ ಸಂಗಣ್ಣ ಕರಡಿ ದೊಡ್ಡ ಲೀಡರ್, ಅವರು ಯಾಕೆ ಬಿಜೆಪಿ ತೊರೆದಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಬೇರೆ ಸಮಾಜದ ನಾಯಕರ ಏಳಿಗೆ ಸಹಿಸಲ್ಲ: ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ಶ್ರೀರಾಮುಲು ಆಸ್ತಿ 85 ಕೋಟಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ಬಿ.ಶ್ರೀರಾಮುಲು ಒಟ್ಟು 85.40 ಕೋಟಿ ಆಸ್ತಿಗೆ ಒಡೆಯರಾಗಿದ್ದಾರೆ. ಈ ಪೈಕಿ, 75 ಕೋಟಿ ಸ್ಥಿರಾಸ್ತಿ ಮತ್ತು 10.40 ಕೋಟಿ ಚರಾಸ್ತಿ. ಜೊತೆಗೆ, 6.69 ಕೋಟಿ ಸಾಲ ಮಾಡಿಕೊಂಡಿದ್ದಾರೆ. ₹1.20 ಕೋಟಿ ಮೌಲ್ಯದ ಬಿಎಂಡಬ್ಲ್ಯು, ₹38.81 ಲಕ್ಷ ಮೌಲ್ಯದ ಬಸ್., ₹30 ಲಕ್ಷ ಮೌಲ್ಯದ ಇನೋವಾ ಕಾರನ್ನು ಹೊಂದಿದ್ದಾರೆ. ಇನ್ನು, ಇವರ ವಿರುದ್ಧ ಭೂ ಕಬಳಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ಕೋರ್ಟ್ನಲ್ಲಿ, ಅಕ್ರಮ ಆಸ್ತಿ ಪಡೆದ ಬಗ್ಗೆ ಬಳ್ಳಾರಿ ಲೋಕಾಯುಕ್ತದಲ್ಲಿ, ತೆರಿಗೆ ವಂಚನೆ ಕುರಿತು ಬೆಂಗಳೂರಿನಲ್ಲಿ, ಎನ್ಎಂಡಿ ಆಕ್ಟ್-2005 ಅಡಿ ಚೆಳ್ಳಿಕೆರೆಯಲ್ಲಿ ಸೇರಿ ಒಟ್ಟು ಐದು ಪ್ರಕರಣಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.