
ಬೆಂಗಳೂರು, (ಫೆ.13) : ಪ್ರಸಕ್ತ ರಾಜ್ಯ ರಾಜಕಾರಣ ಹದಗೆಟ್ಟು ಹೋಗಿದೆ. ಆಪರೇಷನ್ ಕಮಲ ಆಡಿಯೋ ಕ್ಲಿಪ್ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ಇಂದು (ಬುಧವಾರ) ಸಹ ಕಲಾಪ ಆಡಿಯೋ ಕೋಲಾಹಲಕ್ಕೆ ಬಲಿಯಾಯ್ತು. ಆಡಿಯೋ ತನಿಖೆಯನ್ನು ಎಸ್ಐಟಿಗೆ ವಹಿಸಿಲು ಸರ್ಕಾರ ನಿರ್ಧರಿಸಿದರೆ, ಮತ್ತೊಂದೆಡೆ ಬಿಜೆಪಿ ಎಸ್ಐಟಿ ತನಿಖೆ ಬೇಡ ಅಂತಿದೆ.
‘ಆಡಿಯೋ ಬಾಂಬ್’ ಪ್ರಕರಣ: ಸದನ ನಾಯಕರ ಸಂಧಾನ ಸಭೆ ವಿಫಲ!
ಎಸ್ಐಟಿ ತನಿಖೆ ವಿರೋಧಿಸಿ ಬಿಜೆಪಿ ನಾಯಕರು ಸದನದ ಬಾವಿಗೆ ಇಳಿದು ಇಂದು ವಿಧಾನಸಭೆಯಲ್ಲಿ ಪ್ರತಿಭಟನೆ ಮಾಡಿದರು. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಕಲಾಪವನ್ನು ಮಧ್ಯಾಹ್ನ 3.30ರ ವರೆಗೆ ಮುಂದೂಡಲಾಯಿತು.
ನಂತರ ಸದನದಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, 'ಯಡಿಯೂರಪ್ಪ ಅವರಿಗೆ ತಾವು ತಪ್ಪು ಮಾಡಿರುವುದು ಗೊತ್ತು. ಅದಕ್ಕಾಗಿಯೇ ತನಿಖೆಗೆ ಹೆದರಿಕೆ. ಹೀಗಾಗಿಯೇ ವಿಶೇಷ ತನಿಖಾ ದಳ ರಚನೆಯನ್ನು ವಿರೋಧಿಸುತ್ತಿದ್ದಾರೆ' ಎಂದು ತಿವಿದರು.
ಆಪರೇಷನ್ ಕಮಲದ ಆಡಿಯೋ ತನಿಖೆ ವಿಚಾರವಾಗಿ ನಾವು ಒಂದು ನಿಲುವು ತಳೆದಿದ್ದೇವೆ. ಎಸ್ಐಟಿ ತನಿಖೆಯಾಗಬೇಕೆಂಬುದು ನಮ್ಮ ನಿಲುವು. ಆಡಿಯೋದಲ್ಲಿರುವುದು ಯಡಿಯೂರಪ್ಪ ಅವರ ಧ್ವನಿ ಎಂಬುದು ಸ್ಪಷ್ಟವಾಗಿದೆ.
ಎಸ್ಐಟಿಗೆ ಯಡಿಯೂರಪ್ಪ ಯಾಕೆ ಹೆದರಿಕೊಳ್ಳುತ್ತಿದ್ದಾರೆ. ಅವರಿಗೆ ತಾವು ತಪ್ಪು ಮಾಡಿರುವುದು ಗೊತ್ತಿದೆ. ಆದ್ದರಿಂದಲೇ ಹೆದರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಮತ್ತು ಶಿವನಗೌಡ ನಾಯಕ್ ಮಾಡಿರುವುದು ಗಂಭೀರ ಅಪರಾಧ. ಶರಣಗೌಡ ತನ್ನನ್ನು ಭೇಟಿಯಾಗಿದ್ದರು ಎಂದು ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪ ತಮ್ಮ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.