ಬೀಳಗಿ: ಮುರು​ಗೇಶ್‌ ನಿರಾಣಿ ಮಣಿಸುವವರು ಯಾರು?

Published : Mar 02, 2023, 10:58 AM IST
ಬೀಳಗಿ: ಮುರು​ಗೇಶ್‌ ನಿರಾಣಿ ಮಣಿಸುವವರು ಯಾರು?

ಸಾರಾಂಶ

ಈ ಬಾರಿಯೂ ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಚಿವ ಮುರಗೇಶ ನಿರಾಣಿ ಸ್ಪರ್ಧೆ ಖಚಿತವಾಗಿದ್ದರೆ, ಕಾಂಗ್ರೆಸ್‌ನಿಂದ ಈ ಬಾರಿ ಟಿಕೆಟ್‌ಗಾಗಿ ಇನ್ನಿಲ್ಲದ ಪೈಪೋಟಿ ಕಂಡುಬಂದಿದೆ. ಮಾಜಿ ಶಾಸಕ ಜೆ.ಟಿ.ಪಾಟೀಲ, ಮಾಜಿ ಸಚಿವರಾದ ಎಸ್‌.ಆರ್‌.ಪಾಟೀಲ, ಬಸವರಾಜ ಖೋತ ಸೇರಿ 10 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಸಹಜವಾಗಿ ಪಕ್ಷದಲ್ಲಿ ಅಭ್ಯರ್ಥಿಗಳ ಕುರಿತು ತೀವ್ರ ಕುತೂಹಲ ಮೂಡಿದೆ.

ಈಶ್ವರ ಶೆಟ್ಟರ

ಬಾಗಲಕೋಟೆ(ಮಾ.02): ಬಾಗಲಕೋಟೆ ಜಿಲ್ಲೆಯ ಪ್ರತಿಷ್ಠಿತ ಕಣವಾಗಿರುವ ಬೀಳಗಿ ವಿಧಾನಸಭಾ ಮತಕ್ಷೇತ್ರ ಈ ಬಾರಿಯೂ ಜಿದ್ದಾಜಿದ್ದಿನ ಕ್ಷೇತ್ರ. ಹಾಲಿ ಶಾಸಕರೂ ಆಗಿರುವ ಕೈಗಾ​ರಿಕಾ ಸಚಿವ ಮುರಗೇಶ ನಿರಾಣಿ ಅವರಿಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲಿದ್ದರೆ, ಕಾಂಗ್ರೆಸ್‌ ಮತ್ತೆ ಕ್ಷೇತ್ರ ಕೈವಶಪಡಿಸಿಕೊಳ್ಳಲು ಯತ್ನಿಸುತ್ತಿದೆ.

ಲಿಂಗಾಯತ ಸಮುದಾಯದ ಪ್ರಬಲ ನಾಯಕ ಬಿ.ಎಸ್‌.ಯಡಿಯೂರಪ್ಪರನ್ನು ವರಿಷ್ಠರು ಮುಖ್ಯ​ಮಂತ್ರಿ ಸ್ಥಾನ​ದಿಂದ ಕೆಳಗಿಳಿ​ಸು​ವ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ಮುರಗೇಶ್‌ ನಿರಾಣಿ ಆ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಆದರೆ, ಅದು ಕೈಗೂಡಲಿಲ್ಲ. ಆದರೆ, ಮುಂದಿನ ಬಾರಿಯಾದರೂ ಮುಖ್ಯ​ಮಂತ್ರಿ ಹುದ್ದೆ​ಗೇ​ರುವ ಕನಸು ಈಡೇರುತ್ತಾ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ಈ ಬಾರಿಯೂ ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಚಿವ ಮುರಗೇಶ ನಿರಾಣಿ ಸ್ಪರ್ಧೆ ಖಚಿತವಾಗಿದ್ದರೆ, ಕಾಂಗ್ರೆಸ್‌ನಿಂದ ಈ ಬಾರಿ ಟಿಕೆಟ್‌ಗಾಗಿ ಇನ್ನಿಲ್ಲದ ಪೈಪೋಟಿ ಕಂಡುಬಂದಿದೆ. ಮಾಜಿ ಶಾಸಕ ಜೆ.ಟಿ.ಪಾಟೀಲ, ಮಾಜಿ ಸಚಿವರಾದ ಎಸ್‌.ಆರ್‌.ಪಾಟೀಲ, ಬಸವರಾಜ ಖೋತ ಸೇರಿ 10 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಸಹಜವಾಗಿ ಪಕ್ಷದಲ್ಲಿ ಅಭ್ಯರ್ಥಿಗಳ ಕುರಿತು ತೀವ್ರ ಕುತೂಹಲ ಮೂಡಿದೆ.

ಕರ್ನಾಟಕದ ಜನ ಬದಲಾವಣೆ ಬಯಸಿದ್ದಾರೆ: ಸಿದ್ದರಾಮಯ್ಯ

ಜೆ.ಟಿ.ಪಾಟೀಲ, ಎಸ್‌.ಆರ್‌.ಪಾಟೀಲ ಜೊತೆಗೆ ಕಾಂಗ್ರೆಸ್‌ ಮುಖಂಡರಾದ ಬಸವಪ್ರಭು ಸರನಾಡಗೌಡರ, ಬಸವರಾಜ ಖೋತ, ಎಂ.ಎನ್‌.ಪಾಟೀಲ, ಹನಮಂತ ಕಾಕಂಡಕಿ ಕ್ಷೇತ್ರದ ಉಳಿದ ಪ್ರಮುಖ ಆಕಾಂಕ್ಷಿಗಳು. ಈ ನಡುವೆ ಈವರೆಗೆ ಪಕ್ಷದಿಂದ ಕಡೆಗಣನೆಗೆ ಒಳಗಾಗಿದ್ದ, ಮಾಜಿ ಸಚಿವ ಎಸ್‌.ಆರ್‌.ಪಾಟೀಲ ತಮ್ಮ ಸ್ಪರ್ಧೆ ನಿರ್ಧಾರವನ್ನು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದಾರೆ.

ಸಾಂಪ್ರದಾಯಿಕ ಎದುರಾಳಿಗಳು: ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ 4 ವಿಧಾನಸಭಾ ಚುನಾವಣೆಗಳಲ್ಲಿ ಒಂದು ಬಾರಿ ಮಾಜಿ ಸಚಿವ ಅಜಯ್‌ ಕುಮಾರ್‌ ಸರನಾಯಕ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಇದನ್ನು ಹೊರತುಪಡಿಸಿದರೆ ಉಳಿದ ಮೂರು ಚುನಾವಣೆಯಲ್ಲಿ ಬಿಜೆಪಿಯ ಮುರಗೇಶ್‌ ನಿರಾಣಿ ಹಾಗೂ ಕಾಂಗ್ರೆಸ್‌ನ ಜೆ.ಟಿ.ಪಾಟೀಲ ಸಾಂಪ್ರದಾಯಿಕ ಎದುರಾಳಿಗಳು.

2004ರಲ್ಲಿ ಮೊದಲ ಬಾರಿ ಬೀಳಗಿಯಿಂದ ಮುರಗೇಶ್‌ ನಿರಾಣಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಜೆ.ಟಿ.ಪಾಟೀಲರನ್ನು ಭಾರೀ ಅಂತರದಿಂದ ಸೋಲಿಸಿದ್ದರು. ನಂತರ 2008ರ ಚುನಾವಣೆಯಲ್ಲೂ ಜೆ.ಟಿ.ಪಾಟೀಲರ ವಿರುದ್ಧ ಗೆಲುವು ಕಂಡಿದ್ದ ನಿರಾಣಿ, 2013ರಲ್ಲಿ ಕಾಂಗ್ರೆಸ್‌ನ ಜೆ.ಟಿ.ಪಾಟೀಲರ ವಿರುದ್ಧ ಪರಾಭವಗೊಂಡಿದ್ದರು. ಆದರೆ, 2018ರ ಚುನಾವಣೆಯಲ್ಲಿ ಮತ್ತೆ ಜೆ.ಟಿ.ಪಾಟೀಲರ ವಿರುದ್ಧ ನಿರಾಣಿ ಅವರು ಗೆಲ್ಲುವ ಮೂಲಕ ಬೀಳಗಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ​ಯಾ​ದಂತಾ​ಗಿ​ದೆ.

ಸಮಬಲದ ಹೋರಾಟ: 

ಬೀಳಗಿ ಕ್ಷೇತ್ರದಲ್ಲಿ ಇತ್ತೀಚಿನ 5 ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ನಡುವೆ ಸಮಬಲದ ಹೋರಾಟ ನಡೆ​ದಿ​ದೆ. ಎರಡೂ ಪಕ್ಷಗಳ ಗೆಲುವಿನ ಅಂತರ ಬಹುತೇಕ ಮೂರ​ರಿಂದ ಐದು ಸಾವಿರ ಆಗಿ​ರುವ ಕಾರ​ಣ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಈ ಬಾರಿಯೂ ಪ್ರಬಲ ಹೋರಾಟ ನಡೆಯಲಿದೆ. ಆದರೆ, ಗೆಲುವಿನ ಅಂತರದಲ್ಲಿ ಮಾತ್ರ ದೊಡ್ಡ ಬದ​ಲಾ​ವಣೆ ಆಗದು ಎಂಬ ಮಾತು​ಗಳು ಕೇಳಿ​ಬ​ರು​ತ್ತಿ​ವೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿದ್ದು ಬಿಎಸ್‌ವೈ: ಅನ್ನ ಹಳಸಿತ್ತು; ನಾಯಿ ಕಾದಿತ್ತು ಎಂದ ಸಿದ್ದರಾಮಯ್ಯ

ಕ್ಷೇತ್ರದ ಹಿನ್ನೆಲೆ

ಸ್ವಾತಂತ್ರ್ಯಾನಂತರ 1957ರಿಂದ 2018ರವರೆಗೆ ನಡೆದ ವಿಧಾನಸಭೆಯ 15 ಚುನಾವಣೆಗಳಲ್ಲಿ 2 ಬಾರಿ ಜನತಾ ಪಕ್ಷ, ಮೂರು ಬಾರಿ ಬಿಜೆಪಿ ಹೊರತುಪಡಿಸಿದರೆ, 10 ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷವೇ ಕ್ಷೇತ್ರದಲ್ಲಿ ಗೆದ್ದಿ​ದೆ. 1985ರಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್‌ ಪಕ್ಷ ಇಲ್ಲಿ ತನ್ನ ತಪ್ಪಿನಿಂದ ಸೋಲು ಕಂಡಿತು. ನಂತರ 89ರ ಚುನಾವಣೆಯಲ್ಲಿ ಜನತಾದಳದಿಂದ ಯಳ್ಳಿಗುತ್ತಿ ಅವರು ಆಯ್ಕೆಯಾದರೆ, 2004, 2008, 2018ರಲ್ಲಿ ಬಿಜೆಪಿಯ ಮುರಗೇಶ್‌ ನಿರಾಣಿ ಗೆಲುವು ಕಂಡಿದ್ದಾರೆ.

ಜಾತಿ ಲೆಕ್ಕಾಚಾರ

ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 2.20 ಲಕ್ಷ ಸಾವಿರ ಮತದಾರರಿದ್ದು, ಲಿಂಗಾಯತ, ರಡ್ಡಿ, ಕುರುಬ, ಗಾಣಿಗ ಮತಗಳು ನಿರ್ಣಾಯಕವಾಗಿವೆ. ಈವರೆಗಿನ ಚುನಾವಣೆಗಳಲ್ಲಿ ಆಯ್ಕೆ​ಯಾದ ಬಹು​ತೇ​ಕ​ರು ಲಿಂಗಾಯತ ಹಾಗೂ ರಡ್ಡಿ ಸಮುದಾಯದವರು ಎನ್ನುವುದು ವಿಶೇಷ. ಪರಿಶಿಷ್ಟಜಾತಿ, ಪಂಗಡ, ವಾಲ್ಮೀಕಿ, ಲಂಬಾಣಿ, ಮರಾಠ ಸಮುದಾಯದ ಮತಗಳೂ ಚುನಾವಣೆ ಫಲಿತಾಂಶವನ್ನು ನಿರ್ಧರಿಸುವ ಸಾಮರ್ಥ್ಯ ಹೊಂದಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್