ಬಿಎಸ್‌ವೈ ಮನೆಯಲ್ಲಿ ಲಿಂಗಾಯತ ನಾಯಕರ ಸಭೆ: ಲಿಂಗಾಯತ ಸಿಎಂ ಎಂದೇ ಪ್ರಚಾರ ಮಾಡಲು ತೀರ್ಮಾನ

By Sathish Kumar KHFirst Published Apr 19, 2023, 10:07 PM IST
Highlights

ರಾಜ್ಯದಲ್ಲಿ ಬಿಜೆಪಿಯಿಂದ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಪ್ರಚಾರದ ವೇಳೆ ಹೇಳಬೇಕು. ಇದನ್ನೇ ಕೇಂದ್ರ ನಾಯಕರ ಬಾಯಿಂದಲೂ ಹೇಳಿಸಬೇಕು.

ಬೆಂಗಳೂರು (ಏ.19):  ರಾಜ್ಯದಲ್ಲಿ ಬಿಜೆಪಿಯಿಂದ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಪ್ರಚಾರದ ವೇಳೆ ಹೇಳಬೇಕು. ಇದನ್ನೇ ಕೇಂದ್ರ ನಾಯಕರ ಬಾಯಿಂದಲೂ ಹೇಳಿಸಬೇಕು. ಜೊತೆಗೆ, ಕಾಂಗ್ರೆಸ್‌ ನಾಯಕರಿಗೆ ಲಿಂಗಾಯತರನ್ನು ಸಿಎಂ ಮಾಡುತ್ತೀರಾ ಎಂದು ಸವಾಲು ಹಾಕಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಕಾವೇರಿ ನಿವಾಸದಲ್ಲಿ ರಾಜ್ಯದ 41 ಲಿಂಗಾಯತ ನಾಯಕರೊಂದಿಗೆ ಸಭೆ ಮಾಡಲಾಯಿತು. ಈ ಸಭೆಯಲ್ಲಿ ಬಿಜೆಪಿಯ ಎಲ್ಲಾ ಲಿಂಗಾಯತ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು, ಮಾಜಿ ಮುಖ್ಯಮಂತ್ರಿ ಸೇರಿದಂತೆ ಎಲ್ಲ ನಾಯಕರು ಕೂಡ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಚರ್ಚೆ ಮಾಡಿದಂತೆ, ರಾಜ್ಯದಲ್ಲಿ ಲಿಂಗಾಯತರನ್ನೆ ನಾವು ಮುಂದಿನ ಸಿಎಂ ಮಾಡ್ತೇವೆ ಎಂದು ಪ್ರಚಾರದ ವೇಳೆ ಹೇಳಬೇಕು. ಮತ್ತು ಕೇಂದ್ರ ನಾಯಕರ ಬಾಯಲ್ಲಿ ಹೇಳಿಸಬೇಕು ಎಂದು ಚರ್ಚೆ ಮಾಡಲಾಗಿದೆ. 

Latest Videos

ಶಿವಮೊಗ್ಗದಲ್ಲಿ ಹೊಸ ಅಭ್ಯರ್ಥಿಗೆ ಬಿಜೆಪಿ ಮಣೆ: ಪಾಲಿಕೆ ಸದಸ್ಯ ಚೆನ್ನಬಸಪ್ಪಗೆ ಟಿಕೆಟ್‌?

ಕಾಂಗ್ರೆಸ್‌ಗೆ ಲಿಂಗಾಯತ ಸಿಎಂ ಮಾಡಲು ಸವಾಲು: ಮತ್ತೊಂದೆಡೆ ಕಾಂಗ್ರೆಸ್‌ಗೆ ನೀವು ಲಿಂಗಾಯತ ಸಿಎಂ ಮಾಡ್ತೇವೆ ಎನ್ನೋದನ್ನ ಘೋಷಣೆ ಮಾಡಿ ಎಂದು ಸವಾಲು ಹಾಕಬೇಕು. ಆಗ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಿಂದ ಆಗಿರುವ ಡ್ಯಾಮೇಜ್‌ ತಡೆಗಟ್ಟಬಹುದು. ಬಿಜೆಪಿಯಿಂದ ಜಗದೀಶ್‌ ಶೆಟ್ಟರ್‌ ಅವರನ್ನು ಮುಖ್ಯಮಂತ್ರಿ ಮಾಡಿತ್ತು. ನಮ್ಮ ಪಾರ್ಟಿಯಲ್ಲಿ ಶೆಟ್ಟರ್ ಎಲ್ಲಾ ಅನುಭವಿಸಿ ಹೋದರು ಎನ್ನೋದನ್ನು ಹೋದಲ್ಲಿ ಬಂದಲ್ಲಿ ಹೇಳಬೇಕು. ಶೆಟ್ಟರ್ ಗೆ ರಾಜ್ಯ ಸಭಾ ಸದಸ್ಯ ಸ್ಥಾನ ಅವರ ಮನೆಯವರಿಗೆ ಟಿಕೆಟ್ ನೀಡ್ತೇವೆ ಎಂದರು ಪಕ್ಷ ಬಿಟ್ಟು ಹೋಗಿದ್ದಾರೆ ಎನ್ನೋದನ್ನ ಹೇಳಬೇಕು ಎಂದು ಯಡಿಯೂರಪ್ಪ, ಬೊಮ್ಮಾಯಿ‌ ಸೇರಿದಂತೆ ಅನೇಕ ಲಿಂಗಾಯತ ನಾಯಕರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. 

ಸವದಿ ಪಕ್ಷದ್ರೋಹವನ್ನೂ ತಿಳಿಸಬೇಕು: ಬಿಜೆಪಿಯಲ್ಲಿ ಲಕ್ಷ್ಮಣ ಸವದಿ ಸೋತವರನ್ನು ಕೂಡ ಮಂತ್ರಿ ಮಾಡಲಾಗಿತ್ತು. ಜೊತೆಗೆ ಉಪಮುಖ್ಯಮಂತ್ರಿ ಹುದ್ದೆಯನ್ನೂ ನೀಡಲಾಗಿತ್ತು. ಆದರೆ ಈಗ ಪಕ್ಷವನ್ನೇ ಬಿಟ್ಟು ಹೋಗುವ ಮೂಲಕ ಪಾರ್ಟಿಗೆ ದ್ರೋಹ ಮಾಡಿದ್ದಾರೆ ಎನ್ನೋದನ್ನ ಜೋರಾಗಿ ಹೇಳಬೇಕು ಎಂದು ಲಿಂಗಾಯತ ನಾಯಕರಿಗೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಜೊತೆಗೆ, ಈ ಬಾರಿ ಬಿಜೆಪಿಯಿಂದ ಅತಿ ಹೆಚ್ಚು ಲಿಂಗಾಯತರಿಗೆ ಟಿಕೆಟ್ ನೀಡಿದ್ದನ್ನು ಹೇಳಬೇಕು ಎಂದು ಸಭೆಯಲ್ಲಿ ತಿಳಿಸಿದ್ದಾರೆ.

ಮಂಡ್ಯದಿಂದ ಸ್ಪರ್ಧೆ ಮಾಡಲು ನಾನೇನು ಟೂರಿಂಗ್ ಟಾಕೀಸಾ? ಹೆಚ್.ಡಿ. ಕುಮಾರಸ್ವಾಮಿ

ವೀರಶೈವ ಲಿಂಗಾಯತ ಸಿಎಂ ಆಗಬೇಕು: ಸಭೆಯಿಂದ ಹೊರಬಂದು ಮಾತನಾಡಿದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು, ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ. ಕಾರ್ಯಕರ್ತರ ಪಡೆ ಇದೆ. ರಾಜ್ಯದಲ್ಲಿ ಬೊಮ್ಮಾಯಿ ಅವರ‌ ನಾಯಕತ್ವ ಇದೆ. ಸವದಿ ಸೋತು ಸುಣ್ಣ‌ಆಗಿದ್ದರು. ಅಂತವರನ್ನ ಉಪ ಮುಖ್ಯಮಂತ್ರಿ ಮಾಡಿ‌ ಪರಿಷತ್ ಸದಸ್ಯರಾಗಿ ಮಾಡಲಾಗಿತ್ತು. ಉಪ ಮುಖ್ಯಮಂತ್ರಿ ಆದಮೇಲೆ ಜನರಿಗೆ ಸವದಿ‌ ಗೊತ್ತಾಗಿದ್ದು. ಜಗದೀಶ್‌ ಶೆಟ್ಟರ್ ಹಿರಿಯರು. ವಿಪಕ್ಷ‌ ನಾಯಕರಾಗಿ, ಮುಖ್ಯಮಂತ್ರಿ ಆಗಿಯೂ ಅಧಿಕಾರ ಅನುಭವಿಸಿದ್ದಾರೆ. ಇನ್ನು ಮುಂದಿನ ಅವಧಿಯಲ್ಲಿ ರಾಜ್ಯದಲ್ಲಿ ವೀರಶೈವ ಲಿಂಗಾಯತರನ್ನ ಮುಖ್ಯಮಂತ್ರಿಯನ್ನಾಗಿ ಆಗಿ ಮಾಡಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದರು.

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!