ಸರ್ಕಾರ ತನ್ನ ಬಹುಮತವನ್ನು ಕಳೆದುಕೊಂಡ ಬಳಿಕ ಅಧಿಕಾರದಲ್ಲಿದ್ದ ಸಮಯದಲ್ಲಿ ಸರ್ಕಾರ ಅಂತಹ ಆದೇಶಗಳನ್ನು ಮಾಡುವುದು ಸರಿಯಲ್ಲ. ಈ ಹಿನ್ನೆಲೆ ಆ ಎಲ್ಲ ನಿರ್ಧಾರಗಳನ್ನು ನಾವು ಪರಿಶೀಲನೆ ಮಾಡುತ್ತಿದ್ದೇವೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮಹಾರಾಷ್ಟ್ರದ ರಾಜಕಾರಣ ನಿತ್ಯವೂ ಹೊಸ ತಿರುವುಗಳನ್ನು ಕೈಗೊಳ್ಳುತ್ತಿದೆ. ಮಹಾ ವಿಕಾಸ್ ಅಘಾಡಿ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತನ್ನ ರಾಜೀನಾಮೆ ನೀಡಿದ ಬಳಿಕ ಶಿವಸೇನಾ ನಾಯಕ ಏಕನಾಥ ಶಿಂದೆ ಸಿಎಂ ಆದರು, ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾದರು. ಬಿಜೆಪಿ ಶಾಸಕರ ಸಂಖ್ಯೆ ಅಧಿಕವಾಗಿದ್ದರೂ ಶಿವಸೇನಾದ ಶಿಂಧೆಯನ್ನೇ ಸಿಎಂ ಅನ್ನಾಗಿ ಮಾಡಲಾಯಿತು. ಈಗ ಎಂವಿಎ ಮೈತ್ರಿ ಸರ್ಕಾರ ತನ್ನ ಕೊನೆಯ ದಿನಗಳಲ್ಲಿ ಕೈಗೊಂಡಿದ್ದ ನಿರ್ಣಯ, ಆದೇಶಗಳನ್ನು ಪರಿಶೀಲನೆ ಮಾಡಲಾಗುತ್ತಿದೆಯಂತೆ.
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದ ಕಡೆಯ ದಿನಗಳಲ್ಲಿ ಬರೋಬ್ಬರಿ 400 ಸರ್ಕಾರಿ ಆದೇಶಗಳನ್ನು ಕೈಗೊಂಡಿದೆ. ಹಾಗೂ, ಬಜೆಟ್ನಲ್ಲಿ ಹಂಚಿಕೆ ಮಾಡಿದ್ದಕ್ಕಿಂತ 5 ರಷ್ಟು ಫಂಡ್ಗಳನ್ನು ಹಂಚಿಕೆ ಮಾಡಿದ್ದರು ಎಂದು ಫಢ್ನವೀಸ್ ಮಂಗಳವಾರ ಆರೋಪಿಸಿದ್ದಾರೆ.
ಅಭಿವೃದ್ಧಿ ಸಂಬಂಧಿತ ಕೆಲಸಗಳಿಗೆಂದು ಈ ಹಣವನ್ನು ಹಂಚಿಕೆ ಮಾಡಲಾಗಿದ್ದರೂ, ಮಹಾ ವಿಕಾಸ್ ಅಘಾಡಿ ಸರ್ಕಾರ ತನ್ನ ಬಹುಮತವನ್ನು ಕಳೆದುಕೊಂಡ ಬಳಿಕ ಈ ಸರ್ಕಾರಿ ನಿರ್ಣಯಗಳನ್ನು ಕೈಗೊಂಡಿದೆ. ಶಿವಸೇನೆಯಲ್ಲಿ ದಂಗೆ ಎದ್ದ ಬಳಿಕ ಕೈಗೊಂಡಿರುವ ಈ ಆದೇಶಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಸಂಪುಟದಲ್ಲಿ ಬಿಜೆಪಿಯ 25, ಶಿಂಧೆ ಟೀಮ್ನ 12 ಸಚಿವರು?
ರಾಜ್ಯ ಸರ್ಕಾರದ ಮೇಲೆ ಅನಗತ್ಯ ಹೊರೆ ಬೀಳುವುದನ್ನು ತಡೆಯಲು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಈ ಕ್ರಮಗಳನ್ನು ಪರಿಶೀಲನೆ ನಡೆಸುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರದ ಆಡಳಿತಾತ್ಮಕ ರಾಜಧಾನಿ ಮುಂಬೈನ ಮಂತ್ರಾಲಯದಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಜೂನ್ 30 ರಂದು ಸಿಎಂ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಧಿಕಾರ ಸ್ವೀಕರಿಸಿದ ಬಳಿಕ ಈ ಹಿಂದಿನ ಶಿವಸೇನಾ ನೇತೃತ್ವದ ಸರ್ಕಾರದ ನಿರ್ಣಯಗಳನ್ನು ಪರಿಶೀಲಿಸುತ್ತಿದೆ. ವಿವಿಧ ಇಲಾಖೆಗಳ ಕಾರ್ಯನಿರ್ವಹಣೆಯ ಪರಿಶೀಲನೆ ಮತ್ತು ಹಲವಾರು ಸರ್ಕಾರಿ ಆದೇಶಗಳಿಗೆ ನೂತನ ಸರ್ಕಾರ ತಡೆ ನೀಡಿದೆ.
ವಿಪಕ್ಷಗಳಿಂದ ಆಕ್ರೋಶ
ಇನ್ನು, ಏಕನಾಥ್ ಶಿಂಧೆ ಹಾಗೂ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದ ಈ ಕ್ರಮವನ್ನು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದೆ. ಉದ್ಧವ್ ಠಾಕ್ರೆ ಬೆಂಬಲಿತ ಶಿವಸೇನಾ, ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಅಲ್ಲದೆ, ಈ ರೀತಿ ಅನಿಯಂತ್ರಿತವಾಗಿ ತಡೆ ನೀಡುವುದರಿಂದ ಈಗ ನಡೆಯುತ್ತಿರುವ ಹಲವು ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತವೆ ಎಂದು ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷ ನಾಯಕ ಅಜಿತ್ ಪವಾರ್ ಸರ್ಕಾರವನ್ನು ಮನವಿ ಮಾಡಿಕೊಂಡಿದ್ದಾರೆ.
ಶಾಸಕರು ಮಲಗಿದ್ದಾಗ ಫಡ್ನವೀಸ್ ರಹಸ್ಯ ಭೇಟಿ: ಸಿಎಂ ಶಿಂಧೆ!
ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ ಫಡ್ನವೀಸ್
ಸರ್ಕಾರ ತನ್ನ ಬಹುಮತವನ್ನು ಕಳೆದುಕೊಂಡ ಬಳಿಕ ಅಧಿಕಾರದಲ್ಲಿರುವ ನೈತಿಕ ಹಕ್ಕನ್ನೇ ಕಳೆದುಕೊಂಡಿತ್ತು. ಆ ಸಮಯದಲ್ಲಿ ಸರ್ಕಾರ ಆದೇಶಗಳನ್ನು ಮಾಡುವುದು ಸರಿಯಲ್ಲ. ಈ ಹಿನ್ನೆಲೆ ಆ ಎಲ್ಲ ನಿರ್ಧಾರಗಳನ್ನು ನಾವು ಪರಿಶೀಲನೆ ಮಾಡುತ್ತಿದ್ದೇವೆ. ಹಾಗೂ ಮೆರಿಟ್ ಆಧಾರದ ಮೇಲೆ ಆ ನಿರ್ಣಯಗಳಿಗೆ ಒಪ್ಪಿಗೆ ನೀಡುತ್ತಿದ್ದೇವೆ ಎಂದು ಫಡ್ನವೀಸ್ ಹೇಳಿದರು.
ಜೂನ್ 21 ರಂದು ಶಿವಸೇನೆಯ ಹಲವು ಶಾಸಕರು ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ರೆಬೆಲ್ ಆಗಿ, 3 ಪಕ್ಷಗಳ ಸಮ್ಮಿಶ್ರ ಸರ್ಕಾರದ ವಿರುದ್ಧ ತಿರುಗಿಬಿದ್ದರು.. ಬಳಿಕ ಉದ್ಧವ್ ಠಾಕ್ರೆ ಜೂನ್ 29ರಂದು ರಾಜೀನಾಮೆ ನೀಡಿದ್ದರು.
ನಂತರ ಏಕನಾಥ್ ಶಿಂಧೆ ಹಾಗೂ ಫಡ್ನವೀಸ್ ಜೂನ್ 30ರಂದು ಅಧಿಕಾರ ಸ್ವೀಕರಿಸಿದ್ದರು ಆದರೆ, ಈಗಲೂ ಕೂಡ ಅವರಿಬ್ಬರ ನೇತೃತ್ವದಲ್ಲೇ ಸರ್ಕಾರ ನಡೆಯುತ್ತಿದ್ದು, ಇತರೆ ಯಾವ ಶಾಸಕರು ಸಹ ಈವರೆಗೆ ಮಂತ್ರಿಗಳಾಗಿಲ್ಲ.