ಸಿಎಂ ಗದ್ದುಗೆಗೆ ಗುದ್ದಾಟ: ಹೈಕಮಾಂಡ್‌ ಸೂಚಿಸಿದ್ರೂ ಸಿದ್ದು-ಡಿಕೆಶಿ ಪರಸ್ಪರ ಬಡಿದಾಟ, ಉಮೇಶ ಕತ್ತಿ

By Kannadaprabha NewsFirst Published Jul 27, 2022, 12:09 PM IST
Highlights

ಶೀಘ್ರದಲ್ಲೇ ಕಾಂಗ್ರೆಸ್‌ ಚೂರು ಚೂರು, ಬಿಜೆಪಿ ಮುಂದಿನ 5 ವರ್ಷ ಅ​ಧಿಕಾರದಲ್ಲಿ: ಸಚಿವ ಉಮೇಶ ಕತ್ತಿ ಭವಿಷ್ಯ

ಆಲಮಟ್ಟಿ(ಜು.27):  ಇನ್ನೂ ಅಧಿಕಾರಕ್ಕೆ ಬರುವ ಮುನ್ನವೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗದ್ದುಗೆಗೆ ಗುದ್ದಾಟ ನಡೆದಿದ್ದು, ಇದರಿಂದಾಗಿ ಶೀಘ್ರದಲ್ಲಿಯೇ ಕಾಂಗ್ರೆಸ್‌ ಚೂರು ಚೂರಾಗಲಿದೆ ಎಂದು ಅರಣ್ಯ ಸಚಿವ ಉಮೇಶ ಕತ್ತಿ ಹೇಳಿದರು. ಆಲಮಟ್ಟಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಹೈಕಮಾಂಡ್‌ ಸೂಚಿಸಿದ್ದರೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ. ಅವರಿಗೆ ಯಾವ ಹುಚ್ಚು ಹಿಡಿದಿದೆಯೋ ಗೊತ್ತಿಲ್ಲ. ಇದರಿಂದ ಕಾಂಗ್ರೆಸ್‌ ದಿವಾಳಿಯಾಗಲಿದೆ. ಬಿಜೆಪಿಯ ಉತ್ತಮ ಯೋಜನೆಗಳಿಂದಾಗಿ ಬಿಜೆಪಿ ಮುಂದಿನ 5 ವರ್ಷ ಅ​ಧಿಕಾರದಲ್ಲಿರಲಿದೆ ಎಂದರು.

ನನಗೆ ಇನ್ನೂ 60 ವರ್ಷ, ಬಿಜೆಪಿಯ ನಿಯಮದ ಪ್ರಕಾರ ಇನ್ನೂ ಸಕ್ರಿಯ ರಾಜಕಾರಣದಲ್ಲಿರಲು ಇನ್ನೂ 15 ವರ್ಷ ಅವಕಾಶವಿದೆ. ಅಷ್ಟರೊಳಗೆ ನಮಗೂ ಮುಖ್ಯಮಂತ್ರಿ ಅವಕಾಶ ಬರುತ್ತದೆ. ನಾನೂ 9 ಬಾರಿ ಆರಿಸಿ ಬಂದಿದ್ದು, ಮುಖ್ಯಮಂತ್ರಿಯಾಗಲೂ ಎಲ್ಲ ಅರ್ಹತೆಯಿದೆ ಎಂದರು.

ಉತ್ತರ ಕರ್ನಾಟಕ ಪ್ರತ್ಯೇಕ ಕೂಗು ಮತ್ತೆ ಸಮರ್ಥಿಸಿಕೊಂಡ ಸಚಿವ ಕತ್ತಿ

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ತಾರತಮ್ಯ ಮುಂದುವರೆದರೇ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ. ಅದಕ್ಕೆ ಉತ್ತರ ಕರ್ನಾಟಕ ದ ಬಹುತೇಕ ಶಾಸಕ, ಸಂಸದರ ಸಹಮತವಿದೆ. ಕೆಲ ಒತ್ತಡದ ಕಾರಣ ಮಾತನಾಡದೇ ಸುಮ್ಮನಿದ್ದಾರೆ ಎಂದರು.ವಿಜಯಪುರದಲ್ಲಿ ಜಿಲ್ಲೆಯ ಕೆಡಿಪಿ ಸಭೆ ನಿನ್ನೆ ನಡೆಸಿದ್ದು, ಜಿಲ್ಲೆಯ ಸಮಗ್ರದ ಅಭಿವೃದ್ಧಿಗೆ ಹಲವು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಮುಂಗಾರು ನೀರು ಬಿಡುಗಡೆ

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿನ ಪ್ರಸ್ತುತ ಲಭ್ಯವಿರುವ ನೀರಿನ ಲೆಕ್ಕಾಚಾರದ ಬಗ್ಗೆ ಚರ್ಚಿಸಿದ ಬಳಿಕ ಅಂತಿಮವಾಗಿ, ಮುಂಗಾರು ಹಂಗಾಮಿಗೆ ಜು.26ರಿಂದಲೇ ಅನ್ವಯವಾಗುವಂತೆ ಮುಂಗಾರು ಹಂಗಾಮಿಗೆ ಜಲಾಶಯಗಳಿಂದ ನೀರು ಪೂರೈಸಲು ಕೃಷ್ಣ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯು ತೀರ್ಮಾನ ತೆಗೆದುಕೊಂಡಿತು.

ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಆಲಮಟ್ಟಿಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆಗಿರುವ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ, ಅರಣ್ಯ, ಆಹಾರ ಹಾಗೂ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ ಕತ್ತಿ ಸಮ್ಮುಖದಲ್ಲಿ ಮಂಗಳವಾರ ನಡೆದ 2022-23ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷ್ಣ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರಿನ ಲಭ್ಯತೆಯ ಬಗ್ಗೆ ಚರ್ಚೆ ನಡೆಯಿತು.

ಆಲಮಟ್ಟಿ ಮತ್ತು ನಾರಾಯಣಪುರ ಎರಡೂ ಜಲಾಶಯಗಳಲ್ಲಿ 97.491 ಟಿಎಂಸಿ ಜೀವಜಲ ಲಭ್ಯವಿದೆ. ಮುಂಗಾರು ಹಂಗಾಮಿನ 120 ದಿನಗಳಿಗೆ ಯೋಜನಾ ವರದಿಯಂತೆ 67 ಟಿಎಂಸಿ ನೀರಿನ ಪ್ರಮಾಣದ ಅಗತ್ಯವಿದೆ. ಅಗತ್ಯ ಬಳಕೆಗೆ ಮುಂಗಾರು ಹಂಗಾಮಿಗೆ 13 ಟಿಎಂಸಿ ನೀರು ಬೇಕಾಗುತ್ತದೆ. ಇವೆರಡು ಸೇರಿ ಒಟ್ಟು ಬಳಕೆಗೆ 80 ಟಿಎಂಸಿ ನೀರಿ ಬೇಕಾಗುತ್ತದೆ. ಮುಂಗಾರು ಹಂಗಾಮಿಗೆ ಅಗತ್ಯ ಇರುವ ನೀರಿನ ಪ್ರಮಾಣ ಜಲಾಶಯದಲ್ಲಿ ಸಂಗ್ರಹಣೆಯಾಗಿದೆ. ಮುಂಗಾರು ಹಂಗಾಮಿಗೆ ಅಗತ್ಯ ಇರುವ ನೀರಿನ ಪ್ರಮಾಣವು ಜಲಾಶಯದಲ್ಲಿ ಸಂಗ್ರಹಣೆಯಾಗಿರುವುದರಿಂದ ಹಾಗೂ ಮುಂಬರುವ ದಿನಗಳಲ್ಲಿ ಬರುವ ಒಳಹರಿವನ್ನು ಗಮನದಲ್ಲಿರಿಸಿಕೊಂಡು 2022-23 ರ ಮುಂಗಾರು ಹಂಗಾಮಿಗೆ ಅಚ್ಚುಕಟ್ಟು ಪ್ರದೇಶದ ಕಾಲುವೆ ಜಾಲ, ಆಣಿಕಟ್ಟು ಹಾಗೂ ಮುಖ್ಯ ಸ್ಥಾವರಗಳ ಕ್ಲೋಜರ್‌ ಅವ​ಯ ಕಾಮಗಾರಿಗಳ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಮುಂಗಾರು ಹಂಗಾಮಿಗೆ ಜು.26 ರಿಂದ ನ.24 ರವರೆಗೆ ನೀರು ಪೂರೈಸಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಒಳಹರಿವು ಇರುವವರೆಗೆ ನಿರಂತರ ನೀರು, ಒಳಹರಿವು ಸ್ಥಗಿತಗೊಂಡ ನಂತರ 14 ದಿನ ಚಾಲು 8 ದಿನ ಬಂದ್‌ ಪದ್ಧತಿ ಅನುಸರಿಸಲಾಗುವುದು. ಗುತ್ತಿ ಬಸವಣ್ಣ ಏತ ನೀರಾವರಿಯ 7 ಪಂಪಸೆಟ್‌ಗಳು ದುರಸ್ತಿ ಕಾರ್ಯ ನಡೆದಿದ್ದು, ಇದೇ ಆ.15 ರಿಂದ ನಾಲ್ಕು ಪಂಪಸೆಟ್‌ ಮೂಲಕ ನೀರು ಹರಿಸಲಾಗುವುದು ಎಂದರು.

ನನಗೆ ಸಿಎಂ ಆಗೋ ಎಲ್ಲಾ ಅರ್ಹತೆಯಿದೆ: ಕರ್ನಾಟಕ ಬಿಜೆಪಿ ಹಿರಿಯ ನಾಯಕ ಎಚ್ಚರಿ ಹೇಳಿಕೆ

ಶಾಸಕರಾದ ಅಮರೇಗೌಡ ಬಯ್ಯಾಪುರ, ರಮೇಶ ಭೂಸನೂರ, ಶಿವನಗೌಡ ನಾಯಕ, ರಾಜುಗೌಡ, ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ಎ.ಎಸ್‌.ಪಾಟೀಲ ನಡಹಳ್ಳಿ, ವೀರಣ್ಣ ಚರಂತಿಮಠ, ಡಿ.ಎಸ್‌.ಹೂಲಗೇರಿ, ಬಸನಗೌಡ ದದ್ದಲ್‌ ಸೇರಿ ಹಲವರು ಸಭೆಯಲ್ಲಿದ್ದರು.

ಕೆಬಿಜೆಎನ್‌ ಎಲ್‌ ಎಂಡಿ ಬಿ.ಎಸ್‌.ಶಿವಕುಮಾರ, ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರ, ಪಿ.ಸುನೀಲಕುಮಾರ, ಮುಖ್ಯ ಎಂಜಿನಿಯರ್‌ ಪ್ರದೀಪಮಿತ್ರ ಮಂಜುನಾಥ, ಎಚ್‌.ಸುರೇಶ ಸೇರಿದಂತೆ ಹಲವರು ಇದ್ದರು.

ರೈತ ಬಾಂಧವರಲ್ಲಿ ಮನವಿ:

ಸಮಸ್ತ ಅಚ್ಚುಕಟ್ಟು ರೈತ ಬಾಂಧವರು ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ನೀರು ಪೋಲಾಗದಂತೆ ಹಿತಮಿತ ಬಳಸಲು ಕೃಷ್ಣ ಭಾಗ್ಯ ಜಲ ನಿಗಮ ಅಧಿಕಾರಿಗಳೊಂದಿಗೆ ಸಹಭಾಗಿತ್ವ ನೀಡಲು ಇದೆ ವೇಳೆ ಸಚಿವರಾದ ಸಿ.ಸಿ.ಪಾಟೀಲ ರೈತ ಬಾಂಧವರಲ್ಲಿ ಮನವಿ ಮಾಡಿದರು.

ನವೆಂಬರ್‌ ಅತ್ಯಂಕ್ಕೆ ಸಭೆ:

ನವೆಂಬರ್‌ 2022ರಲ್ಲಿ ಎರಡೂ ಜಲಾಶಯಗಳ ಸಂಗ್ರಹಣೆಯನ್ನು ಗಮನದಲ್ಲಿರಿಸಿಕೊಂಡು 2022-23ನೇ ಸಾಲಿನ ಹಿಂಗಾರು ಹಂಗಾಮಿನ ನೀರವಾರಿ ಸಲಹಾ ಸಮಿತಿ ಸಭೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
 

click me!