
ಚಿಕ್ಕಮಗಳೂರು (ಮೇ.18): ನಾವು ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದವರಲ್ಲ ಸಿದ್ಧಾಂತಕ್ಕಾಗಿ ಬಂದವರು. ಅಧಿಕಾರ ಇಂದು ಬರಬಹುದು ನಾಳೆ ಹೋಗಬಹುದು. ಸಿದ್ಧಾಂತ ಶಾಶ್ವತ. ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ನಾನು ಸಿದ್ಧಾಂತದೊಂದಿಗೆ ಎಂದೂ ರಾಜಿ ಮಾಡಿಕೊಂಡಿಲ್ಲ. ಮುಂದೆ ಮಾಡಿ ಕೊಳ್ಳೋದಿಲ್ಲ. ಸುಳ್ಳು ಸುದ್ದಿಗಳ ಭರಾಟೆ ಮತ್ತು ಅಪಪ್ರಚಾರಗಳಿಂದ ಸೋತಿರಬಹುದು. ಆದರೆ, ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದೇನೆ ಎಂದರು.
ಕಾರ್ಯಕರ್ತರ ಸಂಕಷ್ಟಕ್ಕೆ ಸದಾ ಧ್ವನಿ ಆಗುತ್ತೇನೆ. ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಮತ್ತೆ ಬೂತ್ ಗಟ್ಟಿಗೊಳಿಸೋಣ, ಮತ್ತೆ ಸಂಘಟನೆ ಗಟ್ಟಿಗೊಳಿಸೋಣ. ಅಧಿಕಾರ ಇದ್ದಾಗ ರಾಜ ಧರ್ಮ ಪಾಲಿಸಿದ್ದೇನೆ. ಯಾರೊಬ್ಬರಿಗೂ ತೊಂದರೆಯಾಗದ ರೀತಿಯಲ್ಲಿ ಅಧಿಕಾರ ನಡೆಸಿದ್ದೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮಾತನಾಡಿ, ಸಿ.ಟಿ.ರವಿ ಅವರಿಗಾದ ಸೋಲು ಅಭಿವೃದ್ಧಿ ರಾಜಕಾರಣ ಮತ್ತು ಹಿಂದುತ್ವಕ್ಕಾದ ಸೋಲು. ಇದರಿಂದ ಕ್ಷೇತ್ರದ ಜನರಿಗೆ ದೊಡ್ಡ ನಷ್ಟವುಂಟಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಸತ್ಯಕ್ಕೆ ದೊರೆತ ಜಯ: ಯು.ಟಿ.ಖಾದರ್
ಕೆಲವು ಕಾರ್ಯಕರ್ತರು ಭಾವುಕರಾಗಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಕೈಗೊಂಡ ಕೆಲವು ನಿರ್ಧಾರಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು. ಜಾತಿ ಹೆಸರಲ್ಲಿ ನಿರಂತರ ವಾಗಿ ನಡೆದ ಅಪಪ್ರಚಾರ ಮತ್ತು ಸುಳ್ಳು ಸುದ್ದಿಗಳ ಹರಡುವಿಕೆಯಿಂದ ಬಿಜೆಪಿ ಸೋತಿರುವುದು ನಿಜಕ್ಕೂ ದುರದೃಷ್ಟಕರ. ಇದು ಹಿಂದುತ್ವಕ್ಕೆ ಆದ ಸೋಲು ಎಂದು ಹೇಳಿದರು. ಕಾಂಗ್ರೆಸ್ಸಿನ ನಕಲಿ ಗ್ಯಾರಂಟಿ ಕಾರ್ಡುಗಳು ಹಾಗೂ ಶಾಸಕರ ಕುರಿತಂತೆ ವ್ಯವಸ್ಥಿತವಾಗಿ ರೂಪಿಸಿದ ಸುಳ್ಳು ಸುದ್ದಿಗಳ ಅಪಪ್ರಚಾರ ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿಗೆ ತಡೆ ಯೊಡ್ಡಿರುವುದು ದುಃಖಕರ ಎಂದು ವಿಷಾದ ವ್ಯಕ್ತಪಡಿಸಿದರು.
ನನ್ನ ಗೆಲುವಿನಲ್ಲಿ ಹೊನ್ನಾವರದ ಮತದಾರರ ಪಾತ್ರ ದೊಡ್ಡದು: ಶಾಸಕ ದಿನಕರ ಶೆಟ್ಟಿ
ವಿರೋಧ ಪಕ್ಷಗಳ ಅಪವಿತ್ರ ಮೈತ್ರಿ, ಅಭ್ಯರ್ಥಿ ಕಣದಲ್ಲಿದ್ದರು ಠೇವಣಿ ಸಿಗದಂತೆ ನೋಡಿಕೊಂಡ ಕೆಲವು ಜೆಡಿಎಸ್ ಮುಖಂಡರ ಕುತಂತ್ರ ರಾಜಕಾರಣದ ಮುಂದೆ ಪ್ರೀತಿ ಮತ್ತು ಸಿದ್ದಾಂತದ ರಾಜಕಾರಣ ಸೋತಿದೆ ಎಂದು ಹೇಳಿದರು. ಗೆದ್ದೇ ಗೆಲ್ಲುತ್ತೇವೆ ಎನ್ನುವ ಅತಿಯಾದ ಆತ್ಮವಿಶ್ವಾಸದ ಕಾರಣಕ್ಕೆ ಕೆಲವು ಸಣ್ಣ, ಸಣ್ಣ ವಿಚಾರಗಳನ್ನು ನಿರ್ಲಕ್ಷಿಸಿದ್ದು, ಇನ್ನೂ ಕೆಲವು ಸಂಗತಿಗಳನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದು ಮುಳುವಾಯಿತು ಎಂದು ಹೇಳಿದರು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ವಕ್ತಾರ ಟಿ.ರಾಜಶೇಖರ್, ಗ್ರಾಮಾಂತರ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಜಿಪಂ ಮಾಜಿ ಉಪಾಧ್ಯಕ್ಷ ವಿಜಯಕುಮಾರ್, ಕೆ.ಆರ್. ಅನಿಲ್ಕುಮಾರ್, ರವೀಂದ್ರ ಬೆಳವಾಡಿ, ದೇವರಾಜಶೆಟ್ಟಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.