ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ: ಭಾರಿ ಕುತೂಹಲ

By Govindaraj SFirst Published Dec 10, 2022, 7:24 AM IST
Highlights

ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಫಲಿತಾಂಶ ದಾಖಲಿಸಿದ ಬೆನ್ನಲ್ಲೇ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಬೇಕಿರುವ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ವಿಜಯ್‌ ಮಲಗಿಹಾಳ

ಬೆಂಗಳೂರು (ಡಿ.10): ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಫಲಿತಾಂಶ ದಾಖಲಿಸಿದ ಬೆನ್ನಲ್ಲೇ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಬೇಕಿರುವ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಗುಜರಾತ್‌ ಫಲಿತಾಂಶಕ್ಕೆ ಮುನ್ನ ಹಾಗೂ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಘದ ಪ್ರಮುಖರ ಜತೆ ಸುದೀರ್ಘ ಸಮಾಲೋಚನೆಗಳನ್ನು ನಡೆಸಿದ್ದಾರೆ. ಇದೆಲ್ಲದರ ಜೊತೆಗೆ, ಗುಜರಾತ್‌ ಫಲಿತಾಂಶದ ಹುಮ್ಮಸ್ಸಿನಲ್ಲಿರುವ ಬಿಜೆಪಿ ಹೈಕಮಾಂಡ್‌ ಕರ್ನಾಟಕದಲ್ಲಿ ಹಲವು ಪ್ರಯೋಗಗಳಿಗೆ ಕೈಹಾಕುವ ವದಂತಿ ಜೋರಾಗಿದೆ.

ಈ ಪ್ರಯೋಗ ಪಕ್ಷದ ಸಂಘಟನೆಗೆ ಸಂಬಂಧಿಸಿದ್ದೋ ಅಥವಾ ರಾಜ್ಯ ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ್ದೋ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಚುನಾವಣೆಗೆ ಇನ್ನು ಹೆಚ್ಚೆಂದರೆ ಐದಾರು ತಿಂಗಳು ಇರುವಾಗ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯಂತಹ ಕಸರತ್ತು ನಡೆಸಬೇಕೇ? ಸರ್ಕಾರದಲ್ಲಿ ಜಾತಿ ಸಮೀಕರಣ ಸರಿದೂಗಿಸಲು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಂತಹ ಪ್ರಯೋಗ ನಡೆಸಬೇಕೇ? ಅಥವಾ ಪಕ್ಷ ಹಾಗೂ ಸರ್ಕಾರದಲ್ಲಿ ಇನ್ಯಾವುದಾದರೂ ರೀತಿಯ ಬದಲಾವಣೆ ತರುವ ಅಗತ್ಯವಿದೆಯೇ ಎಂಬುದರ ಬಗ್ಗೆ ಪಕ್ಷದಲ್ಲಿ ಗಂಭೀರ ಚರ್ಚೆಗಳು ನಡೆದಿವೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಸಿದ್ದರಾಮಯ್ಯ ಬಳಿ ಕಾಂಗ್ರೆಸ್ ತತ್ವ ಸಿದ್ದಾಂತವೇ ಇಲ್ಲ: ಸಚಿವ ಕಾರಜೋಳ ವ್ಯಂಗ್ಯ

ವಾರದಲ್ಲಿ ಸಂಪುಟ ಸರ್ಕಸ್‌?: ಇದೇ ತಿಂಗಳ 19ರಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಲಿದೆ. ಸಂಪುಟ ಕಸರತ್ತು ಸೇರಿದಂತೆ ಏನಾದರೂ ಬದಲಾವಣೆ ಮಾಡುವುದಿದ್ದರೆ ಅಷ್ಟರೊಳಗಾಗಿ ಮಾಡಿ ಮುಗಿಸುವ ಸಾಧ್ಯತೆಯಿದೆ. ಬಿಜೆಪಿಯ ಮಾತೃಸಂಸ್ಥೆಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ರಾಜ್ಯ ನಾಯಕ ಮುಕುಂದ್‌ ಅವರು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದರು. ಎರಡು ದಿನಗಳ ಹಿಂದಷ್ಟೇ ಸಂಘದ ರಾಷ್ಟ್ರೀಯ ನಾಯಕರಾದ ದತ್ತಾತ್ರೇಯ ಹೊಸಬಾಳೆ ಅವರೂ ಬೊಮ್ಮಾಯಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು. 

ಸಂಘ ಪರಿವಾರದ ಈ ಇಬ್ಬರು ಪ್ರಮುಖ ನಾಯಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗೆ ಪ್ರಯತ್ನ ನಡೆಯುತ್ತಿದೆ ಎಂಬ ವದಂತಿಗೆ ಇಂಬು ಸಿಕ್ಕಂತಾಗಿದೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ವಂತ ಬಲದ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಗುರಿ ಹೊಂದಿರುವ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿನ ಪಕ್ಷ ಮತ್ತು ಸರ್ಕಾರದ ವರ್ಚಸ್ಸು ವೃದ್ಧಿಸುವುದು ಹೇಗೆಂಬ ಬಗ್ಗೆ ಭಾರೀ ಲೆಕ್ಕಾಚಾರ ನಡೆಸಿದ್ದಾರೆ. ಪಕ್ಷದ ಬಗ್ಗೆ ಜನರ ವಿಶ್ವಾಸ ಹೆಚ್ಚಿಸಿ ಚುನಾವಣೆಯಲ್ಲಿ ಬಹುಮತ ಸಾಧಿಸಲು ಅನುಕೂಲ ಆಗುವಂತೆ ಈಗಿರುವ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳನ್ನು ತರಬೇಕು ಎಂಬ ನಿಲವಿಗೆ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಬಂದಿದ್ದಾರೆ ಎನ್ನಲಾಗುತ್ತಿದೆ.

ಪ್ರತಿಪಕ್ಷ ಕಾಂಗ್ರೆಸ್‌ ದಿನೇದಿನೇ ರಾಜ್ಯದಲ್ಲಿ ಬಲಗೊಳ್ಳುತ್ತಿರುವುದನ್ನು ಗಮನಿಸುತ್ತಿರುವ ಸಂಘ ಪರಿವಾರದ ನಾಯಕರು ಅದಕ್ಕೆ ಪ್ರತಿಯಾಗಿ ಬಿಜೆಪಿಯಲ್ಲೂ ಜಾತಿ ಸಮೀಕರಣ ಆಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ತಕ್ಕಂತೆ ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಸಿಗಬಹುದು. ಕೆಲವರಿಗೆ ಸಂಪುಟದಿಂದ ಕೊಕ್‌ ನೀಡಬಹುದು. ಒಂದೆರಡು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬಹುದು. ಪಕ್ಷದ ಸಂಘಟನೆಯಲ್ಲಿ ಕೆಲವು ಬದಲಾವಣೆಗಳನ್ನು ತಂದು ಸಂಘಟನೆ ಸಾಮರ್ಥ್ಯ ಹೊಂದಿದವರಿಗೆ ಪ್ರಮುಖ ಸ್ಥಾನಮಾನ ಕೊಡಬಹುದು ಎಂಬಿತ್ಯಾದಿ ಚರ್ಚೆಗಳು ಆಗುತ್ತಿವೆ.

ಹಾಗಂತ ಬದಲಾವಣೆಗಳ ಬಗ್ಗೆ ಒಂದೇ ದಿನದಲ್ಲಿ ನಿರ್ಧಾರ ಕೈಗೊಂಡಿಲ್ಲ. ಕಳೆದ ಹಲವು ದಿನಗಳಿಂದ ಚಿಂತನ ಮಂಥನ ನಡೆಯುತ್ತಲೇ ಇತ್ತು. ಗುಜರಾತ್‌ ಚುನಾವಣೆಯ ಫಲಿತಾಂಶ ಹೊರಬೀಳಲಿ ಎಂಬ ಗಡುವನ್ನೂ ಹಾಕಿಕೊಂಡಿದ್ದರು. ಈಗ ಆ ಗಡುವು ಮುಗಿದಿದೆ. ದಾಖಲೆಯ ಫಲಿತಾಂಶ ಬಂದಿದೆ. ಹೀಗಾಗಿ, ಆ ಅಲೆಯ ಆಧಾರದ ಮೇಲೆ ಕರ್ನಾಟಕದಲ್ಲೂ ಕೆಲವೊಂದು ಬದಲಾವಣೆ ಕೈಗೊಳ್ಳುವುದು ಸೂಕ್ತ ಎಂಬ ಒಮ್ಮತಾಭಿಪ್ರಾಯಕ್ಕೆ ಪಕ್ಷ ಹಾಗೂ ಸಂಘ ಪರಿವಾರದ ನಾಯಕರು ಬರತೊಡಗಿದ್ದಾರೆ. ಆದರೆ, ಅಷ್ಟುಸುಲಭವಲ್ಲ ಎಂಬುದೂ ಅವರಿಗೆ ಗೊತ್ತಿದೆ. ಹೀಗಾಗಿಯೇ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ಮೋದಿ ಆಟ ನಡೆಯಲ್ಲ: ಪ್ರಿಯಾಂಕ್‌ ಖರ್ಗೆ

ಜಾತಿ ಸಮೀಕರಣಕ್ಕಾಗಿ ಡಿಸಿಎಂ ಹುದ್ದೆ ಸೃಷ್ಟಿಸಬೇಕೇ?
- ಪಕ್ಷ ಹಾಗೂ ಸರ್ಕಾರದಲ್ಲಿ ಇನ್ನೇನು ಬದಲಾವಣೆ ಅಗತ್ಯ ಎಂಬ ಕುರಿತು ಭಾರಿ ಚರ್ಚೆ
- ಗುಜರಾತ್‌ ಚುನಾವಣೆ ಫಲಿತಾಂಶಕ್ಕೆ ಮುನ್ನ ಹಾಗೂ ನಂತರ ಆರೆಸ್ಸೆಸ್‌ ಮುಖಂಡರ ಜತೆ ಸಿಎಂ ಮಾತುಕತೆ
- ನಿನ್ನೆ ಆರೆಸ್ಸೆಸ್‌ ಪ್ರಮುಖರಾದ ಮುಕುಂದ, 2 ದಿನಗಳ ಹಿಂದೆ ದತ್ತಾತ್ರೇಯ ಹೊಸಬಾಳೆ ಅವರ ಜತೆ ಭೇಟಿ
- ಗುಜರಾತ್‌ ಯಶಸ್ಸಿಂದ ಬೀಗುತ್ತಿರುವ ಪಕ್ಷದ ಹೈಕಮಾಂಡ್‌ನಿಂದ ರಾಜ್ಯದಲ್ಲೂ ಹಲವು ಪ್ರಯೋಗ ಸಂಭವ
- ಸಂಪುಟ ಕಸರತ್ತು ಮಾಡುವುದಾದರೆ ಡಿ.19ರಿಂದ ಆರಂಭವಾಗಬೇಕಿರುವ ಅಧಿವೇಶನಕ್ಕಿಂತ ಮುನ್ನ ಸಾಧ್ಯತೆ
- ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಯಾವ್ಯಾವ ಬದಲಾವಣೆ ಆಗಬಹುದು ಎಂಬ ಬಗ್ಗೆ ಕುತೂಹಲ

click me!