ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಘೋಷಣೆಯಾಗಿದ್ದು, ನಿರೀಕ್ಷೆಯಂತೆ ಪಕ್ಷದಿಂದ ಒಂದು ಕಾಲು ಆಚೆ ಇಟ್ಟಿರುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಸತಿ ಸಚಿವ ವೀರಣ್ಣ ಸೋಮಣ್ಣರಿಗೆ ಕೊಕ್ ನೀಡಲಾಗಿದೆ.
ಬೆಂಗಳೂರು (ಮಾ.10): ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ, ಪ್ರಚಾರ ಸಮಿತಿ ಹಾಗೂ ನಿರ್ವಹಣಾ ಸಮಿತಿಗಳನ್ನು ನೇಮಿಸಿ ಪ್ರಕಟಣೆ ಹೊರಡಿಸಿದೆ. ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಬಹುದು ಎನ್ನುವ ಸುದ್ದಿಗಳು ಈ ಹಿಂದೆ ಬಂದಿದ್ದವು. ಆದರೆ, ಇದೆಲ್ಲದಕ್ಕೂ ತೆರೆ ಎಳೆದಿರುವ ಬಿಜೆಪಿ, ಬೊಮ್ಮಾಯಿಗೆ ಅಧ್ಯಕ್ಷ ಸ್ಥಾನ ನೀಡಿದ್ದರೆ, ಬಿಎಸ್ವೈ ಅವರನ್ನು ಸದಸ್ಯರನ್ನಾಗಿ ಉಳಿಸಿಕೊಂಡಿದೆ. 25 ಸದಸ್ಯರ ತಂಡವನ್ನು ರಚನೆ ಮಾಡಿದ್ದು, ರಮೇಶ್ ಜಾರಕಿಹೊಳಿಗೂ ಅವಕಾಶ ನೀಡಲಾಗಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸೂಚನೆಯ ಮೇರೆಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಹಾಗೂ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಸಮಿತಿಗಳನ್ನು ರಚನೆ ಮಾಡಿದ್ದಾರೆ. ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿ 25 ಸದಸ್ಯರು ನೇಮಕ ಮಾಡಿದ್ದು, ಸದಸ್ಯ ಸ್ಥಾನಕ್ಕೆ ಬಿವೈ ವಿಜಯೇಂದ್ರ ಅವರಿಗೂ ಅವಕಾಶ ನೀಡಲಾಗಿದೆ.
ಚುನಾವಣಾ ನಿರ್ವಹಣಾ ಸಂಚಾಲಕರಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇಮಕ ಮಾಡಲಾಗಿದೆ. ಚುನಾವಣಾ ನಿವರ್ಹಣಾ ಸಮಿತಿಯಲ್ಲಿ ಶೋಭಾ ಕರಂದ್ಲಾಜೆ ಸೇರಿದಂತೆ 14 ಮಂದಿಯನ್ನು ನೇಮಕ ಮಾಡಲಾಗಿದೆ.
ಚುನಾವಣೆಗೆ ಬಿಎಸ್ವೈ, ಸೋಮಣ್ಣ ಒಟ್ಟಾಗಿ ಹೋಗಬೇಕು: ಮುಖಂಡರು, ಕಾರ್ಯಕರ್ತರ ಅಭಿಮತ
ನಾನು ಹರಿಯೋ ನೀರು ಎಂದ ಸೋಮಣ್ಣ: ಪ್ರಚಾರ ಸಮಿತಿಯಲ್ಲಿ ಗೋವಿಂದರಾಜನಗರ ಶಾಸಕ ಹಾಗೂ ವಸತಿ ಸಚಿವ ಸೋಮಣ್ಣ ಹೆಸರು ಪ್ರಮುಖವಾಗಿ ಮಿಸ್ ಆಗಿದೆ. ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಹೆಚ್ಚಿರುವ ಕಾರಣ, ಇದರಿಂದ ಪಕ್ಷಕ್ಕೆ ಮುಜುಗರವಾಗಬಾರದು ಎನ್ನುವ ದೃಷ್ಟಿಯಲ್ಲಿ ಬಿಜೆಪಿ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ.
ನಡ್ಡಾ ಕಾರ್ಯಕ್ರಮಕ್ಕೇ ಸಚಿವ ಸೋಮಣ್ಣ ಗೈರು..!
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋಮಣ್ಣ, 'ನಾನು ನಿಂತ ನೀರಲ್ಲ. ಹರಿಯೋ ನೀರು. ಮನೆ ಮಗನಾಗಿ ಕ್ಷೇತ್ರದ ಜನರು ನೋಡಿದ್ದಾರೆ. ನಾನು ಯಾರ ಬಗ್ಗೆಯೂ ಒಂದು ಅಕ್ಷರವೂ ಮಾತನಾಡಿಲ್ಲ. ರಾಜ್ಯಾಧ್ಯಕ್ಷರು, ಸಿಎಂ ಜೊತೆ ಕೆಲವು ವಿಷಯಗಳ ಬಗ್ಗೆ ಮಾತಾಡಿದ್ದೇನೆ. ಕ್ಷೇತ್ರದ ಜನರು ನನ್ನನ್ನ ಮನೆ ಮಗನಾಗಿ ನೋಡಿಕೊಂಡಿದ್ದಾರೆ. ನನಗೆ ಇವಾಗ 72 ವರ್ಷ, ಇವಾಗ ನನಗೆ ಆಗಬೇಕಿದ್ದು ಏನು ಇಲ್ಲ. ಆದರೆ ಸೋಮಣ್ಣ ಮಾತ್ರ ಹರಿಯೋ ನೀರು ಅನ್ನೋದರ ಬಗ್ಗೆ ಎಚ್ಚರಿಕೆಯಿರಬೇಕು' ಎಂದು ಹೇಳುವ ಮೂಲಕ ತಾವು ಕಾಂಗ್ರೆಸ್ಗೆ ಸೇರುವ ಸುಳಿವು ನೀಡಿದ್ದಾರೆ. ಪ್ರಚಾರ ಸಮಿತಿಯಲ್ಲಿ ಅವಕಾಶ ನೀಡದೇ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಬಗ್ಗೆ ನಾನು ಏನು ಮಾತಾಡೋದಿಲ್ಲ ಎಂದು ಹೇಳಿದ್ದಾರೆ.'
ಬಿಜೆಪಿ ಚುನಾವಣಾ ಪ್ರಚಾರ ಸಮಿತಿ
ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ