Mekedatu ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಸಿದ್ದು ಸರ್ಕಾರವೇ ಕಾರಣ: ಬಿಜೆಪಿ

Kannadaprabha News   | Asianet News
Published : Jan 09, 2022, 12:50 PM IST
Mekedatu ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಸಿದ್ದು ಸರ್ಕಾರವೇ ಕಾರಣ: ಬಿಜೆಪಿ

ಸಾರಾಂಶ

*   ಅಧಿಕಾರದಲ್ಲಿದ್ದಾಗ ಕಾಲಹರಣ ಮಾಡಿ ಈಗ ಸುಳ್ಳಿನ ಜಾತ್ರೆ *   ಜಾಗತಿಕ ಪ್ರಸ್ತಾವನೆ ಕರೆದು 2018ರವರೆಗೂ ಕಣ್ಣುಮುಚ್ಚಿ ಕುಳಿತುಕೊಂಡಿದ್ದೇ ಕಾಂಗ್ರೆಸ್‌ ಸಾಧನೆ *   ಕಾಂಗ್ರೆಸ್‌ ಸರ್ಕಾರ ಎಸಗಿದ ಪ್ರಮಾದದಿಂದ ಈಗ ‘ಕಾವೇರಿ’ ಕಣ್ಣೀರು ಸುರಿಸುವಂತಾಗಿದೆ 

ಬೆಂಗಳೂರು(ಜ.09): ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ನೇತೃತ್ವದ ಕಾಂಗ್ರೆಸ್‌ ಸರ್ಕಾರವೇ(Congress Government) ನೇರ ಕಾರಣ ಎಂದು ರಾಜ್ಯ ಬಿಜೆಪಿ(BJP) ಆರೋಪ ಮಾಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ, 2014ರಲ್ಲಿ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಜಾಗತಿಕ ಪ್ರಸ್ತಾವನೆ ಕರೆದು 2018ರವರೆಗೂ ಕಣ್ಣುಮುಚ್ಚಿ ಕುಳಿತುಕೊಂಡಿದ್ದೇ ಕಾಂಗ್ರೆಸ್‌ ಸಾಧನೆಯಾಗಿದೆ. ಕಾಂಗ್ರೆಸ್ಸಿಗರು ಆಗ ಕಾಲಹರಣ ಮಾಡಿ, ಈಗ ಸುಳ್ಳಿನ ಜಾತ್ರೆ ಮಾಡುತ್ತಿದ್ದಾರೆ. 2014ರಿಂದ 2018ರವರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮೇಕೆದಾಟು ಯೋಜನೆ ವಿಚಾರದಲ್ಲಿ ಎಸಗಿದ ಪ್ರಮಾದದಿಂದ ಈಗ ‘ಕಾವೇರಿ’(Kaveri) ಕಣ್ಣೀರು ಸುರಿಸುವಂತಾಗಿದೆ. ಕೇಂದ್ರದಿಂದ(Central Government) ಒಪ್ಪಿಗೆ ಮತ್ತು ಅನುದಾನ(Grants) ಪಡೆಯುವಾಗ ನಿದ್ದೆಗೆ ಜಾರಿ ಈಗ ಪಾದಯಾತ್ರೆಯ ನಾಟಕವಾಡುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದೆ.

Mekedatu Padayatre: ನನ್ನ ಹುಟ್ಟು ಹೆಸರು ಕೆಂಪೇಗೌಡ, ನಂತರ ಶಿವಕುಮಾರ್ ಅಂತಿಟ್ರು: ಡಿಕೆಶಿ

ಅಂತಾರಾಜ್ಯ ಜಲ ವಿವಾದ(Interstate Water Dispute) ಸಂದರ್ಭದಲ್ಲಿ ವಿವೇಕಯುತ ಹೋರಾಟ ಅಗತ್ಯವಿದೆ ಎಂಬ ಪಾಠವನ್ನು ಇತಿಹಾಸದಿಂದಲೂ ಕಲಿತಿಲ್ಲವೇ? ಈ ಹಿಂದೆ ಕಾವೇರಿ ಪಾದಯಾತ್ರೆ ನಡೆಸಿ ಸುಪ್ರೀಂಕೋರ್ಟ್‌ನಿಂದ(Supreme Court) ಛೀಮಾರಿ ಹಾಕಿಸಿಕೊಂಡ ಘಟನೆ ನೆನಪಿರಬೇಕಲ್ಲವೇ? ರಾಜಕೀಯಕ್ಕಾಗಿ ರಾಜ್ಯದ ಮರ್ಯಾದೆಯನ್ನೇಕೆ ಹರಾಜು ಹಾಕುತ್ತಿದ್ದೀರಿ? ಮೇಕೆದಾಟು ಯೋಜನೆಗೆ ನಾಳೆಯೇ ಭೂಮಿಪೂಜೆ ನಡೆಸಿ ಎಂದು ಅಬ್ಬರಿಸುತ್ತಿರುವ ಕಾಂಗ್ರೆಸ್‌ ನಾಯಕರೇ ನಮ್ಮ ಪ್ರಶ್ನೆಗೆ ಉತ್ತರಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಮೇಕೆದಾಟು ಯೋಜನೆ ಸಂಬಂಧ ಅನಗತ್ಯ ಕಾಲಹರಣ ಮಾಡಿದ್ದು ಯಾರು? ಅಧಿಕಾರದಲ್ಲಿದ್ದಾಗ ಕಡತ ಯಜ್ಞ ಮಾಡದೆ, ವಿರೋಧ ಪಕ್ಷವಾದಾಗ ಆಂದೋಲನ ನಡೆಸುವುದು ಎಷ್ಟುಸರಿ? ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಾಕಿ ಇದೆ. ಈ ಹಂತದಲ್ಲಿ ಯೋಜನೆ ಜಾರಿಗೆ ಮುಂದಾಗುವುದು, ಜಾರಿಗಾಗಿ ಒತ್ತಡ ಹೇರುವುದು ನ್ಯಾಯಾಂಗ ನಿಂದನೆಯಲ್ಲವೇ? ಈ ಕನಿಷ್ಠ ಪ್ರಜ್ಞೆಯೂ ಕಾಂಗ್ರೆಸ್‌ ನಾಯಕರಿಗಿಲ್ಲವೇ? ಸೆಕ್ಷನ್‌ ಸಿದ್ದರಾಮಯ್ಯ ಈ ವಿಚಾರದಲ್ಲಿಯೂ ಬುರುಡೆ ಬಿಡುತ್ತಾರಾ ಎಂದು ವಾಗ್ದಾಳಿ ನಡೆಸಿದೆ.

ಅಂತಾರಾಜ್ಯ ಜಲವಿವಾದ ಒಂದು ಸೂಕ್ಷ್ಮ ವಿಚಾರವಾಗಿದ್ದು, ರಾಜ್ಯ ಸರ್ಕಾರ ಈ ಸಂಬಂಧ ಎಚ್ಚರಿಕೆ ಮತ್ತು ವಿವೇಕದ ಹೆಜ್ಜೆ ಇಡುತ್ತಲೇ ಬಂದಿದೆ. ಸಂಘರ್ಷದಿಂದ ವ್ಯಾಜ್ಯ ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ಸಿಗರು ಸುಳ್ಳಿನ ಜಾತ್ರೆ ಮಾಡುವ ಬದಲು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ತಮ್ಮ ಮಿತ್ರಪಕ್ಷವು ಹಸಿರು ಪೀಠದಲ್ಲಿ ಹೂಡಿದ ದಾವೆ ವಾಪಸ್‌ ತೆಗೆಸಲಿ ಎಂದು ಒತ್ತಾಯಿಸಿದೆ.

ಸಿದ್ದು ಸರ್ಕಾರ ಮೇಕೆದಾಟು ಮರೆತಿತ್ತು: ಕಾರಜೋಳ

ಮೇಕೆದಾಟು ಯೋಜನೆ (Mekedatu Poject) ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್‌ (Congress) ಸರ್ಕಾರ ವಿಳಂಬ ಧೋರಣೆ ಅನುಸರಿಸಿದ್ದು, 2013-18ರ ಅವಧಿಯಲ್ಲಿ ಏನನ್ನೂ ಮಾಡಲಿಲ್ಲ. ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಬರಬೇಕಾಯಿತಾ ಎಂದು ಕಾಂಗ್ರೆಸ್‌ ವಿರುದ್ಧ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govind Karjol) ಟೀಕಾ ಪ್ರಹಾರ ನಡೆಸಿದ್ದಾರೆ.

Karnataka Politics: 'ಎಂ.ಬಿ. ಪಾಟೀಲ್‌ ರಾಜಕಾರಣಿಯಾಗಿರಲು ನಾಲಾಯಕ್‌'

ಕಾಂಗ್ರೆಸ್‌ ಹೊಣೆಗೇಡಿತನ ಕುರಿತು ಸ್ಫೋಟಕ ಮಾಹಿತಿ ಬಹಿರಂಗಪಡಿಸುವುದಾಗಿ ಹೇಳಿಕೆ ನೀಡಿದ್ದ ಸಚಿವರು ಗುರುವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮೇಕೆದಾಟು ಯೋಜನೆ ಅನುಷ್ಠಾನದಲ್ಲಿ ಕಾಂಗ್ರೆಸ್‌ನ ವಿಳಂಬ ನೀತಿಯ ಕೆಲ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

2013ರ ನ.5ರಂದು ಸರ್ಕಾರಕ್ಕೆ ಪತ್ರ

4ಜಿ ವಿನಾಯಿತಿ ನೀಡಬೇಕು ಎಂದು ಕಾವೇರಿ ನೀರಾವರಿ ನಿಗಮದಿಂದ 2013ರ ನ.5ರಂದು ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. 2014ರ ಏ.7ರಂದು ಸರ್ಕಾರ ಆ ಪ್ರಸ್ತಾವನೆಯನ್ನು ತಿರಸ್ಕರಿಸಿ ಟೆಂಡರ್‌ ಕರೆಯಬೇಕು ಎಂದು ತಿಳಿಸಿತ್ತು. 2018ರ ಡಿಸೆಂಬರ್‌ನಲ್ಲಿ 4ಜಿ ವಿನಾಯಿತಿ ನೀಡುವಂತೆ ಮತ್ತೊಮ್ಮೆ ಕೇಳಲಾಗುತ್ತದೆ. 2019ರ ಜನವರಿಯಲ್ಲಿ 4ಜಿ ವಿನಾಯಿತಿಗೆ ಅನುಮತಿ ನೀಡಲಾಗುತ್ತದೆ. ಇದು ಸಮ್ಮಿಶ್ರ ಸರ್ಕಾರದಲ್ಲಿ ಆಗಿದ್ದು. ಆಗ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜಲಸಂಪನ್ಮೂಲ ಸಚಿವರಾಗಿದ್ದರು ಎಂದು ವಿವರಿಸಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ನಾನೀಗ ಮನೆಯನ್ನು ಕಂಟ್ರೋಲ್‌ ಮಾಡಲಾಗ್ತಿಲ್ಲ, ವಿಲನ್‌ ಬಂದ್ರು ಎಂದು ನಡುಗಿದ Bigg Boss