Karnataka Politics: 'ಎಂ.ಬಿ. ಪಾಟೀಲ್‌ ರಾಜಕಾರಣಿಯಾಗಿರಲು ನಾಲಾಯಕ್‌'

By Kannadaprabha NewsFirst Published Jan 9, 2022, 7:59 AM IST
Highlights

*  ಕಾಂಗ್ರೆಸ್‌ ಸರಕಾರದ ವೈಫಲ್ಯವನ್ನು ಜನರ ಮುಂದೆ ಎಳೆಎಳೆಯಾಗಿ ಬಿಚ್ಚಿಡುತ್ತಿರುವ ಕಾರಜೋಳ
*  ಪಾಟೀಲ್‌ ದಡ್ಡತನಕ್ಕೆ ರಾಜ್ಯ ಉತ್ತರ ಕೊಡಬೇಕಾಗಿದೆ 
*  ಪಾಟೀಲ್‌ ತಕ್ಷಣ ದಲಿತ ಸಮುದಾಯ ಮತ್ತು ರಾಜ್ಯದ ಜನರ ಕ್ಷಮೆ ಕೇಳಬೇಕು

ಹುಬ್ಬಳ್ಳಿ(ಜ.09): ಮೇಕೆದಾಟು ಯೋಜನೆ(Mekedatu Project) ವಿಚಾರದಲ್ಲಿ ಅನಾಹುತ ಮತ್ತು ಅನಪೇಕ್ಷಿತ ವಿಳಂಬಕ್ಕೆ ಹಿಂದಿನ ಕಾಂಗ್ರೆಸ್‌ ಸರಕಾರದ ನೀರಾವರಿ ಸಚಿವ ಎಂ.ಬಿ. ಪಾಟೀಲರೇ(MB Patil) ಕಾರಣ ಎಂದು ಬಿಜೆಪಿ(BJP)ಎಸ್‌.ಸಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹೇಂದ್ರ ಕೌತಾಳ(Mahendra Kautala) ಕಿಡಿಕಾರಿದ್ದಾರೆ.

ಈಗ ನೀರಾವರಿ ಸಚಿವರಾಗಿರುವ ಗೋವಿಂದ ಕಾರಜೋಳ(Govind Karjol)ಅವರು ಕಾಂಗ್ರೆಸ್ಸಿಗರಿಂದ ಆಗಿರುವ ಸಮಸ್ಯೆಗಳನ್ನು ಮತ್ತು ಕಾಂಗ್ರೆಸ್‌ ಸರಕಾರದ ವೈಫಲ್ಯವನ್ನು ಜನರ ಮುಂದೆ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಇದರಿಂದ ಕುಪಿತಗೊಂಡ ಎಂ.ಬಿ. ಪಾಟೀಲ ಅವರು ಕಾರಜೋಳ ಅವರನ್ನು ನಾಲಾಯಕ್‌ ಎಂದು ಕೆಟ್ಟಕೆಟ್ಟದಾಗಿ ಬೈದಿದ್ದಾರೆ. ಅವರು ಪರಿಶಿಷ್ಟ ಜಾತಿಯವರು(Scheduled Caste) ಎಂಬ ಕಾರಣಕ್ಕೇ ಇಷ್ಟೊಂದು ಕೀಳು ಭಾಷೆಯನ್ನು ಬಳಸಿದ್ದಾರೆ ಎಂದು ಖಂಡಿಸಿದ್ದಾರೆ.

Mekedatu Politics: ಸಿದ್ದು ಸರ್ಕಾರ ಮೇಕೆದಾಟು ಮರೆತಿತ್ತು: ಕಾರಜೋಳ

ಬೇರೆ ಯಾರಾದರೂ ಇದ್ದರೆ ಕೀಳು ಭಾಷೆ ಬಳಸುತ್ತಿರಲಿಲ್ಲ. ಇವರ ದಡ್ಡತನಕ್ಕೆ ರಾಜ್ಯ ಉತ್ತರ ಕೊಡಬೇಕಾಗಿದೆ. ತಮ್ಮ ವೈಫಲ್ಯ ಮುಚ್ಚಿಡಲು ಬಿಜೆಪಿಯ ವಿರುದ್ಧ ಟೀಕಿಸುತ್ತಿದ್ದಾರೆ. ಇದು ಅತ್ಯಂತ ಹಾಸ್ಯಾಸ್ಪದ. ಕಾರಜೋಳ ಅವರು ಉತ್ತಮ ಮತ್ತು ದೂರದೃಷ್ಟಿಯ ಸಚಿವರು. ಆದರೆ, ಎಂ.ಬಿ. ಪಾಟೀಲರು ನಾಲಾಯಕ್‌ ಮಂತ್ರಿಯಾಗಿದ್ದರು ಎಂದು ಟೀಕಿಸಿದ್ದಾರೆ.

ಕಾರಜೋಳ ಅವರು ದಲಿತರಾದರೂ(Dalit) ದೇಶದ ಸಂವಿಧಾನಕರ್ತೃ ಡಾ. ಬಿ.ಆರ್‌. ಅಂಬೇಡ್ಕರ್‌(Dr BR Ambedkar), ಜಗಜೀವನರಾಂ, ರಾಂವಿಲಾಸ್‌ ಪಾಸ್ವಾನ, ಕರ್ನಾಟಕದ ಬಸವಲಿಂಗಪ್ಪ, ಎನ್‌. ರಾಚಯ್ಯ, ಬಿ. ರಾಚಯ್ಯ, ಟಿ.ಎನ್‌. ನರಸಿಂಹಮೂರ್ತಿ ಅವರ ಮಾದರಿಯಲ್ಲೇ ದೂರದೃಷ್ಟಿಯ ರಾಜಕಾರಣಿ(Politician). ಅವರ ಕುರಿತು ನೀಚ ಭಾಷೆಯನ್ನು ಬಳಸಿ ಅವರನ್ನು ನಿಂದಿಸಿರುವುದು ದಲಿತ ಸಮುದಾಯಕ್ಕೇ ಮಾಡಿದ ನಿಂದನೆ ಮತ್ತು ಅವಮಾನ ಎಂದು ತಿಳಿಸಿದ್ದಾರೆ.

ಎಂ.ಬಿ. ಪಾಟೀಲರಿಗೆ ಯಾವ ರೀತಿ ನಡೆದುಕೊಳ್ಳಬೇಕೆಂಬ ಸೌಜನ್ಯವೇ ಇಲ್ಲ. ಸಿದ್ದರಾಮಯ್ಯನವರು(Siddaramaiah) ದಲಿತರು ಹೊಟ್ಟೆಪಾಡಿನವರು ಎನ್ನುತ್ತಾರೆ. ಅದೇ ಕಾಂಗ್ರೆಸ್‌ನ ಎಂ.ಬಿ.ಪಾಟೀಲರು ದಲಿತರನ್ನು ಅಯೋಗ್ಯರು ಎನ್ನುತ್ತಾರೆ. ದಲಿತರು ಕಾಂಗ್ರೆಸ್‌ ಪಕ್ಷದವರಿಗೆ ಅಯೋಗ್ಯರಾಗಿ ಕಾಣುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಮೇಕೆದಾಟು ಯೋಜನೆ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರ ಸರಕಾರ ಮೊದಲ ಬಾರಿ ಅಧಿಕಾರದಲ್ಲಿ ಇದ್ದಾಗ ಚಾಲನೆಗೆ ಬಂದಿದೆ. ಬಳಿಕ 2014ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಈ ಯೋಜನೆಗೆ ಚಾಲನೆ ಕೊಡಬೇಕಿತ್ತು. ಆದರೆ, ಆಗ ನೀರಾವರಿ ಸಚಿವರಾಗಿದ್ದ ಎಂ.ಬಿ. ಪಾಟೀಲರು ನಿದ್ದೆ ಮಾಡಿದ್ದರಿಂದ ಯೋಜನೆ ವಿಳಂಬವಾಗಿದೆ ಎಂದು ಮಹೇಂದ್ರ ಕೌತಾಳ ಆಕ್ಷೇಪಿಸಿದ್ದಾರೆ. ಎಂ.ಬಿ. ಪಾಟೀಲರು ತಕ್ಷಣ ದಲಿತ ಸಮುದಾಯ ಮತ್ತು ರಾಜ್ಯದ ಜನರ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರ ವಿರುದ್ಧ ರಾಜ್ಯಾದ್ಯಂತ ಹೋರಾಟ ಸಂಘಟಿಸಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಕಾರಜೋಳ ಹೇಳಿಕೆ ಶುದ್ಧ ಸುಳ್ಳು: ನಮ್ಮ ಅವಧಿಯಲ್ಲೇ ಕೇಂದ್ರಕ್ಕೆ ಡಿಪಿಆರ್‌ ಸಲ್ಲಿಕೆ: ಸಿದ್ದು, ಡಿಕೆಶಿ

ಮೇಕೆದಾಟು ಬಗ್ಗೆ ಕಾರಜೋಳರಿಂದ ತಪ್ಪು ಮಾಹಿತಿ: ಎಂಬಿಪಾ ಸಿಡಿಮಿಡಿ

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಮೇಕೆದಾಟು ಯೋಜನೆ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನ್ಯಾಯಾಲಯದಲ್ಲಿರುವ ಜಲವಿವಾದದ ಬಗ್ಗೆ ಬೇಕಾಬಿಟ್ಟಿಜಾಹೀರಾತು ನೀಡಿ ಚಿಲ್ಲರೆ ವರ್ತನೆ ತೋರಿದ್ದಾರೆ. ಅವರು ಜಲಸಂಪನ್ಮೂಲ ಸಚಿವರಾಗಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಅವರ ಸಂಪುಟದಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದೆ. ಆಗ ಬೆಂಗಳೂರಿಗೆ ಹೆಚ್ಚುವರಿ ಕುಡಿಯುವ ನೀರಿನ ಅವಶ್ಯಕತೆಯನ್ನು ನ್ಯಾಯಾಧಿಕರಣಕ್ಕೆ ಮನವರಿಕೆ ಮಾಡಿಕೊಡಲಾಯಿತು. ಇದರ ಫಲವಾಗಿ ನಮಗೆ ಹೆಚ್ಚುವರಿಯಾಗಿ 4.75 ಟಿಎಂಸಿ ನೀರು ಸಿಕ್ಕಿತು. ಇದರ ಐದು ಪಟ್ಟು ಅಂದರೆ 23 ಟಿಎಂಸಿಯಷ್ಟುನೀರು ಸಂಗ್ರಹಕ್ಕೆ ಅವಕಾಶ ದೊರೆಯಿತು. ಹಾಗಾಗಿ ಮೇಕೆದಾಟು ಯೋಜನೆಗೆ ಶಕ್ತಿ ಬಂತು. ನಂತರ ಯೋಜನೆಗೆ ಸಮಗ್ರ ಯೋಜನಾ ವರದಿ(ಡಿಪಿಆರ್‌) ಸಿದ್ಧಪಡಿಸಿ ಕಾಂಗ್ರೆಸ್‌ ಸರ್ಕಾರ ಕೇಂದ್ರದ ಅನುಮತಿಗೆ ಕಳುಹಿಸಿತು. ಆದರೆ, ಅಂತರಾಜ್ಯ ಜಲವಿವಾದದ ಬಗ್ಗೆ ತಳ ಬುಡ ಗೊತ್ತಿಲ್ಲದ ಗೋವಿಂದ ಕಾರಜೋಳ ಅವರು ಡಿಪಿಆರ್‌ ಸಿದ್ಧಪಡಿಸಿದ್ದು ಬಿಜೆಪಿ ಸರ್ಕಾರದಲ್ಲಿ ಎಂದು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಬೇಕಾಬಿಟ್ಟಿಜಾಹೀರಾತು ನೀಡುತ್ತಿದ್ದಾರೆ. ಮೂರ್ಖ ಮಂತ್ರಿಯಿಂದ ಇಂತಹದ್ದು ನಡೆಯಲು ಸಾಧ್ಯ. ಜಲ ಸಂಪನ್ಮೂಲ ಸಚಿವರಾಗಿರಲು ಅವರಿಗೆ ನೈತಿಕತೆ ಇಲ್ಲ ಎಂದು ಹೇಳಿದರು.
 

click me!