Chikkamagaluru: ‘ಭಾರತ್‌ ಜೋಡೋ’ ಏಕೆಂದು ಅರ್ಥವಾಗ್ತಿಲ್ಲ: ಶೋಭಾ ಕರಂದ್ಲಾಜೆ

By Govindaraj SFirst Published Nov 5, 2022, 11:33 PM IST
Highlights

ದೇಶದಲ್ಲಿ ಕಾಂಗ್ರೆಸ್‌ ಅಸ್ತಿತ್ವವನ್ನು ಕಳೆದುಕೊಂಡಿದೆ. ಭಾರತ್‌ ಜೋಡೋ ಯಾತ್ರೆ ಮೂಲಕ ರಾಹುಲ್‌ ಗಾಂಧಿ ಏನು ಸಾಬೀತು ಮಾಡಲು ಹೊರಟಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಚಿಕ್ಕಮಗಳೂರು (ನ.05): ದೇಶದಲ್ಲಿ ಕಾಂಗ್ರೆಸ್‌ ಅಸ್ತಿತ್ವವನ್ನು ಕಳೆದುಕೊಂಡಿದೆ. ಭಾರತ್‌ ಜೋಡೋ ಯಾತ್ರೆ ಮೂಲಕ ರಾಹುಲ್‌ ಗಾಂಧಿ ಏನು ಸಾಬೀತು ಮಾಡಲು ಹೊರಟಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಘೋಷಣೆಯಾಗಿದೆ. ಸ್ವತಂತ್ರ ಭಾರತದ ನಂತರ ಅನೇಕ ವರ್ಷ ಕಾಂಗ್ರೆಸ್‌ ಆಡಳಿತ ನಡೆಸಿತ್ತು. ಆದರೆ, ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ರಾಜಕೀಯ ಪಕ್ಷ ಇರುವುದು ಚುನಾವಣೆ ಎದುರಿಸಲು. ಆದರೆ, ಚುನಾವಣೆ ಘೋಷಣೆಯಾದ ಬಳಿಕವು ರಾಹುಲ್‌ ಗಾಂಧಿ ಅವರು ‘ಭಾರತ್‌ ಜೋಡೋ’ ಯಾತ್ರೆಯನ್ನು ಯಾಕೆ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಮಹಾತ್ಮ ಗಾಂಧೀಜಿ ಕಾಂಗ್ರೆಸ್‌ ವಿಸರ್ಜನೆ ಮಾಡಿ ಎಂದು ಹೇಳಿದರು. ಅಂದಿನಿಂದ ಇಂದಿನ ಕಾಂಗ್ರೆಸ್‌ ಸತ್ತುಹೋಗಿದೆ. ಹೊಸ ಕಾಂಗ್ರೆಸ್‌ ದೇಶವನ್ನು ಮುನ್ನಡೆಸಲು ಬಂದಿದ್ದಾರೆ, ಆದರೆ, ಅವರ ಅಸ್ತಿತ್ವವೇ ಇಲ್ಲ ಎಂದು ಎಂದರು. ರಾಹುಲ್‌ ಗಾಂಧಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರೂ ಸಂಪೂರ್ಣವಾಗಿ ವಿಫಲರಾದರೂ, ಪ್ರಿಯಾಂಕ ಗಾಂಧಿ ಅವರನ್ನು ಉತ್ತರ ಪ್ರದೇಶದಲ್ಲಿ ಚುನಾವಣೆಗೆ ನೇಮಕ ಮಾಡಲಾಯಿತು. ಅಲ್ಲಿ ಒಂದು ಸೀಟು ಗೆಲ್ಲಲು ಸಾಧ್ಯವಾಗಲಿಲ್ಲ. 

Chikkamagaluru: ಕಾಡಾನೆ ಸೆರೆ ಕಾರ್ಯಾಚರಣೆಗೆ ಬಂದ ಆನೆ ಅಭಿಮನ್ಯುವಿಗೆ ಅನಾರೋಗ್ಯ

25-30 ವರ್ಷದಿಂದ ಒಂದು ಕುಟುಂಬದ ಅಧ್ಯಕ್ಷತೆಯನ್ನು ಬಿಡಿಸಿ ನಮ್ಮ ರಾಜ್ಯದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ‘ಭಾರತ್‌ ಜೋಡೋ’ ಯಾತ್ರೆ ಮೂಲಕ ಏನು ಸಾಬೀತು ಮಾಡಲು ಹೊರಟಿದ್ದಾರೆಂದು ಅರ್ಥವಾಗುತ್ತಿಲ್ಲ ಎಂದರು. ಭಾರತ ಜೋಡಿಸಬೇಕಿರುವುದು ಭಾರತದ ಒಳಗಲ್ಲ. ಭಾರತದ ಸೀಮೆಗಳಲ್ಲಿ. ಭಾರತದ ಗಡಿ ಪ್ರದೇಶದಲ್ಲಿರುವ ಗೊಂದಲಕ್ಕೆ, ಭಯೋತ್ಪಾದನೆ ಹೆಚ್ಚಾಗಲು ಅಂದು ಕಾಂಗ್ರೆಸ್‌ ಪಕ್ಷ ತೆಗೆದುಕೊಂಡ ತಪ್ಪು ನಿರ್ಧಾರಗಳು ಕಾರಣ ಎಂದ ಸಚಿವರು, ‘ಭಾರತ್‌ ಜೋಡೋ’ ಅಗತ್ಯವಿರುವುದು ಗಡಿ ಪ್ರದೇಶದಲ್ಲಿ ಎಂದು ತೀರುಗೇಟು ನೀಡಿದರು.

ಕಾಂಗ್ರೆಸ್‌ ನಾಯಕರಲ್ಲಿ ಗೊಂದಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯನ್ನು ಮೊದಲು ಸರಿಮಾಡಿಕೊಳ್ಳಬೇಕಿದೆ. ‘ಭಾರತ್‌ ಜೋಡೋ’ ಯಾತ್ರೆಯಲ್ಲಿ ಎರಡು ಗುಂಪುಗಳಲ್ಲಿ ಜನ ತಂದರು, ಅವರ ನಾಯಕರಲ್ಲಿ ಗೊಂದಲವಿದೆ. ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಲು ಬಿಡುತ್ತಾರಾ ಎಂದು ಪ್ರಶ್ನಿಸಿದರು. ನೀವೇ ಮುಖ್ಯಮಂತ್ರಿ ಎಂದು ಯಾರು ಘೋಷಣೆ ಮಾಡಿದ್ದಾರೆ? ಹಿರಿಯ ನಾಯಕ ಪರಮೇಶ್ವರ್‌ ಅವರು ‘ಭಾರತ್‌ ಜೋಡೋ’ ಯಾತ್ರೆಯಲ್ಲಿ ಭಾಗವಹಿಸಿಲ್ಲ. ಒಂದು ವರ್ಗವನ್ನು ಬಿಟ್ಟು ಎಲ್ಲವನ್ನು ಮಾಡುತ್ತಿದ್ದಾರೆ. ಆದ್ದರಿಂದ ನಿಮ್ಮ ಮುಖ್ಯಮಂತ್ರಿ ಕನಸು ಕನಸಾಗಿ ಉಳಿಯುತ್ತದೆ. 

ಅದಕ್ಕೆ ರಾಜ್ಯದ ಜನತೆ ಅವಕಾಶ ನೀಡುವುದಿಲ್ಲ, ನಿಮ್ಮ ತೊಘಲಕ್‌ ದರ್ಬಾರ್‌, ಟಿಪ್ಪು ದರ್ಬಾರ್‌ ಆಡಳಿತವನ್ನು ಜನರು ನೋಡಿದ್ದಾರೆ. ಮತ್ತೇ ಅಧಿಕಾರ ನೀಡುವುದಿಲ್ಲ ಎಂದರು. ಭ್ರಷ್ಟಾಚಾರ ನಡೆಸಿದ್ದರೆ ಸಾಕ್ಷಿ ಏನಿದೆ? ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡುವುದು ಸಾಮಾನ್ಯ. ಆಧಾರರಹಿತ ಆರೋಪವನ್ನು ಜನರು ಒಪ್ಪುವುದಿಲ್ಲ. ಕಸ್ತೂರಿ ರಂಗನ್‌ ವರದಿ ಬಗ್ಗೆ ಸಂಸದರು ಬಾಯಿ ಬಿಡುತ್ತಿಲ್ಲ ಎಂಬ ಮಧು ಬಂಗಾರಪ್ಪ ಪ್ರಶ್ನೆಗೆ ಉತ್ತರಿಸಿದ ಅವರು, ಕಸ್ತೂರಿ ರಂಗನ್‌ ವರದಿ ಕಾಂಗ್ರೆಸ್‌ ಕೂಸು, ಪ್ರಧಾನಿ ನರೇಂದ್ರ ಮೋದಿ ಅವರು ವರದಿಯಿಂದ ರೈತರಿಗೆ ತೊಂದರೆ ಆಗಬಾರದು ಎಂಬ ದೃಷ್ಠಿಯಿಂದ ನಿರ್ಧಾರ ತಗೆದುಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ಇದ್ದು, ರೈತರು ಜನವಸತಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪ್ರಾಮಾಣಿಕರಾಗಿದ್ರೆ ಭ್ರಷ್ಟಾಚಾರ ನ್ಯಾಯಾಂಗ ತನಿಖೆ ನಡೆಸಿ: ಸಿದ್ದರಾಮಯ್ಯ ಸವಾಲು

ವಿದ್ಯುತ್‌ ಖಾಸಗೀಕರಣ ಸಂಬಂಧ ಮಧು ಬಂಗಾರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿ, ಆ ರೀತಿಯ ಯಾವ ಸುತ್ತೋಲೆ ಬಂದಿಲ್ಲ, ಚುನಾವಣೆ ಸಂದರ್ಭದಲ್ಲಿ ಆರೋಪ ಹೊರಿಸಿ ಜನರನ್ನು ಗೊಂದಲಕ್ಕೆ ಈಡು ಮಾಡಬೇಕು ಎಂಬ ಉದ್ದೇಶ ಅವರಲ್ಲಿದ್ದು, ಉಚಿತ ವಿದ್ಯುತ್‌ ನೀಡಿದ್ದರೇ ಅದು ಬಿಜೆಪಿ ಸರ್ಕಾರದ ಸಾಧನೆ, ಕಾಂಗ್ರೆಸ್‌ ಮುಖಂಡರು ಏನನ್ನು ಮಾಡಿಲ್ಲ, ಆದರೆ ಆರೋಪ ಮಾಡುತ್ತಾರೆಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ನಗರಾಧ್ಯಕ್ಷ ಮಧುಕುಮಾರ್‌ ರಾಜ್‌ ಅರಸ್‌, ಗ್ರಾಮಾಂತರ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್‌, ದೀಪಕ್‌ ದೊಡ್ಡಯ್ಯ ಉಪಸ್ಥಿತರಿದ್ದರು.

click me!