
ಹುಬ್ಬಳ್ಳಿ (ಆ.18): ಬಿಜೆಪಿ ಬಿಟ್ಟು ಯಾವೊಬ್ಬ ಶಾಸಕರೂ ಕಾಂಗ್ರೆಸ್ಗೆ ಹೋಗುವುದಿಲ್ಲ. ಇದೆಲ್ಲವೂ ಊಹಾಪೋಹ. ಪಕ್ಷದ ಸಂಘಟನೆ ಗಟ್ಟಿಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಬಗ್ಗೆ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಆ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ಅವರೂ ಹೇಳಿದ್ದಾರೆ. ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಅವರು ಪಕ್ಷ ಬಿಟ್ಟು ಹೋಗಲ್ಲ ಎಂದು ಅವರೇ ಹೇಳಿದ್ದಾರೆ. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೂಡ ನನ್ನೊಂದಿಗೆ ಮಾತನಾಡಿದ್ದು, ಅವರು ಪಕ್ಷ ತೊರೆಯಲ್ಲ ಎಂದಿದ್ದಾರೆ.
ಇನ್ನು, ನಾಳೆ ಏನಾಗುತ್ತೆ ಎಂದು ಹೇಳಲು ನಾನು ಭವಿಷ್ಯಗಾರನಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ ಎಂದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡದಿಂದಲೇ ನಾನು ಸ್ಪರ್ಧಿಸುವೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ. ಮೋದಿಯವರ ನಾಯಕತ್ವ ಎಲ್ಲರಿಗೂ ಗೊತ್ತಿದೆ. ಹೀಗಾಗಿ, ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಭ್ರಷ್ಟಾಚಾರ, ಗುತ್ತಿಗೆದಾರರ ಪರ್ಸೇಂಟೇಜ್ ಆರೋಪ, ಕಾವೇರಿ ವಿಷಯ ಡೈವರ್ಚ್ ಮಾಡಲು ಕಾಂಗ್ರೆಸ್ನವರು ಪಕ್ಷಾಂತರ ವಿಚಾರ ಮುಂದೆ ತಂದಿದ್ದಾರೆ ಎಂದು ಟೀಕಿಸಿದರು.
ಇನ್ನೂ ಮೂರೇ ತಿಂಗಳು ಮುಂದಾನಾಗುತ್ತೆ ಕಾದು ನೋಡಿ: ಸಿ.ಟಿ.ರವಿ ಸ್ಫೋಟಕ ಹೇಳಿಕೆ
ಹುಬ್ಬಳ್ಳಿಯಿಂದ ಪಂಡರಾಪುರಕ್ಕೆ ನೇರ ರೈಲು: ಮೈಸೂರು- ಸೋಲಾಪುರ ರೈಲು ನಂ. 16535/36 ಪಂಢರಪುರ ವರೆಗೆ ವಿಸ್ತರಿಸುವ ಬಗ್ಗೆ ಬಹಳ ದಿನಗಳಿಂದ ಇದ್ದ ಹುಬ್ಬಳ್ಳಿ- ಬಾಗಲಕೋಟೆ ಹಾಗೂ ವಿಜಯಪುರದ ಜನರ ಬೇಡಿಕೆ ಈಗ ಕೈಗೂಡಿದೆ. ಹೀಗಾಗಿ, ಈಗ ಹುಬ್ಬಳ್ಳಿ ಗದಗ ಹಾಗೂ ಬಾಗಲಕೋಟೆ ಭಾಗದ ಜನರಿಗೆ ನೇರ ಪಂಢರಾಪುರದ ವಿಠೋಬ ದರ್ಶನದ ಅವಕಾಶ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿ, ಮೈಸೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಗದಗ, ಬಾಗಲಕೋಟೆ, ವಿಜಯಪುರದಿಂದ ಸೊಲಾಪುರಕ್ಕೆ ಓಡಾಡುತ್ತಿದ್ದ, ಗೋಲಗುಂಬಜ್ ಎಕ್ಸ್ಪ್ರೆಸ್ ರೈಲನ್ನು ಪಂಢರಪುರಕ್ಕೆ ವಿಸ್ತರಿಸಲು ಈ ಭಾಗದ ಜನರು ಇಟ್ಟಿದ್ದ ಬೇಡಿಕೆಯಂತೆ ಸಚಿವರು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದು ಮನವಿ ಸಲ್ಲಿಸಿ ನಿರಂತರ ಪ್ರಯತ್ನದ ಫಲವಾಗಿ ಆ. 14 ರಂದು ನೈರುತ್ಯ ರೈಲ್ವೆಯ ಪ್ರಸ್ತಾವನೆಯಂತೆ ಈ ವಿಸ್ತರಣೆಗೆ ಒಪ್ಪಿಗೆ ನೀಡಿದೆ.
ತಮಿಳುನಾಡಿನ ಹೊಸೂರು ಉದ್ಧಾರ ಆಗಲು ಎಚ್ಡಿಕೆ ಕಾರಣ: ಸಂಸದ ಡಿ.ಕೆ.ಸುರೇಶ್
ಅದರಂತೆ ಪ್ರತಿದಿನ ಮೈಸೂರಿನಿಂದ ಮಧ್ಯಾಹ್ನ 3-45ಕ್ಕೆ ಹೊರಟು ಪಂಢರಪುರವನ್ನು ಮರುದಿನ ಮಧ್ಯಾಹ್ನ 12-25ಕ್ಕೆ ತಲುಪಿ, ಪುನಃ ಪಂಢರಪುರದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮೈಸೂರನ್ನು ಮರುದಿನ 10-30ಕ್ಕೆ ತಲುಪುವುದು. ವಿಸ್ತರಣೆ ಆರಂಭದ ದಿನಾಂಕ ಶೀಘ್ರದಲ್ಲೇ ಪ್ರಕಟಣೆಯಾಗಲಿದೆ. ಈ ರೈಲಿನ ವಿಸ್ತರಣೆಗೆ ಒಪ್ಪಿಗೆ ನೀಡಿದ ಕೇಂದ್ರ ರೈಲ್ವೆ ಸಚಿವರಿಗೆ ಧನ್ಯವಾದ ಸಲ್ಲಿಸುವುದಾಗಿ ಜೋಶಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.