
ಹುಬ್ಬಳ್ಳಿ (ಆ.28): ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ರಕ್ತ ಬೀಜಾಸುರ ಇದ್ದಂತೆ. ಇಡೀ ದೇಶದಲ್ಲಿ ನೆಹರು ಕಾಲದಿಂದ ಹಿಡಿದು ಭ್ರಷ್ಟಾಚಾರ ಮಾಡಿದವರೇ ಕಾಂಗ್ರೆಸ್ಸಿಗರು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಕಾಲದ ಹಗರಣಗಳ ತನಿಖೆ ಮಾಡುತ್ತೇವೆ ಎಂದಿರುವ ಕಾಂಗ್ರೆಸ್ಸಿಗರು ತನಿಖೆ ಮಾಡಲಿ, ಎಫ್ಐಆರ್ ಕೂಡ ಹಾಕಲಿ, ನಮ್ಮದೇನೂ ತಕರಾರಿಲ್ಲ ಎಂದು ಸವಾಲೆಸೆದರು.
ಸ್ವತಃ ಕಾಂಗ್ರೆಸ್ನ ಶಾಸಕ ಬಸವರಾಜ ರಾಯರಡ್ಡಿ ಅವರೇ ಪಕ್ಷದಲ್ಲಿ ಭ್ರಷ್ಟಾಚಾರದ ಬಗ್ಗೆ ಮತನಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ಗೆ ಇನ್ನೊಂದು ಹೆಸರೇ ಭ್ರಷ್ಟಾಚಾರ ಎಂದು ಲೇವಡಿ ಮಾಡಿದರು. ಇನ್ನು, ಕಾಂಗ್ರೆಸ್ ತಮ್ಮ ಒಕ್ಕೂಟಕ್ಕೆ ‘ಯುಪಿಎ’ ಹೆಸರು ತೆಗೆದು ‘ಇಂಡಿಯಾ’ ಎಂದು ಬದಲಾಯಿಸಿದೆ. ಅಂಗಡಿ, ಫ್ಯಾಕ್ಟರಿ ಬದಲಾದರೇನು? ಪ್ರಾಡಕ್ಟ್ ಅದೇ ಇರುತ್ತಲ್ವಾ? ಹಾಗೆಯೇ ಕಾಂಗ್ರೆಸ್ನ ಪರಿಸ್ಥಿತಿ ಎಂದು ವ್ಯಂಗ್ಯವಾಡಿದರು.
ಪಿಎಸ್ಐ ಮರು ಪರೀಕ್ಷೆ: ಸಿದ್ದರಾಮಯ್ಯ ಸರ್ಕಾರಕ್ಕೆ ಅಗ್ನಿಪರೀಕ್ಷೆ
ಹುಬ್ಬಳ್ಳಿ ಮೆಡಿಕಲ್ ಹಬ್ ಆಗುವುದರಲ್ಲಿ ಸಂದೇಹವಿಲ್ಲ: ಹು-ಧಾ ಅವಳಿ ನಗರ ಡೈಗ್ನೋಸ್ಟಿಕ್ ಸೆಂಟರ್, ಎನ್ಎಂಆರ್ ಸ್ಕ್ಯಾನ್ ಸೆಂಟರ್ ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಸೇವೆಯಿಂದ ಹೆಸರು ಗಳಿಸಿದೆ. ಮುಂಬರುವ ದಿನಗಳಲ್ಲಿ ಹುಬ್ಬಳ್ಳಿ ನಗರ ಮೆಡಿಕಲ್ ಹಬ್ ಆಗುವುದರಲ್ಲಿ ಸಂದೇಹವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಭಾನುವಾರ ನಗರದ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಎದುರಿನಲ್ಲಿ ಎನ್ಎಂಆರ್ ಸ್ಕ್ಯಾನ್ ಸೆಂಟರ್ನ 4ನೇ ಶಾಖೆ ಉದ್ಘಾಟಿಸಿದ ನಂತರ, ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಗಿಗಳು ಈ ಹಿಂದೆ ಗಂಭೀರ ಕಾಯಿಲೆಗಳ ತಪಾಸಣೆಗೆ ದೂರದ ನಗರಗಳಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ, ಇಂದು ಹುಬ್ಬಳ್ಳಿಯಲ್ಲಿಯೇ ಎಲ್ಲ ವೈದ್ಯಕೀಯ ಸೇವೆಗಳು ದೊರೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ರೋಗ ಪತ್ತೆ ಮಾಡುವುದರಿಂದ ಹಿಡಿದು ಚಿಕಿತ್ಸೆಯ ವರೆಗೂ ಇಂದು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಎನ್ಎಂಆರ್ ಸ್ಕ್ಯಾನ್ ಸೆಂಟರ್ನಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಹುಬ್ಬಳ್ಳಿಗೆ ಬಂದಿರುವುದರಿಂದ ವೈದ್ಯಕೀಯ ಸೇವೆ ಮತ್ತಷ್ಟುಸುಲಭವಾಗಿ ಲಭಿಸುವಂತಾಗಿದೆ. ಹುಬ್ಬಳ್ಳಿಯ ತಜ್ಞವೈದ್ಯರು ಕಾಲಕಾಲಕ್ಕೆ ಆಧುನಿಕ ತಂತ್ರಜ್ಞಾನ ಹಾಗೂ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಂಡು ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.
ಉತ್ತರ ಭಾರತಕ್ಕೀಗ ಹೊಸ ಅಡಕೆಯೇ ಬೇಕು!: ಮಾರುಕಟ್ಟೆಯಲ್ಲೀಗ ಹೊಸ ಟ್ರೆಂಡ್ ಶುರು
ಡಾ. ಜೋಶಿಗೆ ಭಾರತರತ್ನ: ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಲಕ್ಷಾಂತರ ಜನ ಅಂಧರ ಬಾಳಿಗೆ ಬೆಳಕಾಗಿರುವ ಡಾ. ಎಂ.ಎಂ. ಜೋಶಿಯವರ ವೈದ್ಯಕೀಯ ಸೇವೆ ಉತ್ತರ ಕರ್ನಾಟಕ ಭಾಗದ ಹಿರಿಮೆಯಾಗಿದೆ. ತಂತ್ರಜ್ಞಾನ ಬರುವುದಕ್ಕಿಂತ ಮೊದಲು ಡಾ. ಎಂ.ಎಂ. ಜೋಶಿ ಅವರು ಹಗಲು-ರಾತ್ರಿ ಎನ್ನದೆ ರೋಗಿಗಳ ಸೇವೆ ಮಾಡಿದ್ದಾರೆ. ಇಂಥವರಿಗೆ ನಮ್ಮ ದೇಶದ ಅತ್ಯುನ್ನತ ಭಾರತರತ್ನದಂಥ ಪ್ರಶಸ್ತಿ ಲಭಿಸುವಂತಾಗಬೇಕು ಎಂದರು. ವಿಪ ಸಭಾಪತಿ ಬಸವರಾಜ ಹೊರಟ್ಟಿ, ಅಧ್ಯಕ್ಷತೆ ವಹಿಸಿದ್ದ ಎನ್ಎಂಆರ್ ಮಂಡಳಿಯ ಅಧ್ಯಕ್ಷ ಪದ್ಮಶ್ರೀ ಡಾ. ಎಂ.ಎಂ. ಜೋಶಿ ಮಾತನಾಡಿದರು. ಎನ್ಎಂಆರ್ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ರವಿ ಕಲಘಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ಎಂಆರ್ ಮಂಡಳಿಯ ಡಾ. ನರೇಂದ್ರ ಶಾ, ಡಾ. ಕಲಂದಾನಿ, ಡಾ. ಶ್ರೀನಿವಾಸ ಜೋಶಿ, ನರರೋಗ ತಜ್ಞ ಡಾ. ಸುರೇಶ ದುಗಾಣಿ, ಕ್ಯಾನ್ಸರ್ ತಜ್ಞ ಡಾ. ಬಿ.ಆರ್. ಪಾಟೀಲ, ಎಲುಬು ಮತ್ತು ಕೀಲು ತಜ್ಞ ಡಾ. ಸಚಿನ್ ರೇವಣಕರ ಸೇರಿದಂತೆ ಹಲವರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.