Latest Videos

ಚನ್ನಪಟ್ಟಣದಲ್ಲಿ ಡಿಕೆಶಿ ಜತೆ ಇನ್ನೂ 4 ಜನ ಸ್ಪರ್ಧೆ ಮಾಡಲಿ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Jun 23, 2024, 7:32 PM IST
Highlights

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಾದರೂ ಸ್ಪರ್ಧಿಸಲಿ ಅಥವಾ ಅವರೊಂದಿಗೆ ಇನ್ನೂ ನಾಲ್ಕು ಜನ ಸ್ಪರ್ಧೆ ಮಾಡಲಿ ತಮ್ಮದೇನೂ ಅಭ್ಯಂತರವಿಲ್ಲ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 
 

ಬೆಂಗಳೂರು (ಜೂ.23): ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಾದರೂ ಸ್ಪರ್ಧಿಸಲಿ ಅಥವಾ ಅವರೊಂದಿಗೆ ಇನ್ನೂ ನಾಲ್ಕು ಜನ ಸ್ಪರ್ಧೆ ಮಾಡಲಿ ತಮ್ಮದೇನೂ ಅಭ್ಯಂತರವಿಲ್ಲ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಶಿವಕುಮಾರ್‌ ಅವರು ಸ್ಪರ್ಧಿಸಲಿದ್ದಾರೆ ಎಂಬುದಕ್ಕೆ ದೊಡ್ಡ ಮಹತ್ವ ನೀಡುವ ಅಗತ್ಯ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಉಪಚುನಾವಣೆಯಲ್ಲಿ ಯಾರನ್ನಾದರೂ ನಾವು ನಿಲ್ಲಬೇಡಿ ಎಂದು ಹೇಳಲಾಗುವುದಿಲ್ಲ ಎಂದರು. 

ಬಿಜೆಪಿ- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಯಾರಾಗಲಿದ್ದಾರೆ ಎಂಬುದನ್ನು ಕಾಲವೇ ತೀರ್ಮಾನಿಸಲಿದೆ. ಉಪಚುನಾವಣೆ ವಿಚಾರಕ್ಕೆ ಈಗ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈಗ ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸೋಣ ಎಂದರು. ಇದೇ ವೇಳೆ, ವಿಧಾನಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಇಂತಹ ವಿಚಾರಗಳನ್ನು ನನ್ನ ಬಳಿ ಚರ್ಚೆ ಮಾಡಲು ಬರಬೇಡಿ. ರಾಜ್ಯದ ಸಮಸ್ಯೆಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಮಾತ್ರ ಚರ್ಚೆ ಮಾಡಿ ಎಂದು ತಿಳಿಸಿದರು.

ರಾಜ್ಯದ ಶಿಫಾರಸಿನಂತೆ ಕೇಂದ್ರ ಅನುಮೋದನೆ: ಸಂಡೂರು ದೇವದಾರಿ ಗಣಿಗಾರಿಕೆಗೆ 2016ರಲ್ಲೇ ಅಂದಿನ ರಾಜ್ಯ ಸರ್ಕಾರದ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 404 ಹೆಕ್ಟೇರ್‌ಗೆ ಪರ್ಯಾಯವಾಗಿ 808 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯೀಕರಣಗೊಳಿಸುವುದಾಗಿ ಗಣಿ ಕಂಪನಿ ಒಪ್ಪಿಕೊಂಡು ₹ 390 ಕೋಟಿ ರಾಜ್ಯ ಸರಕಾರಕ್ಕೆ ಪಾವತಿಸಿದೆ. ಗಣಿಗಾರಿಕೆ ವಿರೋಧಿಸುವವರು ಇದನ್ನು ತಿಳಿದುಕೊಳ್ಳಬೇಕೆಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ದಕ್ಷಿಣ ಭಾರತದಲ್ಲೇ ಕರ್ನಾಟಕ ಬಿಜೆಪಿ ಭದ್ರಕೋಟೆ: ಬಿ.ವೈ.ವಿಜಯೇಂದ್ರ

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದಿರು ಮಾರಾಟಕ್ಕೆ ನಾನು ಸಹಿ ಹಾಕಿಲ್ಲ. 2005ರಲ್ಲಿ ಗಣಿಗಾರಿಕೆ ನಿಂತು ಹೋಗಿತ್ತು. ಅದರ ನಂತರ, ಅಲ್ಲಿ ಗುತ್ತಿಗೆ ಪಡೆದ ಕಂಪನಿಯು ರಾಜ್ಯ ಹಾಗೂ ಕೇಂದ್ರ ಸರಕಾರದ ಜತೆ ಸಾಕಷ್ಟು ಪ್ರಕ್ರಿಯೆ ನಡೆಸಿತ್ತು. 2016ರಲ್ಲಿ ರಾಜ್ಯ ಸರಕಾರ ದೇವದಾರಿ ಅರಣ್ಯ ಪ್ರದೇಶದಲ್ಲಿ 404 ಹೆಕ್ಟೇರ್‌ ಪ್ರದೇಶದಲ್ಲಿ ಅದಿರು ಉತ್ಪಾದನೆ ಮಾಡುವ ಕುರಿತು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅದರ ಮುಂದುವರಿದ ಭಾಗವಾಗಿ ಕೇಂದ್ರ ಸರ್ಕಾರ ಸಹಮತ ನೀಡಿದೆ ಎಂದು ಸ್ಪಷ್ಟಪಡಿಸಿದರು. ಉದ್ದೇಶಿತ ಗಣಿಗಾರಿಕೆ ಪ್ರದೇಶದಲ್ಲಿ 90 ಸಾವಿರ ಮರಗಳಿವೆ ಎನ್ನುವ ಸ್ಪಷ್ಟತೆಯೂ ಇಲ್ಲ. ಗಣಿಗಾರಿಕೆ 40-50 ವರ್ಷ ನಡೆಯುವ ನಿರಂತರ ಪ್ರಕ್ರಿಯೆಯಾಗಿರುವುದರಿಂದ ಹಂತ-ಹಂತವಾಗಿ ಮರ ಕಡಿಯಲಾಗುತ್ತದೆ. ಅದೇ ಸಮಯಕ್ಕೆ ಅರಣ್ಯೀಕರಣ ಸಹ ನಡೆಯುತ್ತದೆ ಎಂದು ಸಮರ್ಥಿಸಿಕೊಂಡರು.

click me!