ನನ್ನ ವಿರುದ್ಧ ರಾಹುಲ್‌ ನಿಲ್ಲಿಸಿದ್ರೂ 2 ಲಕ್ಷ ಮತಗಳಿಂದ ಗೆಲ್ತೇನೆ: ಕೇಂದ್ರ ಸಚಿವ ಖೂಬಾ

By Kannadaprabha NewsFirst Published Oct 4, 2023, 2:00 AM IST
Highlights

ರಾಜ್ಯದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಕಿರಕುಳ, ಕಡೆಗಣನೆ ಮಾಡಲಾಗುತ್ತಿದೆ ಎಂದು ಅವರದ್ದೇ ಪಕ್ಷದ ಶಾಮನೂರ ಶಿವಶಂಕರಪ್ಪ ಅವರೇ ಹೇಳುತ್ತಿದ್ದಾರೆ ಆದರೆ ಅವರದ್ದೇ ಸಂಘದ ಒಬ್ಬ ಗುಮಾಸ್ತರಂತೆ ಇರುವ ಸಚಿವ ಈಶ್ವರ ಖಂಡ್ರೆ ಅವರು ಬಾಯಿ ತೆರೆಯುತ್ತಿಲ್ಲ: ಕೇಂದ್ರ ಸಚಿವ ಭಗವಂತ ಖೂಬಾ ಭರವಸೆ

ಬೀದರ್‌(ಅ.04):  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ರಾಜಶೇಖರ ಪಾಟೀಲ್‌ ಏಕೆ, ಈಶ್ವರ ಖಂಡ್ರೆ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಿಕೊಳ್ಳಲಿ ಇಲ್ಲವೇ ರಾಹುಲ್‌ ಗಾಂಧಿ ಅವರನ್ನೇ ತಂದು ನಿಲ್ಲಿಸಲಿ, ನಾನು ಸುಮಾರು 2 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸುವುದು ಗ್ಯಾರಂಟಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಭರವಸೆ ವ್ಯಕ್ತಪಡಿಸಿದರು.

ಅವರು ಮಂಗಳವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ನಮ್ಮ ಪಕ್ಷದವರು ಒಗ್ಗಟ್ಟಾಗಿದ್ದೇವೆ. ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಖಂಡ್ರೆ ಏನನ್ನೂ ಸಾಧಿಸಲು ಆಗೋಲ್ಲ, ಜೆಡಿಎಸ್‌ ಜೊತೆ ಸೇರಿ ಕಾಂಗ್ರೆಸ್‌ ಸೋಲಿಸೋದು ಖಾತ್ರಿ ಎಂದು ಈಶ್ವರ ಖಂಡ್ರೆ ಅವರ ಇತ್ತೀಚಿನ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು.

ನಾನು ಸೋತಿದ್ದೇನೆ ಹೊರತು ಸತ್ತಿಲ್ಲ, ಕೇಂದ್ರ ಸಚಿವ ಖೂಬಾಗೆ ರಾಜಶೇಖರ ಟಾಂಗ್‌

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ರೈತರ, ಜನಸಾಮಾನ್ಯರ ಕಾಳಜಿ ಮರೆಯಲಾಗಿದೆ. ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವಂಥ ವ್ಯವಸ್ಥೆ ಜಾರಿಗೆ ಬರುತ್ತಿದೆ. ರೈತರಿಗೆ ಕೇಂದ್ರ ಸರ್ಕಾರದ ಜೊತೆ ನಮ್ಮ ಸರ್ಕಾರ ನೀಡುತ್ತಿದ್ದ 4 ಸಾವಿರ ರು.ಗಳ ಪ್ರೋತ್ಸಾಹ ಧನವನ್ನು ಕಾಂಗ್ರೆಸ್‌ ನಿಲ್ಲಿಸಿದೆ, ರೈತರ ಮಕ್ಕಳ ವಿದ್ಯಾನಿಧಿ ಶಿಷ್ಯ ವೇತನ ಹೀಗೆಯೇ ಅನೇಕ ಯೋಜನೆಗಳನ್ನು ನಿಲ್ಲಿಸಿದ್ದಾರೆ, ವರ್ಗಾವಣೆ ದಂಧೆ ಆರಂಭವಾಗಿದೆ, ಶಿವಮೊಗ್ಗದಲ್ಲಿ ಕೋಮು ಪ್ರಚೋದನೆ ನಡೆದಿರುವುದು ಸರ್ಕಾರದ ಜನ ವಿರೋಧಿ ನೀತಿಗಳನ್ನು ಸ್ಪಷ್ಟಪಡಿಸುತ್ತದೆ ಎಂದರು.

ಸಂಘದ ಒಬ್ಬ ಗುಮಾಸ್ತರಂತೆ ಇರುವ ಸಚಿವ ಈಶ್ವರ ಖಂಡ್ರೆ:

ರಾಜ್ಯದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಕಿರಕುಳ, ಕಡೆಗಣನೆ ಮಾಡಲಾಗುತ್ತಿದೆ ಎಂದು ಅವರದ್ದೇ ಪಕ್ಷದ ಶಾಮನೂರ ಶಿವಶಂಕರಪ್ಪ ಅವರೇ ಹೇಳುತ್ತಿದ್ದಾರೆ ಆದರೆ ಅವರದ್ದೇ ಸಂಘದ ಒಬ್ಬ ಗುಮಾಸ್ತರಂತೆ ಇರುವ ಸಚಿವ ಈಶ್ವರ ಖಂಡ್ರೆ ಅವರು ಬಾಯಿ ತೆರೆಯುತ್ತಿಲ್ಲ ಎಂದು ಆರೋಪಿಸಿದರು.

ಕಳೆದ ವರ್ಷ ಎಂಜಿಎಸ್‌ಎಸ್‌ಕೆ ಸಾಲ ಕುರಿತು ಕೆಡಿಪಿ ಸಭೆಯಲ್ಲಿ ಮಾತೆತ್ತಿದಾಗ, ನನಗೂ ನನ್ನ ಸಹೋದರನ ವ್ಯವಹಾರಕ್ಕೂ ನನಗೂ ಸಂಬಂಧ ಇಲ್ಲ ಎಂದಿದ್ದರು. ಈಗ ಅದೇ ಸಹೋದರನಿಗೆ ಬ್ಯಾಂಕಿನ ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದ್ದಾರೆ. ಇದು ಅವರ ನಿರ್ಲಜ್ಜತನ ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ಗೆ ಹೆದರಿ ಜೆಡಿಎಸ್‌ ಜೊತೆ ಬಿಜೆಪಿ ಹೊಂದಾಣಿಕೆ: ಸಚಿವ ಶರಣಬಸಪ್ಪ ದರ್ಶನಾಪೂರ್‌

ಕೊರೋನಾ ಸಮಯದಲ್ಲಿ ಮೌನವಾಗಿದ್ದೆ ಎಂದು ಹೇಳಿದ್ದಾರೆ, ನಾನು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಮೂರು ದಿನ ಮನೆಯಲ್ಲಿಯೇ ಇದ್ದು, ಮೌನಿಯಾಗಿದ್ದೆ. ನಂತರ ಪಿಪಿಇ ಕಿಟ್‌ ಧರಿಸಿ ರೋಗಿಗಳಿಗೆ ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಔಷಧಿ, ಆಕ್ಸಿಜನ್‌ ವ್ಯವಸ್ಥೆ ಕಲ್ಪಿಸಿದ್ದೆ. ಈಶ್ವರ ಖಂಡ್ರೆ ಅವರು ಬಸವಕಲ್ಯಾಣದ ಉಪ ಚುನಾವಣೆ ನೆಪವೊಡ್ಡಿ 2 ತಿಂಗಳು ಬೆಂಗಳೂರಿನಿಂದ ಭಾಲ್ಕಿ ಕ್ಷೇತ್ರಕ್ಕೆ ಬಂದೇ ಇಲ್ಲ. ಇದೇನಾ ನಿಮ್ಮ ಜನರ ಸೇವೆ ಎಂದು ಖಂಡ್ರೆಗೆ ಪ್ರಶ್ನಿಸಿದರು.

ಬಿಎಸ್‌ಎಸ್‌ಕೆ ಯಂತ್ರಗಳನ್ನು ಎಂಜಿಎಸ್‌ಎಸ್‌ಕೆಗೆ ಸಾಗಿಸಲಾಗಿರುವು ಶಂಕೆ:

ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪಿಸುವ ಖಂಡ್ರೆ ಹಾಗೂ ರಾಜಶೇಖರ್‌ ಪಾಟೀಲ್‌ ಸಹೋದರರೇ ನಿರ್ದೇಶಕ, ಉಪಾಧ್ಯಕ್ಷರಾಗಿದ್ದರು. ಆಗ ಧ್ವನಿ ಎತ್ತಲು ಏನಾಗಿತ್ತು? ತನಿಖೆಗೆ ಆಗ್ರಹಿಸಬಹುದಿತ್ತಲ್ಲ. ಹಾಗೆಯೇ ಖಂಡ್ರೆ ಅವಧಿಯಲ್ಲಿ ಬಿಎಸ್‌ಎಸ್‌ಕೆ ಕಾರ್ಖಾನೆಯ ಯಂತ್ರೋಪಕರಣ ಸೇರಿದಂತೆ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಎಂಜಿಎಸ್‌ಎಸ್‌ಕೆ ಸಾಗಿಸಲಾಗಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಈಶ್ವರ ಖಂಡ್ರೆ ಏನು ಹೇಳ್ತಾರೆ ಇದನ್ನೂ ತನಿಖೆ ಮಾಡಿಸ್ತಾರಾ ಎಂದು ಖೂಬಾ ಸವಾಲೆಸೆದರು. ಮಾಜಿ ಸಚಿವ ರಾಜೇಶೇಖರ ಪಾಟೀಲ್‌ ಸೋತು ಸುಣ್ಣವಾಗಿದ್ದಾರೆ. ಅವರು ನನ್ನ ವಿರುದ್ಧ ಅಪ ಶಬ್ದಗಳನ್ನು ಬಳಸಿದ್ದಾರೆ, ಅಂತಹ ಶಬ್ದಗಳು ಅವರಿಗೆ ಗೌರವ ಕೊಡಲ್ಲ ಎಂದು ಖೂಬಾ ಬೇಸರ ವ್ಯಕ್ತಪಡಿಸಿದರು.

click me!