Tumakuru: ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ: ಎಚ್ಡಿಕೆ ವಿಶ್ವಾಸ

By Govindaraj SFirst Published Nov 6, 2022, 10:23 PM IST
Highlights

ನಮ್ಮ ಪಕ್ಷ ಮುಂದಿನ ಬಾರಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಶಿರಾ ತಾಲೂಕು ಬುಕ್ಕಾಪಟ್ನ ಹೋಬಳಿ ಜಾನಕಲ್ಲು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ ಮಾಡಿ ಮಾತನಾಡಿದರು. 

ತುಮಕೂರು (ನ.06): ನಮ್ಮ ಪಕ್ಷ ಮುಂದಿನ ಬಾರಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಶಿರಾ ತಾಲೂಕು ಬುಕ್ಕಾಪಟ್ನ ಹೋಬಳಿ ಜಾನಕಲ್ಲು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ ಮಾಡಿ ಮಾತನಾಡಿದರು. ನೀವೆಲ್ಲ ಸಹಕಾರ ನೀಡಿದರೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಸ್ವೀಕರಿಸುವುದರಲ್ಲಿ ಸಂಶಯವೇ ಇಲ್ಲ ಎಂದು ತಿಳಿಸಿದರು. 

ಶಿರಾಗೆ ನಿಖಿಲ್‌ ಸ್ಪರ್ಧೆ ನಿರ್ಧಾರವಾಗಿಲ್ಲ: ಶಿರಾ ವಿಧಾನಸಭಾ ಕ್ಷೇತ್ರದಿಂದ ನಿಖಿಲ್‌ ಕುಮಾರ ಸ್ವಾಮಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅಲ್ಲಿ ಸಮರ್ಥವಾದ ಅಭ್ಯರ್ಥಿಗಳಿದ್ದು, ಸ್ಪಲ್ಪ ಪೈಪೋಟಿ ಇದೆ, ಅದನ್ನು ಸರಿಪಡಿಸಿ ಸಮರ್ಥ ಅಭ್ಯರ್ಥಿಯನ್ನು ಸೂಚಿಸುತ್ತೇವೆ ಎಂದರು.

ಮಧುಗಿರಿಗೆ ವೀರಭದ್ರಯ್ಯನೇ ಅಭ್ಯರ್ಥಿ: ಮಧುಗಿರಿ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ, ಅಲ್ಲಿ ವೀರಭದ್ರಯ್ಯನವರೇ ಅಭ್ಯರ್ಥಿಯಾಗಿ ಮುಂದುವರಿಯುತ್ತಾರೆ. ವೀರಭದ್ರಯ್ಯನವರಿಗೆ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಕೆಲವರು ನಡೆದುಕೊಂಡಿದ್ದಾರೆ, ಅದನ್ನು ಸರಿಪಡಿಸಿದ್ದೇವೆ ಎಂದರು. ಎಲ್‌.ಸಿ. ನಾಗರಾಜ್‌ ಅವರು ಅಧಿಕಾರಿಯಾಗಿದ್ದಾರೆ, ಅವರು ಅಧಿಕಾರಿ ಸ್ಥಾನದಲ್ಲಿ ಇದ್ದಾಗ ನಾವು ಆ ಬಗ್ಗೆ ಚರ್ಚೆ ಮಾಡುವುದಕ್ಕೆ ಆಗುವುದಿಲ್ಲ. ಕ್ಷೇತ್ರದಲ್ಲಿ ಯಾವುದೇ ಗೊಂದಲಗಳಿದ್ದರೂ ಆ ಗೊಂದಲಗಳಿಗೆ ಸುಖಾಂತ್ಯ ನೀಡುವುದಾಗಿ ತಿಳಿಸಿದರು.

ಶಿಶು, ಬಾಣಂತಿ ಸಾವು: ಸಚಿವ ಸುಧಾಕರ್‌ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ

ಜಿಲ್ಲಾಸ್ಪತ್ರೆ ಘಟನೆಗೆ ಖಂಡನೆ: ತಾಯಿ ಕಾರ್ಡ್‌, ಆಧಾರ ಕಾರ್ಡ್‌ ಇಲ್ಲದ ಕಾರಣ ಚಿಕಿತ್ಸೆ ನಿರಾಕರಿಸಿದ ಕಾರಣ ತಾಯಿ ಮತ್ತು ಅವಳಿ ಮಕ್ಕಳ ಧಾರುಣ ಸಾವಿಗೆ ಕಾರಣವಾದ ಘಟನೆಯನ್ನು ಮಾಜಿ ಮುಖ್ಯಮಂತ್ರಿಗಳು ತೀವ್ರವಾಗಿ ಖಂಡಿಸಿದರು. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆ ಅತ್ಯಂತ ಅಮಾನವೀಯವಾದುದು, ಈ ಸಂಬಂಧ ವೈದ್ಯರು ಕೊಟ್ಟ ಹೇಳಿಕೆಗಳು ಮಗುದೊಂದು ಎಂದ ಅವರು ಆಸ್ಪತ್ರೆಗೆ ಬಂದ ಯಾರಾದರೂ ಹೆಣ್ಣು ಮಗಳು ಚಿಕಿತ್ಸೆ ಬೇಡ ಎಂದು ವಾಪಾಸು ಮನೆಗೆ ಹೋಗುತ್ತಾರಾ?

ಇದನ್ನು ನಂಬೋಕೆ ಸಾಧ್ಯಾನಾ? ಎಂದು ಪ್ರಶ್ನಿಸಿದರು. ಒಂದೆರಡು ದಿನ ಕಾಟಾಚಾರಕ್ಕೆ ಅಮಾನತು ಮಾಡಿದ್ದೇವೆ ಎಂದು ಹೇಳಿಕೆ ಕೊಟ್ಟು ಮೂರು ದಿನ ಆದ ಮೇಲೆ, ಸ್ವಲ್ಪ ಹಣಕಾಸಿನ ವ್ಯವಹಾರವಾದರೆ ಮತ್ತೆ ಅದೇ ಜಾಗಕ್ಕೆ ವಾಪಾಸ್‌ ಪೋಸ್ಟ್‌ ಮಾಡುತ್ತಾರೆ. ಇದು ಈ ಸರ್ಕಾರದಲ್ಲಿ ನಡೆಯುತ್ತಿರುವ ಪ್ರತಿನಿತ್ಯದ ನಡವಳಿಕೆಗಳು. ಯಾವುದೇ ಇಲಾಖೆಯಲ್ಲಿ ಭಯ ಭಕ್ತಿ ಇಲ್ಲ. ಕಾರಣ ಸರ್ಕಾರದ ಮೂರನೇ ಮಹಡಿಯಲ್ಲಿ ನಡೆಯುತ್ತಿರುವ ಹಣದ ದಾಹ ಎಂದರು.

Tumakuru ಅವಳಿ ಶಿಶು ಧಾರುಣ ಸಾವು ಪ್ರಕರಣ: ಸಚಿವರ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ

ಬೇಡಿಕೆ ಈಡೇರಿಸುತ್ತೇವೆ: 2023ರಲ್ಲಿ ಜನರ ಸರ್ಕಾರ ರಚನೆಯಾಗುತ್ತದೆ. ಅವತ್ತು, ಕುಂಚಿಟಿಗ ಒಕ್ಕಲಿಗರ ಬೇಡಿಕೆಯನ್ನು ಈಡೇರಿಸುತ್ತೇನೆ. ಅದು ಕುಮಾರಸ್ವಾಮಿ ಹೊರತಾಗಿ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದರು. ಚಿಕ್ಕನಾಯಕನ ಹಳ್ಳಿಯ ಮಾಜಿ ಶಾಸಕ ಸುರೇಶ್‌ ಬಾಬು, ಪ್ರಾಮಾಣಿಕ ವ್ಯಕ್ತಿಯ ಕೈಯಲ್ಲಿ ಎಷ್ಟೇ ಹಣ ಇದ್ದರೂ ಬಡವರಿಗೆ ಕೊಟ್ಟು ಸಹಾಯ ಮಾಡುತ್ತಾರೆ. ಅವರ ಮೇಲೆ ವಿಶ್ವಾಸವಿಟ್ಟು 2023ರ ಚುನಾವಣೆಯಲ್ಲಿ ಸಹಕಾರ ನೀಡಿ. ಅವರು ಕೇವಲ ಶಾಸಕರಾಗಿರುವುದಿಲ್ಲ, ಮಂತ್ರಿಯಾಗುತ್ತಾರೆ ಎಂದರು.

click me!