
ಆರ್.ತಾರಾನಾಥ್
ಚಿಕ್ಕಮಗಳೂರು (ಫೆ.23): ಸಹ್ಯಾದ್ರಿ ಪರ್ವತಗಳ ಶ್ರೇಣಿಯಲ್ಲಿರುವ ಕಾಫಿಯ ತವರೂರು ಚಿಕ್ಕಮಗಳೂರು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಕುತೂಹಲ ಹುಟ್ಟು ಹಾಕಿದೆ. ಕಾಂಗ್ರೆಸ್ನಿಂದ ಮೂರು ಬಾರಿ ಶಾಸಕರಾಗಿ, ಸಚಿವರಾಗಿದ್ದ ಮೋಟಮ್ಮ ಅವರು ಇದೇ ಮೊದಲ ಬಾರಿಗೆ ಅಖಾಡದಿಂದ ಹಿಂದಕ್ಕೆ ಸರಿದು, ತನ್ನ ಮಗಳು ನಯನಾ ಮೋಟಮ್ಮ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಪರಿಚಯಿಸುತ್ತಿದ್ದಾರೆ. ಮಗಳಿಗೆ ಟಿಕೆಟ್ ಕೊಡಿಸಲು ಕಸರತ್ತು ನಡೆಸಿದ್ದಾರೆ. ಆದರೆ, ಸ್ವಪಕ್ಷೀಯ ಮುಖಂಡರೇ ಇದಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ಕಾಂಗ್ರೆಸ್ ಟಿಕೆಟ್ ಕೋರಿ ನಯನಾ ಮೋಟಮ್ಮ ಜೊತೆ ನಾಗರತ್ನ, ಶ್ರೀರಂಗಯ್ಯ, ಹೂವಪ್ಪ ಕೂಡ ಅರ್ಜಿ ಸಲ್ಲಿಸಿದ್ದಾರೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಪಿ.ಕುಮಾರಸ್ವಾಮಿಯವರು ಪ್ರಥಮ ಬಾರಿಗೆ ಬಿಜೆಪಿ ಶಾಸಕರಾಗಿದ್ದು 2004ರಲ್ಲಿ. ನಂತರ ಎರಡು ಬಾರಿ, 2008 ಮತ್ತು 2018ರಲ್ಲಿ ಗೆಲುವು ಸಾಧಿಸಿದರು. ಆದರೆ, ಈ ಬಾರಿ ಅವರನ್ನು ಮಣಿಸಲು ಅವರದೇ ಪಕ್ಷದ ಮುಖಂಡರು ತಂತ್ರಗಾರಿಕೆ ಮಾಡುತ್ತಿದ್ದಾರೆ. ಅವರಿಗೆ ಟಿಕೆಟ್ ಸಿಗೋದಿಲ್ಲ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಅವರು ಕಾಂಗ್ರೆಸ್ಗೆ, ತಪ್ಪಿದರೆ ಜೆಡಿಎಸ್ಗೆ ಹೋಗುತ್ತಾರೆ ಎಂಬ ವದಂತಿ ಕ್ಷೇತ್ರದಲ್ಲಿ ದಟ್ಟವಾಗಿ ಹರಡಿದೆ.
ಮಹದಾಯಿ ಐತೀರ್ಪು ಜಾರಿಗೆ ಕೇಂದ್ರ ಪ್ರಾಧಿಕಾರ:‘ಪ್ರವಾಹ್’ ಪ್ರಾಧಿಕಾರ ರಚನೆ
ಈ ಕಾರಣಕ್ಕಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಜಿಲ್ಲೆಯ ಇತರ ಕ್ಷೇತ್ರಗಳಿಗಿಂತ ಇಲ್ಲಿ ಹೆಚ್ಚಾಗಿದೆ. ಕುಮಾರಸ್ವಾಮಿ ಜೊತೆ ದೀಪಕ್ ದೊಡ್ಡಯ್ಯ, ವಿಜಯಕುಮಾರ್, ನರೇಂದ್ರ, ಸುಷ್ಮಾ, ಜಯಪಾಲ್, ಶಿವಪ್ರಸಾದ್ ಕೂಡ ಬಿಜೆಪಿ ಟಿಕೆಟ್ಗೆ ಯತ್ನಿಸುತ್ತಿದ್ದಾರೆ. ಪ್ರತಿಯೊಬ್ಬರ ಹಿಂದೆ ಪಕ್ಷದ ಗಾಡ್ ಫಾದರ್ ಇದ್ದಾರೆ. ಅವರ ಮೂಲಕ ಟಿಕೆಟ್ಗಾಗಿ ದಾಳ ಬೀಸಿದ್ದಾರೆ. ಈ ಮಧ್ಯೆ, ಹಾಲಿ ಶಾಸಕರಾಗಿರುವ ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್ ಖಚಿತ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಇನ್ನು, ಜೆಡಿಎಸ್, ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟ ಮಾಡಿದೆ. ಇದರಲ್ಲಿ ಮೂಡಿಗೆರೆ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರನ್ನು ಕಣಕ್ಕೆ ಇಳಿಸಿದೆ. ಇದಕ್ಕೂ ಮೊದಲು ಅವರಿಗೆ ಟಿಕೆಟ್ ನೀಡುವುದಕ್ಕೆ ತೀವ್ರ ವಿರೋಧ ಕೇಳಿ ಬಂದಿತ್ತು. ಕ್ಷೇತ್ರದಲ್ಲಿ ಇದು ದೊಡ್ಡ ಸದ್ದನ್ನೂ ಮಾಡಿತ್ತು. ಟಿಕೆಟ್ ಘೋಷಣೆ ನಂತರ ವಿರೋಧದ ಮಾತುಗಳು ನಿಂತಿವೆ.
ಜಾತಿ ಲೆಕ್ಕಾಚಾರ: ಮೂಡಿಗೆರೆ ಕ್ಷೇತ್ರದಲ್ಲಿ 1,68,459 ಮತದಾರರಿದ್ದು, ಈ ಪೈಕಿ 65,000 ಮತದಾರರು ಪ.ಜಾ., ಪ.ಪಂಕ್ಕೆ ಸೇರಿದ್ದಾರೆ. ಇನ್ನು, ಒಕ್ಕಲಿಗರು 50,000, ಒಬಿಸಿ/ಮುಸ್ಲಿಮರು 33,000, ಬಿಲ್ಲವರು 3,000, ಶೆಟ್ಟರು 1,500 ಮಂದಿ ಇದ್ದಾರೆ. ಇಲ್ಲಿ ಎಸ್ಸಿ,ಎಸ್ಟಿಮತದಾರರ ಸಂಖ್ಯೆ ಹೆಚ್ಚಾಗಿದ್ದರೂ, ಒಕ್ಕಲಿಗರು ಯಾರ ಕೈ ಹಿಡಿಯುತ್ತಾರೋ ಅದೇ ಪಕ್ಷಕ್ಕೆ ಗೆಲುವು ಖಚಿತ.
8 ವರ್ಷದಿಂದ ರೋಹಿಣಿ ನನ್ನ ಮನೆಯವರ ಹಿಂದೆ ಬಿದ್ದಿದ್ದಾರೆ: ರೂಪಾ ಆಡಿಯೋ?
ಕ್ಷೇತ್ರದ ಹಿನ್ನೆಲೆ: ಮೂಡಿಗೆರೆ ಕ್ಷೇತ್ರದಲ್ಲಿ 1952 ರಿಂದ ಈವರೆಗೆ 15 ಚುನಾವಣೆಗಳು ನಡೆದಿದ್ದು, ಕಾಂಗ್ರೆಸ್ 6 ಬಾರಿ ಜಯಗಳಿಸಿದೆ. ಬಿಜೆಪಿ 3, ಪ್ರಜಾ ಸೋಷಿಯಾಲಿಸ್ಟ್ ಪಕ್ಷ 2, ಜನತಾ ಪಕ್ಷದ ಅಭ್ಯರ್ಥಿಗಳು 4 ಬಾರಿ ಜಯಗಳಿಸಿದ್ದಾರೆ. ಕಾಂಗ್ರೆಸ್ 1999ರ ನಂತರ ಗೆಲುವು ಕಂಡಿಲ್ಲ. ಕ್ಷೇತ್ರದ ವಿಸ್ತೀರ್ಣ ತುಂಬಾ ವಿಸ್ತಾರವಾಗಿದ್ದು, ಮೂಡಿಗೆರೆ ತಾಲೂಕು, ನೂತನ ತಾಲೂಕು ಕಳಸದ 6 ಹೋಬಳಿ, ಚಿಕ್ಕಮಗಳೂರು ತಾಲೂಕಿನ 3 ಹೋಬಳಿಗಳನ್ನು ಒಳಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.