
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಮೇ.21): ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರ ವಿರುದ್ಧ ಅಕ್ರಮ ಭೂ ಕಬಳಿಕೆ ಆರೋಪ ಕೇಳಿಬಂದಿದೆ. ಮೊಣಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಶ್ರೀರಾಮುಲು ಅವರನ್ನು ಸಂಪುಟದಿಂದ ಕೈ ಬಿಡುವಂತೆ ಮಾಜಿ ಶಾಸಕ ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ. ಆರೋಪ ಬಂದ ತಕ್ಷಣ ಸಿಎಂ ಬಸವರಾಜ ಬೊಮ್ಮಾಯಿ, ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯುತ್ತಾರೆ. ಆದರೆ ಆರೋಪ ಪಟ್ಟಿಯಲ್ಲಿ ಹೆಸರಿದ್ದರೂ ಶ್ರೀರಾಮುಲು ಮೇಲೆ ಏಕೆ ಕ್ರಮ ಕೈಗೊಂಡಿಲ್ಲವೆಂದು ತಿಪ್ಪೇಸ್ವಾಮಿ ಪ್ರಶ್ನಿಸಿದರು.
ಶ್ರೀರಾಮುಲು ಅವರು ಬಳ್ಳಾರಿ ಗ್ರಾಮಾಂತರ ಶಾಸಕರಾಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊ೦ಡು ಅಕ್ರಮ ಭೂ ಕಬಳಿಕೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಜಿ.ಕೃಷ್ಣಮೂರ್ತಿ ಎಂಬುವವರು ಸಲ್ಲಿಸಿರುವ ಖಾಸಗಿ ದೂರಿನನ್ವಯ ಲೋಕಾಯುಕ್ತ ತನಿಖೆ ನಡೆದಿದ್ದು ಪ್ರಕರಣದಲ್ಲಿ ಸಚಿವ ಶ್ರೀರಾಮುಲು ಆರನೇ ಆರೋಪಿಯಾಗಿದ್ದಾರೆ ಎಂದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆಗೆ ಶ್ರೀರಾಮುಲು ಸಿದ್ಧತೆ: ಕೈ-ಕಮಲದ ಮಧ್ಯೆ ಭಾರೀ ಪೈಪೋಟಿ..!
ಶ್ರೀರಾಮುಲು ಹಾಗೂ ಅವರ ಬೆಂಬಲಿಗರು ಸೇರಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷ್ಮಮ್ಮ ಎಂಬ ಮಹಿಳೆಗೆ ವಂಚನೆ ಮಾಡಿದ್ದಾರೆ ಭ್ರಷ್ಟ ಶ್ರೀರಾಮುಲು ಅವರು ಸಂಪುಟದಲ್ಲಿ ಇರಬಾರದು. ಈಗಾಗಲೇ ಭೂ ಕಬಳಿಕೆ ಆರೋಪದಡಿ ಶ್ರೀರಾಮುಲು ವಿರುದ್ಧ ಬಳ್ಳಾರಿಯಲ್ಲಿ ಚಾರ್ ಶೀಟ್ ಆಗಿದೆ. ಸಚಿವ ಸ್ಥಾನದಿಂದ ತೆಗೆಯಲು ತಾರತಮ್ಯ ಬೇಡ. 10 ಎಕರೆ ತುಂಗಾ ಕೆನಾಲ್ ಗೆ ವಶ, ಉಳಿದ 17 ಎಕರೆ 25 ಗುಂಟೆ ಜಮೀನು ಕಬಳಿಕೆ ಎಂದು ಆರೋಪ. ಶ್ರೀರಾಮುಲು ಬಳ್ಳಾರಿ ಶಾಸಕರಾಗಿದ್ದ ಅಧಿಕಾರ ದುರುಪಯೋಗದಿಂದ ವಂಚನೆ ಮಾಡಿದ್ದಾರೆಂದು ಆರೋಪ. ಬಳ್ಳಾರಿಯ ಅಂದಿನ ಅಧಿಕಾರಿಗಳು ಭೂ ಕಬಳಿಕೆಗೆ ಸಾಥ್ ನೀಡಿಧದು, ಸದ್ಯ ಆರನೇ ಆರೋಪಿ ಆಗಿರುವ ಶ್ರೀರಾಮುಲು ಜಾಮೀನು ಪಡೆದಿದ್ದಾರೆ. ಸದ್ಯ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕೇಸು ವರ್ಗಾವಣೆ ಅಗಿದೆ.
ಎಸ್.ಟಿಮೀಸಲಾತಿ ವಿಚಾರದಲ್ಲಿ ಸಮುದಾಯಕ್ಕೆ ರಾಮುಲು ಪದೇ ಪದೇ ವಂಚನೆ ಮಾಡ್ತಿದ್ದಾರೆ. ವಾಲ್ಮೀಕಿ ಸಮುದಾಯದ ಎಲ್ಲಾ ಶಾಸಕರು ಸೆಷನ್ ನಲ್ಲಿ ಮೀಸಲಾತಿ ಬಗ್ಗೆ ಕೇಳಬೇಕಿತ್ತು ಯಾಕೆ ಧ್ವನಿ ಎತ್ತಲಿಲ್ಲ. ವಾಲ್ಮೀಕಿ ಶ್ರೀಗಳನ್ನು ಪ್ರತಿಭಟಸಲು ಮುಂದೆ ಬಿಟ್ಟು ಸುಮ್ಮನಾಗಿದ್ದಾರೆ. ನಿಜಕ್ಕೂ ಇದು ವಾಲ್ಮಿಕಿ ಸಮುದಾಯಕ್ಕೆ ಹಾಗೂ ನಮ್ಮ ಶ್ರೀಗಳಿಗೆ ಶ್ರೀರಾಮುಲು ಅಗೌರವ ತೋರಿದ್ದಾರೆ. ಇದ್ರಿಂದ ಇನ್ನಾದರೂ ಶ್ರೀರಾಮುಲುಗೆ ಅವರಿಗೆ ವಾಲ್ಮೀಕಿ ಸಮುದಾಯ ಪಾಠ ಕಲಿಸಬೇಕು. ಸರ್ಕಾರ ಅಧಿಕಾರಿಕ್ಕೆ ಬಂದ್ರೆ ಮೀಸಲಾತಿ ಕೊಡಿಸುತ್ತೇನೆ ಎಂದು ಬಡಾಯಿ ಕೊಚ್ಚಿಕೊಂಡಿದ್ದ ಶ್ರೀರಾಮುಲು ಎಲ್ಲೋದ್ರು ಎಂದು ಗರಂ ಆದರು.
ಅಲ್ಲದೇ ವಿಧಾನ ಸಭೆ ಚುನಾವಣೆ ಪೂರ್ವದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲು ದೊರಕಿಸಿಕೊಡುವುದಾಗಿ ಶ್ರೀರಾಮಲು ಹೇಳಿದ್ದರು. ಮೀಸಲು ನೀಡದಿದ್ದಲ್ಲಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಈಗ ಸಚಿವ ಸ್ಥಾನ ಪಡೆದು ಅರಾಮಾಗಿ ಇದ್ದಾರೆ, ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಅವರನ್ನು ಎಲ್ಲಾ ಕ್ಷೇತ್ರಗಳಲ್ಲಿ ತಿರಸ್ಕರಿಸಬೇಕು. ಶ್ರೀರಾಮುಲು ನಾಯಕ ಸಮುದಾಯದವನೇ ಅಲ್ಲ ಎಂದು ತಿಳ್ಕೊಬೇಕು ಎಂದು ಸಮುದಾಯದ ಜನರಿಗೆ ಕಿವಿಮಾತು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.