
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.27): ರಾಜ್ಯಪಾಲರು ರಾಜ್ಯದಲ್ಲಿ ಸಂವಿಧಾನದ ಮುಖ್ಯಸ್ಥರಾಗಿರುತ್ತಾರೆ. ಕಾರ್ಯಾಂಗ ಮತ್ತು ನ್ಯಾಯಾಂಗಗಳೆರಡೂ ನೀಡಿದ ತೀರ್ಪನ್ನೂ ಒಪ್ಪದೇ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಶುರುವಾಗಿದೆ ಎಂದು ಸಿಎಂ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲು ಮಾಡಲು ವಿಳಂಬ ಮಾಡಿದ ವಿಚಾರಕ್ಕೆ ಮಾಜಿ ಸಚಿವ ಸಾ.ರಾ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ಅವ್ಯವಸ್ಥೆ ಆಗಬಾರದಿತ್ತು, ನಮಗಿಂತ ಕಾನೂನಿನ ಅರಿವು ಹೆಚ್ಚಾಗಿ ಸಿಎಂ ಅವರಿಗಿದೆ. ಅದರಲ್ಲೂ ಸಿದ್ದರಾಮಯ್ಯನವರು ವಕೀಲರಾಗಿದ್ದವರು.
ರಾಜ್ಯಪಾಲರು ಸಂವಿಧಾನದ ಮುಖ್ಯಸ್ಥರಾಗಿದ್ದಾರೆ. ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ ಅಂದ್ರೆ ಅದನ್ನು ಕಾಂಗ್ರೆಸ್ ಗೌರವದಿಂದ ಕಾಣಬೇಕಿತ್ತು, ರಾಜ್ಯಪಾಲರು ತೀರ್ಮಾನ ತೆಗೆದುಕೊಂಡಾಗ ರಾಜಕೀಯ ಪ್ರೇರಿತ ಅಂದ್ರು. ರಾಜ್ಯಪಾಲರ ಮಾತಿಗೆ ಗೌರವ ಕೊಡಲಿಲ್ಲ. ಇದೀಗ ನ್ಯಾಯಾಲಯವೇ ತೀರ್ಪು ನೀಡಿದೆ. ಕಾರ್ಯಾಂಗ, ನ್ಯಾಯಾಂಗ ಎರಡರ ತೀರ್ಪು ಒಂದೇ ಇದೆ. ಅದಕ್ಕೆ ಗೌರವ ಕೊಡುವ ಕೆಲಸ ಸಿಎಂ ಮಾಡಬೇಕು ಎಂದು ಮಡಿಕೇರಿಯಲ್ಲಿ ಮಾಜಿ ಸಚಿವ ಸಾ. ರಾ ಮಹೇಶ್ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಡಿನೋಟಿಫಿಕೇಷನ್ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದಾರೆ.
ಚುನಾವಣೆ ಘೋಷಣೆಯಾದರೇ ಕಾಂಗ್ರೆಸ್ಗೆ ಸೋಲು ಖಚಿತ: ನಿಖಿಲ್ ಕುಮಾರಸ್ವಾಮಿ ಭವಿಷ್ಯ
ಅಲ್ಲದೆ ಬೇಲ್ ಮೇಲೆ ಹೊರಗೆ ಇದ್ದಾರೆ. ಇನ್ನು ಗೋಧ್ರಾ ಹತ್ಯಾಖಾಂಡದ ಸಂದರ್ಭದಲ್ಲಿ ಅಂದು ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಅವರ ಮೇಲೆಯೂ ಆಪಾದನೆಗಳಿವೆ. ಇಂದು ಪ್ರಧಾನಿಯಾಗಿದ್ದಾರೆ. ಅವರು ರಾಜೀನಾಮೆ ನೀಡಿದ್ದಾರಾ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಾ.ರಾ ಮಹೇಶ್ ಅವರು ನಾವು ಯಾರು ಸಿದ್ದರಾಮಯ್ಯ ಅವರನ್ನು ರಾಜೀನಾಮೆ ಕೇಳಿಲ್ಲ. ನಮ್ಮ ಮಿತ್ರ ಪಕ್ಷದ ನಾಯಕರು ರಾಜೀನಾಮೆ ಕೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಹಿಂದಿನಿಂದ ಸಮಾಜವಾದಿ ನಾಯಕರಾಗಿರುವವರು.
ಎರಡು ದಿನಗಳ ಹಿಂದೆಯೇ ಕುಮಾರಸ್ವಾಮಿ ಇದಕ್ಕೆ ಪ್ರತಿಕ್ರಿಯೆ ನಿಡಿದ್ದಾರೆ. ಡಿನೋಟಿಫಿಕೇಷನ್ ವಿಚಾರವಾಗಿ ಆದೇಶ ಮಾಡಿರಲಿಲ್ಲ. ಇಬ್ಬರನ್ನ ಕರೆದು ಮಾತನಾಡಿ ಕಾನೂನಿನ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಿ ಎಂದಿದ್ದರು. ಆದೇಶಕ್ಕೂ ಹೀಗೆ ಹೇಳುವುದಕ್ಕೂ ಯಾವುದೇ ವ್ಯತ್ಯಾಸ ಇಲ್ಲವೆ.? ಆ ಪ್ರಕರಣಕ್ಕೂ ಇದಕ್ಕೂ ವ್ಯತ್ಯಾಸವಿದೆ ಎಂದು ಸಾ ರಾ ಮಹೇಶ್ ಹೇಳಿದರು. ರಾಜ್ಯದ ಜನತೆ ಕಾಂಗ್ರೆಸ್ಗೆ 136 ಸೀಟು ಕೊಟ್ಟಿರೋದು ಯಾಕೆ?. ನಾವು ಸರಿಯಿಲ್ಲ, ಬಿಜೆಪಿ ಸರಿ ಇಲ್ಲಾ ಅಂತ ತಾನೆ ನಿಮಗೆ ಅಧಿಕಾರ ಕೊಟ್ಟಿರೋದು. ನೀವು ಸರಿ ಇದ್ದೀರಾ ಅಲ್ವಾ.?
ಮುಡಾ ತನಿಖೆ ಸಿಬಿಐಗೆ ವಹಿಸಿ: ಕೊಡಗಿನ ಮಾಜಿ ಶಾಸಕದ್ವಯರು ಒತ್ತಾಯ
ಹಾಗಾದ್ರೆ ನೀವು ಜನರಿಗೆ ಉತ್ತರ ಕೊಡಿ ಎಂದು ಒತ್ತಾಯಿಸಿದರು. ಬಳಿಕ ಮಡಿಕೇರಿಯ ಖಾಸಗಿ ಹೊಟೇಲ್ನಲ್ಲಿ ಜೆಡಿಎಸ್ ಸದಸ್ಯತ್ವ ಆಂದೋಲನಾ ಸಭೆ ನಡೆಯಿತು. ಸಭೆಯಲ್ಲಿ ಪಕ್ಷದ ಸದಸ್ಯತ್ವವನ್ನು ಹೆಚ್ಚು ಮಾಡಬೇಕಾದ ಅಗತ್ಯವಿದೆ. ಯುವ ನಾಯಕ ನಿಖಿಲ್ ಅವರ ನೇತೃತ್ವದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲೂ ಅತೀ ಹೆಚ್ಚು ಸದಸ್ಯತ್ವ ಮಾಡಿಸಿ ಬಳಿಕ ಜಿಲ್ಲಾ ಸಮಿತಿಯನ್ನು ಮಾಡಬೇಕಾಗಿದೆ. ಅದಕ್ಕಾಗಿ ಕಾರ್ಯಕರ್ರನ್ನು ಸಿದ್ದಗೊಳಿಸಲಾಗುತ್ತಿದೆ ಎಂದರು. ಸಭೆಯಲ್ಲಿ ಜೆಡಿಎಸ್ನ 50 ಕ್ಕೂ ಹೆಚ್ಚು ಮುಖಂಡರು ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.