
ಶಿವಮೊಗ್ಗ (ಆ.18): ಪ್ರಜಾಪ್ರಭುತ್ವದಲ್ಲಿ ಕಾನೂನಿಗೆ ಗೌರವ ಕೊಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮೇಲೆ ಆಪಾದನೆ ಬಂದಾಗ ನಾನು ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಟ್ಟಿದ್ದೆ. ಅವರು ಸಹ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಡ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಈ ಹಿಂದೆ ಸಿಎಂ ಸಿದ್ದರಾಮಯ್ಯ, ಇದೇ ಡಿಸಿಎಂ ಡಿ.ಕೆ.ಶಿವಕುಮಾರ್ ನನ್ನ ವಿರುದ್ಧ ಯಾಕೆ ದೊಡ್ಡ ಮೆರವಣಿಗೆ ಮಾಡಿದ್ದರು? ಬೇರೆಯವರ ಮೇಲೆ ಆಪಾದನೆ ಬಂದರೆ ಸರಿ, ತಮ್ಮ ವಿರುದ್ಧ ಬಂದರೆ ಸರಿಯಲ್ಲ ಎಂಬ ಧೋರಣೆ ಸರಿಯಲ್ಲ ಎಂದರು. ಆದರೆ, ನನಗೆ ಒಂದು ಅನುಮಾನ ಅಂದರೆ ಎಲ್ಲಿ ಅವರ ಶ್ರೀಮತಿ ಅವರನ್ನು ಎಲ್ಲಿ ಸೇರಿಸಿಬಿಡ್ತಾರೋ ಅಂತಾ ಅನುಮಾನ. ಪಾಪ ಅವರು ಗೌರಮ್ಮ ರೀತಿ ಇದ್ದವರು. ಅವರ ಮೇಲೆ ಅಂತಹ ಆಪಾದನೆ ಬರದೇ ಇರಲಿ ಅಂತಾ ಬೇಡಿಕೊಳ್ಳುತ್ತೇನೆ ಎಂದರು. ಸಿದ್ದರಾಮಯ್ಯ ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್ ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಗೆ ಬರಲಿ ಎಂದು ಆಶಿಸಿದರು.
ಆಪಾದನೆ ಬಂದಾಗ್ಲೇ ಸಿಎಂ ಸಿದ್ದರಾಮಯ್ಯ ಪದತ್ಯಾಗ ಮಾಡಬೇಕಿತ್ತು: ಶಾಸಕ ಆರಗ ಜ್ಞಾನೇಂದ್ರ
ಬಿಜೆಪಿ ಇಬ್ಭಾಗವಾಗುವ ಸಾಧ್ಯತೆ: ರಾಜ್ಯದ ಬಿಜೆಪಿಯ 12 ಜನ ಪ್ರಮುಖ ನಾಯಕರು ಬೆಳಗಾವಿಯಲ್ಲಿ ಸಭೆ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರನ್ನು ಬಿಟ್ಟು ಈ ರೀತಿ ಸಭೆಗಳು ನಡೆಯುತ್ತಿವೆ. ಹೀಗೆ ಸಭೆಗಳು ನಡೆಸುತ್ತ ಹೋದರೆ ಬಿಜೆಪಿ ಇಬ್ಭಾಗವಾಗುವ ಸಾಧ್ಯತೆ ಇದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆತಂಕ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಈ ಎಲ್ಲಾ ಅಶಾಂತಿಗೆ ಕಾರಣವಾಗಿದೆ. ಬಿ.ವೈ.ವಿಜಯೇಂದ್ರ ಅವರದು ಏಕಪಕ್ಷೀಯ ನಿರ್ಧಾರವಾಗಿದೆ. ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ. ಸಾಮೂಹಿಕ ನಾಯಕತ್ವ ಇತ್ತು. ಆದರೆ ಈಗ ಅದು ಇಲ್ಲ. ಸ್ವಜನ ಪಕ್ಷಪಾತವೇ ಮುಖ್ಯವಾಗುತ್ತಿದೆ. ಹೊಂದಾಣಿಕೆ ರಾಜಕಾರಣ ಎದ್ದು ಕಾಣುತ್ತಿದೆ. ಇದು ಇಲ್ಲಿಗೆ ಮುಗಿಯಬೇಕು ಎಂದರು.
ಸಿಎಂ ಸಿದ್ದರಾಮಯ್ಯನವರೇ ಹಠಮಾರಿತನ ಬಿಟ್ಟು ರಾಜೀನಾಮೆ ನೀಡಿ: ಎಚ್.ವಿಶ್ವನಾಥ್
ಸಭೆ ನಡೆಸಿದವರು ಅನುಭವಿಗಳು, ಪಕ್ಷವನ್ನು ಕಟ್ಟಿದವರು. ಅವರು ಆಗಸ್ಟ್ 17ರಿಂದ ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ಅವರು 12 ಜನರಿದ್ದಾರೋ, ಇನ್ನೂ ಹೆಚ್ಚಿದ್ದಾರೋ ಗೊತ್ತಿಲ್ಲ. ಈ ಪಾದಯಾತ್ರೆ ನಡೆದರೆ ರಾಜ್ಯದ ಎಲ್ಲಾ ತಾಲೂಕಿನಲ್ಲೂ ಎರಡೆರಡು ಪಾರ್ಟಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವಿಜಯೇಂದ್ರ ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ಲೋಕಸಭಾ 25 ಸ್ಥಾನ 17ಕ್ಕೆ ಕುಸಿಯಿತು. ಅದೇ ವಿಧಾನಸಭೆಯಲ್ಲಿ 66ಕ್ಕೆ ಕುಸಿಯಿತು. ಮೋದಿ ಹೆಸರು ಮತ್ತು ಬೆಂಬಲವಿದ್ದರೂ ಈ ಪರಿಸ್ಥಿತಿ ಎದುರಾಯಿತು. ಜೆಡಿಎಸ್ ಜೊತೆ ಸಖ್ಯ ಮಾಡಿದ ನಂತರ ಇಷ್ಟಾದರೂ ಸ್ಥಾನ ಸಿಕ್ಕಿದೆ. ಇಲ್ಲದಿದ್ದರೆ ಇಷ್ಟೂ ಸಿಟ್ ಬರ್ತಿರಲಿಲ್ಲ. ಒಂದೇ ಕುಟುಂಬದ ಕೈಗೆ ಅಧಿಕಾರ ಕೊಟ್ಡಿದ್ದೇ ಇದಕ್ಕೆ ಕಾರಣ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.