
ಹುಬ್ಬಳ್ಳಿ (ಸೆ.06): ಬಿಜೆಪಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಪುತ್ರ ಸಂಕಲ್ಪ ಶೆಟ್ಟರ್ ಅವರು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಟಾಂಗ್ ನೀಡಿದ್ದು, ಅದೀಗ ವೈರಲ್ ಆಗಿದೆ. ಬಿಜೆಪಿಯಲ್ಲಿ ಬಕೆಟ್ ಹಿಡಿದವರಿಗೆ ಟಿಕೆಟ್ ಕೊಡ್ತಾರೆ ಎಂದು ಪ್ರದೀಪ ಶೆಟ್ಟರ್ ಹೇಳಿಕೆ ನೀಡಿದ್ದರು.
ಈ ಮಾತಿಗೆ ದನಿಗೂಡಿಸಿರುವ ಸಂಕಲ್ಪ ಶೆಟ್ಟರ್, ಯಾರು ಬಕೆಟ್ ಹಿಡಿದು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ ತೆಗೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ಬರೆದು BLavaraagombe ಎಂದು ವ್ಯಂಗ್ಯವಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ಶಾಸಕ ಮಹೇಶ್ ಟೆಂಗಿನಕಾಯಿಗೆ ಟಾಂಗ್ ಕೊಟ್ಟಿದ್ದಾರೆ. ಸಂಕಲ್ಪ ಶೆಟ್ಟರ್ ಅವರು ಸೋಷಿಯಲ್ ಮಿಡಿಯಾದಲ್ಲಿ ಈ ರೀತಿಯ ಟಾಂಗ್ ಕೊಟ್ಟಿರುವುದು ಇದೇ ಮೊದಲು. ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಣೆ ಮಾಡಿದಾಗಲೂ ಏನೂ ಮಾತನಾಡದ ಸಂಕಲ್ಪ ಶೆಟ್ಟರ್, ಇದೀಗ ಪ್ರದೀಪ್ ಶೆಟ್ಟರ್ ಅಸಮಾಧಾನದ ಬೆನ್ನಲ್ಲೆ ಫೇಸ್ಬುಕ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಯುಗ ಸೃಷ್ಟಿಯ ಸಮಯದಿಂದ ನಮ್ಮ ದೇಶದ ಹೆಸರು ಭಾರತ: ಇಂಡಿಯಾ ಹೆಸರು ಬದಲಾವಣೆಗೆ ಜಗ್ಗೇಶ್ ಹೇಳಿದಿಷ್ಟು..
ಅನೇಕ ಅತೃಪ್ತ ಬಿಜೆಪಿಗರು ನನ್ನ ಜತೆ ಸಂಪರ್ಕದಲ್ಲಿ: ‘ಬಿಜೆಪಿಯ ಅನೇಕ ಲಿಂಗಾಯತ ನಾಯಕರಲ್ಲಿ ಆಕ್ರೋಶವಿದೆ, ಬಹಳಷ್ಟುಮುಖಂಡರು ತಮ್ಮ ಜೊತೆ ಮಾತನಾಡಿದ್ದಾರೆ. ಮಾಜಿ ಸಚಿವರು ಚರ್ಚಿಸಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದು ಮಾತ್ರವಲ್ಲ, ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಾಗಿಲ್ಲ. ಎಷ್ಟೋ ಜನ ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿದ್ದಾರೆ. ಒಟ್ಟಾರೆ ಬಿಜೆಪಿಯಲ್ಲಿ ಅನೇಕ ಸಮಸ್ಯೆಗಳಿವೆ.
ದಿನದಿಂದ ದಿನಕ್ಕೆ ಬಿಜೆಪಿ ಅಧೋಗತಿಗೆ ಇಳಿಯುತ್ತಿದೆ ಎಂದರು. ಜಿಲ್ಲೆಗಳಲ್ಲಿ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ವಿವಿಧ ಕಾರ್ಯಕ್ರಮಗಳನ್ನು ಸ್ವಾಗತಿಸುತ್ತಿದ್ದಾರೆ. ಪ್ರಸ್ತುತ ಪರಿಸ್ಥಿತಿ ನೋಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 15-20 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು. ಶಾಸಕ ಬಸವರಾಜ ರಾಯರೆಡ್ಡಿ ಅವರು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ರಾಜ್ಯಾಧ್ಯಕ್ಷರು ನಿರ್ಧಾರ ಮಾಡುತ್ತಾರೆ. ತಾವಲ್ಲ ಎಂದು ಉತ್ತರಿಸಿದರು.
ಇಂಡಿಯಾ ಹೆಸರು ಬದಲಾವಣೆ ಚುನಾವಣಾ ಗಿಮಿಕ್: ಸಚಿವ ಜಮೀರ್ ಅಹ್ಮದ್
ಐದಾರು ತಿಂಗಳು ಅನುದಾನ ಕೇಳಬೇಡಿ: ಐದಾರು ತಿಂಗಳು ಯಾರೂ ಅನುದಾನ ಕೇಳಬೇಡಿ. ನಾವೀಗ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಅದರಿಂದಾಗಿ ಸಣ್ಣಪುಟ್ಟಸಮಸ್ಯೆಗಳು ಆಗಿರುತ್ತವೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಹೇಳಿದರು. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಧಾರವಾಡ ಸೇರಿ ಅನೇಕ ಕಡೆ ನಮ್ಮ ಸಮುದಾಯದ ಭವನಗಳ ನಿರ್ಮಾಣಕ್ಕಾಗಿ ಜಾಗ ಕೊಡಿಸಿದ್ದೆ. ಗದಗ ಜಿಲ್ಲೆಯಲ್ಲಿ ಅತ್ಯುತ್ತಮವಾದ ಭವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆ ಅನುದಾನದ ಕೊರತೆಯಾಗಬಹುದು. ಸರ್ಕಾರದಿಂದ ಅನುದಾನ ತರುವ ಪ್ರಯತ್ನವನ್ನು ನಾನು ಮತ್ತು ಅಶೋಕ ಪಟ್ಟಣ ಎಲ್ಲರೂ ಸೇರಿ ಮಾಡುತ್ತೇವೆ. ಆದರೆ ಈಗಷ್ಟೇ ಗ್ಯಾರಂಟಿ ಜಾರಿ ಮಾಡಲಾಗಿದೆ. ಸದ್ಯಕ್ಕೆ ಅನುದಾನ ಕೇಳಿದರೆ ಸ್ವಲ್ಪ ಸಮಸ್ಯೆಯಾಗುತ್ತದೆ. ಐದಾರು ತಿಂಗಳು ಕಾಯಿರಿ, ಅನುದಾನ ಸಿಗುತ್ತದೆ ಎಂದು ಹೇಳಿದರು. ಈ ಮೂಲಕ ಗ್ಯಾರಂಟಿ ಯೋಜನೆ ಜಾರಿಯಿಂದಾಗಿ ಸರ್ಕಾರ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.