
ಮೈಸೂರು (ಮೇ.08): ಅಪಹರಣವಾದ ಮಹಿಳೆ ಹುಣಸೂರಿನ ರಾಜಗೋಪಾಲ್ ಅವರ ತೋಟದಲ್ಲಿ ಪತ್ತೆಯಾದರು ಎಂದು ಹೇಳಲಾಗುತ್ತಿದೆ. ಆದರೆ, ಸಂತ್ರಸ್ತ ಮಹಿಳೆ ತೋಟದಲ್ಲಿ ಇರಲಿಲ್ಲ, ಆಕೆ ಹುಣಸೂರು ಪಟ್ಟಣದ ಸಂಬಂಧಿಕರ ಮನೆಯಲ್ಲಿ ಇದ್ದರು ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಆರೋಪಿಸಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಹರಣವಾದ ಮಹಿಳೆ ರಾಜಗೋಪಾಲ್ ತೋಟದಲ್ಲಿ ಇರಲಿಲ್ಲ, ಆಕೆ ಹುಣಸೂರು ನಗರದ ಕರಿಗೌಡ ಸ್ಟ್ರೀಟ್ ಪವಿತ್ರಾ ಹರೀಶ್ ಮನೆಯಲ್ಲಿ ಇರುತ್ತಾರೆ. ಪವಿತ್ರ ಹರೀಶ್ ಸಂತ್ರಸ್ತ ಮಹಿಳೆಯ ಸಂಬಂಧಿಯಾಗಿದ್ದಾರೆ.
ರಾಜಗೋಪಾಲ್ ಅವರ ತೋಟದಲ್ಲಿ ಸಂತ್ರಸ್ತ ಮಹಿಳೆಯನ್ನು ಕರೆದುಕೊಂಡು ಹೋಗಿರುವುದು ಸಾಬೀತಾದರೆ ನಾನು ನನ್ನ ಸಾರ್ವಜನಿಕ ಜೀವನ ಮತ್ತು ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು. ಹಾಸನದ ಪೆನ್ ಡ್ರೈವ್ ಪ್ರಕರಣದಲ್ಲಿ ಆರೋಪ ಬಂದಿರುವ ವ್ಯಕ್ತಿ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿ. ಪ್ರಕರಣವನ್ನು ಎಸ್ಐಟಿಗೆ ವಹಿಸಿದ ಮೇಲೆ ಅಪಹರಣ ಕೇಸ್ ದಾಖಲಾಗುತ್ತದೆ. ರಾಜ್ಯ ಸರ್ಕಾರದ ಅಣತಿಯಂತೆ ಯಾರನ್ನು ಎ1 ಮಾಡಬೇಕು ಇನ್ಯಾರನ್ನು ಎ2 ಮಾಡಬೇಕು ಎಂಬುದು ನಿರ್ಧಾರವಾಗುತ್ತದೆ ಎಂದು ಅವರು ಆರೋಪಿಸಿದರು.
ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣ ನ್ಯಾಯಾಂಗ ತನಿಖೆಗೆ: ಜಿ.ಟಿ.ದೇವೇಗೌಡ
ಶಾಸಕ ಎಚ್.ಡಿ. ರೇವಣ್ಣ ಬಂಧನಕ್ಕೂ ಮೊದಲು ರಾಷ್ಟ್ರೀಯ ಮಾಧ್ಯಮವೊಂದು ರೇವಣ್ಣ ಬಂಧನವಾಗುತ್ತದೆ ಎಂಬುದನ್ನು ಬಿತ್ತರಿಸುತ್ತದೆ. ನಂತರ ಬಂಧನವಾಗುತ್ತದೆ. ಮಹಿಳೆ ರಕ್ಷಣೆ ಮಾಡಿದ ವೀಡಿಯೋ ಯಾಕೆ ರಿಲೀಸ್ ಮಾಡಲಿಲ್ಲ? ರಕ್ಷಣೆ ಮಾಡಿದ ಮೇಲೆ ಮಹಿಳೆಯನ್ನು ಕಾನೂನು ಪ್ರಕಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿತ್ತು. ಆದರೆ ಯಾಕೆ ಹಾಜರುಪಡಿಸಲಿಲ್ಲ ಎಂದು ಅವರು ಪ್ರಶ್ನಿಸಿದರು.
ಮಹಿಳೆ ಅಪಹರಣ ಕುರಿತು ಯಾರು ಭಾಗಿಯಾಗಿದ್ದಾರೆ, ಮಹಿಳೆ ಪುತ್ರನಿಗೆ ಎಷ್ಟು ಹಣ ಸಂದಾಯವಾಗಿದೆ. ಕಂಪ್ಲೇಟ್ ಬರೆದುಕೊಟ್ಟವರು ಯಾರು? ಎಲ್ಲಿ ಬರೆದುಕೊಟ್ಟರು. ಎಲ್ಲದರ ಬಗ್ಗೆಯೂ ತನಿಖೆಯಾಗಬೇಕು. ಚುನಾವಣೆಗೆ ಎರಡು ದಿನ ಇದೆ ಎನ್ನುವಾಗ ಪೆನ್ ಡ್ರೈವ್ ಹಂಚಿದವರು ಯಾರು? ಮೊಬೈಲ್ ಗಳಿಗೆ ವೀಡಿಯೋ ಬಿಟ್ಟವರು ಯಾರು? ಎಂಬುದು ತನಿಖೆ ಆಗಬೇಕು. ಹೀಗಾಗಿ, ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಹಾಸನದ ಲೈಂಗಿಕ ಹಗರಣದ ವ್ಯಕ್ತಿ ಹೆಸರನ್ನು ನಾನು ಹೇಳಲು ಇಷ್ಟಪಡುವುದಿಲ್ಲ. ಅವನು ತಪ್ಪು ಮಾಡಿರುವುದು ರಾಜ್ಯ ಸರ್ಕಾರಕ್ಕೆ ಮುಂಚೆಯೇ ಗೊತ್ತಿದ್ದ ಮೇಲೆ ಏಕೆ ಆತನನ್ನು ಬಂಧಿಸಲಿಲ್ಲ. ಆತ ತಪ್ಪು ಮಾಡಿರುವುದು ನಿಜವೇ ಆಗಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ. ಈಗಾಗಲೆ ಈತನನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಮುಂದೆ ಏನು ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ವಿರೋಧಿಸುವ ಶಕ್ತಿ ಡಿಕೆಶಿಗಿದೆ: ಮಾಜಿ ಶಾಸಕ ಎ.ಮಂಜುನಾಥ್
ಕೆ.ಆರ್. ನಗರ ಶಾಸಕರ ಕುಮ್ಮಕ್ಕಿನಿಂದ ಎಚ್.ಡಿ. ರೇವಣ್ಣ ಮೇಲೆ ಪ್ರಕರಣ ದಾಖಲು ಆರೋಪ ಕುರಿತು ಪ್ರತಿಕ್ರಿಯಿಸಿದ ಸಾ.ರಾ. ಮಹೇಶ್ ಅವರು, ಈ ಹಿಂದೆ ಶ್ರೀಮತಿ ಭವಾನಿ ರೇವಣ್ಣ ನನ್ನ ಚುನಾವಣೆಯಲ್ಲೇ ಇವತ್ತಿನ ಶಾಸಕರಿಗೆ ಏನೂ ಸಹಾಯ ಮಾಡಿದ್ದರು ಎಂಬುದು ಗೊತ್ತಿದೆ. ಆ ಶಾಸಕರೇ ಅವರ ಮೇಲಿನ ಆರೋಪಕ್ಕೆ ಉತ್ತರ ಕೊಡಲಿ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.