ಬಿಜೆಪಿ ಪೌರೋಹಿತ್ಯದಲ್ಲಿ ಶಶಿಕಲಾ-ಅಣ್ಣಾಡಿಎಂಕೆ ವಿಲೀನ?

By Kannadaprabha NewsFirst Published Sep 24, 2020, 8:04 AM IST
Highlights

ಬಿಜೆಪಿ ಪೌರೋಹಿತ್ಯದಲ್ಲಿ ಶಶಿಕಲಾ-ಅಣ್ಣಾಡಿಎಂಕೆ ವಿಲೀನ?| ದಿಲ್ಲಿಗೆ ಹೋಗಿ ಮಾತುಕತೆ ನಡೆಸಿದ ದಿನಕರನ್‌| ಪಕ್ಷಕ್ಕೆ ಶಶಿಕಲಾ ಮುಖ್ಯಸ್ಥೆ, ಎಡಪ್ಪಾಡಿ ಸಿಎಂ: ಸಂಧಾನ ಸೂತ್ರ| ಇದಕ್ಕೆ ಉಭಯ ಬಣಗಳು ಒಪ್ಪಿದರೆ ವಿಲೀನ| ಇದರಿಂದ ದಕ್ಷಿಣದಲ್ಲಿ ಬೇರೂರುವ ಬಿಜೆಪಿ ಯತ್ನಕ್ಕೆ ಯಶ|  ಡಿಎಂಕೆ ಬಗ್ಗುಬಡಿಯಲು ಬಿಜೆಪಿ ಹೊಸ ಪ್ಲಾನ್‌

ಚೆನ್ನೈ(ಸೆ.24): ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ ಅವರು ಬೆಂಗಳೂರು ಜೈಲಿನಿಂದ 2021ರ ಜನವರಿಯಲ್ಲಿ ಬಿಡುಗಡೆ ಆಗುವುದು ಖಚಿತವಾಗುತ್ತಿದ್ದಂತೆಯೇ, ರಾಜ್ಯ ರಾಜಕೀಯದಲ್ಲಿ ಹೊಸ ಚಟುವಟಿಕೆಗಳು ಗರಿಗೆದರಿವೆ. ಅಣ್ಣಾ ಡಿಎಂಕೆ ಪಕ್ಷ ಹಾಗೂ ಅಣ್ಣಾ ಡಿಎಂಕೆ ತೊರೆದಿದ್ದ ಶಶಿಕಲಾ ಅವರ ನಡುವೆ ಸಂಧಾನಕ್ಕೆ ಬಿಜೆಪಿ ಯತ್ನಿಸುತ್ತಿದ್ದು, ಉಭಯ ಬಣಗಳ ವಿಲೀನಕ್ಕೆ ಪ್ರಕ್ರಿಯೆಗೆ ಕೈಹಾಕಿದೆ.

ಜಯಲಲಿತಾ ಆಪ್ತೆ ಶಶಿಕಲಾ ಜೈಲಿಂದ ಬಿಡುಗಡೆ ದಿನಾಂಕ ಫಿಕ್ಸ್

ಅಣ್ಣಾ ಡಿಎಂಕೆಯಿಂದ ಹೊರಬಂದು ಎಂಎಂಎಂಕೆ ಪಕ್ಷ ಸ್ಥಾಪಿಸಿರುವ ಶಶಿಕಲಾ ಬಂಧು ಟಿಟಿವಿ ದಿನಕರನ್‌ ಅವರನ್ನು ಇತ್ತೀಚೆಗೆ ಬಿಜೆಪಿ ಮುಖಂಡರು ದಿಲ್ಲಿಗೆ ಕರೆಸಿಕೊಂಡಿದ್ದರು. ಈ ವೇಳೆ ವಿಲೀನದ ಆಫರ್‌ ಇರಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ತಮಿಳುನಾಡಿನಲ್ಲಿ ಡಿಎಂಕೆ ಪ್ರಬಲವಾಗತೊಡಗಿದೆ. ಹೀಗಾದರೆ ಬಿಜೆಪಿಗೆ ತಮಿಳು ನೆಲದಲ್ಲಿ ಬೇರೂರುವುದು ಕಷ್ಟ. ಹೀಗಾಗಿ ಅಣ್ಣಾ ಡಿಎಂಕೆಯ ಉಭಯ ಬಣ ಒಗ್ಗೂಡಿಸಿದರೆ ಮುಂದಿನ ಚುನಾವಣೆಯಲ್ಲಿ ಈ ಪಕ್ಷ ಹ್ಯಾಟ್ರಿಕ್‌ ಜಯ ಸಾಧಿಸುವ ಅವಕಾಶ ಲಭಿಸಲಿದೆ. ತನಗೂ ಬೇರೂರಲು ನೆರವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ.

ಜೈಲಿಂದ ಬಿಡುಗಡೆ ಬಳಿಕ ನೆಲೆಸಲು ಕಟ್ಟಿಸುತ್ತಿದ್ದ ಶಶಿಕಲಾ ಬಂಗಲೆ ಜಪ್ತಿ

ಸಂಧಾನ ಸೂತ್ರ:

ಪ್ರಸ್ತಾವಿತ ಸಂಧಾನ ಸೂತ್ರದ ಪ್ರಕಾರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನದಲ್ಲಿ ಕ್ರಮವಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಒ. ಪನ್ನೀರಸೆಲ್ವಂ ಅವರೇ ಮುಂದುವರಿಯಲಿದ್ದಾರೆ. ಪಕ್ಷ ಸಂಘಟನೆ ಹೊಣೆ ಶಶಿಕಲಾ-ದಿನಕರನ್‌ಗೆ ಲಭಿಸಲಿದೆ.

ಆದರೆ ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಮಾಡಬೇಕು. ತಮಗೂ ಉನ್ನತ ಸ್ಥಾನ ನೀಡಬೇಕು ಎಂಬ ಬೇಡಿಕೆ ಇರಿಸಿದ್ದಾರೆ ಎಂದು ವರದಿಯಾಗಿದೆ.

ಒಂದು ವೇಳೆ ಈ ಡೀಲ್‌ ಯಶಸ್ವಿಯಾದರೆ ಶಶಿಕಲಾ ಅವರನ್ನು ಇನ್ನೂ ಬೇಗ ಜೈಲಿಂದ ಬಿಡಿಸಲಾಗುವುದು ಎಂಬ ಭರವಸೆ ಲಭಿಸಿದೆ ಎಂದು ಮೂಲಗಳು ಹೇಳಿವೆ.

ಈ ನಡುವೆ, ವಿಲೀನ ಯತ್ನ ನಡೆಯುತ್ತಿದೆ ಎಂಬುದನ್ನು ಬಿಜೆಪಿ, ಅಣ್ಣಾಡಿಎಂಕೆ ಹಾಗೂ ಎಂಎಂಎಂಕೆ ಮೂಲಗಳು ಖಚಿತಪಡಿಸಿವೆ. ಡಿಎಂಕೆ ಬಗ್ಗುಬಡಿಯಲು ಇದು ಅವಶ್ಯ ಎಂದಿವೆ. ‘ಶಶಿಕಲಾ ಅಪರಾಧಿಯಲ್ಲ?’ ಎಂದು ಮಾಧ್ಯಮದವರು ಪ್ರಶ್ನಿಸಿದರೆ, ‘ಜೈಲುವಾಸ ಪೂರೈಸಿದರೆ ಕಳಂಕಮುಕ್ತರಾದಂತೆ’ ಎಂದು ಸಮರ್ಥಿಸಿಕೊಂಡಿವೆ.

ಬಗೆದಷ್ಟು ಸಿಗ್ತಿದೆ ಶಶಿಕಲಾ ಆಸ್ತಿ; ಮತ್ತೆ 300 ಕೋಟಿ!

ವಿಲೀನಕ್ಕೆ ಹಾತೊರೆತ:

ದಿನಕರನ್‌ಗೂ ವಿಲೀನ ಬೇಕಾಗಿದೆ. ಏಕೆಂದರೆ ಅವರ ಮೇಲೆ ಇ.ಡಿ. ಸೇರಿದಂತೆ ಹಲವು ತನಿಖಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಇನ್ನು ಜೈಲಿಂದ ಹೊರಬಂದ ನಂತರ ಶಶಿಕಲಾಗೂ ಒಂದು ಐಡೆಂಟಿಟಿ ಬೇಕಿದೆ. ಪಳನಿಸ್ವಾಮಿ-ಪನ್ನೀರಸೆಲ್ವಂಗೂ ಏಕಾಂಗಿಯಾಗಿ ಚುನಾವಣೆಗೆ ಹೋಗುವ ಧೈರ್ಯವಿಲ್ಲ. ಈ ಕಾರಣಕ್ಕೆ ಬಿಜೆಪಿ ಪೌರೋಹಿತ್ಯದಲ್ಲಿ ವಿಲೀನ ಯತ್ನಗಳು ಭರದಿಂದ ಸಾಗಿವೆ ಎಂದು ವರದಿ ತಿಳಿಸಿದೆ.

click me!